ಆ್ಯಪ್ನಗರ

ನಲುಗಿದ ತೋಟಗಾರಿಕೆ ಬೆಳೆ

ಜಿ.ಎನ್‌.ಭಟ್‌. ತಟ್ಟಿಗದ್ದೆ. ಯಲ್ಲಾಪುರ: ಹಲವು ದಿನಗಳಿಂದ ತಾಲೂಕಿನ ಜನರನ್ನು ಕಾಡಿದ್ದ ರಣಭೀಕರ ಮಳೆಯು ಒಂದೆರಡು ದಿನಗಳಿಂದ ಕಡಿಮೆಯಾಗಿದೆ. ಆದರೆ ಕಳೆದ ನಾಲ್ಕಾರು ದಿನಗಳಲ್ಲಿ ಹುಚ್ಚೆದ್ದು ನರ್ತಿಸಿದ್ದ ರಕ್ಕಸ ಮಳೆಗೆ ಜನ-ಜಾನುವಾರುಗಳು ಹೈರಾಣಾದ್ದು ಮಾತ್ರವಲ್ಲ, ಇಂತಹ ಮಳೆಯ ಆರ್ಭಟದಿಂದಾದ ಹಾನಿಯ ಪರಿಣಾಮವು ಕೃಷಿ, ವ್ಯಾಪಾರ-ವಹಿವಾಟು ಕ್ಷೇತ್ರಗಳ ಮೇಲೂ ಆಗಿದೆ.

Vijaya Karnataka 13 Aug 2019, 5:00 am
ಜಿ.ಎನ್‌.ಭಟ್‌. ತಟ್ಟಿಗದ್ದೆ. ಯಲ್ಲಾಪುರ: ಹಲವು ದಿನಗಳಿಂದ ತಾಲೂಕಿನ ಜನರನ್ನು ಕಾಡಿದ್ದ ರಣಭೀಕರ ಮಳೆಯು ಒಂದೆರಡು ದಿನಗಳಿಂದ ಕಡಿಮೆಯಾಗಿದೆ. ಆದರೆ ಕಳೆದ ನಾಲ್ಕಾರು ದಿನಗಳಲ್ಲಿ ಹುಚ್ಚೆದ್ದು ನರ್ತಿಸಿದ್ದ ರಕ್ಕಸ ಮಳೆಗೆ ಜನ-ಜಾನುವಾರುಗಳು ಹೈರಾಣಾದ್ದು ಮಾತ್ರವಲ್ಲ, ಇಂತಹ ಮಳೆಯ ಆರ್ಭಟದಿಂದಾದ ಹಾನಿಯ ಪರಿಣಾಮವು ಕೃಷಿ, ವ್ಯಾಪಾರ-ವಹಿವಾಟು ಕ್ಷೇತ್ರಗಳ ಮೇಲೂ ಆಗಿದೆ. ಪ್ರವಾಹ ಹಾಗೂ ಮಳೆಯ ಅಬ್ಬರಕ್ಕೆ ನಲುಗಿದ್ದ ತಾಲೂಕಿನ ಅನೇಕ ಪ್ರದೇಶಗಳ ಫಲವತ್ತಾದ ತೋಟಗಳು ಅಡಕೆ,ವೀಳ್ಯದೆಲೆ,ಬಾಳೆ ಹಾಗೂ ತೆಂಗಿನ ಬೆಳೆಗಳಿಗೆ ಪ್ರಸಿದ್ಧವಾಗಿದ್ದವು. ಆದರೆ ಈಗ ಸಾವಿರಾರು ಎಕರೆ ಪ್ರದೇಶಗಳು ನೀರಿನ ರಭಸಕ್ಕೆ ನಲುಗಿಹೋಗಿವೆ. ಹೀಗಾಗಿ ಈ ಪ್ರದೇಶಗಳಿಗಾದ ಹಾನಿಯಿಂದ ಪಟ್ಟಣದ ಮಾರುಕಟ್ಟೆಯ ಮೇಲೂ ಪರಿಣಾಮ ಆಗಿದೆ. ಮುಂದಿನ ದಿನಗಳಲ್ಲಿ ಇಂತಹ ಪರಿಣಾಮಗಳು ಇನ್ನಷ್ಟು ಹೆಚ್ಚಾಗಿ ಗೋಚರಿಸಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Vijaya Karnataka Web KWR-12 YLP 1 A


ತಾಲೂಕಿನ ಗ್ರಾಮೀಣ ಭಾಗಗಳ ಅನೇಕ ರೈತರು ತಮ್ಮ ತೋಟಗಳಲ್ಲಿ ಅಡಕೆಯ ಜೊತೆ ವೀಳ್ಯದೆಲೆ,ಬಾಳೆ ಮುಂತಾದವುಗಳನ್ನು ಉಪಬೆಳೆಯಾಗಿ ಬೆಳೆಯುತ್ತಾರೆ. ಅವುಗಳಿಗೆ ಪಟ್ಟಣದ ಮಾರುಕಟ್ಟೆಯೇ ಆಧಾರವಾಗಿದೆ. ಆದರೆ ಈಗ ಅತಿವೃಷ್ಟಿಯಿಂದ ಇಂತಹ ತೋಟಗಾರಿಕಾ ಬೆಳೆಗಳು ಸಂಪೂರ್ಣ ನಾಶವಾಗಿವೆ. ಹೀಗಾಗಿ ಸ್ಥಳೀಯವಾಗಿ ಸಿಗುತ್ತಿದ್ದ ವೀಳ್ಯದೆಲೆ,ಹಣ್ಣಡಿಕೆ ಮುಂತಾದವುಗಳು ಈಗ ಅಲಭ್ಯವಾಗಿವೆ. ಹೀಗಾಗಿ ಹೊರ ಪ್ರದೇಶಗಳಿಂದ ಇವುಗಳನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟಮಾಡಲಾಗುತ್ತಿದ್ದು ಅವುಗಳ ಬೆಲೆ ಗಗನಕ್ಕೇರಿದೆ.

ವೀಳ್ಯದೆಲೆಗೆ ವಿಪರೀತ ಬೇಡಿಕೆ: ತಾಲೂಕಿನಲ್ಲಿ ನಿತ್ಯ ತಾಂಬೂಲ ಸೇವನೆ ಮಾಡುವವರ ಸಂಖ್ಯೆ ದೊಡ್ಡದಿದೆ. ಹೀಗಾಗಿ ವೀಳ್ಯದೆಲೆಗೂ ವಿಪರೀತ ಬೇಡಿಕೆ ಇದೆ. ಹೊನ್ನಾವರ,ಕುಮಟಾ ಮುಂತಾದ ಘಟ್ಟದ ಕೆಳಗಿನ ಭಾಗಗಳಿಂದ ಹಾಗೂ ಸವಣೂರು ಹೊರ ಊರುಗಳಿಂದ ಬರುತ್ತಿದ್ದ ವೀಳ್ಯದೆಲೆಗಳು ಆ ಭಾಗಗಳಲ್ಲಿ ವಿಪರೀತ ಮಳೆಯಾದ ಕಾರಣ ನಾಲ್ಕಾರು ದಿನಗಳಿಂದ ಬಂದಿಲ್ಲ. ಮಳೆಯಿಂದಾಗಿ ಬಂದಾಗಿದ್ದ ರಸ್ತೆಗಳಿಂದಾಗಿ ವೀಳ್ಯದೆಲೆಗಳ ಸಾಗಾಟ ನಿಂತಿತ್ತು. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ವೀಳ್ಯದೆಲೆಯು ಸ್ಥಳೀಯವಾಗಿಯೂ ಲಭ್ಯವಿಲ್ಲದೇ, ಬೇರೆ ಊರುಗಳಿಂದಲೂ ಆಗಮಿಸದೇ ಮಾರುಕಟ್ಟೆಲ್ಲಿ ಅಭಾವ ಕಂಡಿತ್ತು. ಮಾತ್ರವಲ್ಲ ಇದೇ ಮೊದಲ ಬಾರಿಗೆ ವೀಳ್ಯದೆಲೆಯ ದರವೂ ಆಕಾಶಕ್ಕೆ ಜಿಗಿತ ಕಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯ ಕರಿಎಲೆಯ ದರ ನೂರಕ್ಕೆ 70-75ರೂ ಹಾಗೂ ಸವಣೂರು ಬಿಳಿ ಎಲೆಯ ದರ ನೂರು ಎಲೆಗೆ ಬರೋಬ್ಬರಿ ನೂರು ರೂಪಾಯಿ ಇದೆ. ಇನ್ನೂ ಕೆಲವು ದಿನ ಈ ಬೆಲೆಯೇ ಮುಂದುವರಿಯಬಹುದೆಂಬ ಅಭಿಪ್ರಾಯ ವ್ಯಾಪಾರಿಗಳದ್ದಾಗಿದೆ. ಈ ಹಿಂದೆ ನೂರು ಎಲೆಗೆ 25-30ರೂ ಆಸುಪಾಸು ಬೆಲೆ ಇತ್ತು. ಮುಂದಿನ ದಿನಗಳಲ್ಲಿ ಹತ್ತಾರು ಹಬ್ಬಗಳು ಆಗಮಿಸಲಿವೆ. ಹಬ್ಬಗಳ ಸಂದರ್ಭದಲ್ಲಿ ದೇವರ ಪೂಜೆಗೆ ವೀಳ್ಯದೆಲೆ ಬೇಕೇಬೇಕು. ಇದೇ ಬೆಲೆ ಮುಂದುವರಿದರೆ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಬಾಳೆಹಣ್ಣು ದರ ಏರಿಕೆ ನಿರೀಕ್ಷೆ: ಈಗಾಗಲೇ ಸಾವಿರಾರು ಎಕರೆಯ ಬಾಳೆ ತೋಟಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ. ಹೀಗಾಗಿ ಬರುವ ದಿನಗಳಲ್ಲಿ ಬಾಳೆ ಹಣ್ಣು,ತೆಂಗಿನಕಾಯಿಗಳ ಬೆಲೆಯೂ ಏರಿಕೆಯಾಗಬಹುದೆಂಬ ನಿರೀಕ್ಷೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ