ಆ್ಯಪ್ನಗರ

ದಾರುಣ ಘಟನೆ: ತಾಯಿ ಜತೆ ಮಲಗಿದ್ದ ಮಗುವಿನ ಅಪಹರಣ, ನದಿಯಲ್ಲಿ ಶವ ಪತ್ತೆ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಮೊಗೆ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ತಾಯಿ ಪಕ್ಕದಲ್ಲಿ ಮಲಗಿದ್ದ 1 ವರ್ಷ ಮೂರು ತಿಂಗಳ ಹೆಣ್ಣು ಮಗುವನ್ನು ಮುಸುಕುಧಾರಿ ವ್ಯಕ್ತಿಯೊಬ್ಬ ಅಪಹರಿಸಿದ್ದು, ಮಗುವಿನ ಶವ ಶುಕ್ರವಾರ ಬೆಳಗ್ಗೆ ಸಮೀಪದ ಕುಬ್ಜಾ ನದಿಯಲ್ಲಿ ಪತ್ತೆಯಾಗಿದೆ.

Vijaya Karnataka Web 12 Jul 2019, 4:02 pm
ಸಿದ್ದಾಪುರ: ಕುಂದಾಪುರ ತಾಲೂಕಿನ ಯಡಮೊಗೆ ಗ್ರಾಮದ ಕುಮ್ಟಿಬೇರು ಎಂಬಲ್ಲಿ ಗುರುವಾರ ಬೆಳಗಿನ ಜಾವ ಮನೆಯೊಳಗೆ ತಾಯಿ ಜೊತೆ ಮಲಗಿದ್ದಾಗ ನಾಪತ್ತೆಯಾಗಿದ್ದ 1 ವರ್ಷ ಮೂರು ತಿಂಗಳ ಹೆಣ್ಣು ಮಗುವಿನ ಶವ 3 ಕಿ.ಮೀ ದೂರದ ಕುಬ್ಜಾ ನದಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.
Vijaya Karnataka Web Kidnapped child Sanwika


ಸಂತೋಷ್ ನಾಯ್ಕ ಹಾಗೂ ರೇಖಾ ಇವರ ಹೆಣ್ಣು ಮಗು ಸಾನ್ವಿಕಾ ನಾಪತ್ತೆಯಾದ ಮಗು. ಗುರುವಾರ ಬೆಳಗಿನ ಜಾವ ತಾಯಿ ಜತೆ ಮಲಗಿದ್ದ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಮಗುವಿನ ಹೆತ್ತವರಿಗೆ ತೀವ್ರ ಆಘಾತ ಸೃಷ್ಟಿಸಿದ ಈ ಘಟನೆ ಸಾರ್ವಜನಿಕರಲ್ಲಿ ಆತಂಕ, ಗೊಂದಲಕ್ಕೆ ಕಾರಣವಾಗಿತ್ತು.

ಶುಕ್ರವಾರ ಬೆಳಗ್ಗೆ ಸುಮಾರು 10 ಗಂಟೆ ಸುಮಾರಿಗೆ ನದಿಯಲ್ಲಿ ಸ್ಥಳೀಯರು ವ್ಯಾಪಕ ಹುಡುಕಾಟ ನಡೆಸಿದರು. ಮನೆಯಿಂದ ಸುಮಾರು 3 ಕಿ.ಮೀಗೂ ಮಿಕ್ಕಿ ದೂರದ ಕುಬ್ಜಾ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಗುರುವಾರದಿಂದ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದಾಗ ಮಗುವಿನ ಶವ ಪತ್ತೆಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಗುವಿನ ತಂದೆ ಸಂತೋಷ್ ನಾಯ್ಕ ಖಾಸಗಿ ಪಂಪ್‌ಹೌಸ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಗು ನಾಪತ್ತೆಯಾದಾಗ ಆತ ಮನೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಗು ತಾಯಿಯ ಪಕ್ಕದಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಮುಸುಕುಧಾರಿ ವ್ಯಕ್ತಿಯೊಬ್ಬ ಬಾಗಿಲು ತೆರೆದು ನುಗ್ಗಿಬಂದು ಮಗುವನ್ನು ಅಪಹರಿಸಿದ್ದಾನೆ. ಬಳಿಕ ಮನೆಯ ಪಕ್ಕ ಹರಿಯುವ ನದಿ ದಾಟಿ ಪರಾರಿಯಾಗಿದ್ದಾನೆ. ತಾಯಿ ರೇಷ್ಮಾ ನದಿಗೆ ಹಾರಿ ಮಗುವನ್ನು ರಕ್ಷಿಸುವ ಯತ್ನ ನಡೆಸಿದರೂ ಯಶಸ್ವಿಯಾಗಿಲ್ಲ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಈ ದಂಪತಿಗಳಿಗೆ ಐದು ವರ್ಷದ ಗಂಡು ಮಗುವಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ಬಂದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ