ಕುಂದಾಪುರ: ವಕೀಲರ ವೃತ್ತಿ ಹಾಗೂ ವಕೀಲರ ಹಕ್ಕುಗಳಿಗೆ ಚ್ಯುತಿ ತರುವ ಅಸಾಂವಿಧಾನಿಕ ಅಂಶಗಳನ್ನು ವಕೀಲರ ಅಧಿನಿಯಮದಡಿ ತಿದ್ದುಪಡಿ ಮಾಡಲು ಕೇಂದ್ರ ಕಾನೂನು ಆಯೋಗ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿರುವುದನ್ನು ವಿರೋಧಿಸಿ ಭಾರತೀಯ ವಕೀಲರ ಪರಿಷತ್ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ ನ್ಯಾಯಾಲಯ ಕಲಾಪ ಬಹಿಷ್ಕರಿಸುವಂತೆ ಕೋರಿಕೊಂಡ ಮೇರೆಗೆ, ಶುಕ್ರವಾರ ಕುಂದಾಪುರ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು.
ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಮಾತನಾಡಿ, ಉದ್ದೇಶಿತ ವಕೀಲರ ತಿದ್ದುಪಡಿ ವಿಧೇಯಕ 2017 ಜಾರಿಗೆ ಬಂದಲ್ಲಿ ವಕೀಲರ ಹಕ್ಕುಗಳಿಗೆ ಹಾಗೂ ವಕೀಲರ ವೃತ್ತಿಗೆ ಚ್ಯುತಿ ಬರುತ್ತದೆ. ಆ ಕಾರಣದಿಂದ ಯಾವುದೇ ಕಾರಣಕ್ಕೂ ವಕೀಲರ ತಿದ್ದುಪಡಿ ವಿಧೇಯಕ 2017 ಜಾರಿ ಮಾಡಬಾರದು ಆಗ್ರಹಿಸಿದರು.
ಈ ಸಂದರ್ಭ ವಕೀಲರ ಸಂಘದ ಉಪಾಧ್ಯಕ್ಷ ಜಯಪ್ರಕಾಶ್ ಸಾಲಿನ್ಸ್, ಪ್ರಧಾನ ಕಾರ್ಯದರ್ಶಿ ಎಚ್. ರವೀಶ್ಚಂದ್ರ ಶೆಟ್ಟಿ, ಖಜಾಂಚಿ ಸಂತೋಷ್ ಆಚಾರ್, ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.