ಆ್ಯಪ್ನಗರ

ಉತ್ಸವಗಳಿಂದ ದೇವತಾ ಸಾನ್ನಿಧ್ಯ ವೃದ್ಧಿ

ಯಲ್ಲಾಪುರ : ವರ್ಧಂತಿ ಎಂದರೆ ವರ್ಧಿಸುವುದು, ಬೆಳವಣಿಗೆ ಹೊಂದುವುದು ಎಂದು ಅರ್ಥ. ದೇವಾಲಯಗಳಲ್ಲಿ ನಡೆಯುವ ವರ್ಧಂತಿ ಉತ್ಸವಗಳಿಂದ ದೇವತಾ ಸಾನ್ನಿಧ್ಯ ವೃದ್ಧಿಸುವುದರ ಜತೆ ಸುತ್ತಲಿನ ಪರಿಸರದ ಅಭಿವೃದ್ಧಿ, ಭಕ್ತಾದಿಗಳ ಶ್ರೇಯೋಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರು ಹೇಳಿದರು.

Vijaya Karnataka 28 Apr 2019, 5:00 am
ಯಲ್ಲಾಪುರ : ವರ್ಧಂತಿ ಎಂದರೆ ವರ್ಧಿಸುವುದು, ಬೆಳವಣಿಗೆ ಹೊಂದುವುದು ಎಂದು ಅರ್ಥ. ದೇವಾಲಯಗಳಲ್ಲಿ ನಡೆಯುವ ವರ್ಧಂತಿ ಉತ್ಸವಗಳಿಂದ ದೇವತಾ ಸಾನ್ನಿಧ್ಯ ವೃದ್ಧಿಸುವುದರ ಜತೆ ಸುತ್ತಲಿನ ಪರಿಸರದ ಅಭಿವೃದ್ಧಿ, ಭಕ್ತಾದಿಗಳ ಶ್ರೇಯೋಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜೀಯವರು ಹೇಳಿದರು.
Vijaya Karnataka Web KWR-27 YLP 1


ಅವರು ಶುಕ್ರವಾರ ಪಟ್ಟಣದ ನಾಯಕನಕೆರೆ ಶ್ರೀ ಶಾರದಾಂಬಾ ದೇವಾಲಯದ 8ನೇ ವರ್ಧಂತಿ ಉತ್ಸವದ ಅಂಗವಾಗಿ ದೇವಾಲಯದ ಸಭಾಭವನದಲ್ಲಿ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ತಾಯಿ ಭಗವತಿಯ ಆರಾಧನೆಯಿಂದ ಭೋಗ, ಸ್ವರ್ಗ, ಅಪವರ್ಗ ಎಂಬ ಫಲಗಳು ಸಿಗುತ್ತವೆ. ಭಕ್ತಿಯಿಂದ ಕೈಗೊಂಡ ಪೂಜೆ ಎಂದೂ ವ್ಯರ್ಥವಾಗುವುದಿಲ್ಲ. ಪೂಜೆಯು ಫಲವನ್ನು ಕೊಟ್ಟೇಕೊಡುತ್ತದೆ. ಭೋಗ ಫಲವೆಂದರೆ ಐಹಿಕ ಸಂಪತ್ತು, ಆರೋಗ್ಯ, ಉತ್ತಮ ಸಂತತಿ, ಉದ್ಯೋಗ, ನೆಮ್ಮದಿ ಮುಂತಾದವುಗಳು. ಸ್ವರ್ಗ ಎಂದರೆ ಈ ಶರೀರ ಬಿದ್ದುಹೋದ ನಂತರ ಮುಂದಿನ ಜನ್ಮದ ವರೆಗೆ ಪರಲೋಕದಲ್ಲಿ ಸುಖ, ನೆಮ್ಮದಿಯಿಂದ ಇರುವುದು. ಅಪವರ್ಗ ಎಂದರೆ ಮೋಕ್ಷ ಎಂದರ್ಥ. ಇದು ಸ್ವರ್ಗಕ್ಕಿಂತಲೂ ಮಿಗಿಲಾದದ್ದು, ಸ್ವರ್ಗಕ್ಕಾದರೆ ಕಾಲ ಮಿತಿ ಇದೆ. ಕರ್ಮದ ಪುಣ್ಯ ಕ್ಷೀಣಿಸಿದ ತಕ್ಷ ಣ ಪುನಃ ಜನ್ಮ ತಳೆಯಬೇಕಾಗುತ್ತದೆ. ಆದರೆ ಎಲ್ಲ ಆನಂದಗಳಿಗಿಂತಲೂ ಭಗವಂತನ ಸಮೀಪ ನೆಲೆಸುವ ಮೋಕ್ಷ ದ ಆನಂದ ಹೆಚ್ಚಿನದು. ನವಚಂಡಿ ಹವನ, ಚಂಡಿ ಸಪ್ತಶತಿ ಮುಂತಾದವುಗಳಿಂದ ಅರ್ಥಸಿದ್ಧಿ ಎಂದರೆ ಪ್ರಯೋಜನಗಳು ಖಂಡಿತ ಸಿಗುತ್ತವೆ. ಹೀಗೆ ದೇವರ ಆರಾಧನೆಯಿಂದ ಐಹಿಕ, ಪಾರಲೌಕಿಕ, ಪಾರಮಾರ್ಥಿಕ ಫಲಗಳು ಸಿಗುತ್ತವೆ ಎಂದರು. ಶಾರದಾಂಬಾ ಸನ್ನಿಧಿಯಲ್ಲಿ ಹಲವು ಐತಿಹಾಸಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಪ್ರದೇಶದಲ್ಲಿ ಶ್ರದ್ಧಾವಂತ, ಸುಸಂಸ್ಕೃತ ಸಮಾಜ ಇರುವುದರಿಂದ ಈ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿವೆ. ಇದು ಅಭಿಮಾನದ ಸಂಗತಿಯಾಗಿದೆ ಎಂದರು. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಶಂಕರ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ