ಆ್ಯಪ್ನಗರ

ಕೊರೊನಾ ಸಂದರ್ಭದಲ್ಲಿ ಹೆಣದ ಮೇಲೆ ಕೂತು ಊಟ ಮಾಡುತ್ತಿದ್ದಾರೆ ಬಿಜೆಪಿ ನಾಯಕರು: ಹರಿಪ್ರಸಾದ್‌

ಹೈಕೋರ್ಟ್ ನ್ಯಾಯಾಧೀಶರಿಂದ ಹಗರಣದ ತನಿಖೆಯಾಗಬೇಕೆಂದು ಈಗಾಗಲೇ ಒತ್ತಾಯಿಸಿದ್ದೇವೆ. ಸರ್ಕಾರ ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ಭ್ರಷ್ಟಾಚಾರ ಆರೋಪ ಹೊತ್ತವರು ತಕ್ಷಣ ರಾಜೀನಾಮೆ ನೀಡಬೇಕು

Vijaya Karnataka Web 31 Jul 2020, 6:24 pm
ಕಾರವಾರ: ಕೊರೊನಾ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಜನ ತತ್ತರಿಸುತ್ತಿರುವ ಈ ಸಂದರ್ಭದಲ್ಲೂ ಹಗರಣಗಳಲ್ಲಿ ಸಿಲುಕುತ್ತಿರುವ ಬಿಜೆಪಿ ಮುಖಂಡರು ನಾಚಿಕೆ ಮಾನ ಮರ್ಯಾದೆ ಬಿಟ್ಟವರು. ಬಿಜೆಪಿಯವರು ಹೆಣದ ಮೇಲೆ ಕುಳಿತು ಊಟ ಮಾಡುವ ಮನೋಸ್ಥಿತಿಯವರು ಎಂದು ವಿಧಾನ ಪರಿಷತ್‌ ಸದಸ್ಯ ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ. ಹರಿಪ್ರಸಾದ ಕಿಡಿ ಕಾರಿದರು.
Vijaya Karnataka Web ಹರಿಪ್ರಸಾದ್‌
ಹರಿಪ್ರಸಾದ್‌


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತ್ರತ್ವದ ಸರಕಾರ ಇಂಥ ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಕೊರೊನಾ ಸಂದರ್ಭದಲ್ಲಿ ಮಾರ್ಗದರ್ಶಿ ಸೂತ್ರಗಳನ್ನು (ಎಸ್ಒಪಿ) ಪಾಲಿಸಿಲ್ಲ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದ ಬಳಿಕ ಸರಕಾರ ಬೆಂಗಳೂರು ಮಹಾನಗರ ಪಾಲಿಕೆಯ ಪೌರಾಯುಕ್ತರನ್ನು ಬದಲು ಮಾಡಿದೆ ಎಂದರು.

ಮೂರು ತಿಂಗಳು ಘೋಷಿಸಿದ್ದ ಲಾಕ್ ಡೌನ್‌ನ ಸಮಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ವಿಫಲವಾಗಿದೆ. ಈ ಅವಧಿಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸಬಹುದಿತ್ತು. ಆದರೆ ಪ್ರಧಾನ ಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿ ಕೇವಲ ಭಾಷಣದಲ್ಲಿ ನಿರತರಾಗಿದ್ದರು ಎಂದು ಹರಿಪ್ರಸಾದ್‌ ಕಿಡಿಕಾರಿದರು.

ಕೊರೊನಾ ಸಂದರ್ಭದಲ್ಲಿ ವಿವಿಧ ಸುರಕ್ಷತಾ ಸಾಮಗ್ರಿಗಳನ್ನು ಖರೀದಿಸುವ ಸಂದರ್ಭದಲ್ಲಿ ಸರಕಾರ 2 ಸಾವಿರ ಕೋಟಿ ಹಗರಣವನ್ನು ಮಾಡಿದೆ. ಬಿಜೆಪಿಯದ್ದೇ ಮಾಜಿ ಶಾಸಕ ಬಗಲಿ ಅವರು ವೆಂಟಿಲೇಟರ್ ಸೆಕೆಂಡ್ ಹ್ಯಾಂಡ್ ಎಂದು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ ಎಂದು ಹರಿಪ್ರಸಾದ ಆರೋಪಿಸಿದರು.

ರಾಜ್ಯ ಸರಕಾರದ ಸಚಿವರಲ್ಲೇ‌ ಸಮನ್ವಯ ಇಲ್ಲ. ಪ್ರಧಾನಮಂತ್ರಿ ನಾಟಕದಲ್ಲಿ ನಿಸ್ಸೀಮರು‌. ಕೊರೋನಾ ತಡೆಗಟ್ಟಲು ತಟ್ಟೆ, ಪಾತ್ರೆ, ಆರತಿ, ಚಪ್ಪಾಳೆ ತಟ್ಟಿದರೂ ಯಾವುದೂ ಫಲ ನೀಡದಾಗ ಕೋವಿಡ್ ಜತೆ ಜನತೆ ಬದುಕಬೇಕು ಎಂದರು. ಬಳಿಕ ರಾಜ್ಯದ ಆರೋಗ್ಯ ಸಚಿವ ಶ್ರೀರಾಮುಲು ಕೂಡ ದೇವರೇ ಗತಿ ಅನ್ನುತ್ತಿದ್ದಾರೆ ಎಂದು ಬಿಕೆ ಹರಿಪ್ರಸಾದ ಟೀಕಿಸಿದರು.

ಹೈಕೋರ್ಟ್ ನ್ಯಾಯಾಧೀಶರಿಂದ ಹಗರಣದ ತನಿಖೆಯಾಗಬೇಕೆಂದು ಈಗಾಗಲೇ ಒತ್ತಾಯಿಸಿದ್ದೇವೆ. ಸರ್ಕಾರ ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ಭ್ರಷ್ಟಾಚಾರ ಆರೋಪ ಹೊತ್ತವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಲ್ಲಿ ಹೆರಿಗೆಗೂ ಆಸ್ಪತ್ರೆಗಳಿಲ್ಲ. ವಯಸ್ಸಾದವರು ಆಸ್ಪತ್ರೆಗಳೆದುರು ಸತ್ತಿದ್ದಾರೆ. ದಪ್ಪ ಚರ್ಮದ ಬಿಜೆಪಿಯವರಿಗೆ ಇದು ಕೇಳಿಸುತ್ತಿಲ್ಲ ಎಂದು ಹರಿಪ್ರಸಾದ್‌ ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ