ಆ್ಯಪ್ನಗರ

ತದಡಿ ಬಂದರಿನಲ್ಲಿ ಶೈತ್ಯಾಗಾರಕ್ಕೆ ವಿರೋಧ

ಗೋಕರ್ಣ : ತದಡಿ ಬಂದರಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಬೃಹತ್‌ ಶೈತ್ಯಾಗಾರ ಕಾಮಗಾರಿಯನ್ನು ನಿಲ್ಲಿಸುವಂತೆ ನಾಗರಿಕರು ತದಡಿ ಬಂದರಿಗೆ ಸೋಮವಾರ ಭೇಟಿ ನೀಡಿದ ತಾಲೂಕು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Vijaya Karnataka 20 Jun 2019, 5:00 am
ಗೋಕರ್ಣ : ತದಡಿ ಬಂದರಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಬೃಹತ್‌ ಶೈತ್ಯಾಗಾರ ಕಾಮಗಾರಿಯನ್ನು ನಿಲ್ಲಿಸುವಂತೆ ನಾಗರಿಕರು ತದಡಿ ಬಂದರಿಗೆ ಸೋಮವಾರ ಭೇಟಿ ನೀಡಿದ ತಾಲೂಕು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
Vijaya Karnataka Web KWR-18 GKN 3 A


ಶೈತ್ಯಾಗಾರಕ್ಕಾಗಿ ನಿರ್ಮಿಸಿದ ದೊಡ್ಡ ದೊಡ್ಡ ಟ್ಯಾಂಕ್‌ಗಳಲ್ಲಿ ಕಲ್ಮಶ ನೀರು ತುಂಬಿಕೊಂಡು ಬಂದರಿನಲ್ಲಿ ಗಲೀಜು ಹೆಚ್ಚಾಗಿದೆ. ಇದರಿಂದ ಮಲೇರಿಯಾ, ಡೆಂಗೆ ಮುಂತಾದ ಸಾಂದರ್ಭಿಕ ರೋಗ ಉಲ್ಬಣಿಸುವ ಸಾಧ್ಯತೆಯ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಸಿದೆ.

ಸ್ಥಳೀಯ ಪಂಚಾಯಿತಿಯ ನಿರಾಕ್ಷೇಪಣ ಪತ್ರ ಪಡೆಯದೇ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿರ್ಮಿಸುತ್ತಿರುವ ಶೈತ್ಯಾಗಾರದಿಂದ ಮುಂದೆ ಕೂಡ ಆತಂಕವಿರುವುದರಿಂದ ಕಾಮಗಾರಿಗೆ ತಡೆ ನೀಡುವಂತೆ ನೂರಾರು ಜನ ಒತ್ತಾಯಿಸಿದರು.

13 ಕೋಟಿ ಮೊತ್ತದ ಪ್ರಾಜೆಕ್ಟ್ : ಬಂದರಿನಲ್ಲಿದ್ದ ಹಳೆ ಶೈತ್ಯಾಗಾರವನ್ನು ಕೆಡವಿ ಮೀನುಗಾರಿಕೆ ಅಭಿವೃದ್ಧಿ ನಿಗಮ 13 ಕೋಟಿ ರೂ. ಅಂದಾಜು ವೆಚ್ಚದ ಹೊಸ ಐಸ್‌ಪ್ಲಾಂಟ್‌ ನಿರ್ಮಾಣ ನಡೆಸುತ್ತಿದೆ. ಇದಕ್ಕಾಗಿ 20ಕ್ಕೂ ಅಧಿಕ ಬೃಹತ್‌ ಟ್ಯಾಂಕ್‌ಗಳನ್ನು ಕಟ್ಟಲಾಗಿದೆ. 10 ಅಡಿಗೂ ಹೆಚ್ಚು ಎತ್ತರವಿರುವ ಈ ಟ್ಯಾಂಕ್‌ಗಳಲ್ಲಿ ಹೊಲಸು ನೀರು ಸಂಗ್ರಹಗೊಂಡು ಅವು ಸಾಂಕ್ರಾಮಿಕ ರೋಗ ಹರಡಬಲ್ಲ ಸೊಳ್ಳೆ ಉತ್ಪಾದನಾ ಕೇಂದ್ರಗಳಾಗಿ ಪರಿವರ್ತಿತವಾಗಿವೆ. ಯೋಜನೆಗೆ ಈವರೆಗೆ ಪಂಚಾಯಿತಿಯಿಂದ ಎನ್‌ಒಸಿ ಪಡೆಯದ ಕಾರಣ ಅನೇಕ ಸದಸ್ಯರು ಕಾಮಗಾರಿಯನ್ನು ವಿರೋಧಿಸುತ್ತಿದ್ದಾರೆ. ಇದರ ಜತೆಗೆ ಕೆಎಫ್‌ಡಿಸಿ ಪಂಚಾಯಿತಿಗೆ ಕಟ್ಟ ಬೇಕಾದ ಲಕ್ಷಾಂತರ ರೂ. ಟ್ಯಾಕ್ಸ್‌ ಬಾಕಿ ಇಟ್ಟುಕೊಂಡಿರುವುದರಿಂದ ನಿಯಮದಂತೆ ಅದನ್ನು ತುಂಬದೇ ಹೊಸ ಎನ್‌ಒಸಿ ಸಿಗುವುದು ಕಷ್ಟಕರ.

ನೋಟಿಸ್‌ ಜಾರಿ : ಜನರನ್ನು ಸಮಾಧಾನ ಪಡಿಸಿ ಮಾತನಾಡಿದ ತಾ.ಪಂ. ಇಒ ಸಿ.ಟಿ.ನಾಯ್ಕ ಬಂದರಿನ ಅಶುದ್ಧ ವಾತಾವರಣದ ಬಗ್ಗೆ ಆರೋಗ್ಯ ಇಲಾಖೆ ಆತಂಕ ವ್ಯಕ್ತ ಮಾಡಿದೆ. ಸಾಂಕ್ರಾಮಿಕ ರೋಗದ ಭೀತಿ ಹಿನ್ನೆಲೆಯಲ್ಲಿ ಟ್ಯಾಂಕ್‌ ಮತ್ತು ಕಾಮಗಾರಿ ಸ್ಥಳವನ್ನು ಸ್ವಚ್ಛಗೊಳಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ. ಬಂದರಿನ ಇತರ ಭಾಗಗಳಲ್ಲಿ ಕಂಡು ಬರುತ್ತಿರುವ ಗಲೀಜನ್ನು ತಕ್ಷ ಣ ಸ್ವಚ್ಛ ಮಾಡಲು ಮೀನುಗಾರಿಕೆ ಇಲಾಖೆ ಒಪ್ಪಿದೆ. ಅಕ್ರಮವಾಗಿ ನಡೆಸುತ್ತಿರುವ ಕಾಮಗಾರಿ ಕುರಿತು ಸಂಬಂಧಿಸಿದವರಿಗೆ ಇಂದೇ ನೋಟಿಸ್‌ ನೀಡಲು ಪಂಚಾಯಿತಿಗೆ ಆದೇಶಿಸಲಾಗಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ತಾ.ಪಂ. ಸದಸ್ಯ ಮಹೇಶ ಶೆಟ್ಟಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶೇಖರ ನಾಯ್ಕ, ಉದ್ಯಮಿ ಅರುಣ ಜಿ.ನಾಯ್ಕ ಮತ್ತು ಅನೇಕ ಪಂಚಾಯತಿ ಸದಸ್ಯರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ