ಆ್ಯಪ್ನಗರ

ಉಪ್ಪೂರು ಕಿಂಡಿ ಅಣೆಕಟ್ಟಿನ ಅವಾಂತರ: ನೀರಿಗೆ ತತ್ತರ

ಉಪ್ಪೂರು ಗ್ರಾಮದ ಉಗ್ಗೇಲ್‌ಬೆಟ್ಟಿನಲ್ಲಿ ಮಡಿಸಾಲು ಹೊಳೆಯಲ್ಲಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿನ ಅಸಮರ್ಪಕ ನಿರ್ವಹಣೆಯಿಂದಾಗಿ ಕೃಷಿಕರು ಮತ್ತು ನದೀ ತೀರದ ಜನರು ಕುಡಿಯುವ ನೀರಿಗೂ ಪರದಾಡುವಂತಾಗಿದೆ.

Vijaya Karnataka 27 Mar 2019, 5:00 am
ಮೋಹನ ಉಡುಪ ಹಂದಾಡಿ
Vijaya Karnataka Web uppur


ಉಪ್ಪೂರು ಗ್ರಾಮದ ಉಗ್ಗೇಲ್‌ಬೆಟ್ಟಿನಲ್ಲಿ ಮಡಿಸಾಲು ಹೊಳೆಯಲ್ಲಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟಿನ ಅಸಮರ್ಪಕ ನಿರ್ವಹಣೆಯಿಂದಾಗಿ ಕೃಷಿಕರು ಮತ್ತು ನದೀ ತೀರದ ಜನರು ಕುಡಿಯುವ ನೀರಿಗೂ ಪರದಾಡುವಂತಾಗಿದೆ.

ಉಪ್ಪೂರು, ಹೇರೂರು, ಆರೂರು ಗ್ರಾಮದ ಕೆಲವು ಪ್ರದೇಶಗಳಲ್ಲಿ ಕೃಷಿ ಕೆಲಸಗಳಿಗೆ ಸಿಹಿನೀರು ಲಭ್ಯವಿರಬೇಕೆಂಬ ಉದ್ದೇಶದಿಂದ ಉಪ್ಪುನೀರು ತಡೆಗಟ್ಟಲು ಇಲ್ಲಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಪ್ರತಿ ಮಳೆಗಾಲದ ನಂತರ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಹಲಗೆಗಳನ್ನು ಜೋಡಿಸಿ ಮಣ್ಣನ್ನು ತುಂಬಿ ತಡೆಗೋಡೆ ನಿರ್ಮಿಸಲಾಗುತ್ತದೆ.

ಆದರೆ ಈ ವರ್ಷ ಅಸಮರ್ಪಕ ನಿರ್ವಹಣೆಯಿಂದಾಗಿ ಶೇಖರಣೆಯಾಗಿದ್ದ ಸಿಹಿನೀರು ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗಿ ಕಡಿಮೆಯಾಗಿದ್ದರೆ ಇದೀಗ ಅದೇ ಪ್ರಮಾಣದಲ್ಲಿ ಉಪ್ಪು ನೀರು ಒಳಗೆ ಬರುತ್ತಿದ್ದು ಒಳಗಿದ್ದ ಅಲ್ಪಪ್ರಮಾಣದ ಸಿಹಿ ನೀರೂ ಉಪ್ಪುನೀರಾಗಿ ಪರಿವರ್ತನೆಗೊಳ್ಳುತ್ತಿದೆ.

ಕೃಷಿಕರಿಗೆ ಸಮಸ್ಯೆ : ನೀರಿನ ಆಶ್ರಯವಿದ್ದ ಕಾರಣ ಮಳೆಗಾಲದ ನಂತರ ನದೀ ತೀರದ ಗದ್ದೆಗಳಲ್ಲಿ ಕೃಷಿಕರು ಅನೇಕ ತರಕಾರಿಗಳನ್ನು ಬೆಳೆಸುತ್ತಾರೆ. ಮೆಣಸು, ತೊಂಡೆ, ಬಸಳೆ ಹೀಗೆ ನಾನಾ ತರಕಾರಿಗಳನ್ನು ಬೆಳೆಸಿ ತಮ್ಮ ಜೀವನ ನಡೆಸುತ್ತಿರುವ ಈ ಕೃಷಿಕರು ಈ ಬಾರಿ ಕಂಗಾಲಾಗಿÜದ್ದಾರೆ. ಆದರೆ ಈ ಬಾರಿ ಅವೈಜ್ಞಾನಿಕ ತಡೆಗೋಡೆಯಿಂದಾಗಿ ತರಕಾರಿ ಬೆಳೆಗಳು ಕುಂಠಿತವಾಗಿ ಕೃಷಿಕರ ಬದುಕನ್ನು ಕಸಿದುಕೊಂಡಿದೆ.

ನೀರು ಪೋಲು ತಡೆ ಹೇಗೆ ? : ಮರದ ಹಲಗೆ ಮತ್ತು ಬಾಗಿಲ ನಡುವೆ ಮಣ್ಣು ಸರಿಯಾಗಿ ಹಾಕದೆ, ಹಲಗೆಯನ್ನು ಕೂಡ ಸರಿಯಾಗಿ ಜೋಡಿಸದೆ ಅಲ್ಲಲ್ಲಿ ನೀರು ಪೋಲಾಗುತ್ತಿದೆ. ಕೆಳಗಡೆಯಲ್ಲಿ ಶೇಖರಣೆಗೊಂಡ ನದಿಯಲ್ಲಿ ಅಮಾವಾಸ್ಯೆ ಹುಣ್ಣಿಮೆಯ ಸಂದರ್ಭ ಉಬ್ಬರದ ನೀರು ಬರುವುದರಿಂದ ಕೆಳಗಡೆಯ ಉಪ್ಪು ನೀರು ಮೇಲಿನ ಭಾಗಕ್ಕೆ ಮಿಶ್ರವಾಗುತ್ತದೆ. ಹಳೇ ತಂತ್ರಜ್ಞಾನದ ಬದಲು ಹೊಸ ತಂತ್ರಜ್ಞಾನ ಬಳಸಿ ಫೈಬರ್‌ ಅಥವಾ ಬೇರಾವುದಾದರೂ ತುಕ್ಕು ಹಿಡಿಯದ ಲೋಹದಿಂದ ಬಾಗಿಲು ಮಾಡಿದಲ್ಲಿ ನೀರು ಪೋಲಾಗುವುದನ್ನು ತಪ್ಪಿಸಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯ.

ಕಿಂಡಿ ಅಣೆಕಟ್ಟಿನ ನಿರ್ಮಾಣದಿಂದ ನದಿ ಆಸುಪಾಸಿನ ಆರೂರು, ಉಪ್ಪೂರು, ಹೇರೂರು ಮತ್ತು ಹಾವಂಜೆಯ ಸುಮಾರು 50 ಹೆಕ್ಟೇರ್‌ ಕೃಷಿ ಭೂಮಿಗೆ ಅನುಕೂಲವಾಗಿದ್ದು, ಇದೀಗ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೃಷಿಕರು ಜೀವನ ನಿರ್ವಹಣೆಗೆ ಕಷ್ಟಪಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸರಿಮಾಡಿದಲ್ಲಿ ಇದ್ದ ನೀರನ್ನಾದರೂ ಉಳಿಸಬಹುದು. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರುವುದನ್ನು ತಪ್ಪಿಸಬಹುದು.

ನಿರ್ವಹಣೆ ಮಾಡಬೇಕಾದವರ ಬೇಜವಾಬ್ದಾರಿಯಿಂದ ನಮ್ಮಲ್ಲಿ ಲಭ್ಯವಿರುವ ಕೃಷಿ ಯೋಗ್ಯ ನೀರನ್ನು ಉಳಿಸಿಕೊಳ್ಳಲಾಗದಿರುವುದು ವಿಷಾದನೀಯ ಮತ್ತು ಖಂಡನೀಯ. ಇಲಾಖೆಯವರು ಕಾಟಾಚಾರಕ್ಕೆ ಕೆಲಸಮಾಡುವುದನ್ನು ಇನ್ನಾದರೂ ನಿಲ್ಲಿಸಲಿ. ಅಣೆಕಟ್ಟಿನಲ್ಲಿ ನೀರು ಸೋರಿಕೆಯ ಪರಿಣಾಮವಾಗಿ ಈ ಬಾರಿ ಈ ಪ್ರದೇಶದ ಬಾವಿಗಳಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಲಕ್ಷ ಣಗಳಿವೆ. -ರಮೇಶ ಕರ್ಕೇರ ಉಗ್ಗೆಲ್‌ ಬೆಟ್ಟು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು

ಜನಸಾಮಾನ್ಯರಿಗೆ ಅಧಿಕಾರಿ ವರ್ಗದವರ ವಂಚನೆಯಿದು. ವ್ಯವಸ್ಥೆಯ ಕುರಿತು ಆಳವಾಗಿ ಮಾತನ್ನಾಡುವವರ ವೈಫಲ್ಯ ಮತ್ತು ನಿರ್ಲಕ್ಷ ್ಯದಿಂದ ಗ್ರಾಮಸ್ಥರಿಗೆ ಪ್ರತಿ ಬಾರಿಯೂ ಇದೇ ಸಮಸ್ಯೆ ಎದುರಾಗುತ್ತದೆ. -ದಯಾನಂದ್‌ ಉಗ್ಗೆಲ್‌ ಬೆಟ್ಟು, ಗ್ರಾಮಸ್ಥರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ