ಕಾರವಾರ:ಇಲ್ಲಿನ ರವೀಂದ್ರನಾಥ ಟಾಗೋರ್ ಕಡಲ ತೀರದ ಹನುಮಾನ ಮೂರ್ತಿ ಬಳಿ ನಿರ್ಮಿಸಲಾಗುತ್ತಿರುವ ಸಮುದ್ರದ ಅಲೆ ತಡೆಗೋಡೆ ಕಾಮಗಾರಿ ವಿರೋಧಿಸಿದ ಕೆಲ ಸಾಂಪ್ರದಾಯಿಕ ಮೀನುಗಾರರು ಬುಧವಾರ ಪ್ರತಿಭಟನೆ ನಡೆಸಿದರು. ಮೀನುಗಾರರನ್ನು ಬೆಂಬಲಿಸಿದ ಮಾಜಿ ಮಂತ್ರಿ ಆನಂದ ಅಸ್ನೋಟಿಕರ್ ಸ್ಥಳಕ್ಕೆ ಆಗಮಿಸಿ ಶಾಸಕ ಸೈಲ್ ವಿರುದ್ಧ ಗುಡುಗಿದರು.
ಅಲೆ ತಡೆಗೋಡೆ ನಿರ್ಮಾಣದಿಂದ ಮೀನುಗಾರಿಕೆಗೆ ತೊಂದರೆಯಾಗುತ್ತದೆ ಎಂದು ಬುಧವಾರ ಕೆಲ ಮೀನುಗಾರರು ಕಾಮಗಾರಿ ನಡೆದ ಸ್ಥಳಕ್ಕೆ ಬಂದು ಪ್ರತಿಭಟಿಸಿದರು. ಬಳಿಕ ಮೀನುಗಾರರಿಂದ ವಿಷಯ ತಿಳಿದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿ ಕಾಮಗಾರಿ ವಿರೋಧಿಸಿದರು.
ಈ ವೇಳೆ ಮಾತನಾಡಿದ ಆನಂದ, ಅಭಿವೃದ್ಧಿ ಹೆಸರಿನಲ್ಲಿ ಶಾಸಕ ಸೈಲ್ ಬೇಕಾ ಬಿಟ್ಟಿ ಕಾಮಗಾರಿ ನಡೆಸಲು ಅವಕಾಶ ನೀಡುತ್ತಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಬಡ ಮೀನುಗಾರರ ಬದುಕು ಹಾಳಾಗುತ್ತಿದ್ದರೂ ಶಾಸಕರಿಗೆ ಎಚ್ಚರಿಕೆ ಇಲ್ಲ . ಹಲವು ಕಾಮಗಾರಿಗಳನ್ನು ಸಿಆರ್ಝೆಡ್ ನಿಯಮ ಉಲ್ಲಂಘಿಸಿ ನಡೆಸಲಾಗುತ್ತಿದೆ. ಈ ಕುರಿತು ಈಗಾಗಲೇ ದೂರು ನೀಡಲಾಗಿದೆ. ಶಾಸಕರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಕೇವಲ ಉಳ್ಳವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಳಿಕ ಈ ಕುರಿತು ಸರಕಾರಕ್ಕೆ ದೂರು ನೀಡಲು ಪ್ರತಿಭಟನಾನಿರತರು ನಿರ್ಧರಿಸಿದರು.
ಹಿನ್ನೆಲೆ :
ಕಡಲ ತೀರದ ಹನುಮಾನ್ ಸ್ಟ್ಯಾಚ್ಯು ಬಳಿ ಕಳೆದ ಕೆಲ ವರ್ಷಗಳಿಂದ ಮಳೆಗಾಲದಲ್ಲಿ ಸಮುದ್ರದ ಅಲೆಗಳು ಉಕ್ಕಿ ಮೇಲೆ ಬರುತ್ತಿವೆ. ಕಡಲ್ಕೊರೆತ ಉಂಟಾಗಿ ಈ ಪ್ರದೇಶ ಜಲಾವೃತ್ತವಾಗುತ್ತದೆ. ಹನುಮಾನ್ ಮೂರ್ತಿ ಸಮೀಪದಲ್ಲೇ ಜಿಲ್ಲಾಡಳಿತದಿಂದ ಈಗ ಶಿಲ್ಪ ಉದ್ಯಾನ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಯಾನಕ್ಕೆ ಮಳೆಗಾಲದಲ್ಲಿ ಧಕ್ಕೆ ಬರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅಲೆ ತಡೆಗೋಡೆ ನಿರ್ಮಾಣಕ್ಕೆ ಬಂದರು ಇಲಾಖೆ ಮುಂದಾಗಿದೆ. 15 ಲಕ್ಷ ರೂ. ವೆಚ್ಚದಲ್ಲಿ 48 ಮೀ. ತಡೆಗೋಡೆ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದೆ.
ಆದರೆ ಈ ಪ್ರದೇಶ ಅನಾದಿಯಿಂದ ಸಾಂಪ್ರದಾಯಿಕ ಮೀನುಗಾರರು ಮೀನು ಹಿಡಿಯಲು ಬಳಸುತ್ತಾರೆ. ದೋಣಿ, ಬಲೆ ಮೊದಲಾದ ಪರಿಕರಗಳನ್ನು ಇಲ್ಲಿನ ಸಮುದ್ರದಂಡೆಯಲ್ಲಿ ಸಂಗ್ರಹಿಸಿಡುತ್ತಾರೆ. ಅಲೆ ತಡೆಗೋಡೆ ನಿರ್ಮಿಸುವುದರಿಂದ ಮೀನುಗಾರಿಕೆ ನಡೆಸಲು ಸಾಧ್ಯವಿಲ್ಲ. ಮೊದಲೇ ಟಾಗೋರ್ ಬೀಚಿನ ಬಹುತೇಕ ಭಾಗ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗಿದ್ದು ಮೀನುಗಾರಿಕೆಗೆ ತೊಂದರೆಯಾಗುತ್ತಿದೆ. ಅಳಿದುಳಿದ ಕಡಲ ತೀರವನ್ನೂ ಅಭಿವೃದ್ಧಿಗೆ ನೆಪದಲ್ಲಿ ನುಂಗಿ ಹಾಕಿದರೆ ಮೀನುಗಾರರು ರಸ್ತೆ ಪಾಲಾಗುತ್ತಾರೆ ಎಂಬ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಮೀನುಗಾರರು ಅಲೆ ತಡೆಗೋಡೆಯನ್ನು ವಿರೋಧಿಸಿದ್ದಾರೆ.
ಬೋರ್ಡ್ ರಾಜಕೀಯ : ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳು ನಡೆಯುವ ಸ್ಥಳಗಳಲ್ಲಿ ಶಾಸಕ ಸೈಲ್ ಬೋರ್ಡ್ ಹಾಕಿ ಅದರಲ್ಲಿ ತಮ್ಮ ಫೋಟೊ ಹಾಕಿಸಿಕೊಳ್ಳುತ್ತಿದ್ದಾರೆ. ಬೋರ್ಡ್ ಶಾಶ್ವತವಾಗಿ ಇರಬೇಕು ಎಂದು ಶಾಸಕರು ಹೇಳಿದ್ದಾಗಿ ತಿಳಿದುಬಂದಿದೆ. ಕಾಮಗಾರಿ ಜನರ ದುಡ್ಡಿನಿಂದ ಮಾಡೋದು, ಶಾಸಕರು ತಮ್ಮ ಕಿಸೆಯಿಂದ ಕೊಡುವ ದುಡ್ಡಲ್ಲ. ಈ ರೀತಿ ಬೋರ್ಡ್ ಹಾಕಿಸಿಕೊಳ್ಳವುದು ಸರಿಯಲ್ಲ ಎಂದು ಆನಂದ ಆರೋಪಿಸಿದರು.