ಕಾರವಾರ:ದೇಶದ ಪ್ರತಿ ಗ್ರಾಮ ಹಾಗೂ ಎಲ್ಲ ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಗ್ರಾಮೀಣ ನೀರಾವರಿ ಯೋಜನೆ ಆರಂಭಿಸಲಾಗಿದೆ. ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಿದೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.
ಜಿಪಂ ನಲ್ಲಿ ಶನಿವಾರ ನಡೆದ ಜಿಲ್ಲಾ ನೀರಾವರಿ ಪುನರ್ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕೃಷಿ, ತೋಟಗಾರಿಕೆ, ಕೈಗಾರಿಕೆ, ಪಶು ಸಂಗೋಪನೆ, ಪ್ರವಾಸೋಧ್ಯಮ, ಅರಣ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಮುಂದಿನ 10 ವರ್ಷದಲ್ಲಿ ನೀರಿನ ಬಳಕೆ ಎಷ್ಟು ಹೆಚ್ಚಳವಾಗಬಹುದು? ಹೆಚ್ಚುವರಿಯಾಗಿ ಬೇಕಾಗುವ ನೀರಿನ ವ್ಯವಸ್ಥೆಯನ್ನು ಹೇಗೆ ಕಲ್ಪಿಸಬಹುದು ಎಂಬ ಕುರಿತು ಇಲಾಖಾವಾರು ಯೋಜನೆ ಸಿದ್ಧಪಡಿಸಬೇಕು. ಎಲ್ಲ ಇಲಾಖೆಗೆ ಯೋಜನೆಯನ್ನು ಕ್ರೋಡೀಕರಿಸಿ ಜಿಲ್ಲಾಡಳಿತದಿಂದ ಒಟ್ಟಾರೆ ಯೋಜನೆ ತಯಾರಿಸಬೇಕು ಎಂದರು.
ಶೇ. 37 ನೀರು ಬಳಕೆ :
ಜಿಲ್ಲೆಯಲ್ಲಿ ಮಳೆ ನೀರು ಇಂಗುವ ಪ್ರಮಾಣ ಲೆಕ್ಕ ಹಾಕಲಾಗಿದೆ. ಬಳಿಕ ಬಾವಿ ಮತ್ತು ಬೋರ್ವೆಲ್ ಮೂಲಕ ಬಳಸಿದ ನೀರಿನ ಪ್ರಮಾಣವನ್ನು ಇದರಿಂದ ಕಳೆದು ಅಂತರ್ಜಲ ಪ್ರಮಾಣ ಲೆಕ್ಕ ಹಾಕಲಾಗಿದೆ. ಈ ಲೆಕ್ಕಾಚಾರದ ಪ್ರಕಾರ ಸಧ್ಯ ಜಿಲ್ಲೆಯಲ್ಲಿ ಒಟ್ಟು ಅಂತರ್ಜಲ ಪ್ರಮಾಣದ ಶೇ. 37ರಷ್ಟನ್ನು ಮಾತ್ರ ಬಳಸಲಾಗುತ್ತಿದೆ.
ಅಂತರ್ಜಲ ಬಳಕೆಯಲ್ಲಿ ತಾಲೂಕುವಾರು ವ್ಯತ್ಯಾಸವಿದೆ. ಹಳಿಯಾಳದಲ್ಲಿ ಶೇ.57 ಅಂತರ್ಜಲ ಬಳಕೆಯಾಗಿರುವುದು ಅತಿ ಹೆಚ್ಚಾಗಿದೆ. ಜೋಯಿಡಾ ತಾಲೂಕಿನಲ್ಲಿ ಶೇ. 20ರಷ್ಟು ಅಂತರ್ಜಲ ಮಾತ್ರ ಬಳಕೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಪಶು ಸಂಗೋಪನೆ, ಕೈಗಾರಿಕೆ :
ಮುಂದಿನ ಹತ್ತು ವರ್ಷಗಳಲ್ಲಿ ಪಶು ಸಂಗೋಪನೆಗೆ ಅಗತ್ಯವಿರುವ ನೀರಿನ ಪ್ರಮಾಣ ಲೆಕ್ಕ ಹಾಕಲಾಗಿದೆ. ಪ್ರತಿ ವರ್ಷ ಶೇ. 5ರಷ್ಟು ನೀರು ಹೆಚ್ಚುವರಿಯಾಗಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿ ತಿಳಿಸಿದರು.
ಕೈಗಾರಿಕೆ ಬೆಳವಣಿಗೆ ಕಡಿಮೆ ಇದೆ. ಆದರೆ ಆಯುರ್ವೇದ ಔಷಧ ತಯಾರಿಕೆ, ಗೋಡಂಬಿ ಸಂಸ್ಕರಣೆ ಮೊದಲಾದ ಕೈಗಾರಿಕೆಗಳು ಬೆಳವಣಿಗೆ ಕಾಣುತ್ತಿವೆ. ಈ ಆಧಾರದಲ್ಲಿ ಮುಂದಿನ ಒಂದು ದಶಕದಲ್ಲಿ ಕೈಗಾರಿಕೆಗೆ ಶೇ. 5ರಷ್ಟು ನೀರು ಪ್ರತಿ ವರ್ಷ ಹೆಚ್ಚುವರಿಯಾಗಿ ಬೇಕಾಗುತ್ತದೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ತೋಟಗಾರಿಕೆ :
ತೋಟಗಾರಿಕೆ ಪ್ರದೇಶ ವಿಸ್ತರಣೆಯಾಗುತ್ತಿದೆ. ಪ್ರತಿ ವರ್ಷ 500 ಹೆಕ್ಟೇರ್ ಪ್ರದೇಶ ತೋಟಗಾರಿಕೆ ಭೂಮಿಯಾಗಿ ಮಾರ್ಪಡುತ್ತಿದೆ. ಆದರೆ ಇದರಲ್ಲಿ ಹೆಚ್ಚಿನ ಭಾಗ ಕೃಷಿ ಭೂಮಿಯೇ ಆಗಿದೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆಗೆ ಹೆಚ್ಚುವರಿ ಬೇಕಾಗುವ ನೀರಿನಿಂದ ಕೃಷಿ ಭೂಮಿಯ ಬಳಕೆಗೆ ಕಡಿಮೆಯಾಗುತ್ತದೆ ಎಂದು ಅಧಿಕಾರಿ ತಿಳಿಸಿದರು.
ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಜಿಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ನಾಯಕ ಇತರರು ಇದ್ದರು.
...ಬಾಕ್ಸ್ ...
ಚಿಕ್ಕ ನೀರಾವರಿ ನಿರ್ಲಕ್ಷ್ಯ :
ಕರಾವಳಿ ಭಾಗದಲ್ಲಿ ಖಾರ್ಲಾ್ಯಂಡ್ ಒಡ್ಡುಗಳು ಹಾಳಾದ ಪರಿಣಾಮ ಉಪ್ಪು ನೀರು ಕೃಷಿ ಭೂಮಿಗೆ ನುಗ್ಗುತ್ತಿದೆ. ಅಲ್ಲದೇ ಕೆಲವೆಡೆ ಕುಡಿಯುವ ನೀರಿಗೂ ತತ್ವಾರವಾಗುತ್ತಿದೆ. ಚಿಕ್ಕ ನೀರಾವರಿ ಇಲಾಖೆಯವರ ಬಳಿ ಅಹವಾಲು ಹೇಳೋಣ ಎಂದರೆ ಆ ಇಲಾಖೆ ಅಧಿಕಾರಿಗಳು ಯಾವುದೇ ಸಭೆಗೆ ಬರುವುದಿಲ್ಲ. ಈ ಕುರಿತು ಸೂಕ್ತ ಕ್ರಮ ಆಗಬೇಕು ಎಂದು ಜಿಪಂ ಸದಸ್ಯರಾದ ಪ್ರದೀಪ ನಾಯಕ, ಜಗದೀಶ ನಾಯಕ, ಗಾಯತ್ರಿ ಗೌಡ ಮೊದಲಾದವರು ಆಗ್ರಹಿಸಿದರು.
ಅಂದಾಜು ತಯಾರಿಸಿ:
ಅರಣ್ಯ ಪ್ರದೇಶದಲ್ಲಿ ಇರುವ ಕೆರೆಗಳ ಮರುಪೂರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಸೀಬರ್ಡ್ ಎರಡನೇ ಹಂತ, ಹಳದೀಪುರ ಬಂದರು ನಿರ್ಮಾಣ ಸೇರಿದಂತೆ ಜಿಲ್ಲೆಯಲ್ಲಿ ಆಗಲಿರುವ ಅಭಿವೃದ್ಧಿ ಕಾಮಗಾರಿಗಳಿಗೆ ನೀರು ಹೆಚ್ಚುವರಿಯಾಗಿ ಎಷ್ಟು ಬೇಕಾಗಬಹುದು ಎಂದು ಸಂಬಂಧಪಟ್ಟ ಇಲಾಖೆಗಳು ಅಂದಾಜು ಸಿದ್ಧಪಡಿಸಬೇಕು ಎಂದು ಸಂಸದ ಹೆಗಡೆ ಹೇಳಿದರು.