ಆ್ಯಪ್ನಗರ

‘ಧರ್ಮದ ಹೆಸರಲ್ಲಿ ರಾಜಕಾರಣ ಸರಿಯಲ್ಲ’

ಅಭಿವೃದ್ಧಿಯ ಆಧಾರದಲ್ಲಿ ರಾಜಕಾರಣ ಮಾಡಬೇಕೇ ಹೊರತು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Vijaya Karnataka Web 7 Dec 2017, 8:07 am

ಕಾರವಾರ/ಭಟ್ಕಳ: ಅಭಿವೃದ್ಧಿಯ ಆಧಾರದಲ್ಲಿ ರಾಜಕಾರಣ ಮಾಡಬೇಕೇ ಹೊರತು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಒಟ್ಟು 707 ಕೋಟಿ ರೂ. ಮೊತ್ತದ 67 ಕಾಮಗಾರಿಗಳಿಗೆ ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಕಡಲ ತೀರದ ಮಯೂರವರ್ಮ ವೇದಿಕೆಯಲ್ಲಿ ಬುಧವಾರ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ತಮ್ಮ ಮಾತಿನುದ್ದಕ್ಕೂ ಬಿಜೆಪಿಯನ್ನು ಹಿಗ್ಗಾ ಮುಗ್ಗಾ ಜರಿದ ಮುಖ್ಯಮಂತ್ರಿ, ''ಧರ್ಮದ ಆಧಾರದಲ್ಲಿ ರಾಜಕಾರಣ ಮಾಡಬೇಕೇ ಹೊರತು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ನಾವು ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುತ್ತೇವೆ. ಬಿಜೆಪಿಯಂತೆ ಜಾತಿ, ಧರ್ಮದ ಹೆಸರಿನಲ್ಲಿ ಮತ ಕೇಳುವುದಿಲ್ಲ'' ಎಂದು ಕುಟುಕಿದರು.

ಬಿಜೆಪಿ ಮಿಷನ್‌ 150 ಠುಸ್‌

''ಬಿಜೆಪಿ ಮಿಷನ್‌ 150 ಎಂಬ ಹೆಸರಿನಲ್ಲಿ ಈ ಬಾರಿ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿದೆ ಎಂದು ಯಡಿಯೂರಪ್ಪ ಆರ್ಭಟಿಸಿದ್ದರು. ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆ ಸಂದರ್ಭದಲ್ಲೂ ಇದೇ ಮಾತು ಹೇಳಿದ್ದರು. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಒಂದೂವರೆ ತಿಂಗಳು ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದರು. ಈ ಎರಡೂ ಕ್ಷೇತ್ರದಲ್ಲಿ ಹೀನಾಯವಾಗಿ ಸೋತ ಬಳಿಕ ಮಿಷನ್‌ 150 ಠುಸ್‌ ಆಗಿದೆ'' ಎಂದು ಲೇವಡಿ ಮಾಡಿದರು.

''ದೇಶದಲ್ಲಿ 16 ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದೆ. ಎಲ್ಲೂ ಕೂಡ ನಮ್ಮಂತೆ ಬಡವರಿಗೆ ಅಕ್ಕಿ, ಬಡ ಮಕ್ಕಳಿಗೆ ಹಾಲು ಕೊಡುತ್ತಿಲ್ಲ. ಯಡಿಯೂರಪ್ಪ ಧರ್ಮದ ಹೆಸರಿನಲ್ಲಿ ರಾಜಕಾರಣ ಬಿಟ್ಟು ಅಭಿವೃದ್ಧಿಪರ ಚರ್ಚೆಗೆ ಬರಲಿ'' ಎಂದು ಸವಾಲು ಹಾಕಿದರು.

ಬೆಂಕಿ ಹಚ್ಚಬೇಡಿ

ಅನಂತಕುಮಾರ ಹೆಗಡೆ ಜನರ ನಡುವೆ ಧರ್ಮದ ಹೆಸರಿನಲ್ಲಿ ಬೆಂಕಿ ಇಡುತ್ತಲೇ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರಕ್ಕಾಗಿ ಏನೂ ಮಾಡಿಲ್ಲ. ಹುಣಸೂರಿನಲ್ಲಿಯೂ ಹನುಮ ಜಯಂತಿ ಹೆಸರಿನಲ್ಲಿ ಬೆಂಕಿ ಇಡಲು ಬಂದಿದ್ದರು. ಆದರೆ ನಾನು ಬಿಟ್ಟಿಲ್ಲ'' ಎಂದು ಸಿಎಂ ಹೇಳಿದರು.

ಸಚಿವ ಆರ್‌. ವಿ. ದೇಶಪಾಂಡೆ ಮಾತನಾಡಿ, ''ನನ್ನ ರಾಜಕೀಯ ಜೀವನದಲ್ಲಿ ಏಳು ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಸಿದ್ದರಾಮಯ್ಯ ಅವಧಿಯಲ್ಲಿ ಜಿಲ್ಲೆಗೆ ಅಭಿವೃದ್ಧಿಗಾಗಿ ಬಂದಷ್ಟು ಅನುದಾನ ಬೇರಾರ‍ಯರ ಅವಧಿಯಲ್ಲೂ ಬಂದಿಲ್ಲ'' ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ''ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಈಗಾಗಲೇ ಆರು ಹೊಸ ಸರಕಾರಿ ಮೆಡಿಕಲ್‌ ಕಾಲೇಜುಗಳನ್ನು ನಿರ್ಮಿಸಲಾಗಿದ್ದು, 900ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ'' ಎಂದರು.

ಲೋಕೋಪಯೋಗಿ ಸಚಿವ ಎಚ್‌. ಸಿ. ಮಹದೇವಪ್ಪ, ಶಾಸಕ ಸತೀಶ ಸೈಲ್‌ ಮಾತನಾಡಿದರು. ಶಾಸಕರಾದ ಮಂಕಾಳು ವೈದ್ಯ, ಶಾರದಾ ಶೆಟ್ಟಿ, ಮೀನುಗಾರಿಕೆ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ, ಜಿಲ್ಲಾಧಿಕಾರಿ ಎಸ್‌. ಎಸ್‌. ನಕುಲ್‌ ಇತರರು ಇದ್ದರು.

ಬಿಜೆಪಿ ಶಾಸಕರ ಕಾಲೆಳೆದ ಸಿಎಂ

ಜಿಲ್ಲೆಯ ಬಿಜೆಪಿ ಶಾಸಕರನ್ನು ಉಲ್ಲೇಖಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಜಿಲ್ಲೆಯ ಶಾಸಕರೊಬ್ಬರನ್ನು ಬರುವ ಚುನಾವಣೆ ಹೇಗೆ ಎದುರಿಸುತ್ತೀರಿ? ಅಂತ ಕೇಳಿದೆ. ನಾವು ಮೋದಿ ಮೇಲೆ ಡಿಪೆಂಡ್‌ ಆಗಿದೀವಿ ಸರ್‌ ಅಂದರು. ರಾಜ್ಯದ ಜನ ಕೇವಲ ಅಭಿವೃದ್ಧಿ ಮಾಡಿದವರಿಗೆ ಮತ ಹಾಕುತ್ತಾರೆ. ಮೋದಿ ಅಲೆ ಇಲ್ಲಿ ನಡೆಯೋಲ್ಲ ಅಂತ ಆ ಶಾಸಕರಿಗೆ ವಿವರಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿಜೆಪಿ ಶಾಸಕರ ಕಾಲೆಳೆದರು.

ಬರುವ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಿಜೆಪಿಯಿಂದ ಪ್ರಧಾನಿ ಮೋದಿ, ಅಮಿತ್‌ ಶಾ ಬಂದರೂ ನಮ್ಮದೇನು ಅಭ್ಯಂತರವಿಲ್ಲ. ಆದರೆ ರಾಜ್ಯದ ಕೋಮು ಸಾಮರಸ್ಯ ಕದಡುವ ಕೆಲಸ ಮಾತ್ರ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Vijaya Karnataka Web religious based politics not fair cm
‘ಧರ್ಮದ ಹೆಸರಲ್ಲಿ ರಾಜಕಾರಣ ಸರಿಯಲ್ಲ’

ಸರಕಾರದ ಹಲವು ಅಭಿವೃದ್ಧಿ ಕಾಮಗಾರಿಗಳ ಚಾಲನೆಗಾಗಿ ಬುಧವಾರ ಹಮ್ಮಿಕೊಂಡಿದ್ದ ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

''ದೇವಾಲಯದಲ್ಲಿ ದಲಿತ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನುಗಳಿಲ್ಲ. ಆದರೆ ನಾರಾಯಣ ಗುರು ಹೇಳಿದ ದಾರಿಯಲ್ಲಿ ನಾವು ಸಾಗುತ್ತಿದ್ದೇವೆ. ಅವರು ಯಾರು ಬೇಕಾದರೂ ದೇವಸ್ಥಾನ ನಿರ್ಮಾಣ ಮಾಡಿ ಅವರೇ ಅರ್ಚಕರಾಗಬಹುದು ಎಂದಿದ್ದಾರೆ'' ಎಂದು ತಿಳಿಸಿದರು.

ರಾಜಕೀಯ ಕಾರ್ಯದರ್ಶಿಗಳ ನೇಮಕಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, ''ಇವೆಲ್ಲಾ ರಾಜಕೀಯ ನೇಮಕ. ದಿಲ್ಲಿಯಂತಹ ಸಣ್ಣ ರಾಜ್ಯಗಳಲ್ಲೂ ರಾಜಕೀಯ ಕಾರ್ಯದರ್ಶಿ ನೇಮಕ ಮಾಡಿಕೊಂಡಿದ್ದಾರೆ'' ಎಂದರು. ಲೋಕೋಪಯೋಗಿ ಸಚಿವ ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ, ಶಾಸಕ ಮಾಂಕಾಳ ವೈದ್ಯ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ