ಆ್ಯಪ್ನಗರ

ಪ್ರಥಮವಾಗಿ ಚಿತ್ರಮೂಲ ಔಷಧ ಗಿಡವನ್ನು ಅಭಿವೃದ್ಧಿಪಡಿಸಿದೆ.

ಶಿರಸಿ : ಪಶ್ಚಿಮಘಟ್ಟದಲ್ಲಿ ಅಳವಿನಂಚಿನಲ್ಲಿರುವ ಔಷಧ ಸಸ್ಯಗಳನ್ನು ಉಳಿಸುವ ಉದ್ದೇಶದೊಂದಿಗೆ ನಗರದಲ್ಲಿ ಸಸ್ಯ ಅಂಗಾಂಶ ಕೃಷಿ ಪ್ರಯೋಗಾಲಯ ಕಾರ್ಯಚಟುವಟಿಕೆ ನಡೆಸುತ್ತಿದೆ. ಇದೀಗ ಪ್ರಥಮವಾಗಿ ಚಿತ್ರಮೂಲ ಔಷಧ ಗಿಡವನ್ನು ಅಭಿವೃದ್ಧಿಪಡಿಸಿದೆ.

Vijaya Karnataka 20 Jul 2019, 5:00 am
ಶಿರಸಿ : ಪಶ್ಚಿಮಘಟ್ಟದಲ್ಲಿ ಅಳವಿನಂಚಿನಲ್ಲಿರುವ ಔಷಧ ಸಸ್ಯಗಳನ್ನು ಉಳಿಸುವ ಉದ್ದೇಶದೊಂದಿಗೆ ನಗರದಲ್ಲಿ ಸಸ್ಯ ಅಂಗಾಂಶ ಕೃಷಿ ಪ್ರಯೋಗಾಲಯ ಕಾರ್ಯಚಟುವಟಿಕೆ ನಡೆಸುತ್ತಿದೆ. ಇದೀಗ ಪ್ರಥಮವಾಗಿ ಚಿತ್ರಮೂಲ ಔಷಧ ಗಿಡವನ್ನು ಅಭಿವೃದ್ಧಿಪಡಿಸಿದೆ.
Vijaya Karnataka Web SRS-19SRS11A


ನಗರದ ಬನವಾಸಿ ರಸ್ತೆಯಲ್ಲಿರುವ ಭಂಡಿಮನೆ ಲೈಫ್‌ ಸೈನ್ಸ್‌ ರಿಸರ್ಚ್‌ ಫೌಂಡೇಶನ್‌ ಆವಾರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಂಶೋಧನಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ವಿನಯ ಹೆಗಡೆ ಭಂಡಿಮನೆ, ನಿರ್ದೇಶಕ ಕೇಶವ ಎಚ್‌.ಕೊರ್ಸೆ ಮುಂತಾದವರು ಈ ಕುರಿತು ವಿವರಣೆ ನೀಡಿದರು.

ಸಾಮಾನ್ಯವಾಗಿ ಬಾಳೆ ಅಂಗಾಂಶ ಕೃಷಿ ಮಾಡುವುದಿದೆ. ಆದರೆ ಈ ಪ್ರಯೋಗಾಲಯದಲ್ಲಿ ಪಶ್ಚಿಮಘಟ್ಟ ಪ್ರದೇಶದ ಅಮೂಲ್ಯ ಗಿಡಗಳು, ಕೃಷಿಬೆಳೆ ವೈವಿಧ್ಯ ಪ್ರಬೇಧಗಳ ಸಸ್ಯೋತ್ಪಾದನೆಯನ್ನು ಅಂಗಾಂಶ ಕೃಷಿಯ ಮೂಲಕ ದೊಡ್ಡ ಪ್ರಮಾಣದಲ್ಲಿ ಮಾಡುವ ಉದ್ದೇಶ ಹೊಂದಿದ್ದೇವೆ. ಜತೆಯಲ್ಲಿ ಸಸ್ಯಗಳ ರಾಸಾಯನಿಕ ವಿಶ್ಲೇಷಣೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸಂಶೋಧನಾ ಕೇಂದ್ರದಲ್ಲಿ ಪ್ರಮುಖವಾಗಿ ಅಂಗಾಂಶ ಕೃಷಿ, ಸಸ್ಯ ರಸಾಯನಶಾಸ್ತ್ರ ಹಾಗೂ ಜೀವರಸಾಯನಶಾಸ್ತ್ರ ಪ್ರಯೋಗಾಲಯಗಳಿವೆ. ಪ್ರಯೋಗಾಲಯದ ಗಿಡಗಳನ್ನು ಬೆಳೆಸಲು ವಿಶಾಲ ಹಸಿರುಮನೆ ಹಾಗೂ ನರ್ಸರಿ ಸೌಲಭ್ಯ ಈ ಕೇಂದ್ರದಲ್ಲಿದೆ. ಇಲ್ಲಿ ಅಭಿವೃದ್ಧಿಪಡಿಸಿದ ಗಿಡಗಳನ್ನು ಕೃಷಿ ಜಮೀನಿನಲ್ಲಿ ಬೆಳೆಸಿ ಈ ಫಲಿತಾಂಶ ಆಧಾರದಲ್ಲಿ ರೈತರಿಗೆ ಬೆಳೆಸಲು ಸಲಹೆ ನೀಡಲಾಗುತ್ತದೆ ಎಂದರು.

ಈಗಾಗಲೇ ಸುಮಾರು 50ಸಸ್ಯ ಪ್ರಬೇಧಗಳನ್ನು ಅಂಗಾಂಶ ಕೃಷಿಯ ಮೂಲಕ ಪ್ರಯೋಗ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ವೆನಿಲ್ಲಾ, ಔಷಧಿಗಿಡ, ಸಾಂಬಾರ ಬೆಳೆ, ಕೃಷಿ ಅರಣ್ಯ, ಪಶ್ಚಿಮಘಟ್ಟ ಶ್ರೇಣಿಯ ಅಪರೂಪದ ಗಿಡಮೂಲಿಕೆ ಒಳಗೊಂಡಿದೆ. ಅದರ ಸಂಪೂರ್ಣ ಫಲಿತಾಂಶ ಬಂದ ನಂತರ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಸಾಮಾನ್ಯವಾಗಿ ಸಸ್ಯ ಅಂಗಾಂಶ ಕೃಷಿಯಲ್ಲಿ ಮೂಲ ಕುಡಿಯೊಂದರಿಂದ ಸಾವಿರಾರು ಸಸಿಗಳನ್ನು ಅಭಿವೃದ್ಧಿಪಡಿಸಬಹುದು. ಹಾರ್ಮೊನು, ನ್ಯೂಟಿಶಿಯನ್‌ಗಳನ್ನು ಒದಗಿಸಿ ಗಿಡಗಳನ್ನು ಅಭಿವೃದ್ಧಿಪಡಿಸಲು ಒಂದೆರಡು ವರ್ಷಗಳು ಬೇಕಾಗುತ್ತದೆ. ಹೀಗೆ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ಸಸಿಗಳನ್ನು ನೇರವಾಗಿ ಭೂಮಿಯಲ್ಲಿ ನೆಡಲಾಗದು. ಅದನ್ನು ನಂತರ ಪಾಲಿಹೌಸ್‌, ಗ್ರೀನ್‌ಹೌಸ್‌ಗಳಲ್ಲಿ ಬೆಳೆಸಬೇಕಾಗುತ್ತದೆ ಎಂದರು.

ಇದೀಗ ಪ್ರಥಮ ಬಾರಿಗೆ ಅಭಿವೃದ್ಧಿಪಡಿಸಿದ ಚಿತ್ರಮೂಲ ಔಷಧಿಗಿಡವನ್ನು ನೋವು ನಿವಾರಕ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದಕ್ಕೆ ಬೇಡಿಕೆಯಿದ್ದು ರೈತರು ಹೆಚ್ಚಿನ ಖರ್ಚಿಲ್ಲದೇ ತೋಟ, ಬೆಣಗಳಲ್ಲಿ ಬೆಳೆಸಬಹುದಾಗಿದೆ ಎಂದರು.

ಸಂಶೋಧನಾ ಕೇಂದ್ರದ ಟ್ರಸ್ಟಿ ವಿ.ಜಿ.ಹೆಗಡೆ ಭಂಡಿ, ನಿರ್ದೇಶಕ ವಿಂಧ್ಯಾ ಹೆಗಡೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ