ಆ್ಯಪ್ನಗರ

ಭಕ್ತಿ, ಸಡಗರದಿಂದ ಮಂಜುಗುಣಿ ರಥೋತ್ಸವ

ಶಿರಸಿ : ಕರ್ನಾಟಕದ ತಿರುಪತಿ ಖ್ಯಾತಿಯ ತಾಲೂಕಿನ ಪುಣ್ಯಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವರ ವಾರ್ಷಿಕ ರಥೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

Vijaya Karnataka 20 Apr 2019, 5:00 am
ಶಿರಸಿ : ಕರ್ನಾಟಕದ ತಿರುಪತಿ ಖ್ಯಾತಿಯ ತಾಲೂಕಿನ ಪುಣ್ಯಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವರ ವಾರ್ಷಿಕ ರಥೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
Vijaya Karnataka Web devotion bustling manjuguni rathotsava
ಭಕ್ತಿ, ಸಡಗರದಿಂದ ಮಂಜುಗುಣಿ ರಥೋತ್ಸವ


ಪದ್ಮಾವತಿ ಹಾಗೂ ಲಕ್ಷ್ಮಿಯ ಸಮೇತ ವೆಂಕಟರಮಣ ದೇವರ ಉತ್ಸವ ಮೂರ್ತಿಗಳನ್ನು ಮುಂಜಾನೆ 6 ಗಂಟೆಗೆ ಬ್ರಹ್ಮರಥದ ಬೆಳ್ಳಿಮಂಟಪದಲ್ಲಿ ಧಾರ್ಮಿಕ ಕೈಂಕರ್ಯಗಳೊಂದಿಗೆ ಸ್ಥಾಪಿಸಲಾಯಿತು. ಮಹಾಮಂಗಳಾರತಿ ಮಾಡಿ, ರಥದ ಗಾಲಿಗಳಿಗೆ ಕಾಯಿಗಳನ್ನು ಒಡೆದು, ಸಾರ್ವಜನಿಕ ಫಲ ಸಮರ್ಪಣೆ ಮಾಡಲಾಯಿತು.

ನಂತರ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಬ್ರಹ್ಮರಥದಲ್ಲಿ ವಿರಾಜಮಾನರಾಗಿ ಕುಳಿತ ಅಲಂಕೃತ ಉತ್ಸವ ಮೂರ್ತಿಗಳ ದರ್ಶನವನ್ನು ಭಕ್ತರು ಸರದಿಯಲ್ಲಿ ಬಂದು ಪಡೆದರು. ತಡ ರಾತ್ರಿ ಭಕ್ತಿಸಡಗರದ ಮಧ್ಯೆ ರಥೋತ್ಸವ ನಡೆಯಿತು.

ದೇವರ ದರ್ಶನ ಪಡೆದ ಭಕ್ತರ ಪೈಕಿ ಹರಕೆ ತೀರಿಸಲೆಂದು ದೂರದ ಊರುಗಳಿಂದ ನಸುಕಿನಲ್ಲೇ ಆಗಮಿಸಿದ ಭಕ್ತರು ವೆಂಕಟೇಶನಿಗೆ ಬಹು ಪ್ರೀತಿಯ ಕಡಲೆ ಕಾಳುಗಳನ್ನು ಸಮರ್ಪಿಸಿ ಧನ್ಯತೆ ಭಾವ ಮೆರೆದರು. ಇನ್ನೂ ಹಲವರು ಹರಕೆ ಹೇಳಿಕೊಂಡಂತೆ ಬೆಳ್ಳಿ ಹಾಗೂ ಚಿನ್ನದ ಕಡಲೆಗಳನ್ನು ದೇವರಿಗೆ ಸಮರ್ಪಿಸಿದರು. ಬ್ರಹ್ಮರಥದ ಗಾಲಿಯ ಬಳಿ ಕುಡಿಬಾಳೆಯಲ್ಲಿ ಅಕ್ಕಿಯನ್ನು ಹರಡಿ ಶಿಶುಗಳನ್ನು ಮಲಗಿಸಿ ಮಗುವಿಗೆ ಒಳ್ಳೆಯದಾಗಲೆಂದು ಹಲವು ಪಾಲಕರು ದೇವರಿಗೆ ಬೇಡಿಕೊಂಡಿದ್ದು ವಿಶೇಷವಾಗಿತ್ತು.

ವಾರ್ಷಿಕ ಮಹಾರಥೋತ್ಸವ ಅಂಗವಾಗಿ ಒಂದು ವಾರ ಮುಂಚಿತವಾಗಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಗುರುವಾರ ರಾತ್ರಿ ಉತ್ಸವ ಮೂರ್ತಿಯನ್ನು ಹೊತ್ತ ಬೆಳ್ಳಿಯ ಅಶ್ವರಥವು ದೇವಾಲಯದ ಸಮೀಪದ ಹನುಮಂತ ದೇಗುಲಕ್ಕೆ ತೆರಳಿ ನೂರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು. ಇದೇ ವೇಳೆ ಹೂವಿನ ತೇರು, ತಟ್ಟಿ ತೇರುಗಳ ಜೊತೆ ಪಲ್ಲಕ್ಕಿ ಉತ್ಸವಗಳು ನಡೆದವು.

ತಂಪು ಪಾನೀಯ ವಿತರಣೆ : ರಾಜ್ಯದ ಪ್ರಮುಖ ರಥೋತ್ಸವಗಳಲ್ಲಿ ಒಂದಾದ ಇಲ್ಲಿಯ ಮಂಜುಗುಣಿ ಮಹಾರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ವೆಂಕಟರಮಣ ದೇವರ ದರ್ಶನಕ್ಕಾಗಿ ಆಗಮಿಸುವ ಭಕ್ತರ ಅನುಕೂಲಕ್ಕೆ ವಿಶಾಲ ರಥಬೀದಿಯಲ್ಲಿ ಕೆಲ ಸಂಘ-ಸಂಸ್ಥೆಗಳು, ಯುವಕ ಮಂಡಳದವರು ತಂಪು ಪಾನೀಯ ವಿತರಣೆ ಮಾಡಿದವು. ದೇವಸ್ಥಾನದಿಂದ ಪಾನಕ ಹಾಗೂ ಸರದಿಯಲ್ಲಿ ನಿಂತ ಭಕ್ತರಿಗೆ ಕುಡಿಯುವ ನೀರು ವಿತರಿಸಲಾಯಿತು. ಸರದಿಯಲ್ಲಿ ಗಂಟೆಗಳ ಕಾಲ ನಿಲ್ಲುವ ಭಕ್ತರಿಗೆಂದು 100 ಮೀ. ಉದ್ದದ ಪೆಂಡಾಲ್‌ ಕಟ್ಟಿ ಬಿಸಿಲ ಬೇಗೆಯನ್ನು ತಪ್ಪಿಸಲಾಗಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ