ಆ್ಯಪ್ನಗರ

ಮುಂಡಗೋಡ: ಪಕ್ಷಿಧಾಮದಲ್ಲಿ ದೇಶ, ವಿದೇಶಗಳ ಹಕ್ಕಿಗಳ ಕಲರವ

ಪಕ್ಷಿಧಾಮದ ಬಳಿಯಿರುವ ಜಲಾಶಯದ ನಡುಗಡ್ಡೆಗಳಲ್ಲಿ ಹಾಗೂ ಸುತ್ತಲಿನ ದಟ್ಟ ಅರಣ್ಯದಲ್ಲಿನ ಮರಗಳಲ್ಲಿ ಗೂಡು ಕಟ್ಟಿಕೊಂಡು ವಂಶಾಭಿವೃದ್ಧಿಗೊಳಿಸಿಕೊಂಡು ನಂತರ ಮರಿಗಳೊಂದಿಗೆ ಮಾರ್ಚ್ ತಿಂಗಳ ಅವಧಿಗೆ ವಿದೇಶಕ್ಕೆ ಮರಳುತ್ತವೆ.

Vijaya Karnataka Web 30 Nov 2020, 11:23 pm
ಮುಂಡಗೋಡ: ಸೂರ್ಯ ಉದಯಿಸುವ ಮುನ್ನವೇ ಹಕ್ಕಿಗಳ ಚಿಲಿಪಿಲಿ.. ಎತ್ತ ನೋಡಿದರು ಅತ್ತ ದೇಶ, ವಿದೇಶ ಪಕ್ಷಿಗಳ ಕಲರವ.. ನೋಡುಗರ ಕಣ್ಣಿಗೆ ಹಬ್ಬ..
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಇಂಥ ಸನ್ನಿವೇಶ ತಾಲೂಕಿನ ಅತ್ತೀವೇರಿ ಪಕ್ಷಿಧಾಮದಲ್ಲಿ ಕಂಡು ಬರುತ್ತಿದೆ. ಇಲ್ಲಿದೇಶ, ವಿದೇಶಗಳಿಂದ ಹಲವಾರು ಬಗೆಯ ಪಕ್ಷಿಗಳು ಆಗಮಿಸಿ ಬೀಡು ಬಿಟ್ಟಿರುವುದು ಪಕ್ಷಿ ಪ್ರಿಯರಿಗೆ ಸಂತಸ ತಂದಿದೆ.

ತಾಲೂಕಿನ ಹುನಗುಂದ ಗ್ರಾ.ಪಂ. ವ್ಯಾಪ್ತಿಯ ಅತ್ತಿವೇರಿ ಗ್ರಾಮದ ಸಮೀಪ ಪಕ್ಷಿಧಾಮವಿದ್ದು ಹಲವಾರು ದಶಕಗಳಿಂದಲೂ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿದೇಶ, ವಿದೇಶದ ನೂರಾರು ಬಗೆಯ ಪಕ್ಷಿಗಳು ವಲಸೆ ಬಂದು ವಂಶಾಭಿವೃದ್ಧಿ ಮಾಡಿಕೊಂಡು ಬೇಸಿಗೆ ವೇಳೆಗೆ ಮರಳುವುದು ಸಾಮಾನ್ಯವಾಗಿದೆ. ಈ ಬಾರಿಯೂ ಪಕ್ಷಿಗಳು ಆಗಮಿಸಿದ್ದು ಇವುಗಳನ್ನು ನೋಡಲು ಸುತ್ತಮುತ್ತಲಿನ ತಾಲೂಕುಗಳ ಜನರು ಪಕ್ಷಿಧಾಮದತ್ತ ಬರುತ್ತಿದ್ದಾರೆ.

ಯಾವ್ಯಾವ ಪಕ್ಷಿಗಳು..

ಸೂಜಿ ಬಾಲದ ಬಾತುಕೋಳಿ, ಸಲಿಕೆ ಚುಂಚಿನ ಬಾತುಕೋಳಿ, ನೀಲಿ ರೆಕ್ಕೆಯ ಬಾತುಕೋಳಿ, ಸಾಮನ್ಯ ಬಾತುಕೋಳಿ, ಜಾಗು ಸೆಳವ, ಮತ್ಸತ್ರ್ಯಭಕ್ಷಕ ಗಿಡುಗ, ಚಕೋರ, ಉಂಗುರದ ಕೆಸರುಗೊರವ, ಕೆಂಟಿಷ್‌ಗೊರವ, ಸಾಮಾನ್ಯ ಗ್ರೀನ್‌ಶಾಂಕ್‌, ವರಟೆ ದೇವನಕ್ಕಿ, ಚಮಚಕೊಕ್ಕರೆ, ಸಣ್ಣಸ್ಟಿಂಟ್‌, ಬೀಸಣಿಕೆ ಬಾಲದ ಸ್ನೆತ್ರೖಪ್‌, ಬೂದುಖಂಜನ, ಬಿಳಿಖಂಜನ, ಹಳದಿಖಂಜನ, ಕರಿಕೊಕ್ಕರೆ, ಜಾತಕಪಕ್ಷಿ, ಗುಲಾಬಿಮೈನಾ, ಹಸಿರುಮರಳು ಪೀಪಿ ಹೀಗೆ 50 ಕ್ಕೂ ಹೆಚ್ಚು ಬಗೆಯ ಪಕ್ಷಿಗಳು ಆಗಮಿಸುತ್ತವೆ.

ಅತ್ತೀವೇರಿ ಪಕ್ಷಿಧಾಮದ ಬಳಿಯ ಜಲಾಶಯದಲ್ಲಿಈ ವರ್ಷ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಿದೆ. ಹೊರ ಭಾಗದಿಂದ ಪಕ್ಷಿಗಳು ಆಗಮಿಸುತ್ತಿವೆ. ಸದ್ಯ ಹಲವು ಬಗೆಯ ಪಕ್ಷಿಗಳು ಆಗಮಿಸಿವೆ. ಮತ್ತಷ್ಟು ಬಗೆಯ ಪಕ್ಷಿಗಳು ಆಗಮಿಸುವ ಸಾಧ್ಯತೆಗಳಿವೆ.ಈ ಪಕ್ಷಿಗಳು ಪ್ರವಾಸಿಗರನ್ನು ಆರ್ಕರ್ಷಿಸುತ್ತಿವೆ.
ಎಸ್‌.ಎಂ.ವಾಲಿ, ಎಸಿಎಫ್‌ ಮುಂಡಗೋಡ

ಅಕ್ಟೋಬರ್‌ ತಿಂಗಳಿಂದ ಪಕ್ಷಿಧಾಮಕ್ಕೆ ಆಗಮಿಸುವ ದೇಶ ವಿದೇಶ ಪಕ್ಷಿಗಳು ಮಾರ್ಚ್ ತಿಂಗಳವರೆಗೂ ಇಲ್ಲಿಯೇ ಬೀಡು ಬಿಡುತ್ತವೆ. ಪಕ್ಷಿಧಾಮದ ಬಳಿಯಿರುವ ಜಲಾಶಯದ ನಡುಗಡ್ಡೆಗಳಲ್ಲಿ ಹಾಗೂ ಸುತ್ತಲಿನ ದಟ್ಟ ಅರಣ್ಯದಲ್ಲಿನ ಮರಗಳಲ್ಲಿ ಗೂಡು ಕಟ್ಟಿಕೊಂಡು ವಂಶಾಭಿವೃದ್ಧಿಗೊಳಿಸಿಕೊಂಡು ನಂತರ ಮರಿಗಳೊಂದಿಗೆ ಮಾರ್ಚ್ ತಿಂಗಳ ಅವಧಿಗೆ ವಿದೇಶಕ್ಕೆ ಮರಳುತ್ತವೆ. ಚಳಿಗಾಲ ಸಮಯದಲ್ಲಿ ಈ ಹಕ್ಕಿಗಳು ಇಲ್ಲಿಗೆ ಆಗಮಿಸುವ ವಂಶಾಭಿವೃದ್ಧಿಗೊಳಿಸುವುದು ಸಾಮಾನ್ಯವಾಗಿದೆ.

ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆ

ಜಲಾಶಯದಲ್ಲಿ ನೀರು ಸಂಗ್ರಹವಿರುವುದರಿಂದ ಹಾಗೂ ದೇಶ ವಿದೇಶಗಳ ಪಕ್ಷಿಗಳು ಆಗಮಿಸಿರುವ ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗುತ್ತಿದೆ. ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಶಿಗ್ಗಾವಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳಿಂದ ಪಕ್ಷಿಗಳನ್ನು ವೀಕ್ಷಿಸಲು ಜನರು ಆಗಮಿಸುತ್ತಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿಕಾಣಸಿಗುತ್ತವೆ.

ಜಲಾಶಯದಲ್ಲಿ ನೀರು

ಈ ಬಾರಿ ಸಾಕಷ್ಟು ಪ್ರಮಾಣ ಮಳೆಯಾದ ಕಾರಣ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಇದರಿಂದ ನಡುಗಡ್ಡೆಗಳಲ್ಲಿರುವ ಹಲವಾರು ಗಿಡಗಳಲ್ಲಿಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಕಾಣಸಿಗುತ್ತಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಆಗಮಿಸುತ್ತಿರುವುದು ನೋಡುಗರಿಗೆ ಸಂತಸವುಂಟು ಮಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ