ಕಾರವಾರ: ಸಣ್ಣ ಪುಟ್ಟ ವ್ಯಾಪಾರಿಗಳು, ಗ್ರಾಮೀಣ ಭಾಗದ ಜನ ಸೇರಿದಂತೆ ಸಾರ್ವಜನಿಕರಿಗೆ ನಗದು ರಹಿತ ವಹಿವಾಟಿನ ಕುರಿತು ಮಾಹಿತಿ ನೀಡಲು ಬಿಜೆಪಿ ಯುವ ಮೋರ್ಚಾದಿಂದ ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಅವರು ಇತ್ತೀಚೆಗೆ ಬೀದರ್ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಪ್ರತಾಪ್ ಸಿಂಹ ಉತ್ತರ ಕರ್ನಾಟಕ ಭಾಗದಲ್ಲಿ ಹಾಗೂ ನಾನು ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಅಭಿಯಾನದ ನೇತೃತ್ವ ವಹಿಸಿದ್ದೇವೆ ಎಂದರು.
ಕೇಂದ್ರ ಸರಕಾರದ ನೋಟು ರದ್ದಿನ ಕ್ರಮದಿಂದ ಹವಾಲಾ ದಂಧೆ, ನಕ್ಸಲ್, ಉಗ್ರಗಾಮಿ ಚಟುವಟಿಕೆಗಳ ಮೇಲೆ ಮರ್ಮಾಘಾತವಾಗಿದೆ. ತೆರಿಗೆ ಕಳ್ಳರು ಸಿಕ್ಕಿ ಬೀಳುತ್ತಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆಗೊಳ್ಳಲಿದೆ. ಸಾರ್ವಜನಿಕರು ತಮಗಾಗುತ್ತಿರುವ ತಾತ್ಕಾಲಿಕ ತೊಂದರೆ ಬದಿಗಿಟ್ಟು ಈ ಕ್ರಮ ಸ್ವಾಗತಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಗದು ರಹಿತ ವಹಿವಾಟಿನಿಂದ ಮಾತ್ರ ಹಣ ಚಲಾವಣೆ ಪಾರದರ್ಶಕವಾಗಲಿದೆ. ಸರಕಾರಕ್ಕೆ ಬರುವ ಆದಾಯದಲ್ಲಿ ಮೋಸವಾಗದಿರಲು ನಗದು ಡಿಜಿಟಲ್ ವಹಿವಾಟಿನಿಂದ ಸಾಧ್ಯವಾಗುತ್ತದೆ. ಕೇಂದ್ರ ಸರಕಾರ ಡಿಜಿಟಲ್ ವಹಿವಾಟಿಗೆ ಆದ್ಯತೆ ನೀಡಿದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ವಹಿವಾಟಿನ ಬಗೆಗೆ ಜನರಿಗೆ ಸಂಪೂರ್ಣ ಮಾಹಿತಿ ನೀಡಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಗುರುಪ್ರಸಾದ ಹೆಗಡೆ, ಅನೀಲ್ ಮುತ್ನಾಳೆ, ಹನುಮಂತ ಬಿರಾದಾರ್, ಮಂಜುನಾಥ ಜನ್ನು, ಫಯಾಜ್, ರೋಶನ್ ವೆರ್ಣೇಕರ್, ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ ನಾಯ್ಕ, ಮನೋಜ ಭಟ್ ಇತರರು ಇದ್ದರು.
ಚುನಾವಣೆಯಲ್ಲಿ ಅರ್ಹ,ಯುವಕರಿಗೆ ಆದ್ಯತೆ: ಚುನಾವಣೆ ಸಮಯದಲ್ಲಿ ಹಣ ಮತ್ತು ಜಾತಿ ಬಲ ಉಳ್ಳವರಿಗೆ ಮಾತ್ರ ಮಣೆ ಹಾಕುವ ಸಂಪ್ರದಾಯ ಎಲ್ಲ ಪಕ್ಷಗಲ್ಲೂ ಬೆಳೆದುಬಂದಿದೆ. ಆದರೆ ಬಿಜೆಪಿಯಲ್ಲಿ ಈ ಸಂಪ್ರದಾಯ ಮುರಿದು ಅರ್ಹರಿಗೆ ಮತ್ತು ಯುವಕರಿಗೆ ಆದ್ಯತೆ ನೀಡುವಂತೆ ಹಿರಿಯ ಮುಖಂಡರನ್ನು ಯುವ ಮೋರ್ಚಾ ಆಗ್ರಹಿಸಲಿದೆ. ರಾಜಕೀಯ ಪಕ್ಷಗಳೂ ಆರ್ಟಿಐ ಕಾಯ್ದೆಗೆ ಒಳಪಡಬೇಕು ಬಗೆಗೆ ಪಕ್ಷದ ಆಂತರಿಕ ವಲಯದಲ್ಲಿ ಈಗಾಗಲೇ ಚರ್ಚೆಯಾಗಿದೆ ಎಂದು ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದರು.