ಅಂಕೋಲಾ: ಕನ್ನಡ ಸಾಹಿತ್ಯ ಪರಿಷತ್ನ ಅಂಕೋಲಾ ಘಟಕದ ನೂತನ ಅಧ್ಯಕ್ಷ ಡಾ. ಪ್ರಕಾಶ ನಾಯಕ ಅವರಿಗೆ ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಅಧಿಕಾರ ಹಸ್ತಾಂತರಿಸಿದರು.
ಕನ್ನಡ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೋಪಾಲಕೃಷ್ಣ ನಾಯಕ, ತಮ್ಮ ಅವಧಿಯಲ್ಲಿ ಸಹಕಾರ ನೀಡಿದವರನ್ನು ಸ್ಮರಿಸಿಕೊಂಡು, ಅಂಕೋಲಾ ಸಾಹಿತ್ಯ ಪರಿಷತ್ನ ಮುಂದಿನ ಎಲ್ಲ ಕಾರ್ಯಚಟುವಟಿಕೆಗೆ ಸಹಕಾರ ನೀಡುವುದಾಗಿ ಹೇಳಿದರು.
ನೂತನ ಅಧ್ಯಕ್ಷ ಡಾ.ಪ್ರಕಾಶ ನಾಯಕ, ಕನ್ನಡದ ಚಟುವಟಿಕೆಯನ್ನು ನಗರ ಕೇಂದ್ರಿತವಾಗಿರಸದೇ ಗ್ರಾಮೀಣ ಭಾಗಕ್ಕೂ ವಿಸ್ತರಿಸುವ ಇಂಗಿತ ವ್ಯಕ್ತಪಡಿಸಿದರು.
ಕಾರ್ಯದರ್ಶಿಗಳಾದ ದಾಮೋದರ ನಾಯ್ಕ, ಗೌರೀಶ ನಾಯಕ, ಪದಾಧಿಕಾರಿಗಳಾದ ಎನ್.ವಿ.ನಾಯಕ, ನಾಗೇಂದ್ರ ನಾಯಕ ತೊರ್ಕೆ, ವಿಠ್ಠಲದಾಸ ಕಾಮತ್ ಮಾತನಾಡಿದರು. ವರ್ಷದ ಅವಧಿಯಲ್ಲಿ ಅನೇಕ ಕನ್ನಡಪರ ಮತ್ತು ಸಮಾಜಮುಖಿ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಪ್ರಮುಖರಾದ ಜೇ. ಪೇಮಾನಂದ, ಅರವಿಂದ ನಾಯ್ಕ, ತಿಮ್ಮಣ್ಣ ಭಟ್, ಎಂ.ಎಂ. ಕರ್ಕಿಕರ್, ರಫೀಕ್ ಶೇಖ್, ಮಹೇಶ ನಾಯಕ ಹಿಚ್ಕಡ್ ಇದ್ದರು.