ಕಾರವಾರ:ಅಂಕೋಲಾ ತಾಲೂಕಿನಲ್ಲಿ ಉಪ ನೋಂದಣಿ ಕಚೇರಿಯನ್ನು ಆದಷ್ಟು ಶೀಘ್ರದಲ್ಲಿ ಪ್ರಾರಂಭಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹೊಸಬಣ್ಣ ಕೃಷ್ಣ ನಾಯಕ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ತಾಲೂಕಿಗೆ ಉಪ ನೋಂದಣಿ ಕಚೇರಿಯನ್ನು ರಾಜ್ಯ ಸರಕಾರದ ಕಾರ್ಯದರ್ಶಿಗಳು ಈಗಾಗಲೇ ಮಂಜೂರಿ ಮಾಡಿ ವರ್ಷಗಳು ಸಂದಿವೆ. ಆದರೆ ಸರಕಾರ ಮಾತ್ರ ಕಚೇರಿ ಪ್ರಾರಂಭಿಸುತ್ತಿಲ್ಲ ಎಂದು ದೂರಿದರು.
ಅಂಕೋಲಾ ತಾಲೂಕು ತೀರಾ ಹಿಂದುಳಿದ ಪ್ರದೇಶವಾಗಿದೆ. ಆದರೆ ಇಲ್ಲಿ ನೋಂದಣಿ ಕಚೇರಿ ಇಲ್ಲ. ಈ ಭಾಗದ ಜನರು ನೋಂದಣಿ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಬರಬೇಕಿದೆ. ಇದರಿಂದ ಜನ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದರು.
ಜಾಗ ಇದೆ : ಉಪ ನೋಂದಣಿ ಕಚೇರಿ ಸ್ಥಾಪನೆಗೆ ಸ್ಥಳ ಅಭಾವವಿದೆ ಎಂದು ಕೆಲ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ತಹಸೀಲ್ದಾರ ಕಚೇರಿಯ ಮೇಲಿನ ಮಹಡಿಯಲ್ಲಿ ಜಾಗ ಖಾಲಿ ಇದೆ. ಅಲ್ಲಿ ಯಾವುದಾದರು ಒಂದು ಕೋಣೆಯಲ್ಲಿ ಕಚೇರಿ ಶೀಘ್ರ ಪ್ರಾರಂಭಿಸಿದಲ್ಲಿ ಈ ಭಾಗದ ಜನ ಕಾರವಾರಕ್ಕೆ ಅಲೆಯುವುದು ತಪ್ಪುತ್ತದೆ. ಆದ್ದರಿಂದ ಈ ಕೂಡಲೇ ಸರಕಾರ ಕಚೇರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.