ಆ್ಯಪ್ನಗರ

ಹದಗೆಟ್ಟ ರಸ್ತೆ, ಗುಜರಿ ಬಸ್ಸು !

ಯಲ್ಲಾಪುರ : ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಘಟಕದಲ್ಲಿನ ಕೆಲವು ಬಸ್ಸುಗಳು ತೀರಾ ಹಳೆಯವು. ಹೋದಲ್ಲಿ, ಬಂದಲ್ಲಿ ಪದೇಪದೆ ಹಾಳಾಗಿ ರಸ್ತೆಯಲ್ಲೇ ಕೆಟ್ಟು ನಿಲ್ಲುವ ಇಂತಹ ಬಸ್ಸುಗಳಿಂದಾಗಿ ಪ್ರಯಾಣಿಕರು, ವಿದ್ಯಾರ್ಥಿಗಳು ಹೈರಾಣಾಗುವಂತಾಗಿದೆ. ಇಂತಹ ಡಕೋಟಾ ಬಸ್ಸುಗಳನ್ನು ಬಹುತೇಕ ಸ್ಥಳೀಯ ಮಾರ್ಗಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬಿಡಲಾಗುತ್ತಿದೆ. ತಾಲೂಕಿನ ಎಲ್ಲ ಗ್ರಾಮೀಣ ಭಾಗಗಳ ರಸ್ತೆಗಳು ತೀರಾ ಹದಗೆಟ್ಟು ಹೋಗಿದ್ದು, ಹಳೆಯ ಬಸ್ಸುಗಳು ಈ ರಸ್ತೆಯಲ್ಲಿ ಓಡಾಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಆಗಿದೆ.

Vijaya Karnataka 28 Jul 2019, 5:00 am
ಯಲ್ಲಾಪುರ : ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಘಟಕದಲ್ಲಿನ ಕೆಲವು ಬಸ್ಸುಗಳು ತೀರಾ ಹಳೆಯವು. ಹೋದಲ್ಲಿ, ಬಂದಲ್ಲಿ ಪದೇಪದೆ ಹಾಳಾಗಿ ರಸ್ತೆಯಲ್ಲೇ ಕೆಟ್ಟು ನಿಲ್ಲುವ ಇಂತಹ ಬಸ್ಸುಗಳಿಂದಾಗಿ ಪ್ರಯಾಣಿಕರು, ವಿದ್ಯಾರ್ಥಿಗಳು ಹೈರಾಣಾಗುವಂತಾಗಿದೆ. ಇಂತಹ ಡಕೋಟಾ ಬಸ್ಸುಗಳನ್ನು ಬಹುತೇಕ ಸ್ಥಳೀಯ ಮಾರ್ಗಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬಿಡಲಾಗುತ್ತಿದೆ. ತಾಲೂಕಿನ ಎಲ್ಲ ಗ್ರಾಮೀಣ ಭಾಗಗಳ ರಸ್ತೆಗಳು ತೀರಾ ಹದಗೆಟ್ಟು ಹೋಗಿದ್ದು, ಹಳೆಯ ಬಸ್ಸುಗಳು ಈ ರಸ್ತೆಯಲ್ಲಿ ಓಡಾಡುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಆಗಿದೆ.
Vijaya Karnataka Web KWR-27 YLP 1


ರಸ್ತೆಯಲ್ಲೇ ಕೆಟ್ಟು ನಿಲ್ಲುವ ಬಸ್ಸುಗಳು : ಪಟ್ಟಣದ ಬಸ್‌ ನಿಲ್ದಾಣದಿಂದ ವಿವಿಧ ಗ್ರಾಮೀಣ ಭಾಗಗಳಿಗೆ ತೆರಳುವ ಬಸ್ಸುಗಳು ರಸ್ತೆಯಲ್ಲೇ ಕೆಟ್ಟು ನಿಲ್ಲುವ ಸಂದರ್ಭಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಶಾಲೆಗೆ ತೆರಳಲಾಗದೇ ಮಕ್ಕಳು ಹೈರಾಣಾದರೆ, ಇತರ ಪ್ರಯಾಣಿಕರಿಗೆ ಈ ಗುಜರಿ ಬಸ್ಸುಗಳಲ್ಲಿನ ಪ್ರಯಾಣವು ಪ್ರಯಾಸವಾಗಿ ಕಾಡುತ್ತಿದೆ. ಕಳೆದ ತಾ.ಪಂ. ಕೆಡಿಪಿ ಸಭೆಯಲ್ಲಿ ಹಲವರು ಈ ವಿಷಯವನ್ನು ಸಭೆಯಲ್ಲಿ ಉಪಸ್ಥಿತರಿದ್ದ ಸಾರಿಗೆ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಇದು ಹೀಗೇ ಮುಂದುವರಿದರೆ ಸಾರಿಗೆ ಘಟಕದ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ದೇಹಳ್ಳಿ, ಆನಗೋಡ ಭಾಗದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

ಗ್ರಾಮೀಣ ಭಾಗಕ್ಕೆ ಬಿಡುವ ಹಳೆಯ ಬಸ್ಸುಗಳಿಂದ ಪ್ರಯಾಣಿಕರು ಪರದಾಡುವುದನ್ನು ತಪ್ಪಿಸಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಸಮ್ಮತಿ ಸೂಚಿಸಿದ್ದ ಅಧಿಕಾರಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸುವ ಭರವಸೆಯನ್ನು ನೀಡಿದ್ದರು. ಹಳೆಯ ಬಸ್ಸುಗಳ ಬದಲಿಗೆ ಉತ್ತಮ ಕಂಡೀಶನ್‌ನಲ್ಲಿರುವ ಬಸ್ಸುಗಳನ್ನು ಬಿಡುವುದಾಗಿ ತಿಳಿಸಿದ್ದರು. ಆದರೆ ಅವರ ಮಾತು ಸರಿಯಾಗಿ ಕಾರ್ಯಗತವಾಗಲೇ ಇಲ್ಲ.

ಸರ್ಕಲ್‌ನಲ್ಲಿ ಬಸ್‌, ಎಂಜಿನ್ನಿನಲ್ಲಿ ಬೆಂಕಿ : ಎರಡು ದಿನಗಳ ಹಿಂದೆ ಪಟ್ಟಣದ ಬಸ್‌ ನಿಲ್ದಾಣ ಸಮೀಪದ ಅಂಬೇಡ್ಕರ್‌ ವೃತ್ತದ ಬಳಿ ನಡುದಾರಿಯಲ್ಲಿ ಹಳೆಯ ಬಸ್ಸೊಂದು ಕೆಟ್ಟು ನಿಂತು ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ಹಳೆಯ ಬಸ್ಸು ಗ್ರಾಮೀಣ ಭಾಗಕ್ಕೆ ತೆರಳಿ ವಾಪಸ್‌ ಪಟ್ಟಣಕ್ಕೆ ಬಂದಿತ್ತು. ಬಸ್‌ ನಿಲ್ದಾಣ ಸಮೀಪಿಸುವಷ್ಟರಲ್ಲಿ ಈ ಬಸ್ಸಿನ ಮುಂಭಾಗದಿಂದ ಜೋರಾಗಿ ಹೊಗೆ ಬರಲಾರಂಭಿಸಿತು. ಇದನ್ನು ಕಂಡ ರಸ್ತೆಯಲ್ಲಿನ ಜನ ಕೂಗಿಕೊಂಡು ಚಾಲಕನನ್ನು ಎಚ್ಚರಿಸಿದರು.

ಬಸ್‌ ನಿಲ್ಲಿಸಿದ ಚಾಲಕ ಕೆಳಗಿಳಿದು ನೋಡುತ್ತಿದ್ದಂತೆ ಬಸ್ಸಿನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸಾರ್ವಜನಿಕರು ಗಾಬರಿ ಪಡುವಂತಾಯಿತು. ನಂತರ ಆ ಬಸ್‌ನ್ನು ಕೆಲ ಸಮಯ ಅಲ್ಲಿಯೇ ನಿಲ್ಲಿಸಿ ನಂತರ ಸಾರಿಗೆ ಘಟಕಕ್ಕೆ ದುರಸ್ತಿಗಾಗಿ ಕಳಿಸಲಾಯಿತು. ಇಂತಹ ಎಷ್ಟೋ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಸಾರಿಗೆ ಅಧಿಕಾರಿಗಳು ಈ ಕುರಿತು ವಿಶೇಷ ನಿಗಾ ವಹಿಸಬೇಕು. ಹಳೆಯ ಬಸ್ಸುಗಳನ್ನು ಬದಲಾಯಿಸಿ ಹೊಸ ಬಸ್ಸುಗಳನ್ನು ಬಿಡಬೇಕು. ಹಳೆಯ, ಡಕೋಟಾ ಬಸ್ಸುಗಳಿಂದ ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲವನ್ನು ತಪ್ಪಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ