ಆ್ಯಪ್ನಗರ

ಬಸರಮನೆಗೆ ಈ ಸಂಕವೇ ದಾರಿ

ಸಿದ್ದಾಪುರ : ತಾಲೂಕಿನ ಕೊರ್ಲಕೈ ಗ್ರಾ.ಪಂ. ವ್ಯಾಪ್ತಿಯ ಹೆಗ್ಗೆಕೊಪ್ಪ ಗ್ರಾಮದ ಬಸರಮನೆ ಜನತೆಗೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇನ್ನೂ ಸೇತುವೆಯ ಭಾಗ್ಯ ದೊರೆತಿಲ್ಲ.

Vijaya Karnataka 23 Jun 2019, 5:00 am
ಸಿದ್ದಾಪುರ : ತಾಲೂಕಿನ ಕೊರ್ಲಕೈ ಗ್ರಾ.ಪಂ. ವ್ಯಾಪ್ತಿಯ ಹೆಗ್ಗೆಕೊಪ್ಪ ಗ್ರಾಮದ ಬಸರಮನೆ ಜನತೆಗೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇನ್ನೂ ಸೇತುವೆಯ ಭಾಗ್ಯ ದೊರೆತಿಲ್ಲ.
Vijaya Karnataka Web this is the way to the basement
ಬಸರಮನೆಗೆ ಈ ಸಂಕವೇ ದಾರಿ


ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಅರೆಂದೂರು ಹೊಳೆಗೆ ಸೇರುವ ಪುರದಹೊಳೆ ಎನ್ನುವ ಪುಟ್ಟಹಳ್ಳ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಈ ಹಳ್ಳ ಬಸರಮನೆ ಎಂಬ ಸುಮಾರು 35-40 ಜನಸಂಖ್ಯೆ ಇರುವ ಗ್ರಾಮವನ್ನು ಸುತ್ತುವರಿದು ದ್ವೀಪವನ್ನಾಗಿಸುತ್ತದೆ.

ಮಳೆಗಾಲದ 4-5 ತಿಂಗಳು ಇಲ್ಲಿಯ ಪರದಾಟ ಹೇಳತೀರದು. ಮಕ್ಕಳು ಶಾಲೆಗೆ ಹೋಗಲು, ಅನಾರೋಗ್ಯಕ್ಕೆ ತುತ್ತಾದವರು ಆಸ್ಪತ್ರೆಗೆ ಹೋಗಲು, ದಿನಬಳಕೆಯ ಸಾಮಾನು ತರಲು, ರೇಷನ್‌ ತರಲು 50 ಅಡಿ ಉದ್ದದ ಮರದ ಸಂಕದ ಮೇಲೆ ಬರಬೇಕು ಸ್ವಲ್ಪ ಓಲಾಡಿದರೂ ಹಳ್ಳಕ್ಕೆ ಬೀಳುವುದು ಗ್ಯಾರಂಟಿ.

ಇಲ್ಲಿಯ ಮಕ್ಕಳು ಸುಮಾರು 2-3 ಕಿ.ಮೀ. ದೂರದ ಕಲ್ಲೂರು ಇಲ್ಲವೇ ಇಷ್ಟೇ ದೂರದ ಮನಮನೆ ಗ್ರಾಮಕ್ಕೆ ಹೋಗಬೇಕು. ಈಗ್ಗೆ ನಾಲ್ಕು ವರ್ಷದ ಹಿಂದೆ ಇಲ್ಲಿಯ ಮಂಜುನಾಥ ಹಾಲಾ ನಾಯ್ಕ ಎನ್ನುವ ಒಂಬತ್ತನೆ ತರಗತಿಯ ಬಾಲಕ ಇದೇ ಮರದ ಸಂಕದ ಮೇಲೆ ದಾಟುವಾಗ ಹಳ್ಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಆ ವರ್ಷ ಅವನು ಮಳೆಗಾಲ ಮುಗಿಯುವವರೆಗೂ ಶಾಲೆಗೆ ಹೋಗಿರಲೇ ಇಲ್ಲ.

ಇಲ್ಲಿಯ ಗ್ರಾಮಸ್ಥರು 50 ವರ್ಷದಿಂದ ತಮಗೊಂದು ಸೇತುವೆ ಮಾಡಿಕೊಡಿ ಎಂಬ ಬೇಡಿಕೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಆಳುವ ದೊರೆಗಳಿಗೆ ಇವರ ಕೂಗು ಕೇಳುತ್ತಿಲ್ಲ. ಐದು ವರ್ಷದ ಹಿಂದೆ ಹಳ್ಳದ ಎರಡೂ ಕಡೆಗೆ ಕಂಬವನ್ನು ನಿರ್ಮಿಸಲಾಗಿದೆ. ಇನ್ನೇನು ಸೇತುವೆಯಾಗುತ್ತದೆ, ನಮ್ಮ ಸಂಕಷ್ಟ ದೂರವಾಗುತ್ತದೆ ಎಂದು ಭಾವಿಸಿದ್ದ ಗ್ರಾಮಸ್ಥರಿಗೆ ನಿರಾಶೆಯಾಗಿದೆ. ಕಾರಣ ಎರಡೂ ಕಡೆಗೆ ಕಂಬವಾಗಿರುವುದು ಬಿಟ್ಟರೆ ಮುಂದಿನ ಕೆಲಸ ಮಾಡಿಲ್ಲ. ಅಲ್ಲದೆ ಕಬ್ಬಿಣದ ಸರಳನ್ನು ಹಾಗೆಯೇ ಬಿಟ್ಟಿರುವುದರಿಂದ ಮಳೆಗಾಲದಲ್ಲಿ ನೀರು ಹರಿಯುವುದರಿಂದ ಕಬ್ಬಿಣದ ಸರಳು ಕಾಣದೇ ಕಾಲಿಗೆ ಚುಚ್ಚುವ ಅಪಾಯವಿದೆ.

ಈ ಸೇತುವೆ ಕಾಮಗಾರಿ ಅಪೂರ್ಣವಾಗಿದೆಯೇ? ಅಥವಾ ಕಾಮಗಾರಿ ಇರುವುದಾದರೂ ಎಷ್ಟು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲಿಯ ಗ್ರಾಮಸ್ಥರಿಗೆ ಇಲ್ಲ. ಈ ಬಗ್ಗೆ ಜಿ.ಪಂ. ಎಂಜನೀಯರ್‌ ಪರಶುರಾಮ ಎಂಬುವವರನ್ನು ಸಂಪರ್ಕಿಸಿದಾಗ ಅವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಕಾಗದ ಪತ್ರದಲ್ಲಿ ಇಲ್ಲಿಯ ಸೇತುವೆ ನಿರ್ಮಾಣವಾಗಿದೆ ಎಂದು ನಮೂದಾಗಿದೆಯೋ ಏನೋ? ಎಂದು ಇಲ್ಲಿಯ ಗ್ರಾಮಸ್ಥರು ಹೇಳುತ್ತಾರೆ.

ಸ್ಥಳೀಯ ಕೊರ್ಲಕೈ ಗ್ರಾ.ಪಂ. ತನ್ನ ಅನುದಾನದಲ್ಲಿ ಎರಡು ಸಾವಿರ ರೂ. ನೀಡುತ್ತದೆ ಅದರ ಜತೆಗೆ ಗ್ರಾಮಸ್ಥರು ಕೈಜೋಡಿಸಿ ಪ್ರತಿವರ್ಷ ಮರದ ಸಂಕ ನಿರ್ಮಿಸಿಕೊಳ್ಳುತ್ತಾರೆ. ಮಳೆಗಾಲ ಅಬ್ಬರಿಸಿದರೆ ಈ ಸಂಕ ತೇಲಿ ಹೋಗುತ್ತದೆ. ಆಗ ಇವರಿಗೆ ದೇವರೇ ಗತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ