ಆ್ಯಪ್ನಗರ

ನದಿಗೆ ಮಣ್ಣು, ಮೀನುಗಾರಿಕೆ ಹೇಗೆ ?

ಕುಮಟಾ : ಸೇತುವೆ ಕಾಮಗಾರಿಗಾಗಿ ಅಘನಾಶಿನಿ ನದಿಯ ನೀರಿಗೆ ಅಡ್ಡಲಾಗಿ ಭಾರಿ ಪ್ರಮಾಣದಲ್ಲಿ ಮಣ್ಣು ಹಾಕಿದ್ದು, ನೀರಿಗೆ ತಡೆಯುಂಟಾಗಿ ಮೀನುಗಾರಿಕೆಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮಿರ್ಜಾನ ಗ್ರಾಮದ ನೂರಾರು ಮೀನುಗಾರರು ಮಿರ್ಜಾನ ನಾಡಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

Vijaya Karnataka 28 Apr 2019, 5:00 am
ಕುಮಟಾ : ಸೇತುವೆ ಕಾಮಗಾರಿಗಾಗಿ ಅಘನಾಶಿನಿ ನದಿಯ ನೀರಿಗೆ ಅಡ್ಡಲಾಗಿ ಭಾರಿ ಪ್ರಮಾಣದಲ್ಲಿ ಮಣ್ಣು ಹಾಕಿದ್ದು, ನೀರಿಗೆ ತಡೆಯುಂಟಾಗಿ ಮೀನುಗಾರಿಕೆಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮಿರ್ಜಾನ ಗ್ರಾಮದ ನೂರಾರು ಮೀನುಗಾರರು ಮಿರ್ಜಾನ ನಾಡಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
Vijaya Karnataka Web how to get rid of soil and fishing
ನದಿಗೆ ಮಣ್ಣು, ಮೀನುಗಾರಿಕೆ ಹೇಗೆ ?


ತಾಲೂಕಿನ ಕೋಡ್ಕಣಿ ಐಗಳಕುರ್ವೆ ಸೇತುವೆ ಕಾಮಗಾರಿ ಆರಂಭಗೊಂಡಿದ್ದು, ಈ ಕಾಮಗಾರಿಗಾಗಿ ಅಘನಾಶಿನಿ ನದಿಯ ನೀರಿಗೆ ಅಡ್ಡಲಾಗಿ ಭಾರಿ ಪ್ರಮಾಣದಲ್ಲಿ ಮಣ್ಣು ತುಂಬಲಾಗಿದೆ. ಹೀಗಾಗಿ ನೀರಿಗೆ ತಡೆಯುಂಟಾಗಿ ಮೀನುಗಾರಿಕೆಗೆ ಅಡ್ಡಿಯುಂಟಾಗಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.

ಮಿರ್ಜಾನ ಗ್ರಾಮದ ತಾರೀಬಾಗಿಲಿನ ಸುಮಾರು 200 ಕುಟುಂಬಗಳು ಮೀನುಗಾರಿಕೆಯನ್ನೇ ಅವಲಂಬಿಸಿ ಅನಾದಿ ಕಾಲದಿಂದಲೂ ಅಘನಾಶಿನಿ ನದಿಯಲ್ಲಿ ಮೀನು ಹಿಡಿದು ಜೀವನ ಸಾಗಿಸುತ್ತಿದ್ದಾರೆ. ಅಘನಾಶಿನಿ ನದಿಗೆ ಕೋಡ್ಕಣಿ, ಐಗಳಕುರ್ವೆ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ನಿರ್ಮಿಸಬೇಕೆನ್ನುವುದು ಇಲ್ಲಿಯ ಜನರ ಅನೇಕ ವರ್ಷಗಳ ಬೇಡಿಕೆಯಾಗಿತ್ತು. ಈ ಸೇತುವೆಗೆ ಆಗಲೇ ಮಂಜೂರಿ ದೊರೆತಿದ್ದು, ಕಾಮಗಾರಿ ಆರಂಭಗೊಂಡಿದೆ. ಜನರ ಅನುಕೂಲಕ್ಕಾಗಿ ಶೀಘ್ರ ಸೇತುವೆ ನಿರ್ಮಾಣಗೊಳ್ಳುವುದು ಅವಶ್ಯಕ.

ಸೇತುವೆ ಕಾಮಗಾರಿ ಟೆಂಡರ್‌ ಪಡೆದಿರುವ ಗುತ್ತಿಗೆದಾರರು ತಮಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಹಳ್ಳಕ್ಕೆ ಕೆಂಪು ಮಣ್ಣು ತುಂಬಿ ಹರಿಯುವ ನೀರನ್ನು ತಡೆಯಲಾಗಿದೆ. ಇದರಿಂದ ಮೀನುಗಾರಿಕೆಗೆ ಹೋಗದಂತೆ ತಡೆಯುಂಟಾಗಿದೆ. ಗುತ್ತಿಗೆದಾರರಲ್ಲಿ ಈ ಬಗ್ಗೆ ವಿಚಾರಿಸಿದರೆ ಉದ್ಧಟತನದ ಉತ್ತರ ನೀಡುತ್ತಾರೆ. ನದಿಗೆ ಉಬ್ಬರ ಇಳಿತ ಉಂಟಾದಾಗ ಕಾಗಲ ಹೇಣಿ ಎರಡು ಕಡೆಯಿಂದ ನೀರು ಒಂದೇ ಕಡೆ ಹರಿದು ಬಂದರೆ ಉಂಟಾಗಬಹುದಾದ ಸೆಳೆತ ಗುತ್ತಿಗೆದಾರರಿಗೆ ತಿಳಿಯದು.

ಇಂತಹ ಸಂದರ್ಭದಲ್ಲಿ ಮಾಸೂರ ಕಡೆಯಿಂದ ಪಾತಿ ದೋಣಿ ಓಡಿಸಬೇಕಾದರೆ ಜೀವ ಅಂಗೈಯಲ್ಲಿ ಇಟ್ಟುಕೊಂಡು ಹೋಗಬೇಕು ಎಂಬುದು ಜನರ ಆಳಲು. ಅಲ್ಲದೇ ನದಿಯಲ್ಲಿ ಇಳಿತ ಉಂಟಾದಾಗ ದೋಣಿಗಳನ್ನು ಒಯ್ಯುವುದು ಕಷ್ಟ. ನದಿಯಲ್ಲಿ ಬಂಡೆ, ಹೂಳು ತುಂಬಿರುವುದರಿಂದ ಓಡಾಡುವುದು ಎಷ್ಟು ಕಷ್ಟ ಎಂದು ಮೀನುಗಾರರಾದ ನಮಗೆ ಮಾತ್ರ ಗೊತ್ತು ಎಂದು ತಿಳಿಸಿದ್ದಾರೆ.

ಮಾಸೂರ ಮುಖಾಂತರ ಶಶಿಹಿತ್ತಲ ಕಡೆ ಮೀನುಗಾರಿಕೆಗೆ ಬರಬೇಕಾದರೆ 5-6 ಕಿ.ಮೀ. ಸುತ್ತುವರೆದು ಬರಬೇಕಾಗುತ್ತದೆ. ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದ ಬಡ ಮೀನುಗಾರರು ಕಷ್ಟಕ್ಕೆ ಸಿಲುಕಿದ್ದಾರೆ. 15 ದಿನಗಳಿಂದ ಮೀನುಗಾರಿಕೆಗೆ ಹೋಗಲು ಸಹ ಆಗುತ್ತಿಲ್ಲ. ಮಹಿಳೆಯರು ಚಿಪ್ಪಿಕಲ್ಲು ತೆಗೆಯಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಕ್ಷ ಣ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಮಸ್ಯೆ ಪರಿಹಾರಕ್ಕೆ ಈಗಾಗಲೆ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ಜವಾಬ್ದಾರಿಯಿಂದ ಸ್ಪಂದಿಸಿಲ್ಲ. ಶನಿವಾರ ಸಹ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವುದಾಗಿ ತಿಳಿಸಿದ್ದರು, ಆದರೂ ಬಂದಿಲ್ಲ. ಅಧಿಕಾರಿಗಳು ಮೀನುಗಾರರ ಸಮಸ್ಯೆಗಳ ವಿರುದ್ಧ ಚೆಲ್ಲಾಟವಾಡುತ್ತಿದ್ದಾರೆ ಎಂದು ಮೀನುಗಾರರ ಮುಖಂಡ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ ಅಂಬಿಗ ದೂರಿದ್ದಾರೆ.

ಪ್ರತಿಭಟನೆಯಲ್ಲಿ ಅಂಬಿಗ ಸಮಾಜದ ಯಜಮಾನರಾದ ರಾಮಚಂದ್ರ ಅಂಬಿಗ, ಬಾಲಕೃಷ್ಣ ಅಂಬಿಗ, ಮಂಜುನಾಥ ಅಂಬಿಗ, ಮೀನುಗಾರ ಮಹಿಳೆ ಪಾರ್ವತಿ ಅಂಬಿಗ ಅಲ್ಲದೆ ಬೀರಪ್ಪ ಅಂಬಿಗ, ಚಂದ್ರು ಅಂಬಿಗ, ಜಗದೀಶ, ಭರತ, ಗೋವಿಂದ, ಸುಮಂತ, ರಮೇಶ ಮೊದಲಾದ ನೂರಾರು ಜನರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ