ಆ್ಯಪ್ನಗರ

ಚೌತಿಗಾಗಿ ಗಣೇಶ ಮೂರ್ತಿ ಸಿದ್ಧ

ಕಾರವಾರ : ಗಣೇಶ ಚತುರ್ಥಿ ಹಬ್ಬಕ್ಕೆ ಕಲವೇ ದಿನ ಬಾಕಿ ಉಳಿದಿವೆ. ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆಗೆ ಎಲ್ಲ ಮನೆಗಳವರೂ ಭರದ ತಯಾರಿ ನಡೆಸುತ್ತಿದ್ದಾರೆ. ಹಾಗೆಯೇ ಆಕರ್ಷಕ ಗಣೇಶನ ಮೂರ್ತಿಗಳೂ ಸಿದ್ಧಗೊಳ್ಳುತ್ತಿವೆ.

Vijaya Karnataka 28 Aug 2019, 5:00 am
ಕಾರವಾರ : ಗಣೇಶ ಚತುರ್ಥಿ ಹಬ್ಬಕ್ಕೆ ಕಲವೇ ದಿನ ಬಾಕಿ ಉಳಿದಿವೆ. ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆಗೆ ಎಲ್ಲ ಮನೆಗಳವರೂ ಭರದ ತಯಾರಿ ನಡೆಸುತ್ತಿದ್ದಾರೆ. ಹಾಗೆಯೇ ಆಕರ್ಷಕ ಗಣೇಶನ ಮೂರ್ತಿಗಳೂ ಸಿದ್ಧಗೊಳ್ಳುತ್ತಿವೆ.
Vijaya Karnataka Web ganesh murthy ready for chauthi
ಚೌತಿಗಾಗಿ ಗಣೇಶ ಮೂರ್ತಿ ಸಿದ್ಧ


ಗಣೇಶ ಚತುರ್ಥಿ ಬರುತ್ತಿದೆ ಎಂದರೆ ಒಂದು ಸಂಭ್ರಮವೆಂದೇ ಹೇಳಬಹುದು. ಅದರಲ್ಲೂ ಮೂರ್ತಿ ತಯಾರಕರು ಒಂದು ತಿಂಗಳ ಮುಂಚೆಯೇ ಮೂರ್ತಿ ತಯಾರಿಸಲು ಆರಂಭಿಸುತ್ತಾರೆ. ಈ ಹಬ್ಬವನ್ನು ಆಚರಿಸುವ ಮನೆಗಳಲ್ಲಿಯೂ ತಿಂಗಳ ಮುಂಚೆಯೇ ಹಬ್ಬದ ತಯಾರಿಗಾಗಿ ಎಲ್ಲ ರೀತಿಯ ಸಿದ್ಧತೆಯಲ್ಲಿ ತೊಡಗುತ್ತಾರೆ.

ಗಣೇಶ ಹಬ್ಬಕ್ಕೆ ಮುಖ್ಯವಾಗಿ ಮೂರ್ತಿ ತಯಾರಕರ ಪಾತ್ರ ಬಹು ದೊಡ್ಡದು. ಅಂದಿನಿಂದ ಇಂದಿನವರೆಗೂ ಅವರ ಕ್ರಿಯಾಶೀಲತೆಗೆ ಮೆಚ್ಚಲೇ ಬೇಕಾಗಿದೆ. ತಯಾರಿಸಲ್ಪಡುವ ಮೂರ್ತಿಗಳಿಗೆ ಬೇಕಾಗುವ ಮಣ್ಣು ತಂದುಕೊಳ್ಳುವುದು, ಅದನ್ನು ಹದಗೊಳಿಸುವುದು, ನಂತರ ಸುಮಾರು ದಿನಗಳ ಕಾಲ ಮಣ್ಣನ್ನು ನೀರಿನಲ್ಲಿ ನೆನೆ ಇಡುವುದು ಇತ್ಯಾದಿ ಕೆಲಸಗಳು ಆದ ನಂತರ ಮೂರ್ತಿ ತಯಾರಿಸಲು ಆರಂಭಿಸುವುದು. ಉತ್ತಮ, ಗಟ್ಟಿ ಮತ್ತು ನುಣುಪಾಗಿರುವ ಮೂರ್ತಿ ತಯಾರಿಸಲು ಉತ್ತಮ ಮಣ್ಣಿನ ಅವಶ್ಯಕತೆ ಮುಖ್ಯವಾಗಿರುತ್ತದೆ.

ಕಾರವಾರ ತಾಲೂಕಿನ ಮಾಜಾಳಿ, ಕಡವಾಡ, ಮುಡಗೇರಿ ಭಾಗದಿಂದ ಮೂರ್ತಿ ತಯಾರಿಕೆಗೆ ಮಣ್ಣನ್ನು ತರಿಸಿಕೊಳ್ಳುವ ಮೂರ್ತಿಕಾರರು ಇತ್ತೀಚೆಗೆ ಕುಮಟಾ ತಾಲೂಕಿನಿಂದ ಮಣ್ಣು ತರುತ್ತಿದ್ದಾರೆ. ಕುಮಟಾದ ಮಣ್ಣು ಮೂರ್ತಿ ತಯಾರಿಕೆಗೆ ಸೂಕ್ತವಾಗಿರುತ್ತದೆ. ಅಲ್ಲದೇ ಹೆಚ್ಚು ಹದಪಡಿಸುವ ಅವಶ್ಯಕತೆ ಇರುವುದಿಲ್ಲ ಎನ್ನುವುದು ಮೂರ್ತಿಕಾರರ ಅಭಿಪ್ರಾಯವಾಗಿದೆ.

ಕಾರವಾರ ತಾಲೂಕಿನ ಪ್ರತಿ ಗ್ರಾಮದಲ್ಲಿ ಕನಿಷ್ಠ ಒಬ್ಬ ಮೂರ್ತಿ ಕಲಾವಿದರಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಆಚರಿಸುವ ಕುಟುಂಬಗಳಿಗೆ ಬೇಡಿಕೆಗೆ ಅನುಗುಣವಾಗಿ ಗಣೇಶ ಮೂರ್ತಿ ತಯಾರಿಸಿ ಕೊಡುತ್ತಾರೆ. ಕಾರವಾರ ನಗರದ ಹನಮೀವಡಾದ ಕುಟುಂಬ ತಲೆ ತಲಾಂತರಗಳಿಂದ ಮಣ್ಣಿನ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಘನಶ್ಯಾಮ ನಾಯ್ಕ ಪ್ರತಿ ವರ್ಷದ ಗಣೇಶ ಚತುರ್ಥಿಗೆ ಸುಮಾರು 70ಕ್ಕೂ ಅಧಿಕ ಮೂರ್ತಿ ತಯಾರಿಸುತ್ತಾರೆ. ಇವರೊಂದಿಗೆ ಇವರ ಕುಟುಂಬದ ಎಲ್ಲ ಸದಸ್ಯರು ಮೂರ್ತಿ ತಯಾರಿಕೆ ಕಾಮಗಾರಿಯಲ್ಲಿ ಕೈಜೋಡಿಸುತ್ತಾರೆ.

ನೈಸರ್ಗಿಕ ಬಣ್ಣ ಬಳಕಗೆ ಆದ್ಯತೆ : ಗಣೇಶ ಮೂರ್ತಿಗಳಿಗೆ ಬಳಿಯುವ ಬಣ್ಣ ನೈಸರ್ಗಿಕವಾಗಿರಬೇಕು ಮತ್ತು ಮೂರ್ತಿಗಳನ್ನು ನೀರಿನಲ್ಲಿ ಕರಗುವ ಮಣ್ಣಿನಿಂದಲೇ ತಯಾರಿಸಬೇಕು ಎಂಬ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದನ್ವಯ ಇತ್ತೀಚಿನ ವರ್ಷಗಳಲ್ಲಿ ಎಲ್ಲೆಡೆ ಮಣ್ಣಿನ ಮೂರ್ತಿ ತಯಾರಿಸಿ ನೈಸರ್ಗಿಕ ಬಣ್ಣ ಬಳಿಯಲಾಗುತ್ತದೆ. ಅಗ್ಗದ ಮತ್ತು ಉತ್ತಮ ನೈಸರ್ಗಿಕ ಬಣ್ಣ ಮಹಾರಾಷ್ಟ್ರದ ರತ್ನಾಗಿರಿಯಿಂದ ತರಲಾಗುತ್ತಿದ್ದು, ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಮೂರ್ತಿಕಾರರು ಎಚ್ಚರಿಕೆ ವಹಿಸುತ್ತಿದ್ದಾರೆ.

ವಿಜೃಂಭಣೆ ಕೊರತೆ : ಪ್ರಸ್ತುತ ವರ್ಷದ ಗಣೇಶ ಹಬ್ಬಕ್ಕೆ ಹೆಚ್ಚೇನೂ ವಿಜೃಂಭಣೆ ಕಂಡು ಬರುತ್ತಿಲ್ಲ. ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದಾಗಿ ಗ್ರಾಮಾಂತರ ಭಾಗದಲ್ಲಿನ ಜನರು ಹಾನಿಯನ್ನು ಎದುರಿಸುತ್ತಿದ್ದು, ನೆರೆಯ ನೋವಿನಿಂದ ಇನ್ನೂ ಹೊರಬರದೇ ಹಾಳಾಗಿರುವ ಕಟ್ಟಡಗಳ ದುರಸ್ತಿಯಲ್ಲಿ ಮತ್ತು ಕಳೆದುಕೊಂಡಿರುವ ವಸ್ತುಗಳ ಬಗ್ಗೆ ಚಿಂತಾಗ್ರಸ್ಥರಾಗಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಜನರು ಸಂಪ್ರದಾಯದಂತೆ ಗಣೇಶ ಮೂರ್ತಿಯನ್ನು ತಂದು ಎರಡು ದಿನಗಳ ಕಾಲ ಪೂಜಿಸಿ ವಿಸರ್ಜನೆ ಮಾಡುವ ಇರಾದೆ ಹೊಂದಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ