ಅಹವಾಲು ಸಭೆಗೆ ಗ್ರಾಹಕರ ಕೊರತೆ
ಶಿರಸಿ : ತಾಲೂಕಿನ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಸಂವಾದ ಸಭೆ ನಗರದ ಹೆಸ್ಕಾಂ ವಿಭಾಗೀಯ ಕಚೇರಿ ಆವಾರದಲ್ಲಿ ಶನಿವಾರ ಸಂಜೆ ನಡೆಯಿತು. ಆದರೆ ಕೆಲವು ಗ್ರಾಹಕರು ಮಾತ್ರ ಬಂದು ತಮ್ಮ ಸಮಸ್ಯೆ, ಅಹವಾಲು ಸಲ್ಲಿಸಿದರು.
Vijaya Karnataka 17 Dec 2018, 5:00 am
ಶಿರಸಿ : ತಾಲೂಕಿನ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಸಂವಾದ ಸಭೆ ನಗರದ ಹೆಸ್ಕಾಂ ವಿಭಾಗೀಯ ಕಚೇರಿ ಆವಾರದಲ್ಲಿ ಶನಿವಾರ ಸಂಜೆ ನಡೆಯಿತು. ಆದರೆ ಕೆಲವು ಗ್ರಾಹಕರು ಮಾತ್ರ ಬಂದು ತಮ್ಮ ಸಮಸ್ಯೆ, ಅಹವಾಲು ಸಲ್ಲಿಸಿದರು.
ಹೆಸ್ಕಾಂ ಅಧಿಕಾರಿ ಧರ್ಮಾ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಲಿಖಿತವಾಗಿ ಸಲ್ಲಿಸಿದರು. ಅಕ್ರಮ ಸಕ್ರಮದಡಿ ಕೃಷಿ ಪಂಪ್ಸೆಟ್ ಹೊಂದಿದ ಮಂಜುಗುಣಿ ಕಲ್ಲಳ್ಳಿ ಭಾಗದಲ್ಲಿ ವಿದ್ಯುತ್ ತಂತಿಗಳನ್ನು ಎಳೆದಿಲ್ಲ. ಮೂರು ಫೇಸ್ ವಿದ್ಯುತ್ ಸಂಪರ್ಕ ನೀಡಬೇಕಿತ್ತು. ಆದರೆ ಈವರೆಗೆ ಸರಿಯಾಗಿ ಕೆಲಸವಾಗಿಲ್ಲ. ಅರ್ಧಂಮರ್ಧವಾಗಿದ್ದು ವಿದ್ಯುತ್ ಸಂಪರ್ಕವಿಲ್ಲದೇ ವರ್ಷಗಟ್ಟಲೇ ಕಳೆದಿದೆ. ಇದರಿಂದ ಅಡಕೆ ತೋಟ ಸೇರಿದಂತೆ ಕೃಷಿ ಭೂಮಿಗಳಿಗೆ ನೀರೂಣಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ಸತ್ಯನಾರಾಯಣ ಹೆಗಡೆ ದೂರಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿ ಧರ್ಮಾ ಈ ಬಗ್ಗೆ ಸಂಬಂಧಿಸಿದ ಗುತ್ತಿಗೆದಾರರಿಗೆ ಪೋನಾಯಿಸಿ ಸಮಸ್ಯೆ ಬಗ್ಗೆ ತಿಳಿಸಿದರು. ಮುಂದಿನ ಕೆಲವೇ ದಿನಗಳಲ್ಲಿ ಈ ಕೆಲಸ ಮಾಡುವ ಬಗ್ಗೆ ಭರವಸೆ ದೊರೆಯಿತು.
ಅದೇ ರೀತಿ ಕಲ್ಲಳ್ಳಿ ಭಾಗದಲ್ಲಿ ಅನಿಯಮಿತವಾಗಿ ಲೋಡ್ಶೆಡ್ಡಿಂಗ್ ಇರುತ್ತದೆ. ವಿದ್ಯುತ್ ಬಿಲ್ ಸರಿಯಾಗಿ ಬರುತ್ತಿಲ್ಲ. ಹೀಗಾದರೆ ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂದು ಸತ್ಯನಾರಾಯಣ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.
ಅದಕ್ಕಿಂತ ಮುಖ್ಯವಾಗಿ ಅಕ್ರಮ ಪಂಪ್ಸೆಟ್ಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಶನಿವಾರ ಕೊನೆಯ ದಿನವಾಗಿದ್ದರಿಂದ ಇದಕ್ಕಾಗಿ ಬಂದ ರೈತರ ಸಂಖ್ಯೆ ಜಾಸ್ತಿಯಿತ್ತು. ಈ ಸಂದರ್ಭದಲ್ಲಿ ಶಿರಸಿ ತಾಲೂಕಿನ ವ್ಯಾಪ್ತಿಯ 220ಅರ್ಜಿ ಸಲ್ಲಿಕೆಯಾಗಿದೆ ಎಂದು ಹೆಸ್ಕಾಂ ಅಧಿಕಾರಿ ಮಾಹಿತಿ ನೀಡಿದರು.