ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲ ತೀರದ ಯುದ್ಧ ನೌಕೆಯ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಮೂವರು ಯುವಕರನ್ನು ಕಾರವಾರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತರಿಂದ ಒಂದು ನಕಲಿ ಪಿಸ್ತೂಲ್, ಚಿಲ್ಲರೆ ಹಣ ಹಾಗೂ ಬಹಳಷ್ಟು ಪ್ರಮಾಣದ ಸಿಗರೇಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಯುವಕರ ತಂಡ ಗೋವಾ ಹಾಗೂ ಕಾರವಾರದಲ್ಲಿ ನಡೆದಿದ್ದ ಕೆಲ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಯುವಕರ ತಂಡ ಯುದ್ಧ ನೌಕೆಯ ಬಳಿ ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಬಸ್ ನಿಲ್ದಾಣದ ಬಳಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ನಗರದಲ್ಲಿ ನಡೆದಿದ್ದ ಕೆಲವು ಗೂಡಂಗಡಿಗಳು ಹಾಗೂ ದೇವಸ್ಥಾನದ ಹುಂಡಿ ಕಳ್ಳತನದಲ್ಲಿ ಈ ತಂಡದ ಕೈವಾಡವಿದ್ದ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಪೊಲೀಸರು ಬಂಧಿತ ಯುವಕರನ್ನು ವಿಚಾರಣೆ ನಡೆಸಿದ್ದಾರೆ.