ಆ್ಯಪ್ನಗರ

24 ಹಳ್ಳಿ ಜನರ ಪರದಾಟ, ಚಿಕಿತ್ಸೆಗೆ 48 ಕಿಮೀ ದೂರ ತೆರಳಬೇಕು

ಕಾರವಾರ : ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಜೊಯಿಡಾ ತಾಲೂಕಿನ ಡಿಗ್ಗಿ ಗ್ರಾಮದಲ್ಲಿ 2005ರಲ್ಲಿ ನಿರ್ಮಿಸಿದ ಸರಕಾರಿ ಆಸ್ಪತ್ರೆ 14 ವರ್ಷಗಳಲ್ಲಿ 2 ತಿಂಗಳು ಮಾತ್ರ ಕಾರ್ಯ ನಿರ್ವಹಿಸಿದೆ. ಇದರೊಂದಿಗೆ ಅರಣ್ಯ ಪ್ರದೇಶದಲ್ಲಿ ವಾಸಿಸುವವರಿಗೆ ಆರೋಗ್ಯ ಸೇವೆ ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆ ಹಳ್ಳ ಹಿಡಿಯುತ್ತಿದೆ.

Vijaya Karnataka 24 Jun 2019, 5:00 am
ಕಾರವಾರ : ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಜೊಯಿಡಾ ತಾಲೂಕಿನ ಡಿಗ್ಗಿ ಗ್ರಾಮದಲ್ಲಿ 2005ರಲ್ಲಿ ನಿರ್ಮಿಸಿದ ಸರಕಾರಿ ಆಸ್ಪತ್ರೆ 14 ವರ್ಷಗಳಲ್ಲಿ 2 ತಿಂಗಳು ಮಾತ್ರ ಕಾರ್ಯ ನಿರ್ವಹಿಸಿದೆ. ಇದರೊಂದಿಗೆ ಅರಣ್ಯ ಪ್ರದೇಶದಲ್ಲಿ ವಾಸಿಸುವವರಿಗೆ ಆರೋಗ್ಯ ಸೇವೆ ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆ ಹಳ್ಳ ಹಿಡಿಯುತ್ತಿದೆ.
Vijaya Karnataka Web KWR-22 GURUDATT 6A


ಗೋವಾ ಗಡಿಗೆ ಹೊಂದಿಕೊಂಡಿರುವ ಡಿಗ್ಗಿ ಊರು ಬಾಜಾರ್‌ಕಣಂಗ ಗ್ರಾ.ಪಂ. ವ್ಯಾಪ್ತಿಯಲ್ಲಿದೆ. ಇಲ್ಲಿನ ಸುತ್ತಲ 24 ಹಳ್ಳಿಗಳು ದಟ್ಟ ಅರಣ್ಯ ಪ್ರದೇಶದಲ್ಲಿದ್ದು, ಕಾಳಿ ಹುಲಿ ಸಂರಕ್ಷ ಣಾ ವಲಯದ ವ್ಯಾಪ್ತಿಗೆ ಒಳಪಟ್ಟಿವೆ. ಈ ಭಾಗದಲ್ಲಿ ಸುಮಾರು 4 ಸಾವಿರ ಜನಸಂಖ್ಯೆ ಇದ್ದು, ಚಿಕ್ಕ ಪುಟ್ಟ ಆರೋಗ್ಯದ ಸಮಸ್ಯೆ ಇದ್ದರೂ, ಇಲ್ಲಿನ ಜನ ಸುಮಾರು 48 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿ ದಾಂಡೇಲಿ ಅಥವಾ ಜೊಯಿಡಾಕ್ಕೆ ತೆರಳಬೇಕಿದೆ.

ಈ ಹಿನ್ನೆಲೆಯಲ್ಲಿ ಇಲ್ಲಿನ ಜನರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ 34 ಲಕ್ಷ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 2005ರಲ್ಲಿ ನಿರ್ಮಿಸಲಾಯಿತು. ಆದರೆ ಉದ್ಘಾಟನೆಗೊಂಡು ವರ್ಷವಾದರೂ, ಇಲ್ಲಿಗೆ ಯಾವುದೇ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಬಂದಿರಲಿಲ್ಲ. ಊರಿನ ಜನ ಹರಸಾಹಸ ಪಟ್ಟು ಸುದೀರ್ಘ ಹೋರಾಟ ನಡೆಸಿದ ಫಲವಾಗಿ ಒಬ್ಬ ವೈದ್ಯರು ಬಂದರಾದರೂ, ಕೇವಲ 2 ತಿಂಗಳು ಇಲ್ಲಿ ಕಾರ್ಯ ನಿರ್ವಹಿಸಿದರು. ಕಾಡಿನ ಬದುಕಿಗೆ ಹೊಂದಿಕೊಳ್ಳಲಾಗದೇ ಅವರು ಸಹ ವಾಪಸ್‌ ತೆರಳಿದ ಬಳಿಕ ಆಸ್ಪತ್ರೆ ಮತ್ತೆ ಬಾಗಿಲು ಮುಚ್ಚಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಮೂಲ ಸೌಕರ್ಯ ಕೊರತೆ : ''ಕಾಳಿ ನದಿಯು ನಮ್ಮ ಊರನ್ನು ಪ್ರಪಂಚದಿಂದ ಬೇರ್ಪಡಿಸಿದೆ. ರಸ್ತೆ, ವಿದ್ಯುತ್‌ ಮೊದಲಾದ ಮೂಲ ಸೌಕರ್ಯಗಳಿಗೂ ಕೊರತೆ ಇದೆ. ಮಳೆಗಾಲದಲ್ಲಂತೂ ನಮ್ಮ ಗ್ರಾಮ ಅಕ್ಷ ರಶಃ ನಡುಗಡ್ಡೆಯಂತಾಗುತ್ತದೆ. ಈ ಅವಧಿಯಲ್ಲಿ ಅನಾರೋಗ್ಯ ಪೀಡಿತರಿದ್ದರೆ ಅವರನ್ನು ಕಂಬಳಿಯಲ್ಲಿ ಹಾಕಿಕೊಂಡು ಸುಮಾರು 10 ಕಿ.ಮೀ.ವರೆಗೂ ಹೊತ್ತುಕೊಂಡೇ ಹೋಗುವ ಪರಿಸ್ಥಿತಿ ಇದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇರುವುದರಿಂದ ಇಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೂ ಅನೇಕ ಕಾನೂನು ತೊಡಕು ಎದುರಾಗಿದೆ'' ಎಂದು ಬಾಜಾರ್‌ಕಣಂಗ ಗ್ರಾ.ಪಂ. ಉಪಾಧ್ಯಕ್ಷ ಅಜಿತ್‌ ಮಿರಾಶಿ ಅಳಲು ತೋಡಿಕೊಂಡರು.


5 ಲಕ್ಷ ವೆಚ್ಚದಲ್ಲಿ ನವೀಕರಣ : ಕಾರ್ಯವನ್ನೇ ನಿರ್ವಹಿಸದ ಆಸ್ಪತ್ರೆ ಕಟ್ಟಡವನ್ನು 2014ರಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ. ಆದರೆ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೇ ಬಾಗಿಲು ಮುಚ್ಚಿರುವ ಆಸ್ಪತ್ರೆಯಲ್ಲಿನ ವೈದ್ಯಕೀಯ ಉಪಕರಣಗಳು ತುಕ್ಕು ಹಿಡಿಯುತ್ತಿವೆ. ಬಳಕೆಯಾಗದೇ ಕಟ್ಟಡ ಶಿಥಿಲವಾಗುತ್ತಿದೆ. ಊರಿನ ಸಾರ್ವಜನಿಕರು ಹೋರಾಟ ಮಾಡಿದ್ದರಿಂದ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದೆ. ಹೀಗಿದ್ದರೂ ಯಾವುದೇ ಪ್ರಯೋಜನಕ್ಕೆ ಬರದೇ ಜನರ ಹಣ ಪೋಲಾಗಿದೆ ಎಂದು ಸ್ಥಳೀಯ ಗೃಹಿಣಿ ಮಂಜುಳಾ ಆರೋಪಿಸುತ್ತಾರೆ.

ಅದಿರು ಕಣಜವಾಗಿತ್ತು : ಡಿಗ್ಗಿ ಮತ್ತು ಸುತ್ತಲಿನ ಹಳ್ಳಿಗಳು ಮ್ಯಾಂಗ್‌ನೀಸ್‌ ಅದಿರಿನ ಕಣಜವಾಗಿದ್ದು ಬ್ರಿಟಿಶ್‌, ಆಡಳಿತದಿಂದ ಹಿಡಿದು 70ರ ದಶಕದ ವರೆಗೆ ಇಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಆಗ ಇಲ್ಲಿ ರಸ್ತೆಗಳು ನಿರ್ಮಾಣಗೊಂಡಿದ್ದು, ವಾಹನ ಸಂಚಾರವೂ ಜೋರಾಗಿತ್ತು. ರಾಜ್ಯ ಹೆದ್ದಾರಿ 46 ಇಲ್ಲಿನ ಗ್ರಾಮಗಳ ಮೂಲಕ ಹಾದು ಹೋಗಿತ್ತು. ಬಳಿಕ ಗಣಿಗಾರಿಕೆ ನಿಂತು ರಸ್ತೆಗಳು ಬಂದ್‌ ಆದವು. ಈಗ ಇಲ್ಲಿನ ಊರುಗಳು ಸಮಾಜದ ಮುಖ್ಯವಾಹಿನಿಯಿಂದಲೇ ದೂರವಾಗುವ ಹಂತದಲ್ಲಿವೆ ಎಂದು ಊರಿನ ಹಿರಿಯರು ಆತಂಕ ಪಡುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ