ಆ್ಯಪ್ನಗರ

ಶೀರೂರು ಮಠಕ್ಕೆ ಶೀಘ್ರವೇ ಅರ್ಹ ಉತ್ತರಾಧಿಕಾರಿ ನೇಮಕ: ಸೋದೆಶ್ರೀ

ಶೀರೂರು ಮಠಕ್ಕೆ ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿ ಸಾಕಷ್ಟು ಒತ್ತಡವಿದ್ದು, ಜಾತಕ ಸರಿಹೊಂದುವ ಅರ್ಹತೆಯುಳ್ಳವರನ್ನೇ ನೋಡಬೇಕಿದೆ. ನಾವೇ ಉತ್ತರಾಧಿಕಾರಿ ನೇಮಕ ಮಾಡಬೇಕೆನ್ನುವ ಆಲೋಚನೆಯೂ ಇರಲಿಲ್ಲ. ಸದ್ಯ ಆಯ್ಕೆ ನಮಗೂ ಕಷ್ಟವಾಗಿದೆ. ಮಠದಲ್ಲಿ ದೊಡ್ಡ ಹೊಂಡವೇ ಬಿದ್ದಿದ್ದು, ಯಾರಿಂದಾಗಿದೆ ಎನ್ನುವ ಚರ್ಚೆ ಮಾಡಲ್ಲ. ಎಷ್ಟೇ ದೊಡ್ಡ ಬುದ್ಧಿವಂತ ಬಂದರೂ ಮಠವನ್ನು ನಿಭಾಯಿಸುವುದು ಕಷ್ಟ. ಆಧ್ಯಾತ್ಮ ಪ್ರಚಾರಕ್ಕಿಂತ ಕೋರ್ಟ್, ಕಚೇರಿ ಅಲೆದಾಟವೇ ಹೆಚ್ಚಿದೆ. ಈ ಸಮಸ್ಯೆ ಇತ್ಯರ್ಥವಾಗದೇ ತರಾತುರಿಯಲ್ಲಿ ಉತ್ತರಾಧಿಕಾರಿ ನೇಮಕವೂ ಕಷ್ಟವಿದೆ ಎಂದರು.

Vijaya Karnataka Web 7 Apr 2019, 4:10 pm
ಉಡುಪಿ: ಶೀರೂರು ಮಠಕ್ಕೆ ಭಕ್ತಿ, ಜ್ಞಾನ, ವೈರಾಗ್ಯಯುಳ್ಳ ಯೋಗ್ಯ ಉತ್ತರಾಧಿಕಾರಿಗಾಗಿ ಹುಡುಕಾಟ ಮಾಡುತ್ತಿದ್ದು, ಆದಾಯ ತೆರಿಗೆ ನೋಟಿಸ್, ಹಾದಿ ತಪ್ಪಿರುವ ಆರ್ಥಿಕತೆಯಿಂದಾಗಿ ತರಾತುರಿಯಲ್ಲಿ ಜವಾಬ್ದಾರಿ ಕೊಟ್ಟರೆ ಅಧ್ಯಾತ್ಮಿಕತೆ ಪ್ರಚಾರಗಿಂತ ಕೋರ್ಟ್, ಕಚೇರಿ ಅಲೆದಾಡಬೇಕಾಗುತ್ತದೆ. ಮಠದ ಸಮಸ್ಯೆಗೆ ಒಂದು ಹಂತದಲ್ಲಿ ಪರಿಹಾರ ಸಿಕ್ಕ ಕೂಡಲೇ ಅರ್ಹರನ್ನೇ ನೇಮಿಸಲು ಬದ್ಧನಿದ್ದೇನೆ ಎಂದು ಸೋದೆ-ಶೀರೂರು ದ್ವಂದ್ವ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
Vijaya Karnataka Web Udupi Sode mutt


ಅವರು ಉಡುಪಿ ರಥಬೀದಿಯ ಶೀರೂರು ಮಠದ ಆವರಣದಲ್ಲಿ ಭಾನುವಾರ ನಡೆದ ಶೀರೂರು ಶಿಷ್ಯ ವೃಂದ ಹಾಗೂ ಭಕ್ತರ ಸಮಾಲೋಚನಾ ಸಭೆಯಲ್ಲಿ ಉಪಸ್ಥಿತಿ ವಹಿಸಿ ಮಾತನಾಡಿದರು.

ಶೀರೂರು ಮಠಕ್ಕೆ ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿ ಸಾಕಷ್ಟು ಒತ್ತಡವಿದ್ದು, ಜಾತಕ ಸರಿಹೊಂದುವ ಅರ್ಹತೆಯುಳ್ಳವರನ್ನೇ ನೋಡಬೇಕಿದೆ. ನಾವೇ ಉತ್ತರಾಧಿಕಾರಿ ನೇಮಕ ಮಾಡಬೇಕೆನ್ನುವ ಆಲೋಚನೆಯೂ ಇರಲಿಲ್ಲ. ಸದ್ಯ ಆಯ್ಕೆ ನಮಗೂ ಕಷ್ಟವಾಗಿದೆ. ಮಠದಲ್ಲಿ ದೊಡ್ಡ ಹೊಂಡವೇ ಬಿದ್ದಿದ್ದು, ಯಾರಿಂದಾಗಿದೆ ಎನ್ನುವ ಚರ್ಚೆ ಮಾಡಲ್ಲ. ಎಷ್ಟೇ ದೊಡ್ಡ ಬುದ್ಧಿವಂತ ಬಂದರೂ ಮಠವನ್ನು ನಿಭಾಯಿಸುವುದು ಕಷ್ಟ. ಆಧ್ಯಾತ್ಮ ಪ್ರಚಾರಕ್ಕಿಂತ ಕೋರ್ಟ್, ಕಚೇರಿ ಅಲೆದಾಟವೇ ಹೆಚ್ಚಿದೆ. ಈ ಸಮಸ್ಯೆ ಇತ್ಯರ್ಥವಾಗದೇ ತರಾತುರಿಯಲ್ಲಿ ಉತ್ತರಾಧಿಕಾರಿ ನೇಮಕವೂ ಕಷ್ಟವಿದೆ ಎಂದರು.

ಶೀರೂರು ಮಠ ಹಾಗೂ ತೋನ್ಸೆ ಜಯಕೃಷ್ಣ ಶೆಟ್ಟಿ ಒಡಂಬಡಿಕೆಯಲ್ಲಿ ನಡೆಯುತ್ತಿರುವ ಕನಕ ಮಹಲ್ ವ್ಯಾಜ್ಯವೂ ಕೋರ್ಟ್‍ನಲ್ಲಿದೆ. ಬಾಡಿಗೆ ಬರುತ್ತಿದ್ದ ಬ್ಯಾಂಕ್ ಖಾತೆಯನ್ನು ಆದಾಯ ತೆರಿಗೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಬಾಡಿಗೆಯ ಸ್ವಲ್ಪ ಹಣದಲ್ಲೇ ಮಠದ ನಿರ್ವಹಣೆಯಾಗುತ್ತಿದೆ. ಇಷ್ಟೆಲ್ಲ ಸಮಸ್ಯೆಯಿಂದಾಗಿ ಉತ್ತರಾಧಿಕಾರಿ ನೇಮಕ ನಿಧಾನವಾಗುತ್ತಿದೆ ಹೊರತು ದುರುದ್ದೇಶದಿಂದಲ್ಲ ಎಂದರು.

ಯೋಗ್ಯರನ್ನೇ ನೋಡಿಟ್ಟಿದ್ದೇವೆ: ಶೀರೂರು ಮಠಕ್ಕೆ ಒಂದು ಬ್ರ್ಯಾಂಡ್ ಅಂಟಿಕೊಂಡಿದ್ದು, ಹೊಸ ಬ್ರ್ಯಾಂಡ್ ಕೊಡುವ ಸಂಕಲ್ಪ ಮಾಡಿದ್ದೇವೆ. ಇದಕ್ಕಾಗಿ ಸೋದೆಯಲ್ಲಿ ಅಧ್ಯಯನ ಮಾಡುತ್ತಿರುವ ಯೋಗ್ಯ ಯತಿಯನ್ನು ನೋಡಿದ್ದು, ಹೆಸರು, ವಿಳಾಸವನ್ನು ಬಹಿರಂಗ ಪಡಿಸುವುದಿಲ್ಲ. 3, 4 ವರ್ಷಗಳ ಕಾಲ ಅವರ ಮೇಲೆ ನಿಗಾ ಇಟ್ಟು, ಸೂಕ್ಷ್ಮವಾಗಿ ಗಮನಿಸಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಶೀರೂರು ಮಠಕ್ಕೆ ಯೋಗ್ಯ ಉತ್ತರಾಧಿಕಾರಿ ಕೊಡುವ ಒಳ್ಳೆಯ ಸಂಕಲ್ಪದಲ್ಲಿದ್ದೇವೆ ಎಂದರು.

ಕನಕ ಮಹಲ್‍ನ ಕೋಟಿ ಸಮಸ್ಯೆ!:

ಸೋದೆ ಮಠದ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರತ್ನ ಕುಮಾರ್ ಮಾತನಾಡಿ, ಕನಕ ಇನ್‍ಫ್ರಾಟೆಕ್‍ನ ತೋನ್ಸೆ ಜಯಕೃಷ್ಣ ಶೆಟ್ಟಿ ಹಾಗೂ ಶೀರೂರು ಶ್ರೀಗಳು ಶೇ. 30 ಮಠಕ್ಕೆ ಹಾಗೂ ಶೇ. 70 ಜಯಕೃಷ್ಣ ಶೆಟ್ಟಿ ಅವರಿಗೆ ಎನ್ನುವ ಒಡಂಬಡಿಕೆ ಮಾಡಿಕೊಂಡಿದ್ದು, ಇದಕ್ಕಾಗಿ ಕಾರ್ಪೊರೇಶನ್ ಬ್ಯಾಂಕ್‍ನಲ್ಲಿ 25 ಕೋಟಿ ರೂ. ಸಾಲ ಮಂಜೂರು ಮಾಡಿಕೊಂಡಿದ್ದರು. ಕಾಮಗಾರಿ ಆರಂಭದಲ್ಲಿ 15.5 ಕೋಟಿ ರೂ. ಪಡೆದುಕೊಂಡಿದ್ದರು. ಗಡಿ ತರಕಾರು ಹಾಗೂ ವೈಮನಸ್ಸಿನಿಂದಾಗಿ ಕೆಲಸ ಅರ್ಧಕ್ಕೆ ನಿಂತಿದ್ದು, ಬ್ಯಾಂಕ್ ಪಡೆದ ಹಣ ಮರುಪಾವತಿಸುವಂತೆ ಸೂಚಿಸಿದೆ. ಈ ಮಧ್ಯೆ ಜಯಕೃಷ್ಣ ಶೆಟ್ಟಿ ಸಾರ್ವಜನಿಕರಿಂದ ಮುಂಗಡ ಹಣ ಪಡೆದಿದ್ದು, ಎಲ್ಲರೂ ಕೂಡಾ ಕೋರ್ಟ್‌ಗೆ ಹೋಗಿದ್ದಾರೆ.

ಸಾಲ ಮರುಪಾವತಿಗೆ ಸಂಬಂಧಿಸಿ ಶೀರೂರು ಶ್ರೀಗಳು 2016 ರ ಜು. 28 ರಂದು 2.5 ಕೋಟಿ ರೂ., 2017ರ ಮಾ. 30 ರಂದು 2.75 ಕೋಟಿ ರೂ., 2017 ರ ಏ. 3 ರಂದು 49.5 ಲಕ್ಷ ರೂ. ಹಾಗೂ ಜಯಕೃಷ್ಣ ಶೆಟ್ಟಿ 2.7777 ಕೋಟಿ ರೂ. ಮರುಪಾವತಿಸಿದ್ದಾರೆ. ಸದ್ಯ ಬ್ಯಾಂಕ್ 19.5 ಕೋಟಿ ರೂ. ಕಟ್ಟುವಂತೆ ಸೂಚನೆ ಕೊಟ್ಟಿದ್ದು, ನಾವು ಉಳಿದ 6 ರಿಂದ 7 ಕೋಟಿ ರೂ. ಅಸಲು ಮಾತ್ರವೇ ಮರುಪಾವತಿಸಲು ಕೇಳಿಕೊಂಡಿದ್ದೇವೆ. ಈ ಬಗ್ಗೆ ಬ್ಯಾಂಕ್‍ನೊಂದಿಗೆ ಮಾತುಕತೆ ಹಾಗೂ ಕೋರ್ಟ್‌ನಲ್ಲಿ ವ್ಯವಹಾರ ನಡೆಯುತ್ತಿದೆ. ಅಂಗಡಿಗೆ ಜಾಗಕ್ಕಾಗಿ ಹಣಕೊಟ್ಟಿರುವ 10, 12 ಮಂದಿ ಕೋರ್ಟ್‌ಗೆ ಹೋಗಿದ್ದು, ಜಯಕೃಷ್ಣ ಶೆಟ್ಟಿ ಅವರೇ ಯೋಜನೆಯನ್ನು ಪೂರ್ಣಗೊಳಿಸಿ ಹಣ ಪಡೆದವರಿಗೆ ಅಂಗಡಿ ಕೊಡುವ ಬಗ್ಗೆ ರವೀಂದ್ರ ಶ್ಯಾನುಬಾಗ್ ಅವರಲ್ಲಿ ಭರವಸೆ ಹಾಗೂ ನ್ಯಾಯ ಸಮ್ಮತವಾಗಿ ಇತ್ಯರ್ಥ ಮಾಡಲು ಶ್ರೀಗಳು ಚಿಂತಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶೀರೂರು ಶ್ರೀಗಳ ಪರ್ಯಾಯ ಅವಧಿಯಲ್ಲಾದ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಅಸಲು ಬಡ್ಡಿ 17.3450260 ಕೋಟಿ ರೂ. ಕಟ್ಟುವಂತೆ ಸೋದೆ ಶ್ರೀಗಳಿಗೆ ನೋಟಿಸ್ ಕೊಟ್ಟಿದೆ. ಈ ಬಗ್ಗೆ ಲೆಕ್ಕ ಪರಿಶೋಧಕರಿಂದ ಪರಿಶೀಲನೆ ಮಾಡಿ, ನಮ್ಮ ಮನವಿ ಮೇರೆಗೆ ಶೇ. 80 ರಷ್ಟು ರಿಯಾಯಿತಿ ಕೊಟ್ಟಿದೆ. ಉಳಿದ ಶೇ. 20 ರಷ್ಟಕ್ಕೆ 3,469052 ಕೋಟಿ ರೂ. ಮರುಪಾವತಿಯಾಗದೇ ಇರುವ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ಖಾತೆಯನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದು, ಸಾಕಷ್ಟು ಸಮಸ್ಯೆಗಳಿವೆ ಎಂದರು.

ಶಾರದಾ ವಿದ್ಯಾಲಯದ ಮುಖ್ತಸ್ಥ ಪ್ರೊ.ಎಂ.ಬಿ. ಪುರಾಣಿಕ್ ಮಾತನಾಡಿ, ಪ್ರಸ್ತುತ ಸನ್ಯಾಸಿ ಸ್ವೀಕಾರ ಮಾಡಲು ಹಿಂದೆ, ಮುಂದೆ ನೋಡಬೇಕಾಗಿದೆ. ಭಕ್ತಿ, ಜ್ಞಾನ, ವೈರಾಗ್ಯ ಈ ಮೂರನ್ನು ಪರಿಗಣನೆಗೆ ತೆಗೆದುಕೊಂಡು ಶೀರೂರು ಮಠಕ್ಕೆ ಶಿಷ್ಯ ಸ್ವೀಕಾರ ಮಾಡಬೇಕು. ಅನ್ಯ ಧರ್ಮೀಯರು ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿದ್ದು, ಎಲ್ಲವೂ ಸಂಶಯಕ್ಕೆ ಎಡೆಮಾಡಿಕೊಡಬಾರದೆಂದು ಸಲಹೆ ಕೊಟ್ಟರು.

ಶೀರೂರು ಮೂಲ ಮಠದ ವ್ಯವಸ್ಥಾಪಕ ಎಸ್. ಸುಬ್ರಹ್ಮಣ್ಯ ಭಟ್ ಮಾತನಾಡಿ, ಮೂಲ ಮಠದ ರಾಜಾಂಗಣ ನವೀಕರಣ, ಗರ್ಭಗುಡಿ ಪೌಳಿ ನವೀಕರಣ, ಬಿದ್ದು ಹೋಗುವ ಗೋಡೆ, ಸ್ವಾಮೀಜಿ ಕೊಠಡಿ, ಶೌಚಾಲಯ, 4 ಎಕರೆ ಕೃಷಿ ಭೂಮಿಯಲ್ಲಿ ಭತ್ತ ಸಹಿತ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ. ಹಿರಿಯಡ್ಕದಿಂದ 1 ಕಿ.ಮೀ. ದೂರದಲ್ಲಿರುವ ಪಾವಂಜೆಯಲ್ಲಿ 1.3 ಎಕರೆ ಜಾಗದಲ್ಲಿ ಶೀರೂರು ಮಠಕ್ಕೆ ಸಂಬಂಧಿಸಿದ ಮಠವಿದ್ದು, ಒಂದು ವೃಂದಾವನ ಕೂಡಾ ಪತ್ತೆಯಾಗಿದೆ. ಇದನ್ನು ಕೂಡಾ ನವೀಕರಣ ಮಾಡುವ ಆಲೋಚನೆಯಲ್ಲಿದ್ದೇವೆ ಎಂದರು.

ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ, ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಹಿರಿಯ ವಕೀಲ ಶ್ರೀಪತಿ ಆಚಾರ್ಯ, ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ