ಆ್ಯಪ್ನಗರ

ಉಡುಪಿಯ ರಾಜಾಂಗಣದಲ್ಲಿ ಯೋಗ ಮಾಡಿ ಬೆರಗುಗೊಳಿಸಿದ ಬಾಬಾ ರಾಮದೇವ್‌ : ಐದು ದಿನಗಳ ಶಿಬಿರಕ್ಕೆ ಚಾಲನೆ

ಉಡುಪಿಯ ರಾಜಾಂಗಣ ಬಳಿಯ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯುವ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರ(ಯೋಗ ಮಾಡಿರಿ ನಿರೋಗಿ ಆಗಿರಿ) ವನ್ನು ಯೋಗ ಗುರು ಬಾಬಾ ರಾಮದೇವ್‌ ಅವರ ಯೋಗಾಭ್ಯಾಸ ಮಾಡುವ ಮೂಲಕ ಚಾಲನೆ ನೀಡಿದರು.

Vijaya Karnataka Web 16 Nov 2019, 2:03 pm
ಉಡುಪಿ : ಜಗತ್ತು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಭಾರತದ ಮೂಲ ಪ್ರಕೃತಿ, ಸಂಸ್ಕೃತಿಯಾದ ಆಧ್ಯಾತ್ಮ, ಯೋಗದಲ್ಲಿ ಪರಿಹಾರವಿದೆ ಎಂದು ಅಂತಾರಾಷ್ಟ್ರೀಯ ಯೋಗ ಗುರು ಬಾಬಾ ರಾಮ್‍ದೇವ್ ಹೇಳಿದ್ದಾರೆ. ಅವರು ಪರ್ಯಾಯ ಪಲಿಮಾರು ಮಠ, ಶ್ರೀಕೃಷ್ಣಮಠ, ಹರಿದ್ವಾರದ ಪತಂಜಲಿ ಯೋಗ ಪೀಠ(ಟ್ರಸ್ಟ್) ವತಿಯಿಂದ ಐದು ದಿನಗಳ ಕಾಲ ರಾಜಾಂಗಣ ಬಳಿಯ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯುವ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರ(ಯೋಗ ಮಾಡಿರಿ ನಿರೋಗಿ ಆಗಿರಿ) ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
Vijaya Karnataka Web Baba ramdev
ಯೋಗಾಭ್ಯಾಸದಲ್ಲಿ ನಿರತರಾಗಿರುವ ಯೋಗ ಗುರು ಬಾಬಾ ರಾಮದೇವ್‌ : ಚಿತ್ರ: ಅರುಣಾಚಲ ಹೆಬ್ಬಾರ್


ರಾಮ, ಶಿವ ಮಾತ್ರವಲ್ಲ ರಾವಣ, ಕಂಸ, ಒಸಾಮಾ ಬಿನ್ ಲಾಡೆನ್, ಬಗ್ದಾದಿಯೂ ನಮ್ಮೊಳಗಿದ್ದು ಮೋಹ, ಮದ, ಮತ್ಸರ ಸಹಿತ ಅರಿ ಷಡ್ವರ್ಗ ವೈರಿಗಳನ್ನು ಗೆಲ್ಲೋದೇ ಬದುಕಿನ ಸಾಧನೆ. ನಮ್ಮ ಬದುಕು, ಜಗತ್ತಿನ ಒಳಿತಿಗೆ ಆತ್ಮ, ಪರಮಾತ್ಮ, ಪ್ರಕೃತಿಯ ಸದ್ಭಳಕೆಯಾಗಬೇಕು.
ಬದಲಾದ ಜೀವನಶೈಲಿಯಿಂದ ಬರುವ ರೋಗಗಳಿಗೆ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮವೇ ಔಷಧ, ಶಸ್ತ್ರಚಿಕಿತ್ಸೆ ರಹಿತ ಮದ್ದಾಗಿದೆ. ಯೋಗ, ಧ್ಯಾನದಿಂದ ಅನಾರೋಗ್ಯ ದೂರವಿರುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ . ಯೋಗಿಗಳು ಮತ್ತು ದೇಶಭಕ್ತರು ಕರ್ನಾಟಕದ ಹೆಮ್ಮೆ ಎಂದರು.

ಬ್ಯಾಂಕ್‌ ಠೇವಣಿಗೆ ವಿಮೆ ವ್ಯಾಪ್ತಿ ಏರಿಕೆ : ಚಳಿಗಾಲದ ಅಧಿವೇಶನದಲ್ಲಿ ವಿದೇಯಕ ಮಂಡನೆ

ಯೋಗ, ಪ್ರಾಣಾಯಾಮ ತಪ್ಪದು: ಪಲಿಮಾರುಶ್ರೀ
ಜಾತಿ, ಮತ, ಲಿಂಗ ತಾರತಮ್ಯ ಮೀರಿ ನಿಂತ ವಿದ್ಯೆಯಾದ ಯೋಗ, ಧ್ಯಾನ, ಪ್ರಾಣಾಯಾಮದಿಂದ ಶರೀರ ಚೆನ್ನಾಗಿದ್ದು ದೀರ್ಘಾಯುಷ್ಯ ಹೊಂದುವುದು ಸಾಧ್ಯ. ಏಕಾದಶಿಯಾದರೂ ತಪ್ಪಬಹುದು, ಆದರೆ ಯೋಗ, ಪ್ರಾಣಾಯಾಮವನ್ನು ಒಂದು ದಿನವೂ ತಪ್ಪಿಸುವಂತಿಲ್ಲ ಎಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.

ಮೂಗಿಗೆ ಬೆರಳು ಹಿಡಿದು ಕೂರುವ ಕ್ರಿಯೆಯಾಗಿ ತಮಾಷೆಗೆ ಒಳಗಾಗಿದ್ದ ಯೋಗ, ಪ್ರಾಣಾಯಾಮಕ್ಕಿಂದು ಅಂತಾರಾಷ್ಟ್ರೀಯ ಸಿದ್ಧಿ, ಪ್ರಸಿದ್ಧಿಯಿದೆ. ಗೇರುಬೀಜ ಪರದೇಶಕ್ಕೆ ಹೋಗಿ ಸಂಸ್ಕರಣೆ, ಮೌಲ್ಯವರ್ಧನೆ ಬಳಿಕ ತಿರುಗಿ ಬಂದಾಗ ಬೆಲೆ ಬರುವಂತೆ ಯೋಗಕ್ಕೂ ಮಾನ್ಯತೆ ಸಿಕ್ಕಿದೆ. ನಾನೂ ತಿನ್ನಲ್ಲ, ಅನ್ಯರಿಗೂ ತಿನ್ನಲು ಬಿಡೋದಿಲ್ಲ ಎಂದ ಪ್ರಧಾನಿ ಮೋದಿಯಂತೆ ನಾನೂ ಮಲಗಲಾರೆ, ಅನ್ಯರನ್ನೂ ಮಲಗಲು ಬಿಡಲಾರೆನೆಂದು ಬಾಬಾ ರಾಮ್‍ದೇವ್ ಬೆಳ್ಳಂಬೆಳಗ್ಗೆ ಜನರನ್ನು ಸ್ವಯಂ ಯೋಗ, ಧ್ಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾನಸಿಕ ಶಕ್ತಿ, ಶರೀರ ಕ್ಷಮತೆ ವೃದ್ಧಿಯಾಗಬೇಕು ಎಂದು ಪರ್ಯಾಯ ಶ್ರೀಪಾದರು ನುಡಿದರು.

8 ಸ್ಥಾನಗಳನ್ನೂ ಗೆಲ್ಲದೆ ಸಂಕಷ್ಟಕ್ಕೆ ಸಿಲುಕಲಿದೆ ಬಿಜೆಪಿ: ಸಿದ್ದರಾಮಯ್ಯ ಭವಿಷ್ಯವಾಣಿ

ಉಡುಪಿ ಶಾಸಕ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಜಿಲ್ಲಾಕಾರಿ ಜಿ. ಜಗದೀಶ್, ಉದ್ಯಮಿ ಮನೋಹರ ಶೆಟ್ಟಿ, ಶ್ರೀಕೃಷ್ಣಮಠದ ವ್ಯವಸ್ಥಾಪಕ ಪ್ರಹ್ಲಾದ ಆಚಾರ್ಯ, ಹರಿನಾರಾಯಣ ಆಸ್ರಣ್ಣ ಕಟೀಲು,ಬಾಲಾಜಿ ರಾಘವೇಂದ್ರ ಆಚಾರ್ಯ, ಪುರುಷೋತ್ತಮ ಶೆಟ್ಟಿ, ಹರಿಯಪ್ಪ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದು , ಯೋಗ ಸಾಧಕರ ಮೊದಲ ಸಾಲಲ್ಲಿ ಯೋಗ, ಧ್ಯಾನದಲ್ಲಿ ನಿರತರಾದರು.
ಭಾರತ ಸ್ವಾಭಿಮಾನ, ಪತಂಜಲಿ ಯೋಗ ಸಮಿತಿ ಕರ್ನಾಟಕ ರಾಜ್ಯ ಪ್ರಭಾರಿ ಭವರ್‍ಲಾಲ್ ಆರ್ಯ ಕಾರ್ಯಕ್ರಮ ನಿರೂಪಿಸಿದರು. ಅತಿಥಿ, ಗಣ್ಯರಿಗೆ ಬಾಬಾ ರಾಮ್‍ದೇವ್ ರುದ್ರಾಕ್ಷಿ ಸ್ಮರಣಿಕೆ ನೀಡಿದರು.

ಬಾಬಾ ತಲೆಗೇರಿದ ಕೇದಗೆ ಯಕ್ಷ ಕಿರೀಟ!
ಕರಾವಳಿ ಮಣ್ಣಿನಲ್ಲಿ ಹುಟ್ಟಿ ದೇಶ, ವಿದೇಶದಲ್ಲಿ ಪ್ರಖ್ಯಾತಿ ಪಡೆದ ಯಕ್ಷಗಾನದ ಬಡಗುತಿಟ್ಟಿನ ಕೇದಗೆ ಯಕ್ಷ ಕಿರೀಟವನ್ನು ಬಾಬಾ ರಾಮ್‍ದೇವ್ ಅವರಿಗೆ ತೊಡಿಸಿ ಉಡುಪಿ ಗೌರವ ಸಲ್ಲಿಸಲಾಯಿತು. ಕಿರೀಟ ಭಾರ ಇಲ್ಲ ಎಂದ ಬಾಬಾ ತಲೆಗೆ ಮತ್ತೊಂದು ಸಣ್ಣ ಕೇದಗೆ ಯಕ್ಷ ಕಿರೀಟದ ಗೌರವವೂ ಸಂದಿತು.

ಪರ್ಯಾಯ ಯತಿಗಳ ಕಾಲಿಗೆರಗಿದ ಬಾಬಾ
ಮೂಳೂರಿನ ಸಾಯಿರಾಧಾ ರೆಸಾರ್ಟ್‌ನಲ್ಲಿ ವಾಸ್ತವ್ಯವಿದ್ದ ಬಾಬಾ ರಾಮ್‍ದೇವ್ ಕಾರಿನಿಂದಿಳಿದು ವೇದಿಕೆಯನ್ನೇರಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರ ಕಾಲಿಗೆರಗಿ, ಲಘುವಾಗಿ ಆಲಿಂಗಿಸಿದರು. ಯತಿ ದ್ವಯರು ಜತೆಯಾಗಿ ದೀಪ ಬೆಳಗಿ ಶಿಬಿರಕ್ಕೆ ಚಾಲನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ