ಆ್ಯಪ್ನಗರ

ಸಾಹಿತ್ಯದಿಂದ ಮನುಷ್ಯನ ಯಾತನೆ ದೂರ

ಶಿರಸಿ : ಮನುಷ್ಯನ ಯಾತನೆಯನ್ನು ಕಡಿಮೆ ಮಾಡುವುದು ಸಾಹಿತ್ಯದ ಮೂಲಭೂತ ಆಶಯವಾಗಿದೆ ಎಂದು ಹೆಸರಾಂತ ಕವಿ ಜಯಂತ ಕಾಯ್ಕಿಣಿ ಹೇಳಿದರು.

Vijaya Karnataka 23 Jun 2019, 5:00 am
ಶಿರಸಿ : ಮನುಷ್ಯನ ಯಾತನೆಯನ್ನು ಕಡಿಮೆ ಮಾಡುವುದು ಸಾಹಿತ್ಯದ ಮೂಲಭೂತ ಆಶಯವಾಗಿದೆ ಎಂದು ಹೆಸರಾಂತ ಕವಿ ಜಯಂತ ಕಾಯ್ಕಿಣಿ ಹೇಳಿದರು.
Vijaya Karnataka Web mans distress away from literature
ಸಾಹಿತ್ಯದಿಂದ ಮನುಷ್ಯನ ಯಾತನೆ ದೂರ


ನಗರದ ನಯನ ಸಭಾಂಗಣದಲ್ಲಿ ಸ್ವಸ್ತಿ ಪ್ರಕಾಶನ ಕುಮಟಾ ಹಾಗೂ ನಯನ ಫೌಂಡೇಶನ್‌ ಸಹಯೋಗದಲ್ಲಿ ಶನಿವಾರ ಸಂಜೆ ಸಂಘಟಿಸಿದ್ದ ಕವಿ ರಮೇಶ ಹೆಗಡೆ ಅವರ ''ಒಲವ ಸೊಲ್ಲನು ದಾಟಿ ಗಝಲ್‌'' ಸಂಕಲನ ಅನಾವರಣಗೊಳಿಸಿ ಅವರು ಮಾತನಾಡಿದರು.

ಸಾಹಿತ್ಯದಂತೆ ವೈದ್ಯಕೀಯ ಕ್ಷೇತ್ರದ ಆಶಯವೂ ಇದೇ ಆಗಿದೆ ಎಂದರು.

ವಿಕಲತೆಯ ಮಧ್ಯೆಯೂ ಜೀವನ್ಮುಖಿಯಾಗಿದ್ದ ರಮೇಶ ಹೆಗಡೆ ಜಗದ ಮೇಲೆ ಚೇತನ ಸಾರಿದ್ದರು. ದೈಹಿಕ, ಐಹಿಕವಾಗಿ ಅವರಿಲ್ಲದಿದ್ದರೂ ಅವರ ಕಾವ್ಯ ಶರೀರ ಚಿರಂತನವಾದುದು ಎಂದರು.

ಕವಿತೆಗಳನ್ನು ಬರೆಯುವವರ ಸಂಖ್ಯೆ ಇದ್ದರೂ ಕೇಳುವವರ, ಓದುವವರ ಸಂಖ್ಯೆ ಇಂದು ಕಡಿಮೆಯಿದೆ. ಜತೆಯಲ್ಲಿ ಸಾಕಷ್ಟು ಕವಿತೆಗಳಲ್ಲಿ ಕಪೋಲಕಲ್ಪಿತ ಸಂಗತಿಗಳೇ ಹೆಚ್ಚು. ಅದರ ಹೊರ ಜಗತ್ತು ಕಾಣುವುದೇ ಇಲ್ಲ. ಆದರೆ ರಮೇಶ ಅವರ ಕವಿತೆಯಲ್ಲಿ ಈ ಪ್ರಲಾಪ ಸಿಗುವುದಿಲ್ಲ. ಅವರು ಚೈತನ್ಯ ಶಕ್ತಿ ಹಿಗ್ಗಿಸಿಕೊಂಡು ಶರೀರದಾಚೆ ದಾಟಿ ಬರೆದಿದ್ದರು. ಕಲ್ಪಿತ ಲೋಕವನ್ನು ನಿಜವಾಗಿಸಿ ಧನಾತ್ಮಕವಾಗಿ ಬರವಣಿಗೆ ಮಾಡುತ್ತಿದ್ದರು ಎಂದರು.

ಮನುಷ್ಯ ಸಮಾಜದಲ್ಲಿ ವಿಶಾಲ ಮನೋಭಾವನೆಯಿಂದ ಬದುಕುವುದನ್ನು ಕಲಿಯಬೇಕು. ತನ್ನನ್ನು ಮೀರಿ ಬೇರೆಯವರಿಗೆ ಏನು ಉಪಕಾರ ಮಾಡಿದ್ದೇನೆ ಎಂಬುದನ್ನು ಆತ್ಮಾವಲೋಕನ ಮಾಡಬೇಕು. ಒಳ್ಳೆಯ ಸಾಹಿತ್ಯ ಓದುವ ಮೂಲಕ ಅಮೂಲ್ಯ ಸಮಯದ ಸದುಪಯೋಗಪಡಿಸಿಕೊಳ್ಳಬೇಕು. ಮನಸ್ಸನ್ನು ಹಿಗ್ಗಿಸುವ ಕಾವ್ಯ, ಕಥೆ, ಸಾಹಿತ್ಯ ರಚನೆಯಲ್ಲಿ ತೊಡಬೇಕು. ವಿಶ್ವವನ್ನು ಪ್ರೀತಿಸುವ ಶಕ್ತಿ ಮನಸ್ಸು ಹೊಂದಬೇಕು ಎಂದರು.

ಸಾಹಿತಿ ಶ್ರೀಧರ ಬಳಗಾರ ಮಾತನಾಡಿ, ಕವಿ ರಮೇಶ ಹೆಗಡೆ ಕಾವ್ಯದ ಯಾವುದೇ ಪ್ರಕಾರ ರಚನೆ ಮಾಡುವಾಗಲು ಸಿದ್ಧತೆ ಇರುತ್ತಿತ್ತು. ಅವರ ಕಾವ್ಯದಲ್ಲಿ ಛಂದಸ್ಸು ಪ್ರಯೋಗಾತ್ಮಕವಾಗಿ ಗುರುತಿಸಿಕೊಂಡಿದೆ. ಅದು ಅವರು ರಚಿತ ಗಝಲ್‌ ಓದಿದಾಗ ಅರ್ಥವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರಮೇಶ ಹೆಗಡೆ ನೆನಪಿನಲ್ಲಿ ಅವರು ರಚಿತ ಕವಿತೆಗಳನ್ನು ಹಲವರು ವಾಚಿಸಿದರು. ಡಾ.ಶಿವರಾಮ ಕೆ.ವಿ, ರಾಜೇಶ ಹೆಗಡೆ, ರಾಘವೇಂದ್ರ ಮಾಸ್ಕೇರಿ ಮುಂತಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ