ಶಿರಸಿ: ಯಕ್ಷ ಋಷಿ ಎಂದೇ ಪ್ರಖ್ಯಾತ ಗಳಿಸಿದ್ದ ಹೊಸ್ತೋಟ ಮಂಜುನಾಥ ಭಾಗವತರು ಮಂಗಳವಾರ ಮಧ್ಯಾಹ್ನ 2.45ಕ್ಕೆ ಚಿರನಿದ್ದೆಗೆ ಜಾರಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಂಜುನಾಥ ಭಾಗವತರು ಕಳೆದ ಒಂದು ತಿಂಗಳ ಕಾಲ, ಸೋಂದಾ- ಹಳೆಯೂರಿನಲ್ಲಿರುವ ಶ್ರೀಪಾದ ಜೋಶಿ ಬಾಡಲಕೊಪ್ಪ ಅವರ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದರು. ಆದರೆ ಚೇತರಿಕೆ ಕಾಣಿಸಿಕೊಳ್ಳದೆ ಮಂಗಳವಾರ ಮಧ್ಯಾಹ್ನ ಅಸುನೀಗಿದ್ದಾರೆ.
ಯಕ್ಷ ಋಷಿ ಸಾಧನೆಗಳ ಪರ್ವ
1940ರಲ್ಲಿ ಜನಿಸಿದ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ 80 ವರ್ಷದ ಬದುಕಿನಲ್ಲಿ ಮಾಡಿರುವ ಸಾಧನೆ ಅನನ್ಯ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಪರಿಪೂರ್ಣ ಕಲೆಯಾದ ಯಕ್ಷಗಾನದ ಭಾಗವತಿಕೆ, ನೃತ್ಯ, ಮದ್ದಲೆ ಮತ್ತು ಚಂಡೆ ವಾದನ, ವೇಷಗಾರಿಕೆ, ಅರ್ಥಗಾರಿಕೆ ಮುಂತಾದ ಎಲ್ಲಾ ವಿಭಾಗಗಳಲ್ಲಿಯೂ ಇವರು ಪರಿಣಿತರು.
ಇವರು ರಾಮಾಯಣ, ಮಹಾಭಾರತ, ಭಾಗವತ ಹಾಗೂ ಇನ್ನಿತರ ಪುರಾಣಗಳನ್ನು ಆಧರಿಸಿದ 300ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಹಲವು ಯಕ್ಷಗಾನ ಮಂಡಳಿಗಳನ್ನು ನಿರ್ದೇಶನ ಮಾಡಿದ್ದಾರೆ. ಸುಮಾರು 75 ಸ್ಥಳಗಳಲ್ಲಿ ಯಕ್ಷಗಾನ ತರಬೇತಿ ಕೇಂದ್ರಗಳನ್ನು ನಡೆಸಿ 1600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಹೆಗ್ಗಳಿಕೆ ಇವರದ್ದು.
1990ರಲ್ಲಿ ಶಿವಮೊಗ್ಗದ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ನೇತ್ರಹೀನ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ಕಂಸವಧೆ ಪ್ರಸಂಗವನ್ನು 200ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರದರ್ಶನ ನೀಡಿರುವು ಇವರ ವಿಶಿಷ್ಟ ಸಾಧನೆಗಳಲ್ಲೊಂದು.
ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಲು ಮಂಜುನಾಥ ಭಾಗವತರು ಗೋವರ್ಧನ ಗಿರಿ ಪೂಜೆ, ನಿಸರ್ಗ ಸಂಧಾನ ಹಾಗೂ ಪ್ರಕೃತಿ ಸಂಧಾನ ಪ್ರಸಂಗಗಳನ್ನು ರಚಿಸಿದ್ದಾರೆ. ಈ ಆಖ್ಯಾನಗಳು ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾದ 200ಕ್ಕೂ ಹೆಚ್ಚು ನಗರಗಳಲ್ಲಿ ಪ್ರದರ್ಶನಗೊಂಡಿವೆ. ಸಾಕ್ಷರತೆಯ ಮಹತ್ವ ಸಾರಲು ರಚಿಸಿದ ಅಕ್ಷರ ವಿಜಯ ಯಕ್ಷಗಾನ 50ಕ್ಕೂ ಹೆಚ್ಚು ಕಡೆ ಪ್ರದರ್ಶನಗೊಂಡಿದೆ.
ಇವರು ಬರೆದ ಕೈಪಿಡಿ ‘ಯಕ್ಷಗಾನ ಶಿಕ್ಷಣ - ಲಕ್ಷಣ’ ಡಿಸೆಂಬರ್ 8, 2019ರಂದು ಯಕ್ಷಮಿತ್ರ ಕೂಟ, ಟೊರಾಂಟೋ ಅವರಿಂದ ಪ್ರಕಾಶನಗೊಂಡಿದೆ. ಜೊತೆಗೆ ಯಕ್ಷಗಾನ ತಾಳಸೂತ್ರ, ಯಕ್ಷಗಾನ ಮಟ್ಟುಗಳ ಸಂಗ್ರಹ, ಯಕ್ಷಗಾನ ಮದ್ದಲೆ ನುಡಿಗಟ್ಟುಗಳು ಕೃತಿಗಳನ್ನು ರಚಿಸಿದ್ದಾರೆ. ಪವಾಡವಲ್ಲ ವಿಸ್ಮಯ, ಒಡಲಿನ ಮಡಿಲು - ಯಕ್ಷತಾರೆ ಇವರ ಅನುಭವ ಕಥನಗಳಾಗಿವೆ.
ಮಂಜುನಾಥ ಭಾಗವತರ ಸಾಧನೆ ಹಾಗೂ ಸೇವೆಯನ್ನು ಪರಿಗಣಿಸಿ 1987ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, 2012ರಲ್ಲಿ ಜಾನಪದ ಅಕಾಡೆಮಿಯ ವಿಶೇಷ ಪುರಸ್ಕಾರ, 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ನೂರಾರು ಪುರಸ್ಕಾರಗಳು ಸಂದಿವೆ.
ಯಕ್ಷಗಾನ ಅಕಾಡೆಮಿ ಶೋಕ
‘ಯಕ್ಷಗಾನ ರಂಗದಲ್ಲಿ ಶ್ರೇಷ್ಠ ಕವಿಗಳಾಗಿದ್ದ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನವನ್ನೇ ತಪಸ್ಸೆಂದು ಭಾವಿಸಿದವರು. ಯಕ್ಷಗಾನಕ್ಕೆ ಅವರ ಕೊಡುಗೆ ಅನ್ಯನ್ಯವಾದದ್ದು. ವಿಶೇಷವಾಗಿ ಯಕ್ಷಗಾನದ ಗುರುಗಳಾಗಿ ಸಾವಿರಾರು ಜನ ಶಿಷ್ಯರಿಗೆ ಯಕ್ಷಗಾವನ್ನು ದೀಕ್ಷೆ ಕೊಟ್ಟವರು. ಅವರ ನಿಧನದಿಂದ ಯಕ್ಷಗಾನ ಲೋಕ ಬಡವಾಗಿದೆ. ಯಕ್ಷಗಾನ ಅಕಾಡೆಮಿ ಹೊಸ್ತೋಟರ ಅಗಲಿಕೆಗೆ ಶೋಕ ವ್ಯಕ್ತಪಡಿಸುತ್ತದೆ,’ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ದಂಟ್ಕಲ್ ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.
ಅವರ ಅಂತ್ಯಕ್ರಿಯೆಯನ್ನು ಶಿರಸಿ ನಗರದ ಹೊಟೇಲ್ ಸಾಮ್ರಾಟ್ ಎದುರುಗಡೆ ಇರುವ ಸದ್ಗತಿ - ವಿದ್ಯಾನಗರ ರುದ್ರಭೂಮಿಯಲ್ಲಿ ಮಂಗಳವಾರ ರಾತ್ರಿ 9.30ಕ್ಕೆ ನೆರವೇರಿಸಲಾಗುವುದು ಎಂದು ಯಕ್ಷಶಾಲ್ಮಲಾದ ಅಧ್ಯಕ್ಷ ಆರ್ಎಸ್ ಹೆಗಡೆ ಭೈರುಂಬೆ ತಿಳಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಂಜುನಾಥ ಭಾಗವತರು ಕಳೆದ ಒಂದು ತಿಂಗಳ ಕಾಲ, ಸೋಂದಾ- ಹಳೆಯೂರಿನಲ್ಲಿರುವ ಶ್ರೀಪಾದ ಜೋಶಿ ಬಾಡಲಕೊಪ್ಪ ಅವರ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದರು. ಆದರೆ ಚೇತರಿಕೆ ಕಾಣಿಸಿಕೊಳ್ಳದೆ ಮಂಗಳವಾರ ಮಧ್ಯಾಹ್ನ ಅಸುನೀಗಿದ್ದಾರೆ.
ಯಕ್ಷ ಋಷಿ ಸಾಧನೆಗಳ ಪರ್ವ
1940ರಲ್ಲಿ ಜನಿಸಿದ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ 80 ವರ್ಷದ ಬದುಕಿನಲ್ಲಿ ಮಾಡಿರುವ ಸಾಧನೆ ಅನನ್ಯ ಹಾಗೂ ಯಕ್ಷಗಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಪರಿಪೂರ್ಣ ಕಲೆಯಾದ ಯಕ್ಷಗಾನದ ಭಾಗವತಿಕೆ, ನೃತ್ಯ, ಮದ್ದಲೆ ಮತ್ತು ಚಂಡೆ ವಾದನ, ವೇಷಗಾರಿಕೆ, ಅರ್ಥಗಾರಿಕೆ ಮುಂತಾದ ಎಲ್ಲಾ ವಿಭಾಗಗಳಲ್ಲಿಯೂ ಇವರು ಪರಿಣಿತರು.
ಇವರು ರಾಮಾಯಣ, ಮಹಾಭಾರತ, ಭಾಗವತ ಹಾಗೂ ಇನ್ನಿತರ ಪುರಾಣಗಳನ್ನು ಆಧರಿಸಿದ 300ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಹಲವು ಯಕ್ಷಗಾನ ಮಂಡಳಿಗಳನ್ನು ನಿರ್ದೇಶನ ಮಾಡಿದ್ದಾರೆ. ಸುಮಾರು 75 ಸ್ಥಳಗಳಲ್ಲಿ ಯಕ್ಷಗಾನ ತರಬೇತಿ ಕೇಂದ್ರಗಳನ್ನು ನಡೆಸಿ 1600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಹೆಗ್ಗಳಿಕೆ ಇವರದ್ದು.
1990ರಲ್ಲಿ ಶಿವಮೊಗ್ಗದ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ನೇತ್ರಹೀನ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ಕಂಸವಧೆ ಪ್ರಸಂಗವನ್ನು 200ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರದರ್ಶನ ನೀಡಿರುವು ಇವರ ವಿಶಿಷ್ಟ ಸಾಧನೆಗಳಲ್ಲೊಂದು.
ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಲು ಮಂಜುನಾಥ ಭಾಗವತರು ಗೋವರ್ಧನ ಗಿರಿ ಪೂಜೆ, ನಿಸರ್ಗ ಸಂಧಾನ ಹಾಗೂ ಪ್ರಕೃತಿ ಸಂಧಾನ ಪ್ರಸಂಗಗಳನ್ನು ರಚಿಸಿದ್ದಾರೆ. ಈ ಆಖ್ಯಾನಗಳು ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾದ 200ಕ್ಕೂ ಹೆಚ್ಚು ನಗರಗಳಲ್ಲಿ ಪ್ರದರ್ಶನಗೊಂಡಿವೆ. ಸಾಕ್ಷರತೆಯ ಮಹತ್ವ ಸಾರಲು ರಚಿಸಿದ ಅಕ್ಷರ ವಿಜಯ ಯಕ್ಷಗಾನ 50ಕ್ಕೂ ಹೆಚ್ಚು ಕಡೆ ಪ್ರದರ್ಶನಗೊಂಡಿದೆ.
ಇವರು ಬರೆದ ಕೈಪಿಡಿ ‘ಯಕ್ಷಗಾನ ಶಿಕ್ಷಣ - ಲಕ್ಷಣ’ ಡಿಸೆಂಬರ್ 8, 2019ರಂದು ಯಕ್ಷಮಿತ್ರ ಕೂಟ, ಟೊರಾಂಟೋ ಅವರಿಂದ ಪ್ರಕಾಶನಗೊಂಡಿದೆ. ಜೊತೆಗೆ ಯಕ್ಷಗಾನ ತಾಳಸೂತ್ರ, ಯಕ್ಷಗಾನ ಮಟ್ಟುಗಳ ಸಂಗ್ರಹ, ಯಕ್ಷಗಾನ ಮದ್ದಲೆ ನುಡಿಗಟ್ಟುಗಳು ಕೃತಿಗಳನ್ನು ರಚಿಸಿದ್ದಾರೆ. ಪವಾಡವಲ್ಲ ವಿಸ್ಮಯ, ಒಡಲಿನ ಮಡಿಲು - ಯಕ್ಷತಾರೆ ಇವರ ಅನುಭವ ಕಥನಗಳಾಗಿವೆ.
ಮಂಜುನಾಥ ಭಾಗವತರ ಸಾಧನೆ ಹಾಗೂ ಸೇವೆಯನ್ನು ಪರಿಗಣಿಸಿ 1987ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, 2012ರಲ್ಲಿ ಜಾನಪದ ಅಕಾಡೆಮಿಯ ವಿಶೇಷ ಪುರಸ್ಕಾರ, 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ನೂರಾರು ಪುರಸ್ಕಾರಗಳು ಸಂದಿವೆ.
ಯಕ್ಷಗಾನ ಅಕಾಡೆಮಿ ಶೋಕ
‘ಯಕ್ಷಗಾನ ರಂಗದಲ್ಲಿ ಶ್ರೇಷ್ಠ ಕವಿಗಳಾಗಿದ್ದ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನವನ್ನೇ ತಪಸ್ಸೆಂದು ಭಾವಿಸಿದವರು. ಯಕ್ಷಗಾನಕ್ಕೆ ಅವರ ಕೊಡುಗೆ ಅನ್ಯನ್ಯವಾದದ್ದು. ವಿಶೇಷವಾಗಿ ಯಕ್ಷಗಾನದ ಗುರುಗಳಾಗಿ ಸಾವಿರಾರು ಜನ ಶಿಷ್ಯರಿಗೆ ಯಕ್ಷಗಾವನ್ನು ದೀಕ್ಷೆ ಕೊಟ್ಟವರು. ಅವರ ನಿಧನದಿಂದ ಯಕ್ಷಗಾನ ಲೋಕ ಬಡವಾಗಿದೆ. ಯಕ್ಷಗಾನ ಅಕಾಡೆಮಿ ಹೊಸ್ತೋಟರ ಅಗಲಿಕೆಗೆ ಶೋಕ ವ್ಯಕ್ತಪಡಿಸುತ್ತದೆ,’ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ದಂಟ್ಕಲ್ ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.
ಅವರ ಅಂತ್ಯಕ್ರಿಯೆಯನ್ನು ಶಿರಸಿ ನಗರದ ಹೊಟೇಲ್ ಸಾಮ್ರಾಟ್ ಎದುರುಗಡೆ ಇರುವ ಸದ್ಗತಿ - ವಿದ್ಯಾನಗರ ರುದ್ರಭೂಮಿಯಲ್ಲಿ ಮಂಗಳವಾರ ರಾತ್ರಿ 9.30ಕ್ಕೆ ನೆರವೇರಿಸಲಾಗುವುದು ಎಂದು ಯಕ್ಷಶಾಲ್ಮಲಾದ ಅಧ್ಯಕ್ಷ ಆರ್ಎಸ್ ಹೆಗಡೆ ಭೈರುಂಬೆ ತಿಳಿಸಿದ್ದಾರೆ.