ಆ್ಯಪ್ನಗರ

ಯಲ್ಲಾಪುರದ ಅರಬೈಲು ಘಾಟಿನಲ್ಲಿ ನಡೆದಿದ್ದ ಭಯಾನಕ "ರಾಬರಿ" ಹಿಂದೆ ಕೇರಳದ ಕ್ರಿಮಿಗಳು

ಕೇರಳದ ದಟ್ಟ ಕಾಡಿನ ನಡುವೆ ಕಾಡು ಮಲ್ಲಿಗೆಗಳ ಸುವಾಸನೆ ಅದೆಷ್ಟರ ಮಟ್ಟಿಗೆ ಇದೆಯೋ ಗೊತ್ತಿಲ್ಲ. ಆದ್ರೆ, ಘಮ್ಮೆನ್ನುವ ಗಾಂಜಾ, ಅಫೀಮುಗಳ ಮಾದಕ ಹೊಗೆಯಾಟ ಮಾತ್ರ ನಿತ್ಯ ನಿರಂತರ. ಅದ್ರ ನಡುವೆಯೇ ಇಂತದ್ದೇ ಭಯಾನಕ‌ ದರೋಡೆಗಳಿಗೆ ಹೊ‌ಂಚು ಹಾಕುವ ಖತರ್ನಾಕ ಕ್ರಿಮಿಗಳ ಅಟ್ಟಹಾಸಗಳು ಅಂತದ್ದೇ ಗಾಂಜಾ ಘಮ್ಮತ್ತಿನಲ್ಲಿ ಸ್ಕೆಚ್ಚು ಪಡಿಯುತ್ತವೆ.

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 30 Nov 2022, 12:38 pm

ಹೈಲೈಟ್ಸ್‌:

  • ಅರಬೈಲು ಘಟ್ಟದಲ್ಲಿ ಕೋಟಿ ಕೋಟಿ ಹಣ ರಾಬರಿ ಮಾಡಿದ್ದ ಖತರ್ನಾಕ ನಟೋರಿಯಸ್ ಗ್ಯಾಂಗ್ ಪತ್ತೆ ಹಚ್ಚಿದ್ದಾರೆ
  • ಬೆಳಗಾವಿಯಿಂದ ಯಲ್ಲಾಪುರ ಮಾರ್ಗವಾಗಿ ಕೇರಳಕ್ಕೆ ಚಿನ್ನ ಖರೀದಿಗಾಗಿ ಹೊರಟಿದ್ದವರನ್ನು ಅನಾಮತ್ತಾಗಿ ರಾಬರಿ ಮಾಡಲಾಗಿತ್ತು
  • ಕಾರಲ್ಲಿದ್ದ ಬರೋಬ್ಬರಿ 2 ಕೋಟಿ 11 ಲಕ್ಷದ 86 ಸಾವಿರ ರೂಪಾಯಿ ಹಣ, ಕಾರು ಸಮೇತ ಎಗರಿಸಿ ಪರಾರಿಯಾಗಿದ್ದರು ಖದೀಮರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kerala robbery gang
  • ಸಂತೋಷ ಶೆಟ್ಟೆಪ್ಪನವರ್, ವರದಿ

ಉತ್ತರ ಕನ್ನಡ: ಯಲ್ಲಾಪುರ ಪೊಲೀಸರು ಕಡೆಗೂ ತಮ್ಮ ಜಿದ್ದು ಸಾಧಿಸಿದ್ದಾರೆ. ಅರಬೈಲು ಘಟ್ಟದಲ್ಲಿ ಕೋಟಿ ಕೋಟಿ ಹಣ ರಾಬರಿ ಮಾಡಿದ್ದ ಖತರ್ನಾಕ ನಟೋರಿಯಸ್ ಗ್ಯಾಂಗ್ ಪತ್ತೆ ಹಚ್ಚಿದ್ದಾರೆ. ಇದಕ್ಕಾಗಿ ಬರೋಬ್ಬರಿ ಒಂದು ತಿಂಗಳು, ಇಪ್ಪತ್ತು ದಿನಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ‌. ಥೇಟು ಸಿನಿಮಾ ಸ್ಟೈಲಿನಲ್ಲೇ ನಡೆದಿದ್ಧ ಭಯಾನಕ ರಾಬರಿಯನ್ನು ಅಂತದ್ದೇ ಸಿನಿಮಿಯ ರೀತಿಯಲ್ಲೇ ಟ್ರೇಸ್ ಮಾಡಿದ್ದಾರೆ ನಮ್ಮ‌ ಪೊಲೀಸ್ರು..
ಅವತ್ತು ಅಕ್ಟೋಬರ್ 1.. ನಿಮಗೆ ನೆನಪಿರಲಿ, ಅವತ್ತು ಅಕ್ಟೋಬರ್ ಒಂದನೇ ತಾರೀಕಿನ ಶನಿವಾರ ರಾತ್ರಿ ನಡೆದ ಘಟನೆ ಇದು. ಬೆಳಗಾವಿಯಿಂದ ಯಲ್ಲಾಪುರ ಮಾರ್ಗವಾಗಿ ಕೇರಳಕ್ಕೆ ಚಿನ್ನ ಖರೀದಿಗಾಗಿ ಹೊರಟಿದ್ದವರನ್ನು ಅನಾಮತ್ತಾಗಿ ರಾಬರಿ ಮಾಡಲಾಗಿತ್ತು. ಚಿನ್ನ ಖರೀದಿಗಾಗಿ ಸ್ವಿಪ್ಟ್ ಕಾರಲ್ಲಿ ತೆರಳುತ್ತಿದ್ದ ಬೆಳಗಾವಿಯ ಆ ಇಬ್ಬರೂ ಯಲ್ಲಾಪುರದ ಅರಬೈಲ್ ಘಾಟಿನಲ್ಲಿ ಬರುತ್ತಿದ್ದಂತೆ, ಥೇಟು ಸಿನಿಮಾ ಸ್ಟೈಲಿನಲ್ಲೇ ಎರಡು ಕಾರುಗಳಲ್ಲಿ ಬಂದು ಅಡ್ಡ ಹಾಕಿದ್ದರು ಖದೀಮರು.

ಅಂಕೋಲಾದ ಮಂಜಗುಣಿ ತಡೆಗೋಡೆ ನಿರ್ಮಾಣಕ್ಕೆ 4.5 ಕೋಟಿ ರೂ. ಮಂಜೂರು

ತಕ್ಷಣವೇ ಆರೇಳು ಜನ ದರೋಡೆಕೋರರ ತಂಡ ಏಕಾಏಕಿ ಕಾರಲ್ಲಿದ್ದವರನ್ನು ಹೊರಗೆಳೆದು ಹಲ್ಲೆ ಮಾಡಿತ್ತು. ಹೀಗಾಗಿ, ಅಕ್ಷರಶಃ ದರೋಡೆಕೋರರ ದಾಳಿಗೆ ನಲುಗಿ ಹೋಗಿದ್ದ "ಚಿನ್ನದ ಪಡೆ" ಬದುಕಿದರೆ ಸಾಕು ಅಂತಾ ಬದುಕಿ ಬಂದಿದ್ದರು.

ಹೀಗಾಗಿ, ತಕ್ಷಣವೇ ಕಾರಲ್ಲಿದ್ದ ಬರೋಬ್ಬರಿ 2 ಕೋಟಿ 11 ಲಕ್ಷದ 86 ಸಾವಿರ ರೂಪಾಯಿ ಹಣ, ಕಾರು ಸಮೇತ ಎಗರಿಸಿ ಪರಾರಿಯಾಗಿದ್ದರು ಖದೀಮರು. ಜೊತೆಗೆ ಆ ಇಬ್ಬರ ಮೊಬೈಲ್ ಪೋನ್ ಗಳನ್ನೂ ಕೂಡ ಬಿಡದೇ ದೋಚಿದ್ದರು. ಹೀಗಾಗಿ, ಆ ಇಬ್ಬರೂ ಆಯುಧ ಪೂಜೆಯ ದಿನ ಯಲ್ಲಾಪುರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದರು.

ಅಲರ್ಟ್ ಆದ ಖಾಕಿ..!
ಅಸಲಿಗೆ, ಯಾವಾಗ ಆ ಇಬ್ಬರೂ ಏಕಾಏಕಿ ಹಣ ಕಳೆದುಕೊಂಡು ಠಾಣೆಯ ಮೆಟ್ಟಿಲೇರಿದ್ದರೋ ಆ ಕ್ಷಣವೇ ಯಲ್ಲಾಪುರದ ದಕ್ಷ ಪೊಲೀಸ್ ಪಡೆ ಕಾರ್ಯಾಚರಣೆಗೆ ಇಳಿದಿತ್ತು. ಇಡೀ ರಾಜ್ಯವೇ ದಸರೆಯ ಸಂಭ್ರಮದಲ್ಲಿರುವಾಗ ಯಲ್ಲಾಪುರದ ಚಾಣಾಕ್ಷ ಪೊಲೀಸರು ಮಾತ್ರ ರಾಬರಿ ಪ್ರಕರಣ ಬೆನ್ನತ್ತಿ, ಕಾಡು ಸುತ್ತುತ್ತಿದ್ದರು.

ಹಲವು ಆಯಾಮಗಳಲ್ಲಿ ತನಿಖೆಗಿಳಿದ ಪೊಲೀಸ್ರಿಗೆ ಅವತ್ತೇ ಅದೊಂದು ಕನ್ಫರ್ಮ್ ಆಗಿತ್ತು. ಇಷ್ಟೊಂದು ಭಯಾನಕವಾಗಿ ಥೇಟು ಸಿನಿಮಾ ಸ್ಟೈಲಿನಲ್ಲೆ ನಡೆದಿದ್ದ ರಾಬರಿ, ಬಹುತೇಕ ಪ್ರೊಫೆಶನಲ್ ದರೋಡೆಕೋರರದ್ದೇ ಕೃತ್ಯ ಅನ್ನೋ ಖಚಿತತೆ ಸಿಕ್ಕಿತ್ತು. ಹೀಗಾಗಿ, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ರು, ರಾಬರಿಯ ಅಸಲೀ ಸ್ಟೈಲಿನ ಆಧಾರದಲ್ಲೇ ಖದೀಮರಿಗೆ ಬಲೆ ಬೀಸಿದ್ರು. ರಾಜ್ಯದ ಸುಮಾರು 50 ಟೋಲ್ ನಾಕಾಗಳು ಸೇರಿದಂತೆ ಏನಿಲ್ಲವೆಂದರೂ 100ಕ್ಕೂ ಹೆಚ್ಚು ಸಿಸಿಟಿವಿಗಳನ್ನ ಗೆಬರಿ ಗೆಬರಿ ತಲಾಶ್ ಮಾಡಿದ್ರು‌.

ಹೀಗಾಗಿ, ನಟೋರಿಯಸ್ ದರೋಡೆಕೋರರ ಹೆಜ್ಜೆಗಳ ನಿಗೂಢ ಜಾಡು ಪೊಲೀಸ್ರಿಗೆ ಸಣ್ಣದಾಗಿ ಸುಳಿವು ಕೊಟ್ಟಿತ್ತು. ತಕ್ಷಣವೇ ದೇವರ ನಾಡು ಕೇರಳದತ್ತ ಬಂದು ನಿಂತಿದ್ರು ಯಲ್ಲಾಪುರ ಪೊಲೀಸ್ರು.

Cyber Fraud - ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮಹಿಳೆಗೆ 7 ಲಕ್ಷ ರೂ. ಪಂಗನಾಮ!
ದೇವರ ನಾಡಿನ ರಕ್ಕಸರು..!
ನಿಜ, ದೇವರ ನಾಡು ಅಂತಲೇ ಫೇಮಸ್ಸಾಗಿರೋ ಕೇರಳದಲ್ಲಿ ಖತರ್ನಾಕ ದರೋಡೆಕೋರರ ನಟೋರಿಯಸ್ ರಕ್ಕಸರ ಗ್ಯಾಂಗ್ ಅಡಗಿ ಕುಳಿತಿತ್ತು. ಸಣ್ಣದೊಂದು ಸುಳಿವಿನ ಆಧಾರದಲ್ಲೇ ದಾಳಿ ಇಟ್ಟಿದ್ದ ನಮ್ಮ ಯಲ್ಲಾಪುರದ ಪೊಲೀಸ್ರಿಗೆ ಕೇರಳದ ಪೊಲೀಸ್ರು ಇನ್ನಿಲ್ಲದ ಕಿರಿಕಿರಿ ಮಾಡಿದ್ದರು. ಅದೇನೇ ಇದ್ರೂ ಎಲ್ಲವನ್ನೂ ಮೆಟ್ಟಿ ನಿಂತು ಕ್ರಿಮಿನಲ್ ಗಳ ಅಡ್ಡೆಗೆ ದಾಂಗುಡಿ ಇಟ್ಟ ನಮ್ಮವರಿಗೆ ಮೊದಲ ಕಂತಿನಲ್ಲಿ ಮೂವರು ನಟೋರಿಯಸ್ ಗಳ ತಗಲಾಕ್ಕೊಂಡಿದ್ದಾರೆ.

ಹಾಗೆ ನೋಡಿದ್ರೆ, ಇವತ್ತು ತಗಲ್ಲಾಕೊಂಡಿರೋ ಮೂವರು ಸೈಡ್ ಆ್ಯಕ್ಟರ್ಸ್ ಅಷ್ಟೆ. ಇದರ ಅಸಲೀ ನಾಯಕ ನಟರುಗಳು ಇನ್ನೂ ಇದ್ದಾರೆ. ಇನ್ನೇನು ಅವ್ರ ಹೆಡೆಮುರಿ ಕಟ್ಟಲು ಯಲ್ಲಾಪುರದ ಖಾಕಿ ಪಡೆ ಸನ್ನದ್ದವಾಗಿ ಟೊಂಕ ಕಟ್ಟಿ ನಿಂತಿದೆ.

ಡಿಫರೆಂಟ್ ಗ್ಯಾಂಗ್..!
ಅಂದಹಾಗೆ, ಕೇರಳದ ದಟ್ಟ ಕಾಡಿನ ನಡುವೆ ಕಾಡು ಮಲ್ಲಿಗೆಗಳ ಸುವಾಸನೆ ಅದೆಷ್ಟರ ಮಟ್ಟಿಗೆ ಇದೆಯೋ ಗೊತ್ತಿಲ್ಲ. ಆದ್ರೆ, ಘಮ್ಮೆನ್ನುವ ಗಾಂಜಾ, ಅಫೀಮುಗಳ ಮಾದಕ ಹೊಗೆಯಾಟ ಮಾತ್ರ ನಿತ್ಯ ನಿರಂತರ. ಅದ್ರ ನಡುವೆಯೇ ಇಂತದ್ದೇ ಭಯಾನಕ‌ ದರೋಡೆಗಳಿಗೆ ಹೊ‌ಂಚು ಹಾಕುವ ಖತರ್ನಾಕ ಕ್ರಿಮಿಗಳ ಅಟ್ಟಹಾಸಗಳು ಅಂತದ್ದೇ ಗಾಂಜಾ ಘಮ್ಮತ್ತಿನಲ್ಲಿ ಸ್ಕೆಚ್ಚು ಪಡಿಯುತ್ತವೆ.


ಅದ್ರಲ್ಲೂ ಕೇರಳದ ಮಣಪ್ಪುರಂ, ಪಾಲಕ್ಕಡ್, ಅಲ್ಪುಯಾ, ಜಿಲ್ಲೆಗಳಲ್ಲಿ ಇಂತದ್ದೇ ಮಾದರಿಯ ನೂರಾರು ಜನ ಇದಾರೆ. 50 ರಿಂದ 60 ಗ್ಯಾಂಗ್ ಗಳು ಇವತ್ತಿಗೂ ಆ್ಯಕ್ಟಿವ್ ಆಗಿವೆ. ಅಂತಹ ಒಂದೊಂದು ಗ್ಯಾಂಗ್ ಗಳಲ್ಲಿ ಏನಿಲ್ಲವೆಂದರೂ 20 ರಿಂದ 30 ಜನ ದರೋಡೆಕೋರರಿರ್ತಾರೆ. ಅಸಲು, ಇವರ ಇಂತಹ ಟೀಂ ಗಳ ಮಾಸ್ಟರ್ ಮೈಂಡ್ ದೊಡ್ಡ ವಿಐಪಿಗಳೇ ಆಗಿರ್ತಾರೆ ಅನ್ನೋದು ವಾಸ್ತವ.

ವಿಪರ್ಯಾಸ ಅಂದ್ರೆ, ಇಂತಹ ಮಾಸ್ಟರ್ ಮೈಂಡ್‌ಗಳೇ ಭೂಗತರಾಗಿ ಇಂತಹ ಗ್ಯಾಂಗ್ ಗಳನ್ನು ನಿಯಂತ್ರಿಸ್ತಾರೆ. ಇನ್ನೂ ವಿಚಿತ್ರ ಅಂದ್ರೆ ಇದೆಲ್ಲ ಕೇರಳದ ಸ್ಥಳೀಯ ಪೊಲೀಸರಿಗೂ ಗೊತ್ತಿಲ್ಲದೇ ನಡಿಯೋದೇ ಇಲ್ಲ. ಹೀಗಾಗಿ, ಅಂತಹ ಕ್ರಿಮಿಗಳನ್ನು ಬೇರೆ ರಾಜ್ಯದ ಪೊಲೀಸರು ಬೆನ್ನತ್ತುವುದೇ ದೊಡ್ಡ ಸಾಹಸ. ಹೀಗಾಗಿ, ಈ ಕೇಸಿನ ತನಿಖೆಗಿಳಿದಿದ್ದ ಯಲ್ಲಾಪುರ ಪೊಲೀಸರಿಗೂ ಈ ಕೆಟ್ಟ ಅನುಭವ ಕಾಡಿದೆ.

ಹವಾಲಾ ಹಣವೇ ಟಾರ್ಗೆಟ್..!
ನಿಮಗೆ ಗೊತ್ತಿರಲಿ, ಕೇರಳದ ಈ ಖತರ್ನಾಕ್ ಗ್ಯಾಂಗ್ ಇಷ್ಟೊಂದು ಸಲೀಸಾಗಿ ನಿರ್ಭಿಡೆಯಿಂದ, ನಡೆಸೋ ಅಷ್ಟೂ ರಾಬರಿಗಳೂ ಹವಾಲಾ ಹಣದ ಸುತ್ತಲೇ ಗಿರಕಿ ಹೊಡೆಯತ್ತೆ. ನಿಜ ಅಂದ್ರೆ ಕರ್ನಾಟಕ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಿಂದ ಕೇರಳಕ್ಕೆ ಚಿನ್ನ ಖರೀದಿಗಾಗೇ ಸಾಲು ಸಾಲಾಗಿ ಬಂದಿರ್ತಾರೆ. ಹಾಗೆ ಬರೋ ಅದೇಷ್ಟೋ ಜನ ಮೂಟೆ ಮೂಟೆ ಹವಾಲಾ ಹಣ ಹೊತ್ತು ತಂದಿರ್ತಾರೆ. ಇದೆಲ್ಲ, ಮೊದಲೇ ಕೇರಳದ ತಮ್ಮ‌ ತಮ್ಮ‌ ವ್ಯವಹಾರಸ್ಥರ ಮೂಲಕವೇ ಪೋನ್ ಮುಖಾಂತರ ಬಾತ್ಮಿಗಳು ನಡೆದು ಆಗಿರತ್ತೆ. ನಾನು ಇಷ್ಟು ಕೋಟಿ ಕಳಿಸ್ತಿನಿ, ನೀವು ಇಷ್ಟು ಕೆಜಿ ಚಿನ್ನ ಕಳಿಸಿ ಅನ್ನೋ ವ್ಯವಹಾರಗಳು ಕುದುರಿರತ್ತೆ.

ಹೀಗಾಗಿ, ಇಂತದ್ದೇ ವ್ಯವಹಾರಗಳ‌ ನಡುವೆ ಇರೋ ಭೂಗತ ಲೋಕದ ಕಿಂಗ್ ಪಿನ್ ಗಳಿಗೆ ಒಂದು ಸೂಕ್ಷ್ಮ ಮೆಸೇಜ್ ರವಾನೆ ಆಗಿರತ್ತೆ. ಇಲ್ಲಿಂದ, ಇಷ್ಟೊತ್ತಿಗೆ, ಈ ಮಾರ್ಗವಾಗಿ, ಇಷ್ಟು ಹಣದೊಂದಿಗೆ, ಇಷ್ಟು ಜನ ಬರ್ತಿದಾರೆ ಅನ್ನೋ ಸೂಕ್ಷ್ಮ ಮಾಹಿತಿ ಸಿಕ್ಕು ಬಿಟ್ಟಿರತ್ತೆ. ಆ ಕ್ಷಣವೇ ಭೂಗತ ಮಾಸ್ಟರ್ ಮೈಂಡ್ ತನ್ನ ಅದೀನದಲ್ಲಿರೋ ಗ್ಯಾಂಗ್ ಗೆ ದರೋಡೆಯ ಬ್ಲ್ಯೂ ಪ್ರಿಂಟ್ ಕೊಟ್ಟು ಕಳಿಸಿ ಬಿಡ್ತಾರೆ. ಅಷ್ಟೆ.

ಆ ಖತರ್ನಾಕ ಗ್ಯಾಂಗ್ ಹಣದ ಹಿಂದೆ ಬಿದ್ದು ಹೊಂಚು ಹಾಕಿ ಲಪಟಾಯಿಸಿ ಎಸ್ಕೇಪ್ ಆಗಿರತ್ತೆ. ನಂತರ ಪೊಲೀಸರ ದಾರಿ ತಪ್ಪಿಸಲು ನಾಲ್ಕೈದು ರಾಜ್ಯಗಳನ್ನ ಸುತ್ತಿ ಕೊನೆಗೆ ಪೊಲೀಸರು ಇಡಿಇಡಿಯಾಗಿ ಕೇಸನ್ನೇ ಕೈಚೆಲ್ಲಿ ತಣ್ಣಗಾಗ್ತಾರೋ ಆ ಹೊತ್ತಿಗೆ ಕೇರಳಕ್ಕೆ ಬಂದು ತಲುಪಿರ್ತಾರೆ. ಇದು ಈ ನಟೋರಿಯಸ್ ಗ್ಯಾಂಗ್ ನ ರಾಬರಿ ಸ್ಟೈಲ್..!

ಹ್ಯಾಟ್ಸ್ ಅಪ್ ಎಸ್ಪಿ ಸಾಹೇಬ್ರೇ..!
ಸದ್ಯ, ಹೆಚ್ಚೂ ಕಡಿಮೆ ಒಂದೂವರೇ ತಿಂಗಳಿಂದ ಕೇಸಿನ ಬೆನ್ನು ಬಿದ್ದಿದ್ದ ಯಲ್ಲಾಪುರ ಪೊಲೀಸ್ರಿಗೆ ರಾಬರಿ ಪಡೆಯ ಅಷ್ಟೂ ಹಕೀಕತ್ತುಗಳು ಕಣ್ಣಿಗೆ ಕಟ್ಟಿವೆ. ಹೀಗಾಗಿ, ಜಪ್ಪಯ್ಯ ಅಂದ್ರೂ ಸಣ್ಣದೊಂದು ಸುಳಿವೂ ನೀಡದ ಗ್ಯಾಂಗ್ ನ್ನು ಬೆನ್ನತ್ತಿ ಹೆಡಮುರಿ ಕಟ್ಟಿರೋ ಯಲ್ಲಾಪುರದ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಯಾಕಂದ್ರೆ ಬಹುತೇಕ ಇಂತಹ ಪ್ರಕರಣಗಳು ಹೊರಬರಲಾಗದೇ ಕಣ್ಣು‌ಮುಚ್ಚಿದ್ದೇ ಹೆಚ್ಚು. ಹೀಗಿದ್ದಾಗಲೂ ನಟೋರಿಯಸ್ ಗಳ ಬೆನ್ನತ್ತಿದ ಪೊಲೀಸ್ರು ಮಾಡಿರೋ ಸಾಧನೆ ಅಂತಿಂತದ್ದಲ್ಲ. ಈ ಪ್ರಕರಣದಲ್ಲಿ ಸುಮಾರು 20 ಕ್ಕೂ ಹೆಚ್ಚು ಅಂತರ್ ರಾಜ್ಯ ದರೋಡೆಕೋರರು ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ.. ಸದ್ಯ ಪ್ರಕರಣದಲ್ಲಿ ಕೇರಳದ ಮಹ್ಮದ ಕಬೀರ್ ಮೈನುದ್ದೀನ್ (30), ಸುಭಾಸ್ ಆರ್ ರಾಧಾಕೃಷ್ಣನ್(26) ನಿಮೇಶ , ವಿಜಯ ಕೃಷ್ಣನ್ ಎಂಬುವ ಆರೋಪಿಗಳನ್ನ ಎಳೆದು ತರಲಾಗಿದೆ.

ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಮಹಿಂದ್ರಾ ಮೊರೆಜೋ ಕಾರು, ಮಾರುತಿ ಬ್ರೀಜಾ ಹಾಗೂ ಪಿರಾದಿಯವರಿಂದ ಕದ್ದೊಯ್ದಿದ್ದ ಸ್ವೀಪ್ ವಿ.ಡಿ.ಐ ಕಾರ, ಹಾಗೂ ನಗದು 98.000/- ರೂ ಹಣವನ್ನು ಹೀಗೆ ಒಟ್ಟು 19,98,000/- ಬೆಲೆಯ ಸ್ವತ್ತನ್ನು ಜಪ್ತಿಪಡಿಸಿಕೊಂಡಿದ್ದಾರೆ.

ಉತ್ತರ ಕನ್ನಡ ಎಸ್ಪಿ ವಿಷ್ಣುವರ್ದನ್ ಎನ್, ಶಿರಸಿ ಡಿವೈಎಸ್ಪಿ, ರವಿ ನಾಯ್ಕ್, ಮಾರ್ಗದರ್ಶನದಲ್ಲಿ, ಯಲ್ಲಾಪುರ ಪಿಐ ಸುರೇಶ ಯಳ್ಳೂರ್ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಮಂಜುನಾಥ ಗೌಡ‌, ಅಮೀನಸಾಬ್ ಅತ್ತಾರ, ಪ್ರೊ. ಪಿ.ಎಸ್.ಐ ಉದಯ. ಹಾಗೂ ಸಿಬ್ಬಂದಿಯವರಾದ, ಬಸವರಾಜ ಹಗರಿ, ಮಹ್ಮದ ಶಫೀ, ದೀಪಕ್ ನಾಯ್ಕ್, ಗಜಾನನ ನಾಯ್ಕ್, ಡ್ಯಾನಿ ಫರ್ನಾಂಡೀಸ್, ರಾಜೇಶ್ ನಾಯಕ, ಪರಶುರಾಮ ಕಾಳೆ, ಪ್ರವೀಣ ಪೂಜಾರ, ಚನ್ನಕೇಶವ, ಗಿರೀಶ, ನಂದೀಶ, ಸಕ್ರಪ್ಪ, ಶೇಷು, ವಿಜಯ ಹಾಗೂ ಮಹಿಳಾ ಸಿಬ್ಬಂದಿ ಶೋಭಾ ನಾಯ್ಕ, ಹಾಗೂ ಸಿ.ಡಿ.ಆರ್ ಸೆಲ್ ವಿಭಾಗದ ಉದಯ, ರಮೇಶ ಹಾಗೂ ಮಡಿಕೇರಿ ಜಿಲ್ಲೆಯ ಸಿಬ್ಬಂದಿಯವರಾದ ಯೋಗೇಶ ಇವರು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾರ್ಯಾಚರಣೆಯಲ್ಲಿದ್ದ ಎಲ್ಲಾ ಪೊಲೀಸರಿಗೂ ನಮ್ಮದೊಂದು ಬಿಗ್ ಸೆಲ್ಯೂಟ್.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ