ಆ್ಯಪ್ನಗರ

ಬೈಕ್, ರಿಕ್ಷಾ ಡಿಕ್ಕಿ: ಯಕ್ಷಗಾನ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆಗೆ ಗಂಭೀರ ಗಾಯ

ಚೌತಿಯ ಪೂಜೆಗಾಗಿ ಪ್ರತಿವರ್ಷ ಮನೆಯಲ್ಲೇ ಮಣ್ಣಿನ ಗಣಪತಿಯ ಮೂರ್ತಿ ರಚಿಸುವ ಶ್ರೀಪಾದ ಹೆಗಡೆಯವರು ಅದಕ್ಕೂ ಮುನ್ನ ಮಂತ್ರಾಕ್ಷತೆ ಪಡೆಯುವುದಕ್ಕಾಗಿ ಪುತ್ರನೊಂದಿಗೆ ಸೋಮವಾರ ಬೈಕ್‌ನಲ್ಲಿ ಗೋರೆ ಮಠಕ್ಕೆ ತೆರಳುತ್ತಿದ್ದಾಗ ಆಟೋರಿಕ್ಷಾ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ ಪುತ್ರ ಶ್ರೀಶ ರಿಕ್ಷಾದ ಮುಂಭಾಗಕ್ಕೆ ಬಿದ್ದರೆ, ಶ್ರೀಪಾದ ಹೆಗಡೆ ರಸ್ತೆಗೆ ಅಪ್ಪಳಿಸಿ, ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹೊನ್ನಾವರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಟ್ಟಿದ್ದು, ವೈದ್ಯರ ಸಲಹೆಯಂತೆ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.

Vijaya Karnataka Web 18 Jun 2019, 1:24 pm
ಉಡುಪಿಯ ಆದರ್ಶ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಮುಂದುವರಿದ ಚಿಕಿತ್ಸೆ
Vijaya Karnataka Web Hadinabala Shripada Hegde


ಉಡುಪಿ: ಉತ್ತರ ಕನ್ನಡ ಜಿಲ್ಲೆಯ ಅರೇಂಗಡಿ-ಚಂದಾವರ ನಡುವಿನ ಕಡತೋಕ ಕ್ರಾಸ್‍ನಲ್ಲಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳ (66) ಉಡುಪಿ ಆದರ್ಶ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ 6 ರಿಂದ 12 ಗಂಟೆಗಳ ಕಾಲ ತುರ್ತು ನಿಗಾ ಘಟಕದಲ್ಲೇ ಚಿಕಿತ್ಸೆ ಮುಂದುವರಿಸುವಂತೆ ವೈದ್ಯರು ಸಲಹೆ ಕೊಟ್ಟಿದ್ದು, ಬಳಿಕ ಶಸ್ತ್ರ ಚಿಕಿತ್ಸೆ ನಡೆಸುವ ಬಗ್ಗೆ ನಿರ್ಧಾರಿಸುವುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಘಟನೆ ವಿವರ: ಮನೆಯಲ್ಲಿ ಪ್ರತಿ ವರ್ಷವೂ ಮಣ್ಣಿನಿಂದ ಗಣಪತಿ ಮೂರ್ತಿ ರಚಿಸುವ ಶ್ರೀಪಾದ ಹೆಗಡೆ ವಾಡಿಕೆಯಂತೆ ಕಲಾಕೃತಿ ರಚನೆಗೂ ಮುನ್ನ ದಿವಗಿ ಹಾಗೂ ಗೋರೆ ಮಠಕ್ಕೆ ತೆರಳಿ ಮಂತ್ರಾಕ್ಷತೆ ಪಡೆದುಕೊಳ್ಳುತ್ತಿದ್ದರು.

ಇದಕ್ಕಾಗಿ ಪುತ್ರ ಶ್ರೀಶ ಹೆಗಡೆ ಅವರೊಂದಿಗೆ ಕುಮಟಾ ಸಮೀಪದ ದಿವಗಿ ಮಠಕ್ಕೆ ಸೋಮವಾರ ಬೈಕ್‍ನಲ್ಲಿ ಹೊರಟಿದ್ದರು. ಈ ವೇಳೆ ಕಡತೋಕ ಸಮೀಪ ಆಟೋರಿಕ್ಷಾ ಚಾಲಕ ಅಡ್ಡ ರಸ್ತೆಯಿಂದ ನೇರವಾಗಿ ಮುಖ್ಯರಸ್ತೆಗೆ ನುಗ್ಗಿಸಿದ ಪರಿಣಾಮ ಬೈಕ್‍ಗೆ ರಿಕ್ಷಾ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಪುತ್ರ ಶ್ರೀಶ ರಿಕ್ಷಾದ ಮುಂಭಾಗಕ್ಕೆ ಬಿದ್ದರೆ, ಶ್ರೀಪಾದ ಹೆಗಡೆ ರಸ್ತೆಗೆ ಅಪ್ಪಳಿಸಿ, ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹೊನ್ನಾವರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಟ್ಟಿದ್ದು, ವೈದ್ಯರ ಸಲಹೆಯಂತೆ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹನುಮಂತನ ಪಾತ್ರದಲ್ಲಿ ಶ್ರೀಪಾದ ಹೆಗಡೆ ಹಡಿನಬಾಳ


1953 ರಂದು ಜನಿಸಿದ ಶ್ರೀಪಾದ ಹೆಗಡೆ ಎಸ್‍ಎಸ್‍ಎಲ್‍ಸಿ ವರೆಗೆ ಶಿಕ್ಷಣ ಪಡೆದಿದ್ದರು. 1976, 77 ರಲ್ಲಿ ಗುಂಡಬಾಳಾ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆದ ಹರಿಕೆ ಬಯಲಾಟದ ವೇಳೆ ಯಕ್ಷಗಾನಕ್ಕೆ ಪ್ರವೇಶಿಸಿದ್ದರು. ಬಳಿಕ ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ ಮೇಳ, ಪಂಚಲಿಂಗೇಶ್ವರ ಮೇಳ ಶಿರಸಿ, ಪೆರ್ಡೂರು, ಬಚ್ಚಗಾರು, ರಾಮನಾಥೇಶ್ವರ, ಮಂದಾರ್ತಿ, ಶಿರಸಿ ಮಾರಿಕಾಂಬ, ಸಾಲಿಗ್ರಾಮ, ಇಡಗುಂಜಿ, ನೀಲಾವರ ಮೇಳದಲ್ಲಿ ಕಲಾ ಸೇವೆ ಸಲ್ಲಿಸಿದ್ದರು.

ಪ್ರಸ್ತುತ ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕೊಂಡಾಕುಳಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದಾರೆ.

ಹಾಸ್ಯಪಾತ್ರಗಳಾದ ಬ್ರಾಹ್ಮಣ, ಬಾಗಿಲದೂತ, ವನಪಾಲ, ಅಜ್ಜಿ, ಮಂಥರೆ, ಕಪ್ಪದದೂತ, ಕಾಶಿಮಾಣಿ, ಸ್ತ್ರೀಪಾತ್ರದಲ್ಲಿ ಚಿತ್ರಾಂಗದೆ, ಅಂಬೆ, ಬಣ್ಣದ ವೇಷದಲ್ಲಿ ಘೋರ ಶೂರ್ಪನಖಿ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ