ಆ್ಯಪ್ನಗರ

ಕೊಟ್ಟೆಯಿಂದ ಕಂಟ್ರೋಲ್‌.. ಕಟ್ಟುವದೇ ಸವಾಲ್‌..!

ಶಿರಸಿ :ಪ್ರತಿವರ್ಷವೂ ಮಲೆನಾಡು ಪ್ರದೇಶದಲ್ಲಿ ವರುಣನ ರಭಸ ಹೆಚ್ಚಿದಂತೆಲ್ಲ ಕೃಷಿಕರ ಎದೆಬಡಿತವೂ ಹೆಚ್ಚುತ್ತ ಹೋಗುತ್ತದೆ. ಅಡಕೆ ತೋಟದಲ್ಲಿ ಕಾಡುವ ಕೊಳೆರೋಗ ಸಮಸ್ಯೆ ಇದಕ್ಕೆ ಕಾರಣ. ಅದರ ನಿಯಂತ್ರಣಕ್ಕೆ ಪರಿಣಾಮಕಾರಿ ಪಾರಂಪರಿಕ ವಿಧಾನವಿದ್ದರೂ ಅನುಸರಿಸುವುದಕ್ಕೆ ನಾನಾ ತೊಂದರೆಗಳಿವೆ.

Vijaya Karnataka 30 Aug 2018, 5:00 am
ಶಿರಸಿ :ಪ್ರತಿವರ್ಷವೂ ಮಲೆನಾಡು ಪ್ರದೇಶದಲ್ಲಿ ವರುಣನ ರಭಸ ಹೆಚ್ಚಿದಂತೆಲ್ಲ ಕೃಷಿಕರ ಎದೆಬಡಿತವೂ ಹೆಚ್ಚುತ್ತ ಹೋಗುತ್ತದೆ. ಅಡಕೆ ತೋಟದಲ್ಲಿ ಕಾಡುವ ಕೊಳೆರೋಗ ಸಮಸ್ಯೆ ಇದಕ್ಕೆ ಕಾರಣ. ಅದರ ನಿಯಂತ್ರಣಕ್ಕೆ ಪರಿಣಾಮಕಾರಿ ಪಾರಂಪರಿಕ ವಿಧಾನವಿದ್ದರೂ ಅನುಸರಿಸುವುದಕ್ಕೆ ನಾನಾ ತೊಂದರೆಗಳಿವೆ.
Vijaya Karnataka Web control of the room
ಕೊಟ್ಟೆಯಿಂದ ಕಂಟ್ರೋಲ್‌.. ಕಟ್ಟುವದೇ ಸವಾಲ್‌..!


ಕೃಷಿಕ್ಷೇತ್ರದಲ್ಲಿ ತೊಡಗಿಕೊಳ್ಳಲು ನಿರಾಸಕ್ತಿ ಮತ್ತು ಕೂಲಿಕೆಲಸಗಾರರ ಕೊರತೆ ಈಗ ಎಲ್ಲದಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದ ಕೃಷಿಬೆಳೆ ಸಂವರ್ಧನೆ ಮತ್ತು ಸಂರಕ್ಷ ಣೆ ಸವಾಲು ಬಿಗಡಾಯಿಸುತ್ತಲೇ ಇದೆ. ಸಮಸ್ಯೆ ನಿವಾರಣೆಗೆ ಪಾರಂಪರಿಕ ಉಪಯುಕ್ತ ವಿಧಾನವಿದ್ದರೂ ಅಸಹಾಯಕರಾಗಿ ಸುಮ್ಮನಿರುವಂತೆ ಆಗುತ್ತಿದೆ.

ಕೊಟ್ಟೆ ಕಟ್ಟುವುದು ಎನ್ನುವುದು ಇಂಥದೊಂದು ವಿಶಿಷ್ಟ ಕ್ರಮವಾಗಿ ಅಡಕೆಯನ್ನು ಕೊಳೆಯಿಂದ ರಕ್ಷಿಸುತ್ತಿದ್ದ ವಿಧಾನ. ಆದರೆ ಅದನ್ನು ಅನುಸರಿಸುವುದು ಸುಲಭವಲ್ಲ. ಆದ್ದರಿಂದ ಹಾಳೆ ಕೊಟ್ಟೆ ಕಟ್ಟುವುದು ಬಹುತೇಕ ಮಾಯವಾದಂತಾಗಿದೆ. ಪ್ಲಾಸ್ಟಿಕ್‌ ಕೊಟ್ಟೆ ಕಟ್ಟುವುದು ಕೆಲವೆಡೆ ಮಾತ್ರ ಚಾಲ್ತಿಯಲ್ಲಿದ್ದು ಅಡಕೆಕಾಯಿಗಳನ್ನು ರಕ್ಷಿಸುತ್ತಿದೆ.

ತಾಳ್ಮೆಯ ಕೆಲಸ :

ಮಲೆನಾಡಿನಲ್ಲಿ ಅಡಕೆ ಹಾಳೆ ಕೊಟ್ಟೆ ಕಟ್ಟುವುದು ದಶಕಗಳ ಹಿಂದೆ ವ್ಯಾಪಕವಾಗಿ ಚಾಲ್ತಿಯಲ್ಲಿದ್ದ ಬೆಳೆ ಸಂರಕ್ಷ ಣೆ ಉತ್ತಮ ಕ್ರಮ. ಆದರೆ ಅದಕ್ಕೆ ಸಾಕಷ್ಟು ಕಾಲಾವಕಾಶ, ಕೆಲಸದಲ್ಲಿ ತಾಳ್ಮೆ, ಕೌಶಲ್ಯ ಎಲ್ಲವೂ ಅಗತ್ಯ.

ಬೇಸಿಗೆಯಲ್ಲಿ ತೋಟದಲ್ಲಿ ಮರಗಳಿಂದ ಆಗಾಗ ಸೋಗೆಯ ಜತೆ ಬೀಳುವ ಹಾಳೆಗಳನ್ನು ಆರಿಸಿ ತಂದು ವ್ಯವಸ್ಥಿತವಾಗಿ ಜೋಡಿಸಿಟ್ಟು ಒಣಗುವಂತಿರಬೇಕು. ಮಳೆಗಾಲಕ್ಕೆ ಮುನ್ನ ಹಾಳೆ ಪ್ರತ್ಯೇಕಿಸಿ ಹೊರೆ ಕಟ್ಟಿ ಮನೆಯ ಅಟ್ಟದ ಮೇಲೆ ಇರಿಸಿರಬೇಕು.

ನಂತರ, ಮಳೆಬೀಳತೊಡಗಿದ ಮೇಲೆ ಹಾಳೆಕೊಟ್ಟೆ ತಯಾರಿಸುವ ಕುಶಲ ಕೆಲಸ. ಹಾಳೆಯನ್ನು ನಿರ್ದಿಷ್ಟ ಆಕಾರದಲ್ಲಿ ಕತ್ತರಿಸಿ ಅದನ್ನು ಬಿದಿರು ಕಡ್ಡಿಗಳಿಂದ ಜೋಡಿಸಿದರೆ ಕೊಟ್ಟೆ ರೆಡಿ. ಹೀಗೆ ಎರಡೂವರೆ ಹಾಳೆ ಬಳಸಿ ಒಂದು ಕೊಟ್ಟೆಯಂತೆ ತೋಟದಲ್ಲಿರುವ ಎಷ್ಟು ಮರಗಳಿಗೆ ಬೇಕೋ ಅಷ್ಟು ಕೊಟ್ಟೆಗಳನ್ನು ತಯಾರಿಸುವುದು ಸುಲಭಕ್ಕೆ ಸಾಧ್ಯವಾಗುವ ಕೆಲಸವಲ್ಲ.

ಪ್ಲಾಸ್ಟಿಕ್‌ ಕೊಟ್ಟೆಗಳು:

ಹಾಳೆ ಕೊಟ್ಟೆಗಳ ತಯಾರಿಕೆ ಮತ್ತು ಕೊನೆಗಳಿಗೆ ಕಟ್ಟುವ ಪರಿಶ್ರಮ ಆಗದ ಕೆಲಸವೆಂದು ಕೃಷಿಕರು ನಿರ್ಧರಿಸಿದ ಮೇಲೆ ಬಂದದ್ದು ಪ್ಲಾಸ್ಟಿಕ್‌ ಕೊಟ್ಟೆಗಳು. ಅದನ್ನು ಮುಂಚಿತವಾಗಿ ತಯಾರಿಸುವ ಉಸಾಬರಿ ಇಲ್ಲ. ಆದರೆ, ಮರವನ್ನೇರಿ ಕಟ್ಟುವ ಪರಿಶ್ರಮ ಮಾತ್ರ ತಪ್ಪಿದ್ದಲ್ಲ.

ಹೀಗೆ ಈಗ ಪ್ಲಾಸ್ಟಿಕ್‌ ಕೊಟ್ಟೆ ಕಟ್ಟುವ ಕೆಲಸವೂ ಬಹುತೇಕ ಕುಂಠಿತವಾಗಿದೆ. ಬೋರ್ಡೊದ್ರಾವಣದ ಮದ್ದು ಸಿಂಪಡಣೆ ಎಲ್ಲೆಡೆ ಚಾಲ್ತಿಯಲ್ಲಿದೆ. ಆದರೆ ಅಷ್ಟಕ್ಕೆ ಕೊಳೆ ರೋಗ ನಿಯಂತ್ರಣಕ್ಕೆ ಬಾರದೇ ಮಳೆ ರಭಸಕ್ಕೆ ಹೆಚ್ಚುತ್ತಿದ್ದು ಬೆಳೆಗಾರರಿಗೆ ಭಾರಿ ನಷ್ಟ ಸಂಕಷ್ಟತಂದೊಡ್ಡುತ್ತಿದೆ.

ಮರಕಸುಬು ಕುಶಲಿಗಳ ಕೊರತೆ :

ಕೊಟ್ಟೆ ಕಟ್ಟುವುದಕ್ಕೆ ಮರ ಕಸುಬು ಬಲ್ಲ ಕುಶಲ ಕೆಲಸಗಾರರು ಅನಿವಾರ್ಯ. ಆದರೆ ಈಗ ಕೊರತೆ ಹೆಚ್ಚುತ್ತಲೇ ಇದೆ. ಕೊಟ್ಟೆ ಕಟ್ಟಿದ ಮರಗಳಿಗೆ ಕೊಳೆ ರೋಗದ ಕಾಟವಿಲ್ಲ ಎನ್ನುವ ಹಿರಿಯ ಕೃಷಿಕರ ಮಾತುಗಳಷ್ಟೇ ಈಗ ಉಳಿದುಕೊಳ್ಳುತ್ತಿವೆ. ಕೊಟ್ಟೆ ಕಟ್ಟುವುದಿರಲಿ, ಮರವನ್ನೇರಿ ಬೋರ್ಡೋ ದ್ರಾವಣ ಸಿಂಪಡಣೆ ಮಾಡುವ ಕೆಲಸಗಾರರೂ ಸಿಗದೇ ಕೃಷಿಕರು ಪರದಾಡುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ