ಪಡುಬಿದ್ರಿ: ಉಳ್ಳಾಲ ಬಳಿಕ ಕರಾವಳಿಯ ಅತೀ ದೊಡ್ಡ ಉರೂಸ್ ಸಂಭ್ರಮ ಖ್ಯಾತಿಯ ಹೆಜಮಾಡಿಯ ಕನ್ನಂಗಾರ್ ಉರೂಸ್ ಮೂಲಕ ನಾಡಿಗೆ ಸೌಹಾರ್ದತೆಯ ಸಂಕೇತ ಪಸರಿಸುವಂತಾಗಲಿ ಎಂದು ಅದಾನಿ-ಯುಪಿಸಿಎಲ್ ಜಂಟಿ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಹೇಳಿದರು.
ಕನ್ನಂಗಾರ್ ಜುಮ್ಮಾ ಮಸ್ಜಿದ್ ಮುಂಭಾಗದಲ್ಲಿರುವ ಶೇಖ್ ಸಿರಾಜುದ್ದೀನ್ ವಲಿಯುಲ್ಲಾಹಿ ದರ್ಗಾ ಶರೀಫ್ ಹೆಸರಿನಲ್ಲಿ ಮೂರು ವರ್ಷಗಳಿಗೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಕನ್ನಂಗಾರ್ ಉರೂಸ್ನ ಸಮಾರೋಪದಲ್ಲಿ ಶನಿವಾರ ರಾತ್ರಿ ಮಾತನಾಡಿದರು.
ದುಆ ನೆರವೇರಿಸಿದ ಸಯ್ಯದ್ ಇಬ್ರಾಹಿಂ ಖಲೀಲ್ ತಂಙಳ್ ಅಲ್ಬುಖಾರಿ ಕಡಲುಂಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ದುಷ್ಟಶಕ್ತಿಗಳು ಪ್ರಯತ್ನಿಸುತ್ತಿವೆ. ಇದಕ್ಕೆ ಯಾರೂ ಬಲಿಯಾಗಬೇಡಿ. ಒಬ್ಬ ವ್ಯಕ್ತಿಯನ್ನು ವಿನಾಕಾರಣ ಕೊಲೆ ಮಾಡುವುದು ಇಡೀ ಮಾನವಕುಲವನ್ನು ಕೊಂದ ಪಾಪ ಅವನ ಮೇಲೆ ಇರುತ್ತದೆ. ಆತನಿಗೆ ಭಯಾನಕ ಶಿಕ್ಷೆ ಕಾದಿದೆ. ಈ ನಿಟ್ಟಿನಲ್ಲಿ ಯುವಜನತೆ ಎಚ್ಚರಿಕೆಯಿಂದ ಇರಬೇಕು. ಅಲ್ಲದೆ ಅಪರಾಧ ಕೃತ್ಯಗಳಿಂದಲೂ, ಮಾದಕ ದ್ರವ್ಯಗಳಿಂದಲೂ ದೂರವಿರಿ. ಕುರ್ಆನ್ ನೀಡಿದ ಸಂದೇಶ ಹಾಗೂ ಪ್ರವಾದಿಯವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಇಸ್ಲಾಂ ಧರ್ಮದ ಸಂದೇಶಗಳಾದ ತೌಹೀದ್, ನಮಾಜ್, ರೋಜಾ, ಝಕಾತ್ ಮತ್ತು ಹಜ್ಗಳನ್ನು ನಿಯಮಿತವಾಗಿ ಪಾಲಿಸಿಕೊಂಡು ಬಂದಲ್ಲಿ ಜೀವನದಲ್ಲಿ ಯಾವುದೇ ಸಮಸ್ಯೆ ಉದ್ಭವಿಸದು.ಈ ಸಂದೇಶಗಳು ಎಲ್ಲ ಧರ್ಮಗಳಿಗೂ ಅನ್ವಯವಾಗುತ್ತದೆ. ಈ ಮೂಲಕ ಎಲ್ಲರೂ ದೇವರಿಗೆ ಶರಣಾಗುವುದರಿಂದ ತಮಗೆ ಶಕ್ತಿ ಮತ್ತು ಅನುಗ್ರಹ ಸಿಗುತ್ತದೆ ಎಂದು ಶುಭ ಹಾರೈಸಿದರು.
ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಚಾರಿತ್ರಿಕ ಹಿನ್ನೆಲೆಯ ಹೆಜಮಾಡಿ ದರ್ಗಾ ಮತ್ತು ಬಪ್ಪನಾಡು ದೇವಳಗಳು ಕೋಮು ಸೌಹಾರ್ದತೆಯ ಕೇಂದ್ರಗಳು. ಪುರಾತನ ಕಾಲದಿಂದಲೂ ಕೋಮು ಸೌಹಾರ್ದತೆ ಕರಾವಳಿಯ ಜನರ ಜೀವನಾಡಿಯಲ್ಲಿ ಹಾಸುಹೊಕ್ಕಾಗಿತ್ತು ಎಂಬುದಕ್ಕೆ ಇವೆರಡು ಕೇಂದ್ರಗಳು ಸಾಕ್ಷಿ. ಇದನ್ನು ಅನೂಚಾನವಾಗಿ ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಮುಖ್ಯಮಂತ್ರಿಗಳು ತುರ್ತು ಕಾರ್ಯದ ನಿಮಿತ್ತ ಉರೂಸ್ ಸಂಭ್ರಮದಲ್ಲಿ ಭಾಗವಹಿಸಲು ಅಸಾಧ್ಯವಾಗಿದ್ದು, ಸರಕಾರದಿಂದ ಉರೂಸ್ ಸಂಭ್ರಮಕ್ಕೆ ಸೂಕ್ತ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಹೆಜಮಾಡಿ ಸಮಗ್ರ ಅಭಿವೃದ್ಧಿಗೆ 12 ಕೋಟಿ ರೂ: ಹೆಜಮಾಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಈಗಾಗಲೇ 12 ಕೋಟಿ ರೂ. ಮೀಸಲಿರಿಸಿದ್ದು, ಸುಲ್ತಾನ್ ರಸ್ತೆಯನ್ನು ಏಕಮುಖ ಸಂಚಾರ ರಸ್ತೆ, ಹೆಜಮಾಡಿ ಕೋಡಿವರೆಗಿನ ರಸ್ತೆಯನ್ನು ಏಕಮುಖ ರಸ್ತೆ, ಹೆಜಮಾಡಿ ಮತ್ತು ಪಡುಬಿದ್ರಿಯನ್ನು ಕರಾವಳಿಯಲ್ಲಿ ಸಂಪರ್ಕಿಸಲು ಮುಟ್ಟಳಿವೆಗೆ ಸೇತುವೆ ನಿರ್ಮಾಣ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಜಮಾಡಿ ಕ್ರೀಡಾಂಗಣ ಅಭಿವೃದ್ಧಿಗೆ ಸಚಿವ ಪ್ರಮೋದ್ ಮಧ್ವರಾಜ್ ಕ್ರೀಡಾ ಇಲಾಖೆಯಿಂದ 3 ಕೋಟಿ ರೂ. ನೀಡುವ ಭರವಸೆ ನೀಡಿದ್ದಾರೆ ಎಂದರು.
ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಯು.ಕೆ. ಅಧ್ಯಕ್ಷ ತೆ ವಹಿಸಿ ಮಾತನಾಡಿ, ಜಮಾತಿನ ಸರ್ವ ಸದಸ್ಯರ ಅವಿರತ ಶ್ರಮವೇ ಉರೂಸ್ ಯಶಸ್ಸಿಗೆ ಕಾರಣ. ಅದಕ್ಕಾಗಿ ಎಲ್ಲರಿಗೂ ಕೃತಜ್ಞತೆಗಳು ಎಂದರು.
ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ವಿನಯಕುಮಾರ್ ಸೊರಕೆ, 40 ವರ್ಷ ಕನ್ನಂಗಾರ್ ಜುಮ್ಮಾ ಮಸೀದಿಯಲ್ಲಿ ಸೇವೆ ಸಲ್ಲಿಸಿದ ಮುಕ್ರಿ ಹಾಜಿ ಅವರನ್ನು ಸಯ್ಯದ್ ಇಬ್ರಾಹಿಂ ಖಲೀಲ್ ತಂಙಳ್ ಅಲ್ಬುಖಾರಿ ಕಡಲುಂಡಿ ಸನ್ಮಾನಿಸಿದರು.
ಮರ್ಕಝುಲ್ ಹುದಾ ಕುಂಬ್ರ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ. ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ ಮುಖ್ಯ ಪ್ರಭಾಷಣ ಮಾಡಿದರು. ಕರ್ನಾಟಕ ಸುನ್ನಿ ಜಂ-ಇಯ್ಯತ್ತುಲ್ ಉಲಮಾ ಉಪಾಧ್ಯಕ್ಷ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕಾವಳ್ಕಟ್ಟೆ ಹಝ್ರತ್ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಕನ್ನಂಗಾರ್ ಮುದರ್ರಿಸ್ ಅಶ್ರಫ್ ಸಖಾಫಿ ಕಿನ್ಯ, ಸಚಿವ ಯು.ಟಿ. ಖಾದರ್, ಮಂಗಳೂರು ಉತ್ತರ ಶಾಸಕ ಬಿ.ಎಂ. ಮೊಯ್ದಿನ್ ಬಾವ, ಗ್ರಾಪಂ ಅಧ್ಯಕ್ಷ ರ ಒಕ್ಕೂಟದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ, ಕಣ್ಣಂಗಾರ್ ಜುಮ್ಮಾ ಮಸೀದಿ ಅಧ್ಯಕ್ಷ ಎಚ್.ಬಿ. ಮುಹಮ್ಮದ್, ಅನಿವಾಸಿ ಉದ್ಯಮಿ ಇಕ್ಬಾಲ್ ಕನ್ನಂಗಾರ್, ಕನ್ನಂಗಾರ್ ವೆಲ್ಫೇರ್ ಅಸೋಸಿಯೇಶನ್ ಅಲ್ಜುಬೈಲ್ ಅಧ್ಯಕ್ಷ ಅಶ್ರಫ್ ಶ್ಯಾಕೋ, ಅಬ್ದುಲ್ ಅಝೀಝ್ ಹೆಜಮಾಡಿ ಉಪಸ್ಥಿತರಿದ್ದರು.
ಹನೀಫ್ ಕನ್ನಂಗಾರ್ ಸ್ವಾಗತಿಸಿದರು. ರಕೀಬ್ ಮುಹಮ್ಮದ್ ಕನ್ನಂಗಾರ್ ಕಾರ್ಯಕ್ರಮ ನಿರ್ವಹಿಸಿದರು.