ಉಡುಪಿ: ಜಿಲ್ಲೆಗೆ ಕಳಂಕವಾಗಿರುವ ಮಟ್ಕಾ, ಜುಗಾರಿ, ಅಕ್ರಮ ಮದ್ಯ ಮಾರಾಟ, ಮರಳು ಸಾಗಾಟ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡು ದಂಧೆಕೋರರಿಗೆ ತಕ್ಕ ಪಾಠ ಕಲಿಸುತ್ತೇವೆ. ಈ ದಂಧೆಯ ಹಿಂದೆ ಪೊಲೀಸ್ ಸಿಬ್ಬಂದಿ ಕೈವಾಡವಿದ್ದರೂ ಮುಖವಾಡ ಕಳಚಿ ನಾಗರಿಕರಿಗೆ ಪಾರದರ್ಶಕ ಆಡಳಿತ ನೀಡಿ, ಸ್ವಾಸ್ಥ ಸಮಾಜ ನಿರ್ಮಾಣ ಮಾಡುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಎಂ. ಪಾಟೀಲ್ ಖಡಕ್ ಸಂದೇಶ ನೀಡಿದ್ದಾರೆ.
ಬನ್ನಂಜೆಯ ಎಸ್ಪಿ ಕಚೇರಿಯಲ್ಲಿ ಶನಿವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಟ್ಕಾ, ಜುಗಾರಿ, ಅಕ್ರಮ ಮದ್ಯ ಮಾರಾಟದ ವಿರುದ್ಧ ನಾಗರಿಕರಿಂದ ಕೇಳಿ ಬಂದ ದೂರುಗಳಿಗೆ ಉತ್ತರಿಸಿದ ಪರಿ ಇದು.
ಕೋಟ ಠಾಣೆ ವ್ಯಾಪ್ತಿಯ ನಾಗರಿಕರೊಬ್ಬರೂ ಕರೆ ಮಾಡಿ ಕೋಟ ಸುತ್ತಲಿನ ಪರಿಸರದಲ್ಲಿ ದಿನನಿತ್ಯ ಮಟ್ಕಾ ಜುಗಾರಿ ದಂಧೆಗಳು ಹೆಚ್ಚುತ್ತಿದೆ. ಕೋಳಿ ಅಂಕಕ್ಕೂ ಪೊಲೀಸ್ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದಾರೆ. ಹೆಚ್ಚಿನ ಠಾಣೆಯಲ್ಲಿ ಸ್ಥಳೀಯರೇ ಪೊಲೀಸ್ ಸಿಬ್ಬಂದಿ ಇರುವುದರಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಎಸ್ಪಿ ಅವರಿಗೆ ಮನವಿ ಮಾಡಿದರು.
ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ನಿಯಂತ್ರಣವಿಲ್ಲದೇ ಮರಳು ಮಾಫಿಯಾ ನಡೆಯುತ್ತಿದ್ದರೂ ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆ. ನಾವು ಹೋಗಿ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಅಲ್ಲಲ್ಲಿ ಮಟ್ಕಾ ಜುಗಾರಿ ಅಡ್ಡೆಗಳು ತಲೆ ಎತ್ತಿದ್ದು, ಯುವ ಸಮುದಾಯ ಹಾಳಾಗುತ್ತಿದೆ. ಈ ಬಗ್ಗೆ ವಿಚಾರಣೆ ನಡೆಸಿದರೆ ನಾವು ಪೊಲೀಸರಿಗೆ ಮಾಮುಲು ನೀಡುತ್ತೇವೆ ಎನ್ನುತ್ತಾರೆ. ಈ ಬಗ್ಗೆ ಖುದ್ದಾಗಿ ಸ್ಥಳ ಪರಿಶೀಲನೆ ನೀಡಿ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು.
ಉಡುಪಿ, ಕೋಟ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಗಂಗೊಳ್ಳಿ ವ್ಯಾಪ್ತಿಯಲ್ಲಿ ಮಟ್ಕಾ, ಅಕ್ರಮ ಮದ್ಯ ಮಾರಾಟದ ದಂಧೆ ನಡೆಸುವ ಪ್ರಮುಖರ ಸುಳಿವು ನೀಡಿದ್ದು, ತನಿಖೆ ಹಿತದೃಷ್ಟಿಯಿಂದ ಗೌಪ್ಯವಾಗಿ ಇಡಲಾಗಿದೆ. ಈ ಸ್ಥಳಗಳಿಗೆ ವಾರದೊಳಗೆ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ನಾಗರಿಕರಿಗೆ ಭರವಸೆ ನೀಡಿದರು.
ಕೋಟ, ಬ್ರಹ್ಮಾವರ, ಕುಂದಾಪುರ ಠಾಣೆ ವಿರುದ್ಧ ದೂರಿನ ಸುರಿಮಳೆ: ಫೋನ್ ಇನ್ ಕಾರ್ಯಕ್ರಮಕ್ಕೆ 27 ಕರೆಗಳು ಬಂದಿದ್ದು, ಬಹುತೇಕ ಕರೆಗಳು ಬ್ರಹ್ಮಾವರ, ಕೋಟ, ಕುಂದಾಪುರ ಠಾಣೆ ವ್ಯಾಪ್ತಿಯಲ್ಲಿನ ಮಟ್ಕಾ, ಜುಗಾರಿ, ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದ್ದು. ನಾಗರಿಕರು ಈ ಠಾಣೆಗಳ ಸಿಬ್ಬಂದಿ ವಿರುದ್ಧ ದೂರಿನ ಸುರಿಮಳೆಗೈದರು.
ಕರ್ಕಶ ಹಾರ್ನ್ ತೆಗೆಯಿರಿ, ಇಲ್ಲವೇ ಶಿಕ್ಷೆ ಅನುಭವಿಸಿ: ಕಟಪಾಡಿಯ ನಾಗರಿಕರೊಬ್ಬರು ಕರೆ ಮಾಡಿ ಖಾಸಗಿ ಬಸ್ಗಳು ಕರ್ಕಶ ಹಾರ್ನ್ ಹಾಕಿಕೊಂಡು ಅತಿ ವೇಗವಾಗಿ ಚಲಿಸುತ್ತಿವೆ. ಬಸ್ ಹತ್ತುವ, ಇಳಿಯುವ ಮೊದಲೇ ಬಸ್ ಚಲಾಯಿಸುತ್ತಾರೆ ಎನ್ನುವ ಬಗ್ಗೆ ಎಸ್ಪಿ ಗಮನಕ್ಕೆ ತಂದರು.
ಮಣಿಪಾಲದ ಹಿರಿಯ ನಾಗರಿಕರೊಬ್ಬರು ಕರೆ ಮಾಡಿ ಮಣಿಪಾಲದಲ್ಲಿ ಬಸ್ಗಳ ಹಾವಳಿಯಿಂದಾಗಿ ಓಡಾಟಕ್ಕೆ ತೊಂದರೆಯಾಗಿದ್ದು, ಕರ್ಕಶ ಹಾರ್ನ್ ಹಾಕಿಕೊಂಡು ಮೈಮೇಲೆ ಬರುತ್ತಾರೆ. ಇದರಿಂದ ಗೃಹಿಣಿಯರು, ಗರ್ಭಿಣಿಯರು, ನಾಗರಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸೋಮವಾರದಿಂದ ಕ್ರಮ: ಅತಿ ವೇಗ, ಕರ್ಕಶ ಹಾರ್ನ್, ಫುಟ್ಪಾತ್ನಲ್ಲಿ ಬಸ್ ಚಲಾಯಿಸುವುದಕ್ಕೆ ಸಂಬಂಧಿಸಿ ಭೇಟಿ ಮಾಡಲು ಬಂದ ಬಸ್ ಮಾಲೀಕರ ಅಸೋಸಿಯೇಶನ್ ಸದಸ್ಯರಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನಾಳೆಯೊಳಗೆ ಸೂಕ್ತ ಕ್ರಮ ಕೈಗೊಂಡರೆ ಒಳಿತು. ಇಲ್ಲವೇ ಸೋಮವಾರದಿಂದ ಕ್ರಮ ಕೈಗೊಂಡು ಶಿಕ್ಷೆ ವಿಧಿಸಲಾಗುವುದು ಎಂದರು.
ಕುಡಿದು ಗಾಡಿ ಓಡಿಸಬೇಡಿ: ನಾನು ನನ್ನ ಮಗ ಗಾಡಿಯಲ್ಲಿ ಹೋಗುವಾಗ ಎಎಸ್ಐಯೊಬ್ಬರು ನನ್ನನ್ನು ತಡೆದು ಡ್ರಂಕ್ ಆ್ಯಂಡ್ ಡ್ರೈವ್ ಕೇಸು ಹಾಕಿದ್ದಾರೆ. ಕೋರ್ಟ್ನಿಂದ ನನಗೆ 6000 ರೂ. ದಂಡ ಬಂದಿದೆ. ನನಗೆ ಬೇಕಾದರೆ ಕೇಸು ಹಾಕಲಿ. ಆದರೆ ಕ್ರೀಡಾಪಟುವಾಗಿರುವನನ್ನ ಮಗನನ್ನು ನಿಲ್ಲಿಸಿದ್ದು ತಪ್ಪೆಂದು ಪೊಲೀಸರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಇದರಿಂದ ಕೋಪಗೊಂಡ ಎಸ್ಪಿ ಕುಡಿದು ಗಾಡಿ ಓಡಿಸಿದ್ದು ತಪ್ಪೇ?. ದಂಡ ವಸೂಲಿ ಮಾಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಈ ಬಗ್ಗೆ ನ್ಯಾಯಾಲಯದಲ್ಲೇ ಕೇಳುವಂತೆ ಸೂಚಿಸಿದರು.
ಮೀನಿನ ತ್ಯಾಜ್ಯ ರಸ್ತೆಗಲ್ಲ: ಮಲ್ಪೆ ಠಾಣೆ ವ್ಯಾಪ್ತಿಯ ವ್ಯಕ್ತಿಯೊಬ್ಬರು ಕರೆ ಮಾಡಿ, ಮಲ್ಪೆಯಿಂದ ಹೋಗುವ ಮೀನಿನ ಲಾರಿಗಳು ರಸ್ತೆಯಲ್ಲಿ ಮೀನಿನ ನೀರು ಬಿಡುತ್ತಿದ್ದು, ದ್ವಿಚಕ್ರ ವಾಹನ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಮಲ್ಪೆ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಕೇರಳದಲ್ಲಿ ಮೀನಿನ ತ್ಯಾಜ್ಯವನ್ನು ರಸ್ತೆಗೆ ಬಿಡುವುದನ್ನು ತಡೆಗಟ್ಟಿದ್ದು, ಕೇರಳ ಗಡಿ ದಾಟಿದ ಮೇಲೆ ಚಾಲಕರು ಬೇಕಾಬಿಟ್ಟಿ ರಸ್ತೆಗೆ ಬಿಡುತ್ತಿದ್ದಾರೆ. ಮೀನಿನ ತ್ಯಾಜ್ಯ ರಸ್ತೆಗಲ್ಲ. ಅದು ಏನಿದ್ದರೂ ಅವರ ಕಾರ್ಖಾನೆಗೆ ಇಲ್ಲವೇ ಸೂಚಿತ ಪರಿಸರದಲ್ಲಿ ಬಿಡಲಿ. ಈ ಬಗ್ಗೆ ಶೀಘ್ರವೇ ಕ್ರಮಕ್ಕೆ ಮುಂದಾಗುವಂತೆ ಸಂಚಾರಿ ಪೊಲೀಸರಿಗೆ ತಿಳಿಸಿದರು.
ಆಟೋ ಚಾಲಕರಿಂದ ಸುಲಿಗೆ: ಮಣಿಪಾಲ,ಉಡುಪಿ ನಗರ ವ್ಯಾಪ್ತಿಯಲ್ಲಿ ಆಟೋ ಚಾಲಕರು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಯಾವುದೇ ಮೀಟರ್ ಹಾಕುವ ಪರಿಪಾಠ ಇಲ್ಲಿಲ್ಲ. ಕೇಳಿದರೆ ನಿಂದಿಸುತ್ತಾರೆ ಎಂದಾಗ ಎಸ್ಪಿ ಈ ಬಗ್ಗೆ ಆರ್ಟಿಎ ಮೀಟಿಂಗ್ನಲ್ಲಿ ಮೀಟರ್ ಆಳವಡಿಸುವಂತೆ ಪ್ರಸ್ತಾಪಿಸುತ್ತೇವೆ ಎಂದರು.
ಕಲ್ಯಾಣಪುರ ಸಮೀಪದ ಡಾ. ಟಿಎಂಎ ಪೈ ಶಾಲೆಯ ಅಧ್ಯಾಪಕಿಯೊಬ್ಬರು ಕರೆ ಮಾಡಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕಾನೂನು ಸಂಬಂಧಿಸಿ ಪಾಠವಿದ್ದು, ಫೋನ್ನಲ್ಲಿ ನಿಮ್ಮಿಂದ ಮಾಹಿತಿ ಕೇಳಲು ಕಾಯುತ್ತಿದ್ದಾರೆ. ದಯವಿಟ್ಟು ಮಾಹಿತಿ ನೀಡುವಂತೆ ಎಸ್ಪಿಯಲ್ಲಿ ಕೇಳಿಕೊಂಡರು. ಇದಕ್ಕೆ ನಯವಾಗಿಯೇ ಪ್ರತಿಕ್ರಿಯಿಸಿದ ಎಸ್ಪಿ, ಶನಿವಾರ (ಇಂದು) ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಮಾಹಿತಿ ನೀಡುತ್ತೇನೆ. ಫೋನ್ನಲ್ಲಿ ನೀಡಲು ಸಾಧ್ಯವಾಗುವುದಿಲ್ಲ ಎಂದರು.
ಪೋನ್ ಇನ್ನಲ್ಲಿ ಕೇಳಿ ಬಂದ ಅಹವಾಲುಗಳು
*ಬೈಂದೂರು ಪರಿಸರದಲ್ಲಿ ಹೊಯ್ಸಳ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಿ
*ಸಿಟಿ ಬಸ್ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ರಾಜಾಂಗಣದಲ್ಲಿ ಗಸ್ತು ಪೊಲೀಸ್ ನೇಮಿಸಿ, ಕುಡುಕರ ಹಾವಳಿ ತಪ್ಪಿಸಿ
*ಬಾರ್ನ್ನು ಜನವಸತಿ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಅವಕಾಶ ನೀಡಬೇಡಿ
*ಮನಸ್ಸಿಗೆ ಬಂದಂತೆ ವಾಹನ ಪಾರ್ಕಿಂಗ್ ಮಾಡುವುದನ್ನು ತಡಗಟ್ಟಿ.
ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು, ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಅವಶ್ಯಬಿದ್ದಲ್ಲಿ ಜಿಲ್ಲಾಡಳಿತಕ್ಕೆ ಕರೆ ಮಾಡಿ ಸಹಾಯ ಪಡೆದುಕೊಳ್ಳಿ
-ಡಾ.ಸಂಜೀವ್ ಎಂ. ಪಾಟೀಲ್, ಎಸ್ಪಿ, ಉಡುಪಿ ಜಿಲ್ಲೆ