ಕಾರವಾರ:ಸಂಸದ ಅನಂತಕುಮಾರ ಹೆಗಡೆ ಜನ ಪ್ರತಿನಿಧಿಯಾಗಿ ಕ್ಷುಲ್ಲಕ ಕಾರಣಕ್ಕೆ ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಭಾರತೀಯ ವೈದ್ಯಕೀಯ ಸಂಘದ ಕಾರವಾರ ಘಟಕದ ಅಧ್ಯಕ್ಷ ಡಾ. ಸುರೇಶ ಭಟ್ಟ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಶಿರಸಿಯ ಟಿಎಸ್ಎಸ್ ಆಸ್ಪತ್ರೆ ವೈದ್ಯರ ಮೇಲೆ ಸಂಸದರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಹಲ್ಲೆಗೊಳಗಾದವರ ಮೇಲೆಯೂ ಒತ್ತಡವಿದೆ. ಆರೋಪಿ ವಿರುದ್ದ ದೂರು ದಾಖಲಿಸಿಕೊಳ್ಳಲು ಆರಂಭದಲ್ಲಿ ಹಿಂದೇಟು ಹಾಕಲಾಗಿತ್ತು. ಈಗ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಸಂಸದ ಅನಂತಕುಮಾರ ಹೆಗಡೆ ಬಂಧನವಾಗಬೇಕು ಎಂದು ಆಗ್ರಹಿಸಿದರು. ಸಂಸ್ಥೆಯೊಂದರ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ವೈದ್ಯರಿಗೆ ಸ್ವಾತಂತ್ರ್ಯವಿರುವುದಿಲ್ಲ. ಆಡಳಿತ ಮಂಡಳಿಯವರ ಒತ್ತಡಕ್ಕೆ ಮಣಿಯುವ ಅನಿವಾರ್ಯತೆ ಉಂಟಾಗುತ್ತದೆ. ಅನ್ಯಾಯದ ವಿರುದ್ದ ಹೋರಾಡಲು ಕಷ್ಟವಾಗುತ್ತದೆ ಎಂದರು.
ಈ ಪ್ರಕರಣದಲ್ಲಿ ಹಲ್ಲೆಗೊಳಗಾದ ವೈದ್ಯರ ತಪ್ಪು ಏನೂ ಇಲ್ಲ. ಹಲ್ಲೆ ನಡೆಸುವುದು ಕಾನೂನು ಬಾಹಿರ ಕೃತ್ಯವಾಗಿದೆ. ಜನಪ್ರತಿನಿಧಿಯಾದವರು ಜವಾಬ್ದಾರಿಯಿಂದ ವರ್ತಿಸದಿರುವುದು ದುರಂತ ಎಂದರು. ಸಂಘದ ಕಾರ್ಯದರ್ಶಿ ಕೀರ್ತಿ ನಾಯ್ಕ, ಉಪಾಧ್ಯಕ್ಷ ಶಿವಾನಂದ ಕುಡ್ತಳಕರ್ ಇತರರು ಇದ್ದರು.