ಆ್ಯಪ್ನಗರ

ತುಂತುರು ಹನಿಗಳ ‘ಮಳೆಹಬ್ಬ ’

ಶಿರಸಿ :ಮಳೆ ಎಂಬ ಕಲ್ಪನೆಯೇ ಅಷ್ಟು ಸೊಗಸು. ಮಳೆ ನಡುವೆ ಚಾರಣ, ಗದ್ದೆಯ ಅರಲು ಪ್ರದೇಶದಲ್ಲಿ ಕಬಡ್ಡಿ, ಜಲಪಾತದಲ್ಲಿ ನೀರಾಟ, ಕೃಷಿ ಜೀವನ ಮಾಹಿತಿ, ಮಲೆನಾಡಿನ ಸವಿರುಚಿ ಇವನ್ನೆಲ್ಲ ದೊರೆತರೆ ಹೇಗಿರಬಹುದು ? ಎರಡು ದಿನಗಳ ಕಾಲ ತಾಲೂಕಿನ ವಾನಳ್ಳಿ ಸಮೀಪ ನಡೆದ ಮಳೆ ಹಬ್ಬ ಇಂತಹ ವಿಶಿಷ್ಟ ಅನುಭವ ನೀಡಿತು. ಈ ಮೂಲಕ ಆಧುನಿಕ ಬದುಕಿನ ವೇಗಕ್ಕೆ ತಕ್ಕಂತೆ ಹೆಜ್ಜೆ ಇಡುವ ಸಾಫ್ಟವೇರ್‌ ಹುಡುಗರಿಗೆ,

Vijaya Karnataka 12 Jul 2018, 5:00 am
ಶಿರಸಿ :ಮಳೆ ಎಂಬ ಕಲ್ಪನೆಯೇ ಅಷ್ಟು ಸೊಗಸು. ಮಳೆ ನಡುವೆ ಚಾರಣ, ಗದ್ದೆಯ ಅರಲು ಪ್ರದೇಶದಲ್ಲಿ ಕಬಡ್ಡಿ, ಜಲಪಾತದಲ್ಲಿ ನೀರಾಟ, ಕೃಷಿ ಜೀವನ ಮಾಹಿತಿ, ಮಲೆನಾಡಿನ ಸವಿರುಚಿ ಇವನ್ನೆಲ್ಲ ದೊರೆತರೆ ಹೇಗಿರಬಹುದು ? ಎರಡು ದಿನಗಳ ಕಾಲ ತಾಲೂಕಿನ ವಾನಳ್ಳಿ ಸಮೀಪ ನಡೆದ ಮಳೆ ಹಬ್ಬ ಇಂತಹ ವಿಶಿಷ್ಟ ಅನುಭವ ನೀಡಿತು. ಈ ಮೂಲಕ ಆಧುನಿಕ ಬದುಕಿನ ವೇಗಕ್ಕೆ ತಕ್ಕಂತೆ ಹೆಜ್ಜೆ ಇಡುವ ಸಾಫ್ಟವೇರ್‌ ಹುಡುಗರಿಗೆ, ಶಹರೀಗರಿಗೆ ಹಳ್ಳಿ ಬದುಕಿನ ಮಾಡಿಕೊಟ್ಟಿತು. ಮೆಟ್ರೋಪಾಲಿಟನ್‌ ಸಿಟಿಗಳಲ್ಲಿ ಊರು ಮರೆತು ವರ್ಷವಿಡಿ ಕೆಲಸದಲ್ಲಿ ನಿರತರಾದವರಿಗೆ ನಿರುಮ್ಮಳತೆ ನೀಡಿತು
Vijaya Karnataka Web spray drops rainy day
ತುಂತುರು ಹನಿಗಳ ‘ಮಳೆಹಬ್ಬ ’


ರಾಜ್ಯದ ವಿವಿಧ ಭಾಗಗಳಿಂದ ಮಳೆಗಾಲದ ಅತಿಥಿಗಳಾಗಿ ಹಲವರು ಸಂಭ್ರಮದಿಂದ ಈ ಹಬ್ಬದಲ್ಲಿ ಪಾಲ್ಗೊಂಡರು. ಮಲೆನಾಡಿನ ಆಹಾರ ಸಂಸ್ಕೃತಿ, ಜೀವನ ಕ್ರಮ ಹಾಗೂ ಪರಿಶುದ್ಧ ಪ್ರವಾಸೋದ್ಯಮದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಾಗರಾಜ ವೈದ್ಯ ನೇತೃತ್ವದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.

ಪ್ರವಾಸದ ಖುಷಿಯ ಅನುಭವ ಮೂಟೆ ಕಟ್ಟಿಕೊಟ್ಟ ಮಳೆಹಬ್ಬದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಿ, ಪ್ರವಾಸಿ ತಾಣಗಳ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ ಪರಿಸರದ ಜಾಗೃತಿಯನ್ನು ಎತ್ತಿ ಹಿಡಿಯಿತು. ಪ್ರವಾಸದ ಸಂದರ್ಭದಲ್ಲಿ ವರ್ತನೆ ಹೇಗಿರಬೇಕು ಎಂಬುದನ್ನು ತಿಳಿಸಲು ಭೀಮತಾರಿ ಸಮೀಪ ಕಾಡಿನಲ್ಲಿ ಮೌನ ನಡಿಗೆ ಮಾಡಿದ್ದು ವಿಶೇಷವಾಗಿತ್ತು.

ದಾಂಡೇಲಿಯ ತಜ್ಞರ ಸಮ್ಮುಖದಲ್ಲಿ ರ್ಯಾಪ್ಲಿಂಗ್‌ ಕೂಡಾ ನಡೆಸಲಾಯಿತು. 25 ಕ್ಕೂ ಹೆಚ್ಚು ಜನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು 200 ಅಡಿ ಎತ್ತರದ ಜಲಪಾತದಲ್ಲಿ ಜಾರಿಕೆ ಕಲ್ಲುಗಳ ಮೇಲಿಂದ ಇಳಿದು ಖುಷಿ ಪಟ್ಟರು. ಕಿರುತೆರೆ ನಿರ್ದೇಶಕ ರಾಮಚಂದ್ರ ವೈದ್ಯ ನೇತೃತ್ವ ವಹಿಸಿದ್ದರು.

ಕೆಸರು ಗದ್ದೆಯಲ್ಲಿ ಕಬಡ್ಡಿ :

ದೂಳಳ್ಳಿಯ ನಾರಾಯಣ ನಾಯ್ಕ ಅವರ ಹೊಲದಲ್ಲಿ ಕಂಬಳಿಕೊಪ್ಪೆ ಹೊದ್ದು ಗದ್ದೆ ಹೂಟೆ ಮಾಡುವ ಮೂಲಕ ಕೃಷಿ ಕೆಲಸದಲ್ಲಿ ತೊಡಗಿಕೊಂಡರು. ಸ್ಥಳೀಯ ರೈತರ ಕಷ್ಟ ಸುಖಃಗಳನ್ನು ಆಲಿಸಿದರು. ಕೆಸರು ಗದ್ದೆಯಲ್ಲಿ ಕಬಡ್ಡಿ ಆಡಿ ನಲಿದರು. ಪರಸ್ಪರ ಕೆಸರೆರಚಿಕೊಂಡು ಸಂಭ್ರಮಿಸಿದ್ದಲ್ಲದೇ, ಅನೇಕರು ಐಟಿ ಕೆಲಸ ತೊರೆದು ಮತ್ತೆ ಕೃಷಿ ಜೀವನಕ್ಕೆ ಮರಳುವ ಆಸಕ್ತಿ ಹೇಳಿಕೊಂಡರು. ಹಿರಿಯ ಕೃಷಿಕ ನಾರಾಯಣ ನಾಯ್ಕ ಅವರಿಗೆ ಮಳೆಹಬ್ಬ ತಂಡದ ಪರವಾಗಿ ಗೌರವ ಸಮರ್ಪಿಸಲಾಯಿತು.

ಬುಗುರಿ, ಬಿನ್ನಿದಾಂಡು ಆಟ, ಕಾಗದದ ದೋಣಿ ಮಾಡಿದ್ದು, ಹೊಡಸಲಿನಲ್ಲಿ ಚಳಿ ಕಾಯಿಸುತ್ತಾ ಗೇರುಬೀಜ ಸುಟ್ಟು ತಿಂದಿದ್ದು ಮಲೆನಾಡು ಮರೆಯುತ್ತಿರುವ ವಿಶೇಷತೆ ಪರಿಚಯಿಸಿತು. ಭೀಮತಾರಿಯಲ್ಲಿ ನೂರಾರು ಸೀಡ್‌ ಬಾಲ್ಗಳ ಪ್ರಸರಣ ಮಾಡಿದ್ದು ವಿಶೇಷವಾಗಿತ್ತು. ಮುಂದಿನ ದಿನಗಳಲ್ಲಿ ಬೆಂಗಳೂರು, ಬಯಲು ಸೀಮೆ ಮುಂತಾದೆಡೆ ಸಸಿ ನೆಡುವುದು, ಸೀಡ್‌ ಬಾಲ್‌ ಪ್ರಸರಣ ಮಾಡಲು ತಂಡ ನಿರ್ಧರಿಸಿತು ಎಂದು ಸಂಘಟಕ ನಾಗರಾಜ ಹೆಗಡೆ ತಿಳಿಸಿದರು.

ರಂಗಾಯಣದ ಕಲಾವಿದ ಧನರಾಜ್‌ ಎಸ್‌.ಆರ್‌ ಅವರ ಮಿಮಿಕ್ರಿ, ಡಾನ್ಸ್‌ ಹಾಗೂ ಪ್ರಸನ್ನ ಜಾಜಿಗುಡ್ಡೆ, ಬರಹಗಾರ್ತಿ ಚೈತ್ರಿಕಾ ವೈದ್ಯ ಅವರ ಗಾಯನ ಗಮನಸೆಳೆಯಿತು.

ಮಲೆನಾಡಿನ ಸವಿ ತಿನಿಸು :

ಮಲೆನಾಡಿನ ವಿಶೇಷ ಬೆಳಗಿನ ತಿಂಡಿ ನೀರ್ದೋಸೆ, ಜೇನು ತುಪ್ಪ, ರವೆರವೆ ತುಪ್ಪ, ಮಾವಿನ ಶೀಕರಣೆ ಎಲ್ಲರನ್ನೂ ವಿಶೇಷವಾಗಿ ಸೆಳೆಯಿತು. ಹಲಸಿನ ಹಣ್ಣಿನ ಕಡುಬು, ಮನೆಯಲ್ಲೇ ತಯಾರಿಸಿದ ಕೊಬ್ಬರಿ ಎಣ್ಣೆ, ಉಪ್ಪಾಗೆ ಎಣ್ಣೆಯಲ್ಲಿ ಬೇಯಿಸಿದ ಅತ್ರಾಸ, ಗೆಂಟ್ಲೆಕಿಳೆಯಲ್ಲಿ ಬೇಯಿಸಿದ ಕಾಯಿಕಡುಬು, ವಿವಿಧ ರೀತಿಯ ಕಟ್ನೆಗಳು, ತಂಬುಳಿ, ಭೂತ್ಗೊಜ್ಜು ಮುಂತಾದ ಸವಿ ಸವಿಯಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ