ಕುಮಟಾ:ಏಕರೂಪ ಸರಕು, ಸೇವಾ ತೆರಿಗೆ ಪದ್ದತಿ(ಜಿಎಸ್ಟಿ) ಪಾರದರ್ಶಕ, ಸುಧಾರಿತ ಹಾಗೂ ಸರಳ ತೆರಿಗೆ ಪದ್ಧತಿ ಎಂದು ಧಾರವಾಡದ ವಾಣಿಜ್ಯ ತೆರಿಗೆ ಉಪಾಯುಕ್ತ ಆರ್ ಡಿ ಮೇಘಣ್ಣವರ್ ತಿಳಿಸಿದ್ದಾರೆ.
ಕುಮಟಾದ ಕೊಪ್ಪಳಕರವಾಡಿಯಲ್ಲಿ ವಾಣಿಜ್ಯ ತೆರಿಗೆ ಭವನದಲ್ಲಿ ಆಯೋಜಿಸಿದ್ದ ಜಿಎಸ್ಟಿ ನೂತನ ತೆರಿಗೆ ಪದ್ದತಿಯ ಕುರಿತು ಮಾಹಿತಿ ಹಾಗೂ ದಾಖಲಾತಿಯ ಸ್ವರೂಪವನ್ನು ವರ್ತಕರಿಗೆ ಮಾಹಿತಿ ನೀಡುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಿಎಸ್ಟಿ ಬಹುಚರ್ಚಿತ ಹಾಗೂ ನಿರೀಕ್ಷಿತ ತೆರಿಗೆ ಸುಧಾರಣಾ ಪದ್ಧತಿ. ಈಗಾಗಲೆ ರಾಜ್ಯ ಸರಕಾರದ ಚಾಲ್ತಿಯಲ್ಲಿರುವ ಮಾರಾಟ, ಮೌಲ್ಯ ವರ್ಧಿತ ರಾಜ್ಯ ಸರಕಾರದ ಪರಿಮಿತಿಯಲ್ಲಿದೆ. ಅಬಕಾರಿ, ಸುಂಕ, ಎಕ್ಸೈಜ್ ತೆರಿಗೆಗಳು ಕೇಂದ್ರ ಸರಕಾರದ ಅಧೀನಕ್ಕೊಳಪಟ್ಟಿವೆ. ಹೀಗಾಗಿ ಈ ರೀತಿಯ ಬಹುರೂಪ ತೆರಿಗೆ ಪದ್ಧತಿಗೆ ಒಂದೇ ರೂಪ ನೀಡುವ ದೃಷ್ಟಿಯಿಂದ ಜಿಎಸ್ಟಿ ಜಾರಿಗೆ ತರಲಾಗುತ್ತಿದೆ. ಯಾವುದೇ ಹೊಸ ನಿಯಮ ಕಾನೂನು ಜಾರಿಗೆ ಬರುವ ಪೂರ್ವದಲ್ಲಿ ಕೊಂಚ ಆತಂಕ ಇರುವುದು ಸಹಜ. ಆದರೆ ಜಿಎಸ್ಟಿಯಿಂದ ವರ್ತಕರಿಗೆ ಸಾರ್ವಜನಿಕರಿಗೂ ಲಾಭವಾಗಲಿದೆ. ಈಗಿರುವ ವ್ಯಾಟ್ ತೆರಿಗೆ ಪದ್ಧತಿ ಕೊನೆಗೊಳ್ಳಲಿದೆ. ಹೀಗಾಗಿ ಎಲ್ಲರೂ ಜಿಎಸ್ಟಿ ಹೊಸ ತೆರಿಗೆ ವ್ಯವಸ್ಥೆಗೆ ವಲಸೆ ಹೋಗಬೇಕಾಗಿದೆ ಎಂದರು.
ಜಿಎಸ್ಟಿ ನೋಂದಣಿ ಪ್ರಕ್ರಿಯೆ ಪ್ರಾತ್ಯಕ್ಷಿಕೆ ನೀಡಿದ ಕುಮಟಾದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಭರತೇಶಕುಮಾರ ಎಸ್.ಎಂ. ಜಿಎಸ್ಟಿ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಅಂಬೆಗಾಲು ಹಾಕುತ್ತಿರುವ ಈ ತೆರಿಗೆ ಪದ್ಧತಿ ಗಜಪ್ರಸವ ಆದಂತೆ. ಈ ಹಿಂದೆ ತೆರಿಗೆ ಪದ್ಧತಿ ಸಂಪೂರ್ಣ ಕಾಗದದ ಮೂಲಕ ನಡೆಯುತ್ತಿತ್ತು. ವ್ಯಾಟ್ ತೆರಿಗೆ ಪದ್ಧತಿ ಬಂದ ಮೇಲೆ ಸ್ವಲ್ಪ ಪ್ರಮಾಣದ ಕಾಗದ ಪತ್ರ ವ್ಯವಹಾರ ತಗ್ಗಿತ್ತು. ಜಿಎಸ್ಟಿ ಅಕ್ಷ ರಶಃ ಕಾಗದ ರಹಿತ ತೆರಿಗೆ ಪದ್ಧತಿ ನಡೆಯಲಿದೆ. ಜಿಎಸ್ಟಿಗೂ ಹಿಂದಿನ ತೆರಿಗೆ ಪದ್ಧತಿಗೂ ಅತಿ ವಿಶೇಷತೆ ಏನೂ ಇಲ್ಲ. ಇದು ಏಕರೂಪ ಸುಲಭ ತೆರಿಗೆ ಪದ್ಧತಿ ಜನವರಿ 1ರಿಂದ 15ರೊಳಗೆ ಎಲ್ಲ ವರ್ತಕರು ನೂತನ ತೆರಿಗೆ ಪದ್ಧತಿಗೆ ವಲಸೆ ಹೋಗಬೇಕಾಗಿದೆ. ಹೀಗಾಗಿ ಎಲ್ಲ ವರ್ತಕರು ಈ ಅವಧಿಯೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು.
ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಗೆ ವರ್ಗಾವಣೆಗೊಳ್ಳಲು ತಾತ್ಕಾಲಿಕ ಯುಸರ್ ನೇಮ್, ತಾತ್ಕಾಲಿಕ ಪಾಸ್ವರ್ಡ್, ಮೊಬೈಲ್ ಸಂಖ್ಯೆ, ಇ-ಮೇಲ್ ಖಾತೆ, ಬ್ಯಾಂಕ್ ಖಾತೆ ವಿವರಗಳು, ಬ್ಯಾಂಕ್ ಖಾತೆಯ ಐ.ಎಫ್.ಎಸ್.ಸಿ ವಿವರಗಳು, ಇದರ ಜತೆಗೆ ಕಂಪ್ಯೂಟರ್ನಲ್ಲಿ ಪಿಡಿಎಫ್ ಅಥವಾ ಜೆ.ಪಿ.ಇ.ಜಿ. ಮಾದರಿಯಲ್ಲಿ ಸಿದ್ಧಪಡಿಸಿಕೊಳ್ಳುವುದು ಅವಶ್ಯಕ. ಇದರ ಜತೆ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯಿದೆ 2003(ವ್ಯಾಟ್) ಅಡಿಯಲ್ಲಿ ಹೊಂದಿರುವ ನೋಂದಣಿ ಪತ್ರ. ಪಾಲುದಾರಿಕೆ ಒಪ್ಪಂದ ಪತ್ರ. ಮಾಲಿಕರು, ಪಾಲುದಾರರು, ಪ್ರಮೋಟರ್ಗಳ ಫೋಟೊ, ಅಧಿಕೃತ ಸಿಗ್ನೇಟರರಿಗೆ ನೀಡುವ ಪತ್ರ(ಜಿಎಸ್ಟಿ ರೂಲ್)ದಲ್ಲಿ ನಿಗದಿಪಡಿಸಿರುವ ಫಾರ್ಮ್. ಅಧಿಕೃತ ಸಿಗ್ನಟರಿಯ ಫೋಟೊ. ಬ್ಯಾಂಕ್ ಪಾಸ್ಬುಕ್ನಲ್ಲಿ ಬ್ಯಾಂಕ್ ಖಾತೆ ನಂ. ವಿಳಾಸ, ಬ್ಯಾಂಕ್ ವ್ಯವಹಾರ ನಡೆದಿರುವ ಕುರಿತು ಪುಟಗಳ ಪ್ರತಿ. ಇವು ಪರಿಪೂರ್ಣಗೊಂಡಾಗ ನೂತನ ಜಿಎಸ್ಟಿ ವ್ಯವಸ್ಥೆಗೆ ಕಾಲಿಡುವ ಔಪಚಾರಿಕತೆಯನ್ನು ಪೂರ್ಣಗೊಳಿಸಿದಂತೆ ಎಂದು ಭರತೇಶಕುಮಾರ ಹೇಳಿದರು.
ಹೊನ್ನಾವರ ವಾಣಿಜ್ಯ ತೆರಿಗೆ ಅಧಿಕಾರಿ ಎಂ.ಎಸ್. ಲಕ್ಷ್ಮೇಶ್ವರ, ಹಿರಿಯ ತೆರಿಗೆ ಸಲಹೆಗಾರ ವಕೀಲ ಕೆ.ಎಸ್.ಭಟ್ಟ ವೇದಿಕೆಯಲ್ಲಿದ್ದರು. ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳಿಂದ ವರ್ತಕರು, ತೆರಿಗೆ ಸಲಹೆಗಾರರು, ವಕೀಲರು ಹಾಗೂ ಚಾರ್ಟರ್ಡ್ ಎಕೌಂಟೆಂಟ್ ಪಾಲ್ಗೊಂಡಿದ್ದರು.