ಆ್ಯಪ್ನಗರ

ಓಮಿಕ್ರಾನ್ ಆತಂಕ: ಭಟ್ಕಳ, ಕಾರವಾರದ ಗಡಿಯಲ್ಲಿ ಈ ರಾಜ್ಯದವರಿಗೆ ಆರ್.ಟಿ- ಪಿಸಿಆರ್ ಕಡ್ಡಾಯ!

ಗೋವಾ ಗಡಿಯ ಮೂಲಕ ಕಾರವಾರ ಪ್ರವೇಶಿಸುವ ಎಲ್ಲಾ ವಾಹನಗಳ ತಪಾಸಣೆ ನಡೆಸುತ್ತಿರುವ ಕರ್ನಾಟಕದ ಪೊಲೀಸರು, ಮಹಾರಾಷ್ಟ್ರದ ಪ್ರಯಾಣಿಕರಿಗೆ ಡಬಲ್ ಡೋಸ್ ಕೋವಿಡ್ ಲಸಿಕೆ ಅಥವಾ ಆರ್.ಟಿ- ಪಿಸಿಆರ್‌ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿರುವುದನ್ನು ಖಚಿಪಡಿಸಿಕೊಂಡು ಒಳ ಬಿಡುತ್ತಿದ್ದಾರೆ

Vijaya Karnataka Web 30 Nov 2021, 2:54 pm
ಕಾರವಾರ: ರಾಜ್ಯದಲ್ಲಿ ಓಮಿಕ್ರಾನ್ ಕೋವಿಡ್ ರೂಪಾಂತರದ ಆತಂಕ ಎದುರಾಗಿದ್ದು, ಕೇರಳ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ನಿಗಾ ವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ಅದರಂತೆ ಮಹಾರಾಷ್ಟ್ರದೊಂದಿಗೆ ಹೊಂದಿಕೊಂಡಿರುವ ಗೋವಾ- ಕರ್ನಾಟಕ ಗಡಿಯಿರುವ ಉತ್ತರ ಕನ್ನಡದಲ್ಲೂ ನಿಯಮಗಳನ್ನು ಇದೀಗ ಕೊಂಚ ಬಿಗುಗೊಳಿಸಲಾಗಿದೆ.
Vijaya Karnataka Web ಕೊರೊನಾ ವೈರಸ್
ಸಾಂದರ್ಭಿಕ ಚಿತ್ರ


ಜಗದ್ವಿಖ್ಯಾತ ಪ್ರವಾಸಿ ತಾಣವಾದ ಗೋವಾ ರಾಜ್ಯ ಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕಾರಣ ಹಾಗೂ ಜಿಲ್ಲೆ ಕೂಡ ಸಾಕಷ್ಟು ಪ್ರವಾಸಿ ತಾಣಗಳನ್ನು, ಕಡಲತೀರಗಳನ್ನು ಹೊಂದಿರುವುದರಿಂದ ಪ್ರತಿದಿನ ಸಾವಿರಾರು ಹೊರ ಜಿಲ್ಲೆ, ಹೊರ ರಾಜ್ಯದ ಪ್ರವಾಸಿಗರು ಉತ್ತರ ಕನ್ನಡದ ಮೂಲಕ ಹಾದು ಹೋಗುತ್ತಿರುತ್ತಾರೆ. ಅಲ್ಲದೇ ಇಷ್ಟು ದಿನಗಳ ಕಾಲ ಕೋವಿಡ್ ಸೋಂಕು ಕಡಿಮೆಯಾಗಿದೆ ಎಂದು ಕೋವಿಡ್ ಮಾರ್ಗಸೂಚಿಗಳ ಬಗ್ಗೆ, ನಿಯಮಗಳ ಬಗ್ಗೆ ತಲೆಕೆಡಿಸಿಕೊಳ್ಳದಿದ್ದರಿಂದ ಕರ್ನಾಟಕ- ಗೋವಾ ಗಡಿಯಲ್ಲಿ ವಾಹನಗಳ ಸಂಚಾರವೂ ಸುಗಮವಾಗಿತ್ತು. ಕರ್ನಾಟಕದ ಗಡಿಯಾದ ಕಾರವಾರ ತಾಲೂಕಿನ ಮಾಜಾಳಿ ಗಡಿಯಲ್ಲಿ ಅಬಕಾರಿ ತಪಾಸಣೆ ಮಾತ್ರ ಎಂದಿನಂತಿತ್ತು. ಆದರೆ ಗೋವಾ ಗಡಿಯಾದ ಪೊಳೆಮ್ ಚೆಕ್ ಪೋಸ್ಟ್ ನಲ್ಲಿ ಅಲ್ಲಿಯ ಪೊಲೀಸರು ಗೋವಾ ಹೊರತುಪಡಿಸಿ ಬೇರೆ ರಾಜ್ಯಗಳಿಂದ ಬರುವವರಿಗೆ ಕೋವಿಡ್ ಡಬಲ್ ಡೋಸ್ ಪ್ರಮಾಣಪತ್ರ ಹೊಂದಿರುವುದನ್ನು ತಪಾಸಣೆ ಮಾಡಿ ಬಿಡುತ್ತಿದ್ದರು. ಈಗ ಓಮಿಕ್ರಾನ್ ಆತಂಕ ಶುರುವಾಗುತ್ತಲೇ ಕರ್ನಾಟಕದ ಮಾಜಾಳಿ ಗಡಿಯಲ್ಲೂ ತಪಾಸಣೆ ಬಿಗಿಯಾಗಿದೆ.

ಗೋವಾ ಗಡಿಯ ಮೂಲಕ ಕಾರವಾರ ಪ್ರವೇಶಿಸುವ ಎಲ್ಲಾ ವಾಹನಗಳ ತಪಾಸಣೆ ನಡೆಸುತ್ತಿರುವ ಕರ್ನಾಟಕದ ಪೊಲೀಸರು, ಮಹಾರಾಷ್ಟ್ರದ ಪ್ರಯಾಣಿಕರಿಗೆ ಡಬಲ್ ಡೋಸ್ ಕೋವಿಡ್ ಲಸಿಕೆ ಅಥವಾ ಆರ್.ಟಿ- ಪಿಸಿಆರ್‌ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯವಾಗಿ ಹೊಂದಿರುವುದನ್ನು ಖಚಿಪಡಿಸಿಕೊಂಡು ಒಳ ಬಿಡುತ್ತಿದ್ದಾರೆ. ಈ ಹಿಂದೆಯೇ ನಿರ್ಮಿಸಿದ್ದ ಕೋವಿಡ್ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯೂ ಇದ್ದು, ಪ್ರಯಾಣಿಕರನ್ನು ತಪಾಸಣೆಗೈದು ಪ್ರಯಾಣಿಕರ ಮಾಹಿತಿಗಳನ್ನು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪೆನ್ನೇಕರ್ ಮಾತನಾಡಿದ್ದು, ಜಿಲ್ಲೆಯ ಭಟ್ಕಳ ಹಾಗೂ ಕಾರವಾರದ ಗಡಿಯಲ್ಲಿ ನಿಯಮ ಬಿಗಿಗೊಳಿಸಲಾಗಿದೆ. ಭಟ್ಕಳದ ಚೆಕ್ ಪೋಸ್ಟ್ ನಲ್ಲಿ ಕೇರಳದಿಂದ ಬರುವವರನ್ನು ಹಾಗೂ ಕಾರವಾರದಲ್ಲಿ ಮಹಾರಾಷ್ಟ್ರದಿಂದ ಬರುವವರಿಗೆ ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ. ಇತ್ತೀಚಿಗೆ ಜನರು ಕೋವಿಡ್ ಕಡಿಮೆಯಾಗಿದೆಯೆಂದು ರಿಲ್ಯಾಕ್ಸ್ ಆಗಿದ್ದರು. ಇನ್ಮುಂದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರಿಗೆ ಸರ್ಕಾರದ ಸೂಚನೆಯಂತೆ 72 ಗಂಟೆಗಳ ಒಳಗೆ ಪಡೆದಿರುವ ಆರ್.ಟಿ- ಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯವಾಗಿದೆ. ನಮ್ಮ ಜಿಲ್ಲೆಗೆ ಈ ಎರಡೂ ರಾಜ್ಯಗಳ ಗಡಿಯಿಲ್ಲ, ಆದರೂ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್ ಪರೀಕ್ಷಾ ವರದಿ ಇಲ್ಲದವರು ವಾಪಸ್ಸು ಹೋಗಬೇಕು ಹೊರತು ನಮ್ಮಿಂದ ಗಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಒಟ್ಟಾರೆಯಾಗಿ 'ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ' ಎಂಬಂತೆ, ಇಷ್ಟು ದಿನ ಕೋವಿಡ್ ಹೋಗೇಬಿಟ್ಟಿತ್ತು ಎಂದುಕೊಂಡಿದ್ದ ಜನತೆಗೆ ಹೊಸ ವರ್ಷದ ಹೊಸ್ತಿಲಲ್ಲಿರುವಾಗ ಇದೀಗ ಮತ್ತೆ ಓಮಿಕ್ರಾನ್ ಎಂಬ ರೂಪಾಂತರಿಯಿಂದಾಗಿ ಆತಂಕಕ್ಕೊಳಗಾಗುವಂತಾಗಿದೆ. ಜನರು ಕೂಡ ಈ ಮೊದಲಿನಂತೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸ್ವಯಂಪ್ರೇರಿತರಾಗಿ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಿ ಓಮಿಕ್ರಾನ್ ಅಥವಾ ಕೊರೊನಾದಿಂದ ದೂರವುಳಿಯಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ