ಆ್ಯಪ್ನಗರ

ಟೂರಿಸಮ್ ಸೀಸನ್‌ಗೇ ಸರಿಯಾಗಿ ವಕ್ಕರಿಸಿದ ಕೋವಿಡ್: ಮತ್ತೆ ನಿಯಮಗಳು ಕಠಿಣ ಸಾಧ್ಯತೆ

ಕಳೆದ ಎರಡು ವರ್ಷದಿಂದ ಆಚರಿಸಲಾಗದ ಹೊಸ ವರ್ಷದ ಸ್ವಾಗತ ಕಾರ್ಯಕ್ರಮಗಳನ್ನು ಈ ಬಾರಿಯಾದರೂ ಅನುಭವಿಸೋಣವೆಂದು ಕನಸು ಕಂಡಿದ್ದವರಿಗೂ ಕೋವಿಡ್ ತಣ್ಣೀರೆರಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Vijaya Karnataka Web 27 Nov 2021, 5:44 pm
ಕಾರವಾರ: 2021ರ ಕ್ಯಾಲೆಂಡರ್ ಬದಲಾವಣೆಗೆ ಇನ್ನೇನು ಕೇವಲ ಒಂದೇ ತಿಂಗಳು ಬಾಕಿ ಇದೆ. ನೋಡ ನೋಡುತ್ತಿದ್ದಂತೆ 2022ನೇ ವರ್ಷ ಬಂದೇ ಬಿಟ್ಟಿದೆ. ಉತ್ತರ ಕನ್ನಡದಲ್ಲಂತೂ ಈ ಡಿಸೆಂಬರ್ ತಿಂಗಳೆಂದರೆ ಪ್ರವಾಸಿ ಋತು (ಟೂರಿಸಮ್ ಸೀಸನ್) ಆರಂಭದಂತೆ. ಕಳೆದೆರಡು ವರ್ಷಗಳಿಂದ ಮುಗ್ಗರಿಸಿದ್ದ ಪ್ರವಾಸಿ ಕ್ಷೇತ್ರಗಳು, ಹೊಸ ವರ್ಷದ ಸ್ವಾಗತಕ್ಕಾಗಿ ಈ ಬಾರಿಯಾದರೂ ಪ್ರವಾಸಿಗರಿಂದ ಭರ್ತಿಯಾಗಲಿವೆ ಎಂದುಕೊಂಡಿದ್ದವರಿಗೆ ಇದೀಗ ಮತ್ತೆ ಕೊರೊನಾ ಅಡ್ಡಿಯಾಗುವ ಆತಂಕ ಶುರುವಾಗಿದೆ!
Vijaya Karnataka Web ಕಾರವಾರ
ಕಾರವಾರ


ಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊಂಡಂತಿರುವ ಧಾರವಾಡ ಜಿಲ್ಲೆಯಲ್ಲಿ ಮತ್ತೆ ಕಂಟೋನ್ಮೆಂಟ್ ಝೋನ್, ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸಿಂಗ್ ಸೇರಿದಂತೆ 2019- 2020ರ ಸಮಯದಲ್ಲಿ ಕೋವಿಡ್‌ನಿಂದ ದೂರವುಳಿಯಲು ಅನುಸರಿಸುತ್ತಿದ್ದ ಕ್ರಮಗಳನ್ನು ಮತ್ತೆ ಪುನರರಾಂಭಿಸಿದ್ದಾರೆ. ಅಂದರೆ ಅಲ್ಲಿ ಕೋವಿಡ್ ಸೋಂಕು ಮತ್ತೆ ಹರಡಲಾರಂಭಿಸಿದೆ. ಇದರಿಂದಾಗಿ ಈ ಜಿಲ್ಲೆಗೆ ಹೊಂದಿಕೊಂಡಿರುವ ಹಾಗೂ ರಾಜ್ಯದ ಗಡಿ ಜಿಲ್ಲೆಯಾಗಿರುವ ಉತ್ತರ ಕನ್ನಡಕ್ಕೂ ಈಗ ಕೊರೋನಾತಂಕ ಎದುರಾಗಿದೆ.
ಉತ್ತರ ಕನ್ನಡ: ಮನೆ ಮನೆಗೆ ಲಸಿಕೆ ಅಭಿಯಾನ, ಬಿಟ್ಟು ಹೋದವರನ್ನು ಹುಡುಕಿ ಲಸಿಕೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿ
ಕಳೆದ 2019ರ ಅಂತ್ಯದಿಂದ ಆರಂಭವಾದ ಕೋವಿಡ್‌ನಿಂದಾಗಿ ಎರಡು ವರ್ಷದ ಪ್ರವಾಸಿ ಋತು ಈಗಾಗಲೇ ಹಾಳಾಗಿದೆ. ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಬಿಕೋ ಎಂದರೆ, ಪ್ರವಾಸಿಗರಿಲ್ಲದೆ ವ್ಯಾಪಾರವಾಗದೆ, ಪ್ರವಾಸಿ ಋತುವನ್ನೇ ನಂಬಿಕೊಂಡಿದ್ದ ವ್ಯಾಪಾರಸ್ಥರ ಸಾಲದ ಭಾರ ಹೆಚ್ಚಳವಾಗಿದೆ. ಈ ವರ್ಷವಾದರೂ ಒಂದಷ್ಟು ವ್ಯಾಪಾರ ಮಾಡಿಕೊಳ್ಳೋಣವೆಂದು ವ್ಯಾಪಾರಸ್ಥರಿದ್ದರೆ,‌ ಕಳೆದ ಎರಡು ವರ್ಷದಿಂದ ಆಚರಿಸಲಾಗದ ಹೊಸ ವರ್ಷದ ಸ್ವಾಗತ ಕಾರ್ಯಕ್ರಮಗಳನ್ನು ಈ ಬಾರಿಯಾದರೂ ಅನುಭವಿಸೋಣವೆಂದು ಕನಸು ಕಂಡಿದ್ದವರಿಗೂ ಕೋವಿಡ್ ತಣ್ಣೀರೆರಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರಕಾರ ಮತ್ತೆ ಲಾಕ್ ಡೌನ್‌ಗೆ ತಜ್ಞರು ಸಲಹೆ ಕೂಡ ನೀಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸರಕಾರ ಮತ್ತೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ, ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಜಿಲ್ಲಾಡಳಿತ ಕೂಡ ಈ ಬಗ್ಗೆ ಮುನ್ಸೂಚನೆ ನೀಡಿದೆ.

ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲೆಯಲ್ಲಿ ಕೋವಿಡ್ ತಪಾಸಣೆಗಳನ್ನು ನಿರಂತರವಾಗಿ ಮುಂದುವರಿಸಿದ್ದೇವೆ. ಜನ ಹೆಚ್ಚು ಸೇರುವ ಪ್ರದೇಶಗಳಲ್ಲಿ, ಜನರೊಂದಿಗೆ ಹೆಚ್ಚು ಸಂಪರ್ಕಿತರಾಗುವವರಿಗೆ ವಾರ ಅಥವಾ ಹದಿನೈದು ದಿನಕ್ಕೊಮ್ಮೆ ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದೆ. ಇದನ್ನು ಮುಂಬರುವ ಪ್ರವಾಸಿ ಸೀಸನ್ ಗಾಗಿ ಇನ್ನಷ್ಟು ಚುರುಕುಗೊಳಿಸುವ ಕಾರ್ಯ ಮಾಡಲಾಗುವುದು‌. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಕೋವಿಡ್ ನಿಯಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಮನೆ ಮನೆಗೆ ಲಸಿಕೆ: ಸುಪ್ರೀಂ ನೋಟಿಸ್ ಹಿಡಿದು ಆರೋಗ್ಯ ಸಿಬ್ಬಂದಿ ಜತೆ ಸಾರ್ವಜನಿಕರ ತಗಾದೆ

ಇನ್ನು, ಕಳೆದೆರಡು ವರ್ಷಗಳಿಂದ ಕೋವಿಡ್ ಕಾಟಕ್ಕೆ ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಮುಂದೂಡಿದ್ದವರು ಈ ಡಿಸೆಂಬರ್ ನಿಂದ ನೆರವೇರಿಸಿಕೊಳ್ಳಲು ದಿನಾಂಕ ನಿಗದಿ ಮಾಡಿಕೊಂಡಿದ್ದಾರೆ. ಆದರೆ ಮತ್ತೆ ಕೋವಿಡ್ ಸದ್ದು ಮಾಡುತ್ತಿರುವುದು ಇವರಲ್ಲಿ ಆತಂಕಕ್ಕೆ ಕಾರಣವಾಗಿದೆ. ‌ಡಿಸೆಂಬರ್‌ನಲ್ಲಿ ಸಾಕಷ್ಟು ವಿವಾಹ ಕಾರ್ಯಕ್ರಮಗಳಿದ್ದು, ಜನವರಿಯಲ್ಲಿ ಶೂನ್ಯ ಮಾಸದ ಕಾರಣ ಇದನ್ನು‌‌ ಹೊರತುಪಡಿಸಿ ಫೆಬ್ರುವರಿಯಲ್ಲೂ ನೂರಾರು ಕಾರ್ಯಕ್ರಮಗಳು ನಿಗದಿಯಾಗಿವೆ. ಆದರೆ ಈ ಸಂದರ್ಭದಲ್ಲಿ ಮತ್ತೆ ಕೋವಿಡ್ ಸೋಂಕು ಹರಡಿ, ಸರಕಾರ, ಜಿಲ್ಲಾಡಳಿತ ಬಿಗು ಕ್ರಮ ಕೈಗೊಳ್ಳಲು ಮುಂದಾದರೆ ಎಂಬ ಚಿಂತೆ ಹಲವರನ್ನು ಕಾಡಲಾರಂಭಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ