ಆ್ಯಪ್ನಗರ

ಕೃಷಿ ನಮಗೆ ವೃತ್ತಿಯಲ್ಲ ಸಂಪ್ರದಾಯ

ಸಿದ್ದಾಪುರ : ನಮ್ಮ ದೇಶದಲ್ಲಿ ಕೃಷಿ ಎನ್ನುವುದು ವೃತ್ತಿಯಲ್ಲ. ಅದೊಂದು ಸಂಪ್ರದಾಯವಾಗಿದ್ದು, ಇದರಿಂದ ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಜಿ.ಪಂ. ಸದಸ್ಯ ಎಂ.ಜಿ.ಹೆಗಡೆ ಹೇಳಿದರು.

Vijaya Karnataka 20 Jun 2019, 5:00 am
ಸಿದ್ದಾಪುರ : ನಮ್ಮ ದೇಶದಲ್ಲಿ ಕೃಷಿ ಎನ್ನುವುದು ವೃತ್ತಿಯಲ್ಲ. ಅದೊಂದು ಸಂಪ್ರದಾಯವಾಗಿದ್ದು, ಇದರಿಂದ ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಜಿ.ಪಂ. ಸದಸ್ಯ ಎಂ.ಜಿ.ಹೆಗಡೆ ಹೇಳಿದರು.
Vijaya Karnataka Web KWR-19SDPR-1


ಅವರು ಬುಧವಾರ ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಇಲಾಖೆ ಹಾಗೂ ಇನ್ನಿತರ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಸಮಗ್ರ ಕೃಷಿ ಅಭಿಯಾನ 2019-20ನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿಯನ್ನು ಒಂದು ವೃತ್ತಿ ಎಂದು ಪರಿಗಣಿಸುವ ವರೆಗೆ ನಿರುದ್ಯೋಗ ನಿವಾರಿಸಲು ಸಾಧ್ಯವಿಲ್ಲ. ಕಲಿತವರಿಗೆಲ್ಲ ಸರಕಾರಿ ಉದ್ಯೋಗ ಸಿಗಲು ಸಾಧ್ಯವಿಲ್ಲ. ಇದರಿಂದ ಕೃಷಿಯನ್ನು ಉದ್ಯೋಗವಾಗಿ ಸ್ವೀಕರಿಸುವಂತೆ ಯುವ ಪೀಳಿಗೆಯನ್ನು ಪ್ರೋತ್ಸಾಹಿಸಬೇಕು. ನಾವು ಮಕ್ಕಳಿಗೆ ಕೃಷಿ ಕೆಲಸಗಳ ಬಗ್ಗೆ ಹೇಳುತ್ತಿಲ್ಲ. ನಮ್ಮ ಮಕ್ಕಳು ಆಫೀಸರ್‌ ಆಗಬೇಕು ಎಂದು ಬಯಸುತ್ತೇವೆ. ಪದವಿ ಪಡೆದವರು ಕೃಷಿ ಕೆಲಸ ಮಾಡಬಾರದು ಎಂಬುದನ್ನು ನಾವೇ ಹೇಳುತ್ತೇವೆ. ಕೃಷಿಯೇತರ ಚಟುವಟಿಕೆಗೆ ಸಿಗುವ ಗೌರವ ಕೃಷಿ ಮಾಡುವವರಿಗೆ ಸಿಗುವುದಿಲ್ಲ ಇದರಿಂದ ಯುವ ಪೀಳಿಗೆ ಕೃಷಿಯಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಆದರೆ ಸಮಗ್ರ ಕೃಷಿ ಮಾಡುವುದರಿಂದ ಕೃಷಿಯಿಂದಲೂ ಉತ್ತಮ ಜೀವನ ಸಾಗಿಸಬಹುದು. ಇಂತಹ ಅಭಿಯಾನ ಕಾರ್ಯಕ್ರಮ ಈ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ರೈತರು ಅಭಿಯಾನದಲ್ಲಿ ಹೆಚ್ಚಾಗಿ ಭಾಗವಹಿಸುವ ಮೂಲಕ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಕೃಷಿ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಜಿ.ಪಂ. ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ನಾವು ಮುಂದುವರಿದಂತೆ ಕೃಷಿಯನ್ನು ಅಲಕ್ಷಿಸಲಾಗುತ್ತಿದೆ, ನಾವು ಇಂದು ಉದ್ಯಮದತ್ತ ವಾಲುತ್ತಿದ್ದೇವೆ. ಆದರೆ ಆಹಾರವಿಲ್ಲದೇ ನಾವು ಬದುಕಲು ಸಾಧ್ಯವಿಲ್ಲ. ಇದರಿಂದ ಕೃಷಿ ಕ್ಷೇತ್ರವನ್ನು ಆಕರ್ಷಣೀಯವಾಗಿ ಮಾಡಬೇಕು. ಕೇವಲ ಅಭಿಯಾನ ಮಾಡಿದರೆ ಸಾಲದು. ಇದರಲ್ಲಿ ಹೇಳುವ ಎಲ್ಲ ವಿಷಯಗಳು ಕಾರ್ಯರೂಪಕ್ಕೆ ಬರಬೇಕು ಎಂದು ಹೇಳಿದರು.

ಅಧ್ಯಕ್ಷ ತೆಯನ್ನು ತಾ.ಪಂ. ಅಧ್ಯಕ್ಷ ಸುಧೀರ್‌ ಗೌಡರ್‌ ವಹಿಸಿದ್ದರು. ಕೃಷಿ ಅಧಿಕಾರಿ ಪ್ರಶಾಂತ ಸ್ವಾಗತಿಸಿದರು. ಜಿ.ಪಂ. ಸದಸ್ಯೆ ಸುಮಂಗಲಾ ನಾಯ್ಕ, ತಾ.ಪಂ. ಸದಸ್ಯ ವಿವೇಕ ಭಟ್ಟ, ತಹಸೀಲ್ದಾರ ಗೀತಾ ಸಿ.ಜಿ., ತೋಟಗಾರಿಕಾ ಅಧಿಕಾರಿ ಮಹಾಬಲೇಶ್ವರ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಂದಕುಮಾರ ಪೈ, ಕೃಷಿ ಇಲಾಖೆಯ ಉಪನಿರ್ದೇಶಕ ದೇವರಾಜ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಮಗ್ರ ಕೃಷಿ ಅಭಿಯಾನ 2019-20ರ ಅಭಿಯಾನ ವಾಹನವನ್ನು ಬಾವುಟ ಬೀಸುವ ಮೂಲಕ ಚಾಲನೆ ನೀಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ