ಆ್ಯಪ್ನಗರ

ಮತದಾರರು ಫಲಿತಾಂಶವನ್ನೇ ಮರೆತರೆ..?!

ಶಿರಸಿ : ಲೋಕಸಭಾ ಚುನಾವಣೆಯ ಮತ ಚಲಾವಣೆ ಏನೋ ಆಗಿದೆ. ಆದರೆ ಫಲಿತಾಂಶದ ಘೋಷಣೆ ಇನ್ನೂ ಬಾಕಿ ಇದೆ. ಆದರೆ ಮತದಾರರ ವಲಯದಲ್ಲಿ ಮಾತ್ರ ಈ ವಿಷಯ ಮರೆತೇ ಹೋಗಿದೆಯೇನೋ ಎನ್ನುವಂತಿದೆ.

Vijaya Karnataka 17 May 2019, 5:00 am
ಶಿರಸಿ : ಲೋಕಸಭಾ ಚುನಾವಣೆಯ ಮತ ಚಲಾವಣೆ ಏನೋ ಆಗಿದೆ. ಆದರೆ ಫಲಿತಾಂಶದ ಘೋಷಣೆ ಇನ್ನೂ ಬಾಕಿ ಇದೆ. ಆದರೆ ಮತದಾರರ ವಲಯದಲ್ಲಿ ಮಾತ್ರ ಈ ವಿಷಯ ಮರೆತೇ ಹೋಗಿದೆಯೇನೋ ಎನ್ನುವಂತಿದೆ.
Vijaya Karnataka Web voters forget the results
ಮತದಾರರು ಫಲಿತಾಂಶವನ್ನೇ ಮರೆತರೆ..?!


ಮತದಾನದ ನಂತರದ ಕೆಲವೇ ದಿನಗಳಲ್ಲಿ ಮತಗಳ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಿದ್ದರೆ ಕುತೂಹಲದ ಸರಣಿಗೆ ತೆರೆ ಬಿದ್ದಂತೆ ಆಗುತ್ತಿತ್ತು. ಆದರೆ ಈ ಬಾರಿ ಹಾಗಾಗಿಲ್ಲ. ಇನ್ನೊಂದೆಡೆ ಅಷ್ಟೊಂದು ಆಸಕ್ತಿ ಕುತೂಹಲವೂ ಉಳಿದಿಲ್ಲ ಎಂಬಂಥ ಸನ್ನಿವೇಶ ಸದ್ಯಕ್ಕೆ ಕಂಡು ಬರುತ್ತಿದೆ.

ಈ ಬಾರಿ ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯೊಂದರ ಮತದಾನದ ದಿನ ಹಾಗೂ ಮತ ಎಣಿಕೆಯ ದಿನ ಮಧ್ಯದಲ್ಲಿ ಬರೋಬ್ಬರಿ ಒಂದು ತಿಂಗಳ ಅಂತರ ಇದೆ. ಇದು ಚುನಾವಣಾ ಫಲಿತಾಂಶದ ಘೋಷಣೆಯ ಬಗ್ಗೆ ಕುತೂಹಲ ಕುಂಠಿತ ಆಗುವುದಕ್ಕೆ ಕಾರಣವಾಗಿದೆ.

ಈ ಮೊದಲು ಎರಡು ತಿಂಗಳ ಹಿಂದೆ ಲೋಕಸಭಾ ಚುನಾವಣೆ ಘೋಷಣೆ ಆಗುತ್ತಲೇ ಎಲ್ಲೆಂದರಲ್ಲಿ ಅದರ ಬಗ್ಗೆಯೇ ಸುದ್ದಿಗಳು ಮಾತುಕತೆಗಳು ಹರಟೆ ಎಲ್ಲ ನಡೆಯುತ್ತಿದ್ದವು. ಹೋದಲ್ಲಿ ಬಂದಲ್ಲಿ ಎಲ್ಲೆಂದರಲ್ಲಿ ಅದೇ ವಿಷಯದ ಚರ್ಚೆ ನಡೆಯುತ್ತಿತ್ತು.

ಮತದಾನದ ದಿನದ ನಂತರದಲ್ಲಿಯೂ ಇಂಥ ಹರಟೆಗಳು ಒಂದು ವಾರ ಎಲ್ಲೆಡೆ ಕೇಳಿ ಬರುತ್ತಿತ್ತು.

ಆದರೆ ಹದಿನೈದು ದಿನಗಳಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಬಗ್ಗೆ ಎಲ್ಲಿಯೂ ಏನೂ ಆಸಕ್ತಿಯೇ ಇಲ್ಲ ಎಂಬಂಥ ಸನ್ನಿವೇಶ ಉಂಟಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದುವೆ ಮಂಗಲ ಕಾರ್ಯಗಳಿಗೆ ಜನರು ಸೇರಿದರೆ ಕ್ಷೇತ್ರದ ಚುನಾವಣೆಯ ವಿಷಯ ಚರ್ಚೆಗೇ ಬರುತ್ತಿಲ್ಲ.

ಪೈಪೋಟಿ ಇಲ್ಲದ್ದು... : ಹೀಗೆ ಈ ಕ್ಷೇತ್ರದಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಹೆಚ್ಚಿನ ಕುತೂಹಲ ಇಲ್ಲದೇ ಇರುವುದಕ್ಕೆ ಮತ್ತು ಒಂದು ಪ್ರಮುಖ ಕಾರಣ ಇದೆ ಎನ್ನುವವರೂ ಇದ್ದಾರೆ. ಈ ಬಾರಿ ಈ ಕ್ಷೇತ್ರದಲ್ಲಿ ಪ್ರಮುಖ ಪಕ್ಷ ಗಳ ನಡುವೆ ಪ್ರಬಲ ಪೈಪೋಟಿಯೇ ನಡೆಯಲಿಲ್ಲ ಎನ್ನುವ ಅಭಿಪ್ರಾಯ ಅನೇಕರದು. ಚುನಾವಣೆ ಭಾರಿ ತುರುಸಿನಿಂದ ನಡೆದಿದ್ದರೆ, ಅಬ್ಬರದ ಪ್ರಚಾರ ಕಾರ್ಯ ಆಗಿದ್ದರೆ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಾಗುತ್ತಿತ್ತು. ಆದರೆ ಹಾಗಾಗಿಯೇ ಇಲ್ಲ. ಅದಕ್ಕಾಗಿ ಈಗ ಫಲಿತಾಂಶದ ಬಗ್ಗೆ ಕುತೂಹಲ ಕಡಿಮೆಯಾಗಿದೆ ಎನ್ನುತ್ತಾರೆ.

ಅವಲೋಕನ ಸಭೆಯಿಂದ : ಬಿಜೆಪಿಯವರು ಇದೇ ಮೊದಲ ಬಾರಿಗೆ ಈ ಬಾರಿ ಲೋಕಸಭಾ ಚುನಾವಣೆಯ ನಂತರದಲ್ಲಿ ಕ್ಷೇತ್ರದ ವಿವಿಧೆಡೆ ಅವಲೋಕನ ಸಭೆಗಳನ್ನು ನಡೆಸಿದ್ದಾರೆ. ಚುನಾವಣೆಯ ವಿವಿಧ ವಿಷಯಗಳು ಮತ್ತೊಮ್ಮೆ ಈ ಸಭೆಗಳಲ್ಲಿ ಪ್ರಸ್ತಾಪವಾಗಿವೆ. ಇದರೊಂದಿಗೆ ಅಷ್ಟರ ಮಟ್ಟಿಗೆ ಚುನಾವಣೆಯ ವಿಷಯ ಚರ್ಚೆಯಲ್ಲಿ ಸಾರ್ವಜನಿಕರ ಮಧ್ಯೆ ಕಳೆದುಕೊಂಡಂತಾಗಿದೆ. ಆದರೂ ಈ ಬಗ್ಗೆ ಹೆಚ್ಚಿನ ಮಾತುಕತೆ ಹರಟೆ ಏನೂ ನಡೆಯುತ್ತಲೇ ಇಲ್ಲ. ಇನ್ನೇನಿದ್ದರೂ ಫಲಿತಾಂಶದ ಹಿಂದಿನ ದಿನ ಕುತೂಹಲ ಸ್ವಲ್ಪ ಮಟ್ಟಿಗೆ ಹೆಚ್ಚಬಹುದೇನೋ.

ದೇಶ ಮಟ್ಟದ ಯೋಚನೆ : ಈ ಮಧ್ಯೆ ಸ್ಥಳೀಯ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಬಗ್ಗೆ ಕುತೂಹಲ ಸಾಕಷ್ಟು ಕಡಿಮೆಯಾಗಿದ್ದರೂ ಅನೇಕರು ದೇಶ ಮಟ್ಟದ ಫಲಿತಾಂಶದ ಬಗ್ಗೆ ಬಹಳ ಕಾತರ ವ್ಯಕ್ತಪಡಿಸುತ್ತಾರೆ. ಕೇಂದ್ರದಲ್ಲಿ ಏನಾಗಬಹುದು ಎಂಬ ಚರ್ಚೆ ಅಲ್ಲಲ್ಲಿ ಕೇಳಿ ಬರುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಎಷ್ಟು ಸೀಟು ಗಳಿಸಬಹುದು ? ಎನ್‌ಡಿಎ ಮತ್ತೆ ಅಧಿಕಾರಕ್ಕೆ ಏರುತ್ತದೆಯೇ ಅಥವಾ ಪ್ರತಿಪಕ್ಷ ಗಳ ಮಹಾಘಟಬಂಧನ್‌ ಮ್ಯಾಜಿಕ್‌ ಮಾಡುತ್ತದೆಯೇ ? ರಾಹುಲ್‌ ಗಾಂಧಿ ಪ್ರಧಾನಿ ಆಗಬಹುದೇ ಎಂಬಿತ್ಯಾದಿ ವಿಷಯಗಳು ಇವರ ಮಾತುಕತೆ ಹರಟೆಗೆ ಆಹಾರ ಒದಗಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ