ಆ್ಯಪ್ನಗರ

ಮನೆ ಬಿಡುತ್ತಿರುವ ಮೊಗಳ್ಳಿ ಜನ

ಕೃಷ್ಣಮೂರ್ತಿ ಟಿ.ಕೆರೆಗದ್ದೆ ಶಿರಸಿ: ಮೂರು ದಶಕಗಳ ನಂತರ ಮೊಗಳ್ಳಿಯ ಜನ ಊರು ಖಾಲಿ ಮಾಡುವ ಪ್ರಸಂಗ ಎದುರಾಗುತ್ತಿದೆ... ವರದಾ ನದಿ ನೀರು ಈ ಊರಿನ ಜಮೀನುಗಳಿಗಷ್ಟೇ ಅಲ್ಲದೇ ಮನೆಗಳ ಸಮೀಪ ಬರುತ್ತಿದೆ. ಹೀಗಾಗಿ ಇಲ್ಲಿನ ಪುರುಷರನ್ನು ಹೊರತು ಪಡಿಸಿ ಮಹಿಳೆಯರು, ಮಕ್ಕಳೆಲ್ಲ ಸಂಬಂಧಿಗಳ ಮನೆ ಸೇರಿಕೊಳ್ಳುತ್ತಿದ್ದಾರೆ.

Vijaya Karnataka 11 Aug 2019, 5:00 am
ಕೃಷ್ಣಮೂರ್ತಿ ಟಿ.ಕೆರೆಗದ್ದೆ ಶಿರಸಿ: ಮೂರು ದಶಕಗಳ ನಂತರ ಮೊಗಳ್ಳಿಯ ಜನ ಊರು ಖಾಲಿ ಮಾಡುವ ಪ್ರಸಂಗ ಎದುರಾಗುತ್ತಿದೆ... ವರದಾ ನದಿ ನೀರು ಈ ಊರಿನ ಜಮೀನುಗಳಿಗಷ್ಟೇ ಅಲ್ಲದೇ ಮನೆಗಳ ಸಮೀಪ ಬರುತ್ತಿದೆ. ಹೀಗಾಗಿ ಇಲ್ಲಿನ ಪುರುಷರನ್ನು ಹೊರತು ಪಡಿಸಿ ಮಹಿಳೆಯರು, ಮಕ್ಕಳೆಲ್ಲ ಸಂಬಂಧಿಗಳ ಮನೆ ಸೇರಿಕೊಳ್ಳುತ್ತಿದ್ದಾರೆ.
Vijaya Karnataka Web SRS-10SRS4A


ಮೊಗಳ್ಳಿ ಈ ಊರು ಹೆಸರು ಕೇಳುತ್ತಲೇ ವರದಾ ನದಿಯ ನೆನಪಾಗುತ್ತದೆ. ತಾಲೂಕಿನ ಪೂರ್ವಭಾಗದಲ್ಲಿ ಆರೇಳು ಕಿ.ಮೀ. ದೂರ ಹರಿದಿರುವ ಜೀವನದಿ ವರದೆಗೆ ನೆರೆ ಬಂತೆಂದರೆ ಮೊದಲು ಈ ಗ್ರಾಮದ ಜನರಿಗೆ ಸಂಕಷ್ಟ ಎದುರಾಗುತ್ತದೆ. ನೆರೆಯಿಂದಾಗಿ ನದಿ ಅಕ್ಕಪಕ್ಕದ ಕೃಷಿ ಜಮೀನುಗಳಷ್ಟೇ ಅಲ್ಲದೇ ಮೊಗಳ್ಳಿ ಊರಿನ ಕಡೆಯೂ ತುಂಬಿಕೊಳ್ಳುತ್ತಿದೆ. ಹೀಗಾಗಿ ಎರಡು ದಿನಗಳಿಂದ ಗ್ರಾಮಸ್ಥರು ನಿಧಾನವಾಗಿ ತಮ್ಮ ಮನೆಗಳಿಗೆ ಬೀಗ ಹಾಕಿ ನೆಂಟರ ಮನೆಯತ್ತ ಮುಖ ಮಾಡಿದ್ದಾರೆ.

ವರದೆ ಉಕ್ಕಿ ಹರಿದರೆ ಮೊದಲು ಪರಿಣಾಮವಾಗುವುದು ಮೊಗಳ್ಳಿ ಜನರಿಗೆ. ಇಲ್ಲಿನ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗುತ್ತದೆ. ಭತ್ತ ಬಿತ್ತನೆ ಮತ್ತು ನಾಟಿ ಮಾಡಿದ ಕೃಷಿ ಭೂಮಿ ಜಲಾವೃತವಾಗುತ್ತದೆ. ಈ ಬಾರಿಯೂ ಅದೇ ಸ್ಥಿತಿ ಎದುರಾಗಿದೆ. ಆದರೆ ಈ ಬಾರಿ ಇನ್ನೊಂದು ಸಮಸ್ಯೆ ಎಂದರೆ ಕೃಷಿ ಭೂಮಿಯಷ್ಟೇ ಅಲ್ಲ, ಊರಿನ ಸಮೀಪವೂ ನೀರು ಬರುತ್ತಿದೆ. ಇದು ಸ್ಥಳೀಯರ ಆತಂಕ ಹೆಚ್ಚಿಸಿದೆ. ಇನ್ನೂ ನೀರು ಹೆಚ್ಚಾದರೆ ಪರಿಸ್ಥಿತಿ ಹದಗೆಡುತ್ತದೆ ಎಂದು ಗ್ರಾಮಸ್ಥರು ಕಂಗಾಲಾಗಿದ್ದಾರೆ.

130 ಮನೆಗಳ ಊರು: ಭಾಶಿ ಗ್ರಾ.ಪಂ. ವ್ಯಾಪ್ತಿಯ ಮೊಗಳ್ಳಿಯಲ್ಲಿ ಸುಮಾರು 130 ಮನೆಗಳಿದ್ದು, ಸಾವಿರ ಜನ ನೆಲೆಸಿದ್ದಾರೆ. ಕೃಷಿಯೇ ಇವರ ಜೀವಾನಾಧಾರ. ಭತ್ತ ಮತ್ತಿತರ ಬೆಳೆ ಬೆಳೆಯುತ್ತಾರೆ. ಮಳೆ ಇಲ್ಲದಿದ್ದರೂ ಕಷ್ಟ, ಹೆಚ್ಚಾದರೂ ಕಷ್ಟ. ಈಗಾಗಲೇ ಮೊಗಳ್ಳಿ ಜನ ಅವಲಂಬಿಸಿದ್ದ ಬನವಾಸಿಗೆ ಸಾಗುವ ರಸ್ತೆ ಬಂದ್‌ ಆಗಿದೆ. ಇನ್ನು ಹರಿಶೀ ಮಾರ್ಗದ ರಸ್ತೆಯಲ್ಲೂ ನೀರು ತುಂಬಿಕೊಳ್ಳುತ್ತಿದೆ. ಈ ಮಾರ್ಗದಿಂದಲೇ ಹೇಗೋ ಜನ ನೀರನ್ನು ದಾಟಿ ಬರುತ್ತಿದ್ದಾರೆ.

ಮನೆಗೆ ಬೀಗ: ಮೊಗಳ್ಳಿಯಲ್ಲಿ ನೀರು ಏರಿಕೆಯಾಗುತ್ತಿದ್ದು, 130 ಮನೆಗಳಲ್ಲಿ ಅರ್ಧಕ್ಕೂ ಹೆಚ್ಚು ನಿವಾಸಿಗಳು ಮನೆಗೆ ಬೀಗ ಹಾಕಿ ತೆರಳಿದ್ದಾರೆ. ಇನ್ನು ಒಂದಷ್ಟು ಮನೆಗಳ ಗಂಡಸರು ಅಲ್ಲಿಯೇ ಇದ್ದು, ಅವರ ಮನೆಗಳ ಮಹಿಳೆಯರು, ಮಕ್ಕಳು, ವೃದ್ಧರನ್ನು ಸಂಬಂಧಿಗಳ ಮನೆ ಕಳಿಸಿ ಕೊಟ್ಟಿದ್ದಾರೆ. ಜಾನುವಾರುಗಳನ್ನು ಬೇರೆಡೆಗೆ ಸಾಗಿಸಿದ್ದಾರೆ. ಮನೆಯಲ್ಲಿ ಊಟಕ್ಕೆಂದು ಸಂಗ್ರಹಿಸಿಟ್ಟಿದ್ದ ಭತ್ತವನ್ನು ಟ್ರ್ಯಾಕ್ಟರ್‌ ಮೂಲಕ ಸಾಗಿಸುತ್ತಿರುವುದು ಕಂಡುಬಂತು.

ಇದ್ದಕ್ಕಿದ್ದಂತೆ ಏರಿದ ನೀರು: ಸಾಮಾನ್ಯವಾಗಿ ಸಾಗರ, ಸೊರಬ ಭಾಗದಲ್ಲಿ ಮಳೆ ಹೆಚ್ಚಾದಂತೆ ವರದೆ ಹರಿವು ಜಾಸ್ತಿಯಾಗುತ್ತದೆ. ಐದು ದಿನಗಳಿಂದ ವಿಸ್ತಾರವಾಗಿ ಹರಿಯುತ್ತಿರುವ ವರದೆ ಶುಕ್ರವಾರ ರಾತ್ರಿಯಿಂದ ತನ್ನ ಮಟ್ಟವನ್ನು ಮೀರಿ ಹೆಚ್ಚಿಸಿಕೊಂಡಿದೆ. 1992ರ ಅವಧಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರು ಬಂದಿತ್ತು ಎಂದು ಹೇಳುವ ಇಲ್ಲಿನ ಜನ ಈ ಬಾರಿ ಅದೇ ಸ್ಥಿತಿ ಬರಬಹುದೆಂಬುದನ್ನು ಅರಿತಿದ್ದಾರೆ. ಹೀಗಾಗಿ ಮುಂಜಾಗ್ರತೆ ವಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ