ಆ್ಯಪ್ನಗರ

ಬಿಳಿ ಬಂಗಾರ ಭರಪೂರ ವ್ಯಾಪಾರ

ಯಲ್ಲಾಪುರ : ಜಿಲ್ಲೆಯ ಅತೀ ದೊಡ್ಡ ಹಾಗೂ ತಾಲೂಕಿನ ಏಕೈಕ ಹತ್ತಿ ಮಾರುಕಟ್ಟೆ ಎಂದು ಕರೆಯಲಾಗುವ ತಾಲೂಕಿನ ಕಿರವತ್ತಿಯ ಮಾರುಕಟ್ಟೆಯಲ್ಲಿ ಪ್ರಸಕ್ತ ಸಾಲಿನ ಹತ್ತಿ ವಹಿವಾಟು ಭರದಿಂದ ಸಾಗಿದೆ. ಈ ಭಾಗದಲ್ಲಿ ಬೆಳೆಯುವ ಹತ್ತಿಯು ಉತ್ತಮ ಗುಣಮಟ್ಟದಿಂದ ಕೂಡಿರುವ ಕಾರಣ ವಿಪರೀತ ಬೇಡಿಕೆ ಇದೆ. ಯಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಾರುಕಟ್ಟೆಯಲ್ಲಿ ವಾರದಲ್ಲಿ ಶುಕ್ರವಾರ ಒಂದು ದಿನ ಮಾತ್ರ ಹತ್ತಿ ವ್ಯಾಪಾರ ನಡೆಯುತ್ತದೆ.

Vijaya Karnataka 10 Dec 2018, 5:00 am
ಯಲ್ಲಾಪುರ : ಜಿಲ್ಲೆಯ ಅತೀ ದೊಡ್ಡ ಹಾಗೂ ತಾಲೂಕಿನ ಏಕೈಕ ಹತ್ತಿ ಮಾರುಕಟ್ಟೆ ಎಂದು ಕರೆಯಲಾಗುವ ತಾಲೂಕಿನ ಕಿರವತ್ತಿಯ ಮಾರುಕಟ್ಟೆಯಲ್ಲಿ ಪ್ರಸಕ್ತ ಸಾಲಿನ ಹತ್ತಿ ವಹಿವಾಟು ಭರದಿಂದ ಸಾಗಿದೆ. ಈ ಭಾಗದಲ್ಲಿ ಬೆಳೆಯುವ ಹತ್ತಿಯು ಉತ್ತಮ ಗುಣಮಟ್ಟದಿಂದ ಕೂಡಿರುವ ಕಾರಣ ವಿಪರೀತ ಬೇಡಿಕೆ ಇದೆ. ಯಲ್ಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಾರುಕಟ್ಟೆಯಲ್ಲಿ ವಾರದಲ್ಲಿ ಶುಕ್ರವಾರ ಒಂದು ದಿನ ಮಾತ್ರ ಹತ್ತಿ ವ್ಯಾಪಾರ ನಡೆಯುತ್ತದೆ.
Vijaya Karnataka Web KWR-9 YLP 1 ; A


ಕಡಿಮೆ ಇಳುವರಿ ನಿರೀಕ್ಷೆ : ಬಿಳಿ ಬಂಗಾರವೆಂದೇ ಕರೆಯಲಾಗುವ ಹತ್ತಿಯನ್ನು ತಾಲೂಕಿನ ಕಿರವತ್ತಿ,ಮದ್ನೂರು, ತಟ್ಟಿಹಳ್ಳ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಹದ ಪ್ರಮಾಣದಲ್ಲಿ ಮಳೆಯಾದ ವರ್ಷ ಉತ್ತಮ ಇಳುವರಿ ರೈತರ ಕೈಗೆ ದೊರಕುತ್ತಿದ್ದು, ಈ ವರ್ಷ ವಾತಾವರಣದಲ್ಲಿನ ವೈಪರೀತ್ಯದಿಂದಾಗಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಇಳುವರಿಯನ್ನು ನಿರೀಕ್ಷಿಸಲಾಗಿದೆ. ಈ ಭಾಗದಲ್ಲಿ ಬೆಳೆಯುವ ಹತ್ತಿಗೆ ಕಿರವತ್ತಿ ಮಾರುಕಟ್ಟೆಯೇ ಆಧಾರವಾಗಿದ್ದು, ಸುತ್ತಲಿನ ರೈತರು ಈ ಮಾರುಕಟ್ಟೆಗೆ ತಾವು ಬೆಳೆದ ಹತ್ತಿಯನ್ನು ಮಾರಾಟಕ್ಕಾಗಿ ತರುತ್ತಾರೆ. ಪ್ರತೀ ವರ್ಷ ನವಂಬರ್‌ ತಿಂಗಳಿನಿಂದ ಜನವರಿಯವರೆಗೆ ಮೂರು ತಿಂಗಳು ಹತ್ತಿ ಮಾರುಕಟ್ಟೆಯಲ್ಲಿ ಜನ ಜಂಗುಳಿ ಇರುತ್ತದೆ. ಈ ವರ್ಷದ ವಹಿವಾಟು ಈಗಾಗಲೇ ಆರಂಭವಾಗಿದ್ದು, ಈವರೆಗೆ 3702 ಕ್ವಿಂ. ಹತ್ತಿ ಮಾರುಕಟ್ಟೆಗೆ ಆವಕವಾಗಿದೆ. ಕಸ,ಕಡ್ಡಿಗಳಿಂದ ಮುಕ್ತವಾದ ಉತ್ತಮ ಗುಣಮಟ್ಟದ ಹತ್ತಿಯನ್ನು ಮಾರುಕಟ್ಟೆಗೆ ತಂದರೆ ಉತ್ತಮ ಬೆಲೆ ಇದೆ. ಈ ಕುರಿತು ರೈತರು ಗಮನ ಹರಿಸಬೇಕು ಎನ್ನುತ್ತಾರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿಯ ಕಾರ್ಯದರ್ಶಿ ಕೃಷ್ಣಕಾಂತ ನಾಯಕ.

ಮಾರುಕಟ್ಟೆ ಇಕ್ಕಟ್ಟು, ರೈತರಿಗೆ ಬಿಕ್ಕಟ್ಟು : ಕಿರವತ್ತಿಯ ಹತ್ತಿ ಮಾರುಕಟ್ಟೆಯು ತೀವ್ರ ಇಕ್ಕಟ್ಟಾದ ಜಾಗದಲ್ಲಿದ್ದು, ರೈತರು ಹಾಗೂ ವ್ಯಾಪಾರಿಗಳು ತೊಂದರೆಪಡುವಂತಾಗಿದೆ. ಈ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಹತ್ತಿಯ ಆವಕ ಆಗುವುದರಿಂದ ವಿಶಾಲವಾದ ಹಾಗೂ ಸುವ್ಯವಸ್ಥಿತವಾದ ಮಾರುಕಟ್ಟೆಯ ಅವಶ್ಯಕತೆ ಇದೆ. ಹತ್ತಿಯನ್ನು ಮಾರುಕಟ್ಟೆಗೆ ತರುವ ರೈತರಿಗೆ ವಿಶ್ರಾಂತಿಗಾಗಿ ಹಾಗೂ ದೊಡ್ಡ ಪ್ರಮಾಣದಲ್ಲಿ ಖರೀದಿ ನಡೆದಾಗ ವ್ಯಾಪಾರಿಗಳಿಗೆ ಖರೀದಿಸಿದ ಹತ್ತಿಯ ಅಂಡಗಿಗಳನ್ನು ದಾಸ್ತಾನು ಮಾಡಲು ಸೂಕ್ತ ವ್ಯವಸ್ಥೆ ಆಗಬೇಕಾಗಿದೆ. ಶೌಚಾಲಯ ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ನೀಡಬೇಕಾಗಿದೆ. ಸದ್ಯ ಈ ಮಾರುಕಟ್ಟೆಯಲ್ಲಿ ಧೂಳಿನ ಸಮಸ್ಯೆ ಇದ್ದು ಇದರಿಂದಾಗಿ ರೈತರು ಮಾರಾಟಕ್ಕೆ ತಂದ ಹತ್ತಿಯು ಕೊಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸೂಕ್ತ,ಸುವ್ಯವಸ್ಥಿತ ಮಾರುಕಟ್ಟೆ ನಿರ್ಮಿಸಿಕೊಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

ಹತ್ತಿ ಖರೀದಿಗೆ ಬರುವ ದೂರದ ವ್ಯಾಪಾರಿಗಳು : ಕಿರವತ್ತಿ ಮಾರುಕಟ್ಟೆಗೆ ಬರುವ ಹತ್ತಿಯ ಖರೀದಿಗಾಗಿ ದೂರದ ಬೈಲಹೊಂಗಲ,ರಾಣಿಬೆನ್ನೂರು ಹಾಗೂ ಹುಬ್ಬಳ್ಳಿ,ಧಾರವಾಡ ಕಡೆಯ ವ್ಯಾಪಾರಿಗಳು ಆಗಮಿಸುತ್ತಾರೆ. ಇ-ಟೆಂಡರ್‌ ಪ್ರಕ್ರಿಯೆಯಲ್ಲಿ ವಹಿವಾಟು ನಡೆಯುತ್ತಿದೆ. ಇಲ್ಲಿನ ಉತ್ತಮ ಗುಣ ಮಟ್ಟದ ಹತ್ತಿಗೆ ಬೇಡಿಕೆ ಇದೆ. ಈ ವರ್ಷ ಸಾಧಾರಣ ಆವಕವನ್ನು ನಿರೀಕ್ಷಿಸಲಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ