ಆ್ಯಪ್ನಗರ

Bhatkal Rains | ಭಟ್ಕಳ: ನಾಲ್ವರ ಬಲಿ ಪಡೆದು ತಣ್ಣಗಾದ ರಣಭೀಕರ ಮಳೆ, ಹಲವು ಕಡೆ ಜನರ ಸ್ಥಳಾಂತರ

Heavy rains in Uttara Kannada: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸುರಿದ ರಣಭೀಕರಣ ಮಳೆ ಜನಜೀವನವನ್ನ ಅಸ್ತವ್ಯಸ್ತಗೊಳಿಸಿದೆ. ಜಿಲ್ಲೆಯ ಭಟ್ಕಳ ಪಟ್ಟಣದ ಜನ ಎಂದಿಗೂ ಕಂಡುಕೇಳರಿಯದ ಮಳೆ ಇಂದು ಸುರಿದಿದ್ದು, ನಾಲ್ವರನ್ನ ಬಲಿ ಪಡೆದು ಈಗ ತಣ್ಣಗಾಗಿದೆ. ಭಟ್ಕಳದಲ್ಲಿ ನಿನ್ನೆ ರಾತ್ರಿಯಿಂದ ಸುರಿಯಲಾರಂಭಿಸಿದ ಮಳೆ ಮಂಗಳವಾರ ಬೆಳಿಗ್ಗೆಯವರೆಗೂ ಒಂದೇ ಸಮನೆ ಸುರಿದು ಭಟ್ಕಳಿಗರನ್ನ ಕಂಗಾಲಾಗಿಸಿತು. ಜಿಲ್ಲೆ ದಶಕಗಳಲ್ಲಿ ಕಂಡರಿಯದಂಥ ಮಳೆಗೆ ಇಂದು ಭಟ್ಕಳ ಸಾಕ್ಷಿಯಾಗಿದ್ದು, ನಾಲ್ವರು ಅಮಾಯಕರನ್ನ ಬಲಿ ಪಡೆದು ಭಟ್ಕಳವನ್ನ ಶೋಕ ಸಾಗರದಲ್ಲಿ ಮುಳುಗಿಸಿದೆ.

Edited byಹೇಮಂತ್ ಕುಮಾರ್ ಎಸ್ | Lipi 2 Aug 2022, 3:45 pm

ಹೈಲೈಟ್ಸ್‌:

  • ಹಲವು ಗ್ರಾಮಗಳಲ್ಲಿ ಸೊಂಟದವರೆಗೂ ನೀರು
  • ಭಟ್ಕಳ ಪಟ್ಟಣ ಇತಿಹಾಸದಲ್ಲೇ ಮೊದಲ ಬಾರಿಗೆ ತೀವ್ರ ಮಳೆ
  • ಒಂದೇ ಕುಟುಂಬದ ನಾಲ್ವರು ಸಾವು
  • ಹೆದ್ದಾರಿಯಲ್ಲೂ ನೀರು, ತೆರವು ಕಾರ್ಯಾಚರಣೆಗೆ ಅಡ್ಡಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸುರಿದ ರಣಭೀಕರ ಮಳೆ ಜನಜೀವನವನ್ನ ಅಸ್ತವ್ಯಸ್ತಗೊಳಿಸಿದೆ. ಜಿಲ್ಲೆಯ ಭಟ್ಕಳ ಪಟ್ಟಣದ ಜನ ಎಂದಿಗೂ ಕಂಡು ಕೇಳರಿಯದ ಮಳೆ ಇಂದು ಸುರಿದಿದ್ದು, ನಾಲ್ವರನ್ನ ಬಲಿ ಪಡೆದು ಈಗ ತಣ್ಣಗಾಗಿದೆ.

ಭಟ್ಕಳದಲ್ಲಿ ನಿನ್ನೆ ರಾತ್ರಿಯಿಂದ ಸುರಿಯಲಾರಂಭಿಸಿದ ಮಳೆ ಮಂಗಳವಾರ ಬೆಳಿಗ್ಗೆಯವರೆಗೂ ಒಂದೇ ಸಮನೆ ಸುರಿದು ಭಟ್ಕಳಿಗರನ್ನ ಕಂಗಾಲಾಗಿಸಿತು. ಜಿಲ್ಲೆ ದಶಕಗಳಲ್ಲಿ ಕಂಡರಿಯದಂಥ ಮಳೆಗೆ ಇಂದು ಭಟ್ಕಳ ಸಾಕ್ಷಿಯಾಗಿದ್ದು, ನಾಲ್ವರು ಅಮಾಯಕರನ್ನ ಬಲಿ ಪಡೆದು ಭಟ್ಕಳವನ್ನ ಶೋಕ ಸಾಗರದಲ್ಲಿ ಮುಳುಗಿಸಿದೆ.
ಕರಾವಳಿಯಲ್ಲಿ ಮತ್ತೆ ಅಬ್ಬರಿಸುತ್ತಿರುವ ವರುಣರಾಯ: ಭಟ್ಕಳ ಸಂಪೂರ್ಣ ಜಲಾವೃತ, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ
ಭಟ್ಕಳದ ಮುಟ್ಟಳ್ಳಿಯ ಗೌರಮ್ಮಜ್ಜಿ ಮನೆಯ ಲಕ್ಷ್ಮೀ ನಾಯ್ಕ ಎನ್ನುವವರ ಮನೆಗೆ ನಿನ್ನೆ ರಾತ್ರಿ ಸಹೋದರಿಯ ಮಗನೂ ಬಂದಿದ್ದ. ಇಂದು ನಾಗರಪಂಚಮಿಗಾಗಿ ಮನೆಯಲ್ಲಿ ಸಿದ್ಧತೆಯೂ ನಡೆದಿತ್ತು. ತನ್ನಿಬ್ಬರು ಮಕ್ಕಳು, ಜೊತೆಗೆ ಸಹೋದರಿಯ ಮಗನೊಂದಿಗೆ ರಾತ್ರಿ ಊಟ ಮುಗಿಸಿ ನೆಮ್ಮದಿಯ ನಿದ್ರೆಗೆ ಕುಟುಂಬ ಜಾರಿತ್ತು. ಆದರೆ, ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಲಕ್ಷ್ಮೀ ಮನೆಯ ಬಳಿ ಬೆಳ್ಳಂಬೆಳಿಗ್ಗೆ ಗುಡ್ಡ ಕುಸಿದಿದೆ. ಕುಸಿದ ಗುಡ್ಡ ನೇರವಾಗಿ ಮನೆಯ ಮೇಲೆ ಬಿದ್ದಿದ್ದು, ಆರ್‌ಸಿಸಿ ಮನೆ ಧರೆಗುರುಳಿದೆ. ಮನೆಯೊಳಗೆ ನೆಮ್ಮದಿಯ ನಿದ್ದೆ ಮಾಡುತ್ತಿದ್ದ ಲಕ್ಷ್ಮೀ ಸೇರಿ ನಾಲ್ವರು ಸಿಲುಕಿಕೊಂಡಿದ್ದರು. ಸೂರ್ಯೋದಯವಾಗುತ್ತಿದ್ದಂತೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
60 ದಿನಗಳ ನಿಷೇಧ ತೆರವು: ಆ.1ರಿಂದ ಕಡಲ ಮೀನುಗಾರಿಕೆ ಆರಂಭ, ಈ ಬಾರಿ ಬಂಪರ್ ಗುರಿ!
ಆದರೆ, ದುರಾದೃಷ್ಟವಶಾತ್ ಮನೆಯ ಮೇಲೆ ಬಿದ್ದ ಗುಡ್ಡ ತೆರವಿಗೆ ಜೆಸಿಬಿಯನ್ನೂ ತರಲಾಗದಷ್ಟು ಹೆದ್ದಾರಿಯಲ್ಲಿ ನೀರು ನಿಂತಿತ್ತು. ಹೇಗೋ ಹರಸಾಹಸಪಟ್ಟು ಅಧಿಕಾರಿಗಳು ಜೆಸಿಬಿ ತಂದು ವಿಳಂಬವಾಗಿ ತೆರವು ಕಾರ್ಯಕ್ಕೆ ಮುಂದಾದರು. ಅಷ್ಟರಲ್ಲೇ ಸ್ಥಳೀಯರು ಕೂಡ ತಮ್ಮ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಮೂರ್ನಾಲ್ಕು ಗಂಟೆಗಳ ಕಾಲ ನಡೆದ ತೆರವು ಕಾರ್ಯಾಚರಣೆಯಲ್ಲಿ ಅಂತಿಮವಾಗಿ ನಾಲ್ವರ ಮೃತದೇಹವನ್ನೂ ಹೊರ ತೆಗೆಯಲಾಗಿದೆ. ನಿನ್ನೆ ರಾತ್ರಿ ನೆಮ್ಮದಿಯ ನಿದ್ರೆಗೆ ಜಾರಿದ್ದ ಮನೆಯೊಡತಿ, ತನ್ನಿಬ್ಬರು ಮಕ್ಕಳಾದ ಲಕ್ಷ್ಮೀ ನಾಯ್ಕ, ಅನಂತ ನಾಯ್ಕ ಹಾಗೂ ಸಹೋದರಿಯ ಮಗ ಪ್ರವೀಣ್ ನಾಯ್ಕನೊಂದಿಗೆ ಚಿರನಿದ್ರೆಗೆ ಜಾರಿದ್ದಾರೆ. ಭಟ್ಕಳ ಪಟ್ಟಣ, ಮುಟ್ಟಳ್ಳಿ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ‌.

ಹಲವು ಗ್ರಾಮಗಳಲ್ಲಿ ಸೊಂಟದವರೆಗೂ ನೀರು

ಸೋಮವಾರ ರಾತ್ರಿಯಿಂದ ಆರಂಭವಾದ ಮಳೆಯಿಂದಾಗಿ ಅನೇಕ ಗ್ರಾಮಗಳು ಜಲಾವೃತವಾಗಿದ್ದು, ಜನ ಪರದಾಡುತ್ತಿದ್ದಾರೆ. ಭಟ್ಕಳ ಪಟ್ಟಣ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಡು ಕೇಳರಿಯದಂಥ ಪ್ರವಾಹ ಪರಿಸ್ಥಿತಿಗೆ ತುತ್ತಾಗಿದೆ.

ರಾತ್ರಿಯಿಂದ ಬೆಳಗ್ಗಿನವರೆಗೆ ಸುರಿದ ಮಳೆಗೆ ನಿರೀಕ್ಷೆಯೇ ಇರದಷ್ಟು ನೀರು ತುಂಬಿ ಭಟ್ಕಳ ಪಟ್ಟಣ ಭಾಗದಲ್ಲೇ ಹತ್ತಾರು ಗ್ರಾಮಗಳು ಜಲಾವೃತವಾಗಿವೆ. ಒಮ್ಮೆಲೆ ನಗರ ಭಾಗದಲ್ಲಿ ನೀರು ತುಂಬಲಾರಂಭಿಸಿದ್ದು, ಜನ ಕಂಗಾಲಾಗಿದ್ದಾರೆ. ವೆಂಕಟಾಪುರ, ಚೌಥ್ನಿ, ಶರಾಬಿ ಹೊಳೆಗಳು ತುಂಬಿ ಹರಿದ ಪರಿಣಾಮ ಪಟ್ಟಣ ಭಾಗದ ಕೋಕ್ತಿ, ಆಸರಕೇರಿ, ಮೂಡಭಟ್ಕಳ, ಮುಟ್ಟಳ್ಳಿ, ಚೌಥ್ನಿ, ಮುಂಡಳ್ಳಿ ಭಾಗ ಸಂಪೂರ್ಣ ಜಲಾವೃತವಾಗಿದೆ.
ಉತ್ತರ ಕನ್ನಡ: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಜನತೆ
ರಾಷ್ಟ್ರೀಯ ಹೆದ್ದಾರಿಯ ಶಂಸುದ್ದೀನ್ ಸರ್ಕಲ್, ರಂಗಿನಕಟ್ಟೆ, ಶಿರಾಲಿಯಲ್ಲಿ ಸೊಂಟದ ಮಟ್ಟ ನೀರು ನಿಂತು ವಾಹನಗಳು ಓಡಾಡದ ಪರಿಸ್ಥಿತಿ ಎದುರಾಗಿದೆ. ಭಟ್ಕಳದ ಶಂಸುದ್ದೀನ್ ವೃತ್ತದಿಂದ ಪೇಟೆಯ ಹೂವಿನ ಚೌಕದವರೆಗೆ ಭಾರೀ ನೀರು ನಿಂತಿದ್ದು, ಸಣ್ಣಪುಟ್ಟ ವಾಹನಗಳು ಕೂಡ ತೇಲಿ ಹೋಗಿವೆ. ಮುಂಜಾಗ್ರತಾ ಕ್ರಮವಾಗಿ ಭಟ್ಕಳದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಇನ್ನು, ಭಾರೀ ಮಳೆಯ ಕಾರಣ ಮುರ್ಡೇಶ್ವರ ಮತ್ತು ಭಟ್ಕಳ ರೈಲು ನಿಲ್ದಾಣದ ನಡುವೆ ರೈಲ್ವೆ ಹಳಿಗಳ ಮೇಲೆ ನೀರು ನಿಂತಿದ್ದು, ಇದರಿಂದ ರೈಲುಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಕಾರಣದಿಂದ ಕೆಲವು ರೈಲುಗಳ ಸಂಚಾರವನ್ನು ಕೊಂಕಣ ರೈಲ್ವೆ ರದ್ದುಪಡಿಸಿದ್ದು, ಇನ್ನು ಕೆಲವನ್ನು ಭಟ್ಕಳ ಪ್ರವೇಶಕ್ಕೂ ಪೂರ್ವವೇ ವಾಪಸ್ಸು ಕಳುಹಿಸಲಾಗುತ್ತಿದೆ.
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ