ಆ್ಯಪ್ನಗರ

ವೃದ್ಧಾಪ್ಯ, ವಿಧವಾ ವೇತನ ಸಿಗದೇ ಪರದಾಟ

ಅಂಕೋಲಾ : ಬಡವರಿಗೆ ಆಧಾರವಾಗಿದ್ದ ವೃದ್ಧಾಪ್ಯ ವೇತನ, ವಿಧವಾ ವೇತನ ದೊರೆಯದೇ ಫಲಾನುಭವಿಗಳು ಸಂಬಂಧಿಸಿದ ಇಲಾಖೆಯ ಕಚೇರಿಗಳನ್ನು ಸುತ್ತಾಡುವಂತಾಗಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕಾದ ಅಗತ್ಯತೆ ಇಲಾಖೆಗಳ ಮೇಲಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.

Vijaya Karnataka 11 Jul 2019, 5:00 am
ಅಂಕೋಲಾ : ಬಡವರಿಗೆ ಆಧಾರವಾಗಿದ್ದ ವೃದ್ಧಾಪ್ಯ ವೇತನ, ವಿಧವಾ ವೇತನ ದೊರೆಯದೇ ಫಲಾನುಭವಿಗಳು ಸಂಬಂಧಿಸಿದ ಇಲಾಖೆಯ ಕಚೇರಿಗಳನ್ನು ಸುತ್ತಾಡುವಂತಾಗಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕಾದ ಅಗತ್ಯತೆ ಇಲಾಖೆಗಳ ಮೇಲಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.
Vijaya Karnataka Web old age widow
ವೃದ್ಧಾಪ್ಯ, ವಿಧವಾ ವೇತನ ಸಿಗದೇ ಪರದಾಟ


ಅವರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ನಿರ್ಗತಿಕರ ಪಾಲಿಗೆ ಬೆಳಕಾಗಿರುವ ವೃದ್ಧಾಪ್ಯ ವೇತನ, ವಿಧವಾ ವೇತನ ಬಾರದೇ ಅವರಿವರ ಬಳಿ ಕೈಚಾಚುವಂತಾಗಿದೆ. ಹಲವರ ಆರೋಗ್ಯದ ಖರ್ಚಿಗೂ ಅನುಕೂಲವಾಗಿರುತ್ತಿದ್ದ ಮಾಸಿಕ ವೇತನ ಹಲವಾರು ತಿಂಗಳಿಂದ ಬಾರದೆ ಉಳಿದಿರುವುದು ಖೇದದ ಸಂಗತಿಯಾಗಿದೆ. ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸಿದ್ದು, ಈಗಾಗಲೇ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಈ ಕುರಿತು ಇನ್ನಷ್ಟು ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ ಬಡಜನರಿಗೆ ನೆರವಾಗಬೇಕು ಎಂದು ಅವರು ಹೇಳಿದರು.

ತಾಲೂಕಿನ ಅಗಸೂರಿನಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಮೂಲಕ ಇಂಗ್ಲೀಷ್‌ ಮಾಧ್ಯಮ ಶಾಲೆಯನ್ನು ಆರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂತೆಯೇ ಅಂಬಾರಕೊಡ್ಲದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಲ್ಲಿ 21ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದು, ಕರ್ನಾಟಕ ಪಬ್ಲಿಕ್‌ ಸ್ಕೂಲನ್ನು ಆರಂಭಿಸಬೇಕೆಂಬ ಇಂಗಿತವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಇನ್ನೊಮ್ಮೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಕ್ಷೇತ್ರ ಶಿಕ್ಷ ಣಾಧಿಕಾರಿ ಶ್ಯಾಮಲಾ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ನಿರ್ಮಿತಿ ಕೇಂದ್ರದವರು ಸುಮಾರು 88 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ಹಲವು ಶಾಲೆಗಳಿಗೆ ಪರಿಕರಗಳನ್ನು ವಿತರಿಸಿದ್ದಾರೆ. ಗುಣಮಟ್ಟ ಇಲ್ಲದಿರುವ ಪರಿಕರಗಳನ್ನು ಶಾಲೆಗೆ ನೀಡಲಾಗಿದ್ದು, ಈ ವ್ಯವಹಾರದಲ್ಲಿ ಭಾರಿ ಪ್ರಮಾಣದಲ್ಲಿ ಗೋಲ್‌ಮಾಲ್‌ ನಡೆದಿದೆ ಎಂದು ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ ಹೇಳಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ ನಾಯ್ಕ ಮಾತನಾಡಿ, ಕೃಷಿಕರ ಅನುಕೂಲಕ್ಕೆ ಸರಕಾರ ರೂಪಿಸಿರುವ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಈಗಾಗಲೇ 14,380 ರೈತರು ನೋಂದಣಿ ಮಾಡಿದ್ದಾರೆ. ತಾಲೂಕಿನಲ್ಲಿ ಒಟ್ಟು 22,440 ಕೃಷಿಕರನ್ನು ಗುರುತಿಸಲಾಗಿದ್ದು, ಇವರಲ್ಲಿ ಸರಕಾರಿ ನೌಕರರು ಸೇರಿದಂತೆ ಅನುಕೂಲಸ್ಥರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅನರ್ಹರು ಎಂದು ಹೇಳಿದರು.

ತಾಲೂಕಾಸ್ಪತ್ರೆಯಲ್ಲಿ ಲ್ಯಾಬ್‌ ಟೆಕ್ನಿಷಿಯನ್‌ ಕೊರತೆ ಕಾಡುತ್ತಿದ್ದು, ವ್ಯವಸ್ಥೆಗೊಳಿಸಬೇಕಾದ ಅವಶ್ಯಕತೆಯಿದೆ. ಡೆಂಗೆ ಕಾಯಿಲೆಗೊಳಗಾಗಿ ಒಬ್ಬ ವ್ಯಕ್ತಿ ದಾಖಲಾಗಿದ್ದು, ನೀಡುತ್ತಿರುವ ಚಿಕಿತ್ಸೆಯಿಂದಾಗಿ ಚೇತರಿಸಿಕೊಂಡಿದ್ದಾನೆ ಎಂದು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಹೇಂದ್ರ ನಾಯಕ ಹೇಳಿದರು.

ಈ ವೇಳೆ ತಾ.ಪಂ. ಉಪಾಧ್ಯಕ್ಷೆ ತುಳಸಿ ಗೌಡ, ಸದಸ್ಯರಾದ ಶಾಂತಿ ಆಗೇರ, ಸಂಜೀವ ಕುಚಿನಾಡ, ನಂದಾ ಆರ್‌. ನಾಯ್ಕ, ವೀಣಾ ಸಿದ್ದಿ, ಸಹಾಯಕ ನಿರ್ದೇಶಕ ಸುನೀಲ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ