ಆ್ಯಪ್ನಗರ

ದಿನಸಿ, ದನ ಕರು ಏನಾದವೋ ?

ಗುರುದತ್ತ ಭಟ್‌ ಕಾರವಾರ: ಕಾಳಜಿ ಕೇಂದ್ರಗಳಲ್ಲಿದ್ದು 4-5 ದಿನ ಕಳೆದರೂ ಮನೆಯತ್ತ ಮುಖ ಮಾಡಲಾಗದೇ ನೊಂದಿರುವ ಹಲವರು... ಕೊಂಚ ನೀರಿಳಿದ ಬಳಿಕ ಮನೆಗಳಿಗೆ ತೆರಳಿ ಏನು ಉಳಿದಿದೆ ಎಂದು ಪರಿಶೀಲಿಸುತ್ತ ಸಂಕಟ ಅನುಭವಿಸುವ ಕೆಲವರು... ಸಧ್ಯ ಕಾರವಾರ ತಾಲೂಕಿನ ಸ್ಥಿತಿ ಇದು.

Vijaya Karnataka 11 Aug 2019, 5:00 am
ಗುರುದತ್ತ ಭಟ್‌ ಕಾರವಾರ: ಕಾಳಜಿ ಕೇಂದ್ರಗಳಲ್ಲಿದ್ದು 4-5 ದಿನ ಕಳೆದರೂ ಮನೆಯತ್ತ ಮುಖ ಮಾಡಲಾಗದೇ ನೊಂದಿರುವ ಹಲವರು... ಕೊಂಚ ನೀರಿಳಿದ ಬಳಿಕ ಮನೆಗಳಿಗೆ ತೆರಳಿ ಏನು ಉಳಿದಿದೆ ಎಂದು ಪರಿಶೀಲಿಸುತ್ತ ಸಂಕಟ ಅನುಭವಿಸುವ ಕೆಲವರು... ಸಧ್ಯ ಕಾರವಾರ ತಾಲೂಕಿನ ಸ್ಥಿತಿ ಇದು.
Vijaya Karnataka Web KWR-10 GURUDATT 1C


ಕಾಳಿ ನದಿಯ ಪ್ರವಾಹದಲ್ಲಿ ಸಂತ್ರಸ್ತರಾದವರನ್ನು ನಾನಾ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಏನೇ ವ್ಯವಸ್ಥೆ ಕಲ್ಪಿಸಿದ್ದರೂ ಸಂತ್ರಸ್ತರ ಚಿಂತೆ ಮಾತ್ರ ಹೆಚ್ಚುತ್ತಲೇ ಇದೆ.

ನಮ್ಮ ಮನೆಗೆ ನೀರು ನುಗ್ಗಿದೆ, ದಿನಸಿ, ಬಟ್ಟೆ ಬರೆ, ಪಾತ್ರೆ ಪಗಡೆಗಳೆಲ್ಲ ಏನಾದವೋ ? ದನ ಕರು, ಜಾನುವಾರುಗಳು ಬದುಕಿವೆಯೇ ? ಎಂಬ ಹಲವು ಪ್ರಶ್ನೆಗಳು ಮನಸ್ಸಲ್ಲಿ ಮೂಡಿ ಸಂತ್ರಸ್ತರ ಸಂಕಷ್ಟ ಹೆಚ್ಚಿಸುವಂತಾಗಿದೆ.

ಗದ್ದೆಗಳು ಜಲಾವೃತವಾಗಿ ಬೆಳೆ ನಾಶವಾಗಿದ್ದು, ಮುಂದೆ ಊಟಕ್ಕೆ ಏನು ಎನ್ನುವ ಚಿಂತೆ ಹಲವರನ್ನು ಕಾಡುತ್ತಿದೆ.

ಕಾಳಿ ನದಿ ತಟದ ಹಣಕೋಣ, ಹಳಗಾ ಉಳಗಾ, ಗೋಪಶಿಟ್ಟಾ ಮೊದಲಾದ ಗ್ರಾಮಗಳ ಸಂತ್ರಸ್ತರು ಸಧ್ಯದ ಸ್ಥಿತಿಗಿಂತ ಭವಿಷ್ಯದ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಳ್ಳುವಂತಾಗಿದೆ.

ನಮ್ಮ ಭಾಗದಲ್ಲಿ ಬಹುತೇಕ ಮನೆಗೆ ನೀರು ನುಗ್ಗಿದೆ. ಹೀಗಾಗಿ ಬುಧವಾರ ಈ ಪರಿಹಾರ ಕೇಂದ್ರಕ್ಕೆ ಸ್ಥಳಾಂತರವಾಗಿದ್ದೇನೆ. ಮನೆ ಕಡೆ ಏನೇನಾಗಿದೆಯೋ, ದೇವರು ಮಾತ್ರವೇ ನಮ್ಮನ್ನು ಕಾಪಾಡಬೇಕು ಎಂದು ಕಿನ್ನರದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸತೀಶ ಶೆಟ್ಟಿ ಅಳಲು ತೋಡಿಕೊಂಡರು.

ಇನ್ನು ಕೆಲವೆಡೆ ಕೃಷಿ ಭೂಮಿಗೆ ನೀರು ನುಗ್ಗಿ ನೂರಾರು ಹೆಕ್ಟೇರ್‌ ಬೆಳೆ ನಾಶವಾಗಿದೆ. ಈ ಬಾರಿ ಬೆಳೆ ಚೆನ್ನಾಗಿ ಬರುವ ನಿರೀಕ್ಷೆ ಇತ್ತು. ಆದರೆ ಎಲ್ಲವೂ ಪ್ರವಾಹದ ಪಾಲಾಗಿದೆ ಎಂದು ಗೋಟೆಗಾಳಿಯ ರೈತ ಕುಶಾಲಿ ಪಡುವಳಕರ್‌ ಭಾವುಕರಾದರು.

ಪ್ರವಾಹ ಹೆಚ್ಚಿದ್ದರಿಂದ ಮನೆಗೆ ಬೀಗ ಹಾಕಿ ಬಂದಿದ್ದೇವೆ, ಉಟ್ಟ ಬಟ್ಟೆಯಲ್ಲೇ ಬಂದಿದ್ದೇವೆ, ಜಾನುವಾರು, ನಾಯಿ, ಬೆಕ್ಕು, ಕೋಳಿ ಎಲ್ಲಾ ಅಲ್ಲಿಯೇ ಇವೆ. ಇವುಗಳ ಸ್ಥಿತಿ ಏನಾಗಿದೆಯೋ ಎಂದು ಇಲ್ಲಿನ ಸಾಗರ ದರ್ಶನ್‌ ಹಾಲ್‌ನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಮಾರುತಿ ನಾಯ್ಕ ಆತಂಕ ತೋಡಿಕೊಂಡರು.

ಜಾನುವಾರುಗಳಿಗೆ ವ್ಯವಸ್ಥೆ: ಜನರಂತೆಯೇ ಜಾನುವಾರುಗಳೂ ನೆರೆಯ ಸಂಕಷ್ಟದಲ್ಲಿ ಸಿಲುಕಿವೆ. ಘಾಡಸಾಯಿ ಗ್ರಾಮದ ಮೈಮಲ್‌ನಲ್ಲಿ 20ಕ್ಕೂ ಹೆಚ್ಚು ಜರ್ಸಿ ದನಗಳು ನೀರಿನಲ್ಲಿ ಕಣ್ಮರೆಯಾಗಿವೆ. ಸಿದ್ದರದ ಐಟಿಐ ಕಾಲೇಜಿನ ಕಾಳಜಿ ಕೇಂದ್ರದ ಬಳಿಯಲ್ಲಿ 52 ಜಾನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದ್ದು, ಪಶು ಇಲಾಖೆಯಿಂದ 1.5 ಟನ್‌ ಹುಲ್ಲು ಮತ್ತು 1 ಟನ್‌ ಹಿಂಡಿ ಒದಗಿಸಲಾಗಿದೆ. ಹಳಿಯಾಳ ತಾಲೂಕಿನಲ್ಲಿ 89 ದನಗಳಿಗೆ ಮೇವು ಬ್ಯಾಂಕ್‌ ಬಳಿ ರಕ್ಷಣೆ ನೀಡಲಾಗಿದೆ. ಇನ್ನು ಶಿರಸಿ ತಾಲೂಕಿನ ಮುಗವಳ್ಳಿಯಲ್ಲಿ 105 ಜಾನುವಾರುಗಳಿಗೆ ಸ್ಥಳೀಯರ ಕೋರಿಕೆಯ ಮೇರೆಗೆ ಅರಣ್ಯ ಭೂಮಿಯಲ್ಲಿ ಮೇಯಲು ಬಿಡಲು ಅವಕಾಶ ನೀಡಲಾಗಿದೆ. ಕರ್ನಾಟಕ ವೆಟರ್ನರಿ ರಿಜಿಸ್ಟ್ರಾರ್‌ ಡಾ.ತಿಪ್ಪೆಸ್ವಾಮಿ ಅವರನ್ನು ಜಿಲ್ಲೆಯ ಜಾನುವಾರುಗಳ ಸ್ಥಿತಿಗತಿ ಪರಿಶೀಲನೆಗೆ ನೇಮಕ ಮಾಡಲಾಗಿದೆ.

ಕಾಳಿ ನೆರೆಗೆ ನಡುಗಿದ ಕಡವಾಡ: ತಾಲೂಕಿನ ಕಡವಾಡದಲ್ಲಿ 10 ವರ್ಷಗಳ ಹಿಂದೆ ಭೂ ಕುಸಿತ ಉಂಟಾಗಿ 19 ಜನ ಜೀವಂತ ಸಮಾಧಿಯಾಗಿದ್ದರು. ನೂರಾರು ಜನ ನಿರಾಶ್ರಿತರಾಗಿದ್ದರು. ಈಗ ಕಾಳಿ ನದಿ ಪ್ರವಾಹ ಮತ್ತೊಮ್ಮೆ ಕಡವಾಡವನ್ನು ನಡುಗಿಸಿದೆ. ಇಲ್ಲಿನ 50ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಇನ್ನು ಕಡವಾಡದ ಪ್ರಸಿದ್ಧ ಸಾವಯವ ತರಕಾರಿ ತೋಟಗಳು ಪ್ರವಾಹಕ್ಕೆ ಸಿಲುಕದಿದ್ದರೂ ಭಾರಿ ಮಳೆಗೆ ನಾಶವಾಗಿವೆ. ಕಡವಾದವರ ಸಂಕಷ್ಟ ಹೇಳತೀರದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ