ಆ್ಯಪ್ನಗರ

ಸುವರ್ಣ ತ್ರಿಭುಜ ಬೋಟ್‌ ಅವಶೇಷ ಪತ್ತೆ: ನೌಕಾ ಸೇನೆಯ ಲಿಖಿತ ಉತ್ತರ

ಮಾಲ್ವಾನ್‌ ವ್ಯಾಪ್ತಿಯ 30 ಕಿ.ಮೀ. ದೂರದಲ್ಲಿ 60 ಮೀಟರ್‌ ಆಳದಲ್ಲಿ ಬೋಟ್‌ನ ಅವಶೇಷ ಪತ್ತೆಯಾಗಿದೆ ಎಂದು ಕಾರವಾರ ನೇವಲ್‌ ಬೇಸ್‌ ಅಧಿಕಾರಿಗಳು ಉಡುಪಿ ಜಿಲ್ಲಾ ಪೊಲೀಸರಿಗೆ ಲಿಖಿತವಾಗಿ ಮಾಹಿತಿ ಕೊಟ್ಟು ಖಚಿತಪಡಿಸಿದ್ದಾರೆ.

Vijaya Karnataka 9 May 2019, 9:35 am
ಉಡುಪಿ: ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಬೋಟ್‌ ಸಹಿತ 7 ಮೀನುಗಾರರು ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್‌ನ ಅವಶೇಷ 140 ದಿನಗಳ ಬಳಿಕ ಮಹಾರಾಷ್ಟ್ರದ ಮಾಲ್ವಾನ್‌ ಪ್ರದೇಶದ ಸಮುದ್ರದಲ್ಲಿ ಪತ್ತೆಯಾಗಿರುವ ಬಗ್ಗೆ ನೌಕ ಪಡೆ ಬುಧವಾರ ದೃಢಪಡಿಸಿದೆ.
Vijaya Karnataka Web Suvarna Tribhuja


ಮಾಲ್ವಾನ್‌ ವ್ಯಾಪ್ತಿಯ 30 ಕಿ.ಮೀ. ದೂರದಲ್ಲಿ 60 ಮೀಟರ್‌ ಆಳದಲ್ಲಿ ಬೋಟ್‌ನ ಅವಶೇಷ ಪತ್ತೆಯಾಗಿದೆ ಎಂದು ಕಾರವಾರ ನೇವಲ್‌ ಬೇಸ್‌ ಅಧಿಕಾರಿಗಳು ಉಡುಪಿ ಜಿಲ್ಲಾ ಪೊಲೀಸರಿಗೆ ಲಿಖಿತವಾಗಿ ಮಾಹಿತಿ ಕೊಟ್ಟು ಖಚಿತಪಡಿಸಿದ್ದಾರೆ.

ಸುವರ್ಣ ತ್ರಿಭುಜ ಬೋಟ್‌ ನಾಪತ್ತೆಯ ಬಳಿಕ ಸಾಕಷ್ಟು ಹುಡುಕಾಟ ನಡೆದಿದ್ದು, ಮೇ 2ರಂದು ಶಾಸಕ ಕೆ. ರಘುಪತಿ ಭಟ್‌ ನೇತೃತ್ವದಲ್ಲಿ ನಡೆದಿದ್ದ ಕಾರ್ಯಾಚರಣೆ ವೇಳೆ ಬೋಟ್‌ನ ಅವಶೇಷ ಪತ್ತೆಯಾಗಿದೆ ಎನ್ನುವ ಹೇಳಿಕೆ ನೀಡಲಾಗಿತ್ತು. ಈ ಬಗ್ಗೆ ಸ್ಪಷ್ಟ ಚಿತ್ರಣ ನೀಡುವಂತೆ ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ನೌಕಪಡೆಯ ಕಾರವಾರ ನೇವಲ್‌ ಬೇಸ್‌ ಅಧಿಕಾರಿಗಳಿಗೆ ಮೇ 3ರಂದು ಪತ್ರ ಬರೆದಿದ್ದರು.

ಎಸ್ಪಿ ಪತ್ರಕ್ಕೆ ನೇವಲ್‌ ಬೇಸ್‌ ಅಧಿಕಾರಿಗಳು ಮರು ಉತ್ತರ ಕೊಟ್ಟು, ಬೋಟ್‌ ಹಾಗೂ ಮೀನುಗಾರರ ಪತ್ತೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯ ಕುರಿತು ಮಾಹಿತಿ ಕೊಟ್ಟಿದ್ದಾರೆ.

ಏ. 30ರಿಂದ ಮೇ 2ರ ವರೆಗೆ ಪತ್ತೆ ಕಾರ್ಯಾಚರಣೆ ನಡೆದಿದ್ದು, ಕೊನೆಗೆ ಮಾಲ್ವಾನ್‌ ಪ್ರದೇಶದ ಸಮುದ್ರ ದಡದಿಂದ 60 ಮೀಟರ್‌ ಆಳದಲ್ಲಿ ಬೋಟ್‌ನ ಅವಶೇಷ ಪತ್ತೆಯಾಗಿತ್ತು. ಈ ಕಾರ್ಯಾಚರಣೆಗೆ ಐಎನ್‌ಎಸ್‌ ನಿರೀಕ್ಷಕ್‌, ಪರಿಣತ ಮುಳುಗು ತಜ್ಞರು ಹಾಗೂ ಸೈಡ್‌ಸ್ಕಾನ್‌ ಸೋನಾರ್‌ ತಂತ್ರಜ್ಞಾನ ಬಳಸಿಕೊಳ್ಳಲಾಗಿತ್ತು. ಈ ಪತ್ತೆ ಕಾರ್ಯಾಚರಣೆಯಲ್ಲಿ ಶಾಸಕ ಕೆ. ರಘುಪತಿ ಭಟ್‌ ಹಾಗೂ ಇತರ 9 ಮಂದಿ ಭಾಗವಹಿಸಿರುವ ಬಗ್ಗೆ ನೌಕಸೇನೆಯ ಅಧಿಕಾರಿಗಳು ಮಾಹಿತಿ ಕೊಟ್ಟಿರುವ ಬಗ್ಗೆ ಎಸ್ಪಿ ನಿಶಾ ಜೇಮ್ಸ್‌ ತಿಳಿಸಿದ್ದಾರೆ.

ಗೃಹ ಸಚಿವರ ಟ್ವೀಟ್‌: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆ ಡಿ. 13 ರಂದು ತೆರಳಿ ಕಾಣೆಯಾಗಿದ್ದ 7 ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷ ಮಹಾರಾಷ್ಟ್ರದ ಸಮುದ್ರದಲ್ಲಿ ಸಿಕ್ಕಿದ್ದು, ಹೆಚ್ಚಿನ ತನಿಖೆಗಾಗಿ ರಾಜ್ಯ ತನಿಖಾ ತಂಡವು ಸ್ಥಳಕ್ಕೆ ದೌಡಾಯಿಸಿದೆ. ಗೃಹ ಇಲಾಖೆಯಿಂದ ನೌಕಾಪಡೆಗೆ ಪತ್ರ ಬರೆದು ಪ್ರಕರಣದ ಸತ್ಯಾಸತ್ಯತೆ ಬಗ್ಗೆ ವರದಿ ಸಲ್ಲಿಸಲು ಆಗ್ರಹಿಸಲಾಗುವುದೆಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ಟ್ವೀಟ್‌ ಮಾಡಿದ್ದಾರೆ.

ಇದೊಂದು ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ನೇವಲ್‌ ಬೇಸ್‌ ಅಧಿಕಾರಿಗಳು ಕೊಟ್ಟ ವರದಿಯನ್ನು ಮೇಲಾಧಿಕಾರಿ ಹಾಗೂ ಸರಕಾರಕ್ಕೆ ಮುಟ್ಟಿಸುತ್ತೇವೆ. ನಮ್ಮ ಹಂತದಲ್ಲಿ ನಡೆಯುವ ತನಿಖೆಗೂ ಬಳಸಿಕೊಳ್ಳಲಾಗುವುದು. ಬೋಟ್‌ ಯಾವ ಕಾರಣಕ್ಕೆ ಮುಳುಗಡೆ/ ಮೀನುಗಾರರ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ-ನಿಶಾ ಜೇಮ್ಸ್‌, ಎಸ್ಪಿ ಉಡುಪಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ