ಆ್ಯಪ್ನಗರ

ನೀರು, ಮೇವು ಕೊರತೆಯಾಗದಂತೆ ಕ್ರಮ

ಹಳಿಯಾಳ : ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಹಾಗೂ ಜಾನುವಾರುಗಳಿಗೆ ಮೇವಿನ ದಾಸ್ತಾನು ಮಾಡುವಂತೆ ಕ್ರಮ ಜರುಗಿಸಲು ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಾಲೂಕ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಮಹೇಶ್‌ ಕುರಿಯವರ ಹೇಳಿದರು.

Vijaya Karnataka 6 Feb 2019, 5:00 am
ಹಳಿಯಾಳ : ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಹಾಗೂ ಜಾನುವಾರುಗಳಿಗೆ ಮೇವಿನ ದಾಸ್ತಾನು ಮಾಡುವಂತೆ ಕ್ರಮ ಜರುಗಿಸಲು ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಾಲೂಕ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಮಹೇಶ್‌ ಕುರಿಯವರ ಹೇಳಿದರು.
Vijaya Karnataka Web KWR-05 HLY 1


ತಾ.ಪಂ. ಅಧ್ಯಕ್ಷೆ ರೀಟಾ ಸಿದ್ದಿ ಅವರ ಅಧ್ಯಕ್ಷ ತೆಯಲ್ಲಿ ಮಂಗಳವಾರ ತಾ.ಪಂ. ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಹಲವಾರು ಕಾಮಗಾರಿಗಳನ್ನು ಆರಂಭಿಸಲಾಗಿದೆ. ಇನ್ನುಳಿದ ಕಾಮಗಾರಿಗಳಿಗಾಗಿ ಅನುದಾನ ಮಂಜೂರಾಗಿದ್ದು, ಲೋಕಸಭೆಯ ಚುನಾವಣೆಯ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆದಷ್ಟು ಬೇಗನೆ ಚಾಲನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಿಇಒ ಸಮೀರ ಮುಲ್ಲಾ ಅವರು ಮಾತನಾಡಿ, ದಾಸ್ತಾನು ಮಾಡಿದ್ದ 2285 ಬೈಸಿಕಲ್‌ಗಳನ್ನು ಆಯಾ ಶಾಲೆಗಳ ಮೂಲಕ ವಿತರಿಸಲು ಪಟ್ಟಣದಿಂದ ಶಾಲೆಗಳಿಗೆ ಸಾಗಿಸಲಾಗಿದೆ. ಅದರಲ್ಲಿ ಕೆಲವು ಶಾಲೆಗಳಲ್ಲಿ ಸೈಕಲ್‌ಗಳನ್ನು ಜನಪ್ರತಿನಿಧಿಗಳ ಮೂಲಕ ವಿತರಿಸಲಾಗಿದೆ. ಶಾಲೆಗಳಲ್ಲಿ ನಡೆಯುವ ಎರಡನೇ ಹಂತದ ಜಂತುಹುಳು ಗುಳಿಗೆ ವಿತರಣಾ ಕಾರ್ಯಕ್ರಮವು ಶೀಘ್ರದಲ್ಲಿಯೇ ನಡೆಯಲಿದೆ ಎಂದು ಸಭೆಗೆ ತಿಳಿಸಿದರು.

ಮೆಟ್ರಿಕ್‌ ಪೂರ್ವ ಮತ್ತು ನಂತರ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕಾಗಿ ಆನ್‌ಲೈನ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಲ್ಲದೇ ಅಂತರ್‌ ಜಾತಿ ವಿವಾಹಕ್ಕಾಗಿ ಎರಡು ಜೋಡಿ ದಂಪತಿಗಳಿಗೆ 3 ಲಕ್ಷ ರೂ. ಮೊತ್ತದ ಚೆಕ್‌ನ್ನು ವಿತರಿಸಲಾಗಿದೆ. ಇನ್ನುಳಿದ ಶಿಷ್ಯವೇತನಗಳು ಮಂಜೂರಾಗಿದ್ದು ಶೀಘ್ರದಲ್ಲಿಯೇ ವಿತರಣೆ ಮಾಡಲಾಗುವುದೆಂದು ಸಮಾಜ ಕಲ್ಯಾಣಾಧಿಕಾರಿ ಸಣ್ಣೇರ ತಿಳಿಸಿದರು.

ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯನ್ನು ನೀಗಿಸಲು ತಾಲೂಕಿನ ಭಾಗವತಿ ಗ್ರಾಮದಲ್ಲಿ ಮೇವು ಬ್ಯಾಂಕ್‌ ಸ್ಥಾಪನೆ ಮಾಡಲು ತಹಸೀಲ್ದಾರ ಅವರ ಅಧ್ಯಕ್ಷ ತೆಯಲ್ಲಿ ವಿಚಾರ ವಿನಿಯಮಯ ನಡೆದಿದ್ದು ಅದನ್ನು ಸ್ಥಾಪಿಸಲಾಗುವುದು. 448 ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗಿದ್ದು ಅರ್ಹ ಫಲಾನುಭವಿಗಳಿಗೆ ಕೋಳಿಗಳನ್ನು ವಿತರಿಸಲಾಗಿದೆ ಎಂದು ಪಶು ಇಲಾಖೆ ಅಧಿಕಾರಿಗಳು ತಿಳಿಸಿದರು.

231 ಅಂಗನವಾಡಿಗಳ ಪೈಕಿ 174 ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ಮುಂದುವರೆದಿದ್ದು, 4 ನಿರ್ಮಾಣ ಹಂತದಲ್ಲಿವೆ. 7 ದುರಸ್ತಿಯಲ್ಲಿವೆ. 20 ಶೌಚಾಲಯಗಳನ್ನು ನಿರ್ಮಿಸಲಾಗಿದ್ದು ಬಾಲಸ್ನೇಹಿ ಯೋಜನೆಯಲ್ಲಿ 7 ಅಂಗನವಾಡಿಗಳಿಗೆ ಬಣ್ಣ ಬಳಿಸಲಾಗಿದೆ. 237 ಸ್ತ್ರೀ ಸಂಘಗಳಿಗೆ ಸುತ್ತು ನಿಧಿಯನ್ನು ವಿತರಿಸಲಾಗಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇಲ್ಲಿಯ ಸರಕಾರಿ ದವಾಖಾನೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡುವ ಪ್ರಕ್ರಿಯೆ ಮುಂದುವರೆದಿದೆ ಎಂದು ಮೇಲ್ವಿಚಾರಕಿ ಅಂಬಿಕಾ ಕಟಗೆ ವಿವರಿಸಿದರು.

ತೋಟಗಾರಿಕಾ ಅಧಿಕಾರಿ ಮಾತನಾಡಿ, 692 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯನ್ನು ಬೆಳೆಯಲಾಗುತ್ತಿದ್ದು, ಪ್ರತಿ ತೋಟಕ್ಕೂ ಹನಿ ನೀರಾವರಿ ಒದಗಿಸಲು ಆನ್‌ಲೈನ್‌ ದಾಖಲಾತಿ ಆರಂಭಿಸಲಾಗಿದೆ ಎಂದರು.

ಸಭೆಯಲ್ಲಿ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಬಾಳು ಪಾಟೀಲ್‌ ಸೇರಿದಂತೆ ಮೀನುಗಾರಿಕೆ, ಕೈಗಾರಿಕೆ, ಕೆಎಸ್‌ಆರ್‌ಟಿಸಿ, ಗ್ರಾಮೀಣ ನೀರು ಸರಬರಾಜು, ಕೃಷಿ, ಹೆಸ್ಕಾಂ, ಲೋಕೋಪಯೋಗಿ, ಚಿಕ್ಕ ನೀರಾವರಿ ಸೇರಿದಂತೆ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ