ಆ್ಯಪ್ನಗರ

ಮನೆ ಮನೆಗೆ ಲಸಿಕೆ: ಸುಪ್ರೀಂ ನೋಟಿಸ್ ಹಿಡಿದು ಆರೋಗ್ಯ ಸಿಬ್ಬಂದಿ ಜತೆ ಸಾರ್ವಜನಿಕರ ತಗಾದೆ

ಇದಾದ ಬಳಿಕ ಸೆಪ್ಟೆಂಬರ್‌ನಲ್ಲಿ, ವಿಕಲಚೇತನರು ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ ಜನರಿಗೆ ಮನೆ ಮನೆಗೆ ಕೋವಿಡ್ ಲಸಿಕೆ ನೀಡುವಂತೆ ಕೋರಿ ವಕೀಲರ ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

Vijaya Karnataka Web 27 Nov 2021, 5:06 pm
ಕಾರವಾರ: ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆ ಮನೆಗೆ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಶತ ಪ್ರತಿಶತ ಲಸಿಕಾಕರಣ ಸಾಧನೆಗಾಗಿ ಆರೋಗ್ಯ ಸಿಬ್ಬಂದಿ ಗ್ರಾಮೀಣ ಭಾಗಗಳಲ್ಲಿ ಮನೆ ಮನೆಗೆ ತೆರಳಿ, ಬಿಟ್ಟು ಹೋದವರಿಗೆ ಲಸಿಕೆ ನೀಡುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಕೆಲವರು ಮನೆ ಮನೆಗೆ ಲಸಿಕೆ ನೀಡಬಾರದು ಎಂದು ಸುಪ್ರೀಂ ಕೋರ್ಟಿನ ನೋಟಿಸ್ ಹಿಡಿದು ಆರೋಗ್ಯ ಕಾರ್ಯಕರ್ತರೊಂದಿಗೆ ವಾಗ್ವಾದಕ್ಕಿಳಿಯುತ್ತಿದ್ದಾರಂತೆ.
Vijaya Karnataka Web ಮುಲೈ ಮುಗಿಲನ್
ಮುಲೈ ಮುಗಿಲನ್


ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಶೇ 92.32ರಷ್ಟು ಮೊದಲ ಡೋಸ್ ಹಾಗೂ ಶೇ 65ರಷ್ಟು ಎರಡನೇ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಆದರೆ ನಿಗದಿತ 10.78 ಲಕ್ಷದಷ್ಟು 18 ವರ್ಷ ಮೇಲ್ಪಟ್ಟವರ ಗುರಿಯಲ್ಲಿ 82 ಸಾವಿರದಷ್ಟು ಜನರಿಗೆ ಮೊದಲ ಡೋಸ್, 3.50 ಲಕ್ಷ ಜನರಿಗೆ ಎರಡನೇ ಡೋಸ್ ನೀಡುವುದು ಬಾಕಿ ಇದೆ. ಹೀಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ‌ ನೀಡುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಈ ವೇಳೆ ಸುಪ್ರೀಂ ಕೋರ್ಟ್ನ ಆದೇಶವೊಂದನ್ನು ಹಿಡಿದು ಜನರು ಆರೋಗ್ಯ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿಯುತ್ತಿದ್ದಾರೆ. ಹಾಗಿದ್ರೆ ಸುಪ್ರೀಂನ ಆ ಆದೇಶವಾದರೂ ಏನು?

ಉತ್ತರ ಕನ್ನಡ: ಮನೆ ಮನೆಗೆ ಲಸಿಕೆ ಅಭಿಯಾನ, ಬಿಟ್ಟು ಹೋದವರನ್ನು ಹುಡುಕಿ ಲಸಿಕೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿ

ಈ ವರ್ಷದ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್, ರಾಷ್ಟ್ರವ್ಯಾಪಿ ಸಮೂಹ ಜಾಗೃತಿ ಹಾಮ್ಮಿಕೊಂಡು, ಮೊಬೈಲ್ ವಾಹನಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಸೌಲಭ್ಯ ವಂಚಿತ ಪ್ರದೇಶಗಳಲ್ಲಿರುವ ಜನತೆಗೆ ಮನೆ ಬಾಗಿಲಿಗೇ ತೆರಳಿ ಲಸಿಕೆ ನೀಡಬಹುದೇ? ಎಂದು ಕೇಂದ್ರ ಸರಕಾರಕ್ಕೆ ಪ್ರಶ್ನಿಸಿತ್ತು. ಈ ವೇಳೆ ಕೇಂದ್ರ ಸರಕಾರವು, ಕೋವಿಡ್ ಲಸಿಕೆಯನ್ನು ಮನೆ ಬಾಗಿಲಿಗೆ ತೆರಳಿ ನೀಡುವ ಪ್ರಸ್ತಾವನೆ ಇಲ್ಲ. ಕೇವಲ ನೋಂದಾಯಿತ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಹಲವು ಕಾರಣಗಳೊಂದಿಗೆ ಸುಪ್ರೀಂಗೆ ತಿಳಿಸಿತ್ತು.

ಇದಾದ ಬಳಿಕ ಸೆಪ್ಟೆಂಬರ್‌ನಲ್ಲಿ, ವಿಕಲಚೇತನರು ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ ಜನರಿಗೆ ಮನೆ ಮನೆಗೆ ಕೋವಿಡ್ ಲಸಿಕೆ ನೀಡುವಂತೆ ಕೋರಿ ವಕೀಲರ ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಆದರೆ ಈ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ್ದ ಸುಪ್ರೀಂ, ಆರೋಗ್ಯ ಸಿಬ್ಬಂದಿ ಒತ್ತಡದಲ್ಲಿದ್ದಾರೆ. ಅಲ್ಲದೇ ದೇಶದ ಪರಿಸ್ಥಿತಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಿಭಿನ್ನವಾಗಿದ್ದು, ಈ ಕಾರಣದಿಂದ ಇದು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಬಂದ ವರದಿಯನ್ನೇ ಕೆಲವರು ಹಿಡಿದುಕೊಂಡು, ಮನೆ ಮನೆಗೆ ಲಸಿಕೆ ನೀಡುವಂತಿಲ್ಲ ಎಂದು ತಗಾದೆ ತೆಗೆಯುತ್ತಿದ್ದಾರಂತೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮನೆ ಮನೆಗೆ ತೆರಳಿ ಲಸಿಕೆ ಕೊಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ. ಆ ಸಂದರ್ಭದಲ್ಲಿ ಅದು ಸಾಧ್ಯವಿಲ್ಲ ಎಂದಿತ್ತು. ಸರಕಾರ ಅಂದು ಲಸಿಕೆ ಲಭ್ಯತೆಯಾಧಾರದಲ್ಲಿ ಕೋರ್ಟ್‌ಗೆ ಮನೆ ಮನೆಗೆ ಲಸಿಕೆ ಕಷ್ಟವೆಂದು ಅಂದು ಹೇಳಿತ್ತು. ಆದರೆ ಈಗ ಲಸಿಕೆ ಸಾಕಷ್ಟು ಲಭ್ಯತೆ ಇದೆ, ಹೀಗಾಗಿ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ ಎಂದರು.
ಚುನಾವಣೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು: ಉತ್ತರ ಕನ್ನಡ ಜಿಲ್ಲಾಧಿಕಾರಿ ಎಚ್ಚರಿಕೆ
ಕೋವಿಡ್‌ನಿಂದ ರಕ್ಷಣೆ ಪಡೆಯಲು ಮೂರು ನಿಯಮಗಳನ್ನು ನಾವು ಕಡ್ಡಾಯವಾಗಿ ಪಾಲನೆ ಮಾಡಲೇಬೇಕಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಹಾಗೂ ಲಸಿಕೆ ಪಡೆಯುವುದು ಪರಿಣಾಮಕಾರಿಯಾಗಿದೆ. ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ, ಕೋವಿಡ್ ನಿಯಮಗಳನ್ನು ಪಾಲಿಸಿ, ನಿಯಂತ್ರಣಕ್ಕೆ ಸಹಕರಿಸಿ ಎಂದು ಮನವಿ ಮಾಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ