ಆ್ಯಪ್ನಗರ

ಯಡಮೊಗೆ ಮಗು ಸಾವು ಪ್ರಕರಣ: ತಾಯಿ ವಿರುದ್ಧ ಕೊಲೆ ಕೇಸ್ ದಾಖಲು

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಮೊಗೆ ಗ್ರಾಮದಲ್ಲಿ ತಾಯಿಯ ಪಕ್ಕ ಮಲಗಿದ್ದ ಮಗು ಅನುಮಾನಾಸ್ಪದವಾಗಿ ಅಪಹರಣಗೊಂಡ ಮರುದಿನ ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಶಂಕರನಾರಾಯಣ ಪೊಲೀಸರು ಮಗುವಿನ ತಾಯಿ ರೇಖಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Vijaya Karnataka Web 13 Jul 2019, 4:35 pm
ಉಡುಪಿ: ಯಡಮೊಗೆ ಗ್ರಾಮದ ಕುಮ್ಟಿಬೇರಿನಲ್ಲಿ ಕೌಟುಂಬಿಕ ಕಲಹದಿಂದ ಮನನೊಂದ ಮುಗ್ಧ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿ ತನ್ನ ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವಿನ ಸಾವಿಗೆ ಕಾರಣರಾದ ತಾಯಿ ರೇಖಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
Vijaya Karnataka Web Kidnapped child Sanwika


ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ನುರಿತ ಮನೋ ವೈದ್ಯರಿಂದ ರೇಖಾ ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಾಗಿದೆ. ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆಗಾಗಿ ದೊಡ್ಡಣಗುಡ್ಡೆಯ ಡಾ.ಎ.ವಿ. ಬಾಳಿಗಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದೆ.

ಮಗುವಿನ ಮೃತದೇಹ ಸಿಕ್ಕ ಬಳಿಕ ಆಕೆ ಕೊಟ್ಟ ಹೇಳಿಕೆಯಂತೆ ಕಲಂ 302 (ಕೊಲೆ), 307 (ಕೊಲೆಯತ್ನ) ಮತ್ತು ಆತ್ಮಹತ್ಯೆ ಯತ್ನ ಪ್ರಕರಣವನ್ನು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಚಿಕಿತ್ಸೆ ಪೂರ್ಣಗೊಂಡ ಬಳಿಕ ಚಿಕಿತ್ಸೆ ಮುಂದುವರಿಸಲಾಗುವುದು. ಪ್ರಾಮಾಣಿಕ ಹಾಗೂ ನಿಪಕ್ಷಪಾತ ತನಿಖೆಗಾಗಿ ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಅವರನ್ನು ತನಿಖಾಧಿಕಾರಿಯಾಗಿ ನಿಯೋಜಿಸಲಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಘಟನೆ ವಿವರ: ಯಡಮೊಗೆ ಗ್ರಾಮದ ಕುಮ್ಟಿಬೇರು ಸಂತೋಷ್ ನಾಯ್ಕ್ ಅವರ ಪತ್ನಿ ರೇಖಾ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದ ವೇಳೆ ಜು. 11, ಬೆಳಗ್ಗೆ 4.30 ಕ್ಕೆ ಯಾರೋ ಅಪರಿಚಿತರು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಮಲಗಿದ್ದ ಹೆಣ್ಣು ಮಗು ಸಾನ್ವಿಕಾಳನ್ನು ಅಪಹರಣಗೈದಿರುವ ಬಗ್ಗೆ ರೇಖಾ ದೂರು ಕೊಟ್ಟಿದ್ದರು. ಮರುದಿನ ರೇಖಾ ಅವರ ಮಗು ಸಾನ್ವಿಕಾಳ ಮೃತದೇಹ ಮನೆಯಿಂದ 2 ಕಿ.ಮೀ. ದೂರದಲ್ಲಿ ಹೊಸಂಗಡಿ ಗ್ರಾಮದ ಕಾರೂರು ಬಳಿ ಕುಬ್ಜಾ ನದಿಯಲ್ಲಿ ಪತ್ತೆಯಾಗಿತ್ತು.

ಮಕ್ಕಳೊಂದಿಗೆ ಹೊಳೆಗಿಳಿದ ರೇಖಾ!: ಸಾನ್ವಿಕಾಳ ಮೃತದೇಹ ನದಿಯಲ್ಲಿ ಪತ್ತೆಯಾಗುತ್ತಿದ್ದಂತೆ ಪ್ರಕರಣ ಹೊಸ ಆಯಾಮಕ್ಕೆ ತಿರುಗಿದ್ದು, ಕೌಟುಂಬಿಕ ಕಲಹಕ್ಕೆ ಮನನೊಂದ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿರುವುದು ತಿಳಿದು ಬಂತು. ರೇಖಾ ಸಾಯುವ ಉದ್ದೇಶದಿಂದ ತನ್ನ 5 ವರ್ಷದ ಮಗ ಸಾತ್ವಿಕ್ ಹಾಗೂ ಹೆಣ್ಣು ಮಗು ಸಾನ್ವಿಕಾಳನ್ನು ಎತ್ತಿಕೊಂಡು ಮನೆಯ ಪಕ್ಕದ ಕುಬ್ಜಾ ಹೊಳೆಗೆ ಇಳಿದಿದ್ದರು. ಈ ವೇಳೆ ಸಾನ್ವಿಕಾ ಕೈಯಿಂದ ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮಗುವನ್ನು ಹಿಡಿಯಲು ಹೋದಾಗ ಸಾತ್ವಿಕ್ ಹಾಗೂ ರೇಖಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ನೀರಿನ ಸೆಳೆತಕ್ಕೆ ಸಿಲುಕಿ ಸಾನ್ವಿಕಾ ಕೊಚ್ಚಿ ನಾಪತ್ತೆಯಾಗಿದ್ದು, ಸಾತ್ವಿಕ್ ಹಾಗೂ ರೇಖಾ ಹೊಳೆಯ ದಡ ಸೇರಿ ಬದುಕುಳಿದಿದ್ದರು.

ನಾಪತ್ತೆ ಕಥೆ ಕಟ್ಟಿದ ರೇಖಾ: ಸಾನ್ವಿಕಾ ಹೊಳೆಯಲ್ಲಿ ಕೊಚ್ಚಿ ಹೋಗಿದ್ದು, ಯಾವುದೇ ಸುಳಿವು ಸಿಗದೇ ಇದ್ದಾಗ ರೇಖಾ ಅಂಜಿ ಮಗುವನ್ನು ಕಳ್ಳರು ಅಪಹರಿಸಿದ್ದಾರೆ ಎನ್ನುವ ಹೊಸ ಕಥೆ ಕಟ್ಟಿದ್ದರು. ಮಗು ಮೃತದೇಹ ಸಿಕ್ಕ ಬಳಿಕ ಆಕೆ ಕೊಟ್ಟಿರುವ ಹೇಳಿಕೆ, ಸಂಗತಿಗಳು ಹಾಗೂ ಆಕೆಯ ಮಗ ಸಾತ್ವಿಕ್‍ನ ಮುಗ್ಧ ನುಡಿಗಳು ತಾಯಿ ಕೊಟ್ಟ ಅಪಹರಣದ ಕೃತ್ಯಕ್ಕೆ ಅಷ್ಟು ಬಲ ಕೊಟ್ಟಿರಲಿಲ್ಲ. ವಿಚಾರಣೆ ನಡೆಸಿದ ಪೊಲೀಸರಿಗೆ ಅನುಮಾನ ಹುಟ್ಟಿದ್ದು, ಮನೋ ವೈದ್ಯರಿಂದ ಸಮಾಲೋಚನೆ ನಡೆಸಲಾಗಿತ್ತು. ಈ ವೇಳೆ ಆಕೆ ಹೇಳಿಕೆ ಕೊಟ್ಟಿದ್ದು, ಆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ