ಆ್ಯಪ್ನಗರ

ಅತಿ ಧನ ಆಸೆ ತೊರೆದು ದಾನಗುಣ ಬೆಳೆಸಿಕೊಳ್ಳಿ: ಸ್ವರ್ಣವಲ್ಲೀ ಶ್ರೀ

ಯಲ್ಲಾಪುರ : ಸಮಾಜದ ಪ್ರತಿಯೊಬ್ಬರೂ ವಿವೇಕವಂತರಾಗಿ ಇಂದ್ರೀಯ ಆಕರ್ಷಣೆಗಳಿಗೆ ಸಂಪೂರ್ಣ ಕಡಿವಾಣ ವಿಧಿಸಿಕೊಂಡು ನಡೆಯತೊಡಗಿದರೆ ಆರೋಗ್ಯಪೂರ್ಣ ಸಮಾಜ ರಚನೆ ಸಾಧ್ಯವಾಗುತ್ತದೆ ಎಂದು ಶ್ರೀಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಶ್ರೀಮದ್‌ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

Vijaya Karnataka 2 Apr 2019, 5:00 am
ಯಲ್ಲಾಪುರ : ಸಮಾಜದ ಪ್ರತಿಯೊಬ್ಬರೂ ವಿವೇಕವಂತರಾಗಿ ಇಂದ್ರೀಯ ಆಕರ್ಷಣೆಗಳಿಗೆ ಸಂಪೂರ್ಣ ಕಡಿವಾಣ ವಿಧಿಸಿಕೊಂಡು ನಡೆಯತೊಡಗಿದರೆ ಆರೋಗ್ಯಪೂರ್ಣ ಸಮಾಜ ರಚನೆ ಸಾಧ್ಯವಾಗುತ್ತದೆ ಎಂದು ಶ್ರೀಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಶ್ರೀಮದ್‌ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
Vijaya Karnataka Web KWR-1 YLP 5
ಯಲ್ಲಾಪುರ ತಾಲೂಕಿನ ತುಂಬೇಬೀಡಿನ ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಸದಾಶಿವ ದೇವಸ್ಥಾನ ಹಾಗೂ ಶ್ರೀ ಹನುಮಂತ ದೇವಸ್ಥಾನಗಳ ಟ್ರಸ್ಟ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ದೇವತಾ ಕಾರ್ಯದಲ್ಲಿ ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.


ಅವರು ಇತ್ತೀಚೆಗೆ ತಾಲೂಕಿನ ತುಂಬೇಬೀಡಿನ ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಸದಾಶಿವ ದೇವಸ್ಥಾನ ಹಾಗೂ ಶ್ರೀ ಹನುಮಂತ ದೇವಸ್ಥಾನಗಳ ಟ್ರಸ್ಟ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ದೇವತಾ ಕಾರ್ಯ; ಭರತನಹಳ್ಳಿ ಸೀಮಾ ಪರಿಷತ್‌, ಧಾರ್ಮಿಕ ಪರಿಷತ್‌ ಹಾಗೂ ಚಿಪಗೇರಿ ಭಾಗಿ ಪರಿಷತ್‌ಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಸೀಮಾ ಭಿಕ್ಷೆ ಕಾರ್ಯಕ್ರಮದ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿ, ನಂತರ ಅರಳಿಮಕ್ಕಿಯ ಸಿದ್ದಿವಿನಾಯಕ ದೇವಸ್ಥಾನದ ಸರ್ವಜ್ಞೇಂದ್ರ ಸರಸ್ವತೀ ಸಭಾಮಂದಿರದಲ್ಲಿ ಆಶೀರ್ವಚನ ನೀಡಿದರು.

ಲೋಭ ತೊರೆದ ದಾನ, ಕ್ರೂರತನ ಬಿಟ್ಟು ದಯೆ ಈ ಅಂಶಗಳನ್ನು ಸಮಾಜದ ಎಲ್ಲ ಪಾಲಕರು ತಮ್ಮ ಮಕ್ಕಳಿಗೆ ಕಲಿಸಬೇಕು ಎಂದ ಶ್ರೀಗಳು ಅತಿ ಧನ ಸಂಪಾದನೆಯ ಆಸೆ ತೊರೆದು ದಾನಗುಣ ಬೆಳೆಸಿಕೊಂಡು, ಸಂಪಾದನೆಯ ಕೆಲವು ಭಾಗವನ್ನು ಕಷ್ಟದಲ್ಲಿರುವ ವ್ಯಕ್ತಿಗಳಿಗೆ ನೀಡಿ ನೆರವಾಗಬೇಕು ಎಂದರು.

ದಯೆ ಎಂದರೆ ಧರ್ಮದ ತಿರುಳೆ ಆಗಿದ್ದು, ಇದೇ ಕರುಣೆ ಎಂದು ಕರೆಸಿಕೊಳ್ಳುತ್ತದೆ. ನಮಗಾಗಿ ನಾವು ಅತ್ತರೆ ಅದು ಸ್ವಾರ್ಥವೆನಿಸುತ್ತದೆ ಎಂದ ಶ್ರೀಗಳು ನಮ್ಮೊಳಗಿನ ದಯೆ, ಕರುಣೆ, ದಾನ ಎಲ್ಲ ಗುಣಗಳು ಆದರ್ಶಪೂರ್ಣವಾಗಿ ಅನುಷ್ಟಾನಕ್ಕೆ ಬರಬೇಕು ಎಂದರು. ಕಳೆದ ಅನೇಕ ವರ್ಷಗಳಿಂದ ಯಶಸ್ವಿಯಾಗಿ ಪ್ರತಿವರ್ಷವೂ ಇಲ್ಲಿ ನಡೆಯುತ್ತಿರುವ ಸೀಮಾಭಿಕ್ಷ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಸೀಮೆಯ ಪ್ರತಿಯೊಬ್ಬರ ಸಹಕಾರದೊಂದಿಗೆ ಮುಂದಿನ ಎಲ್ಲ ಚಟುವಟಿಕೆಗಳೂ ಕ್ರಿಯಾಶೀಲವಾಗಿ ನಡೆಯಲೆಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಹಿರಿಯ ವೈದಿಕ ಶಿವರಾಮ ಭಟ್ಟ ಮಾಳಕೊಪ್ಪ ಮತ್ತು ನ್ಯಾಯಾಧೀಶ ಗಣಪತಿ ಭಟ್ಟ ಬಾಳ್ಕಲ್‌ ದಂಪತಿಗಳನ್ನು ಸೀಮೆಯ ಪರವಾಗಿ ಶ್ರೀಗಳು ಸನ್ಮಾನಿಸಿದರು. ಜ್ಯೋತಿಷಾಚಾರ್ಯ ವಿ.ನಾಗೇಂದ್ರ ಭಟ್ಟ ಹಿತ್ಲಳ್ಳಿ ತಾವು ಬರೆದ 'ತಾರಾನುಕೂಲ್ಯಂ' ಎಂಬ ಪುಸ್ತಕವನ್ನು ಶ್ರೀಗಳಿಗೆ ಸಮರ್ಪಿಸಿದರು. ಸನ್ಮಾನ ಸ್ವೀಕರಿಸಿದ ಶಿವರಾಮ ಭಟ್ಟ ಹಾಗೂ ಗಣಪತಿ ಭಟ್ಟ ಮಾತನಾಡಿದರು.

ಮಾತೆಯರ ಭಗವದ್ಗೀತಾ ಪಠಣ ಹಾಗೂ ಪಾಠಶಾಲೆಯ ವಿದ್ಯಾರ್ಥಿಗಳ ವೇದಘೋಷದಿಂದ ಕಾರ್ಯಕ್ರಮ ಆರಂಭಗೊಂಡಿತು. ಸೀಮಾ ಪರಿಷತ್‌ ಅಧ್ಯಕ್ಷ ಶ್ರೀಪಾದ ಹೆಗಡೆ ಶಿರನಾಲಾ ಸ್ವಾಗತಿಸಿದರು. ಗಣೇಶ ಹೆಗಡೆ ಗೋರ್ಸಗದ್ದೆ ನಿರ್ವಹಿಸಿದರು. ಎನ್‌.ಜಿ.ಹೆಗಡೆ ಭಟ್ರಕೇರಿ ಪ್ರಾಸ್ತಾವಿಕ ಮಾತನಾಡಿದರು. ಸೀಮಾ ಪರಿಷತ್‌ ಕಾರ್ಯದರ್ಶಿ ಸುರೇಶ ಹೆಗಡೆ ಕೋಸಗುಳಿ ವಂದಿಸಿದರು. ಮುಂಜಾನೆಯಿಂದ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಮಹಾರುದ್ರಹವನ, ವೇದ ಪಾರಾಯಣಗಳನ್ನು ಸೀಮೆಯ ವೈದಿಕರು ವಿದ್ಯುಕ್ತವಾಗಿ ನೆರವೇರಿಸಿದರು. ಮಾತೃ ಮಂಡಳಿಯ ಮಾತೆಯರು ಕುಂಕುಮಾರ್ಚನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಗಳ ಪಾದಪೂಜೆಯನ್ನು ಸೀಮಾ ಪರಿಷತ್‌ ಉಪಾಧ್ಯಕ್ಷ ಭಾಸ್ಕರ ಹೆಗಡೆ ಹಿರೇಸರ ದಂಪತಿ ನೆರವೇರಿಸಿದರು. ಗೋಪಾಲ ಹೆಗಡೆ ಕಂಪ್ಲಿ ದಂಪತಿಗೆ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ