ಆ್ಯಪ್ನಗರ

ಮಳೆ ಹೊಡೆತಕ್ಕೆ ಬೆಳೆ ನಾಶ

ಹಳಿಯಾಳ : ತಾಲೂಕಿನ ಭಾನುವಾರ ಸಂಜೆ ಸುಮಾರು ಒಂದು ಗಂಟೆಗಳ ಕಾಲ ಗುಡುಗು, ಸಿಡಿಲು ಮತ್ತು ರಭಸದ ಗಾಳಿಯೊಂದಿಗೆ ಸುರಿದ ಮಳೆಯು ತಂಪನ್ನು ತರುವುದರ ಜೊತೆಗೆ ರೈತರು ಬೆಳೆದ ಬೆಳೆಯನ್ನು ಸಹ ಹಾನಿ ಮಾಡಿ ಲಕ್ಷಾಂತರ ರೂ ಆದಾಯ ಕೈ ತಪ್ಪುವಂತೆ ಮಾಡಿದೆ.

Vijaya Karnataka 29 Apr 2019, 5:00 am
ಹಳಿಯಾಳ : ತಾಲೂಕಿನ ಭಾನುವಾರ ಸಂಜೆ ಸುಮಾರು ಒಂದು ಗಂಟೆಗಳ ಕಾಲ ಗುಡುಗು, ಸಿಡಿಲು ಮತ್ತು ರಭಸದ ಗಾಳಿಯೊಂದಿಗೆ ಸುರಿದ ಮಳೆಯು ತಂಪನ್ನು ತರುವುದರ ಜೊತೆಗೆ ರೈತರು ಬೆಳೆದ ಬೆಳೆಯನ್ನು ಸಹ ಹಾನಿ ಮಾಡಿ ಲಕ್ಷಾಂತರ ರೂ ಆದಾಯ ಕೈ ತಪ್ಪುವಂತೆ ಮಾಡಿದೆ.
Vijaya Karnataka Web KWR-28 HLY 1


ಮಾವು ಮಂಗಮಾಯ : ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಮಾವು ಬೆಳೆಗಳನ್ನು ಸಹಜವಾಗಿ ಹಾಗೂ ತೋಟಗಾರಿಕೆ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. 585 ಹೆಕ್ಟೇರ್‌ ಅಂದರೆ 1460ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಮಾವಿನ ವಿವಿಧ ತಳಿಗಳನ್ನು ಬೆಳೆಯಲಾಗುತ್ತಿದೆ. ಈ ವರ್ಷವು ಸಹ ಮಾವು ಬೆಳೆಯನ್ನು ಬೆಳೆಯಲಾಗಿತ್ತು. ಕೆಲವು ಕಡೆಗಳಲ್ಲಿ ಮಾವು ತೆಗೆದು ಅವುಗಳನ್ನು ಸಂಗ್ರಹಿಸಿ ಮಾರುಕಟ್ಟೆಗೆ ಮಾರಾಟ ಮಾಡುವ ಸಿದ್ಧತೆಗಳನ್ನು ಮಾಡಲಾಗಿತ್ತು. ಆದರೆ ಭಾನುವಾರ ಸಾಯಂಕಾಲ ಕೇವಲ ಒಂದು ಗಂಟೆಗಳ ಕಾಲ ಸುರಿದ ಮಳೆಯು ಮಾವಿನ ಬೆಳೆಯು ಮಾಯವಾಗುವಂತೆ ಮಾಡಿದ್ದು ಬೆಳೆದ ಬೆಳೆಯು ಕೈ ಸೇರದೇ ಭೂಮಿ ಸೇರುವಂತಾಗಿದ್ದು ರೈತರಿಗೆ ಲಕ್ಷಾಂತರ ರೂ. ಹಾನಿ ಸಂಭವಿಸಿದೆ.

ತಾಲೂಕಿನ ಕಾಳಗಿನಕೊಪ್ಪ, ಗುಂಡೋಳ್ಳಿ, ಬೊಮ್ಮನಳ್ಳಿ, ಅಜಮನಾಳಾ ತಾಂಡಾ, ಹಳಿಯಾಳ, ದಾಂಡೇಲಿ, ತೇರಗಾಂವ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಬೆಳೆದು ನಿಂತ ಮಾವು ಮಳೆಯ ರಭಸಕ್ಕೆ ನೆಲಕ್ಕೆ ಅಪ್ಪಳಿಸಿದ್ದರಿಂದ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದ ಸುಮಾರು 4.72 ಲಕ್ಷ ರೂ ಅಧಿಕ ಹಾನಿ ಸಂಭವಿಸಿದ್ದು, ೕಗಾಗಲೇ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಯ ಸಿಬ್ಬಂದಿಯೊಂದಿಗೆ ಮಾವಿನ ತೋಟಗಳಿಗೆ ತೆರಳಿ ಹಾನಿಯನ್ನು ಪರಿಶೀಲನೆ ನಡೆಸುವುದರ ಜೊತೆಗೆ ಪರಿಹಾರದ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಮಾವಿನ ಪ್ರತಿ ಹೆಕ್ಟೇರಗೆ 18 ಸಾವಿರ ರೂ ನೀಡಲು ನಿರ್ಧರಿಸಿದ್ದು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ಪ್ರತಿ ಹೆಕ್ಟೇರ್‌ನಲ್ಲಿ ಶೇ 33 ರಷ್ಟು ಹಾನಿ ಉಂಟಾದರೇ ಮಾತ್ರ ಪರಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ರಸ್ತೆ ಪಕ್ಕದಲ್ಲಿಯ ಸರ್ಕಾರಿ ಮಾವಿನ ಮರಗಳು ಸಹ ನೆಲ ಕಚ್ಚಿದ್ದು ಇದರಿಂದ ಪ್ರತಿ ವರ್ಷ ಹರಾಜಿನ ಮೂಲಕ ಬರುವ ಲಕ್ಷಾಂತರ ರೂ ಆದಾಯ ಈ ಬಾರಿ ಸರ್ಕಾರದ ಖಜಾನೆ ಸೇರದೇ ರಸ್ತೆ ಪಾಲಾಗಿದಂತಾಗಿದೆ.

ಚಿಂದಿ ಚಿಂದಿಯಾದ ಬಾಳೆ : ತಾಲೂಕಿನ ಬಾಳೆ ಬೆಳೆಯು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಅದನ್ನು ಸಹ ತೋಟಗಾರಿಕಾ ಮಿಶನ್‌ ಅಡಿಯಲ್ಲಿ ಕೆಲ ಆಸಕ್ತ ರೈತರು ಬಾಳೆಯನ್ನು ಬೆಳೆಯಲು ಮುಂದಾಗಿದ್ದು ಅದರ ಪ್ರಕಾರ ಕೇವಲ 24 ಹೆಕ್ಟೇರ್‌ ಅಂದರೆ ಕೇವಲ 60 ಎಕರೆ ಪ್ರದೇಶದಲ್ಲಿ ಮಾತ್ರ ಬಾಳೆ ತೋಟಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಮಳೆಯ ಹೊಡೆತಕ್ಕೆ 20 ಎಕರೆ ಪ್ರದೇಶದಲ್ಲಿ ಹುಲುಸಾಗಿ ಬೆಳೆದು ನಿಂತ ಬಾಳೆ ಬೆಳೆಯು ನೆಲ ಕಚ್ಚುವಂತಾಗಿದ್ದು ಇದರಿಂದ 1 ಲಕ್ಷ ಕ್ಕೂ ಅಧಿಕ ರೂಗಳ ಹಾನಿಯನ್ನು ಅಂದಾಜಿಸಲಾಗಿದೆ.

ಹಲವಾರು ಸಂಕಷ್ಟಗಳ ನಡುವೆಯು ಮಾವು ಮತ್ತು ಬಾಳೆಯನ್ನು ಬೆಳೆದು, ಇನ್ನೇನೂ ಕೆಲವೇ ಕೆಲವು ದಿನಗಳಲ್ಲಿ ಕೊಯ್ಲು ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೈ ತುಂಬಾ ಹಣ ಮಾಡುವ ಆಸೆ ಹೊಂದಿದ್ದ ರೈತರಿಗೆ ಮಳೆಯು ಆಘಾತ ನೀಡಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ